Tuesday, March 2, 2021

ಅಧಿಕಾರ ದುರುಪಯೋಗಪಡಿಸಿಕೊಳ್ಳದೆ ಒಳ್ಳೆಯ ಕಾರ್ಯಕ್ಕೆ ಬಳಸಿ : ಆನಂದ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ,ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮ ಶಾರದಾ ಅಪ್ಪಾಜಿ ಉದ್ಘಾಟಿಸಿದರು.
 ಭದ್ರಾವತಿ, ಮಾ. ೨: ರಾಜಕಾರಣದಲ್ಲಿ ನಮಗೆ ಲಭಿಸಿದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಒಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್ ತಿಳಿಸಿದರು.
    ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮಸ್ಥರು ಹಾಗೂ ಎಂ.ಜೆ.ಅಪ್ಪಾಜಿ ಅಭಿಮಾನಿ ಬಳಗದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಯಾರು ಏನೇ ಮಾಡಿದರೂ ನಾವು ಒಳ್ಳೆಯದನ್ನೇ ಮಾಡಬೇಕು ಹೊರತು ಕೆಟ್ಟದ್ದನ್ನು ಮಾಡಬಾರದು. ಯಾರನ್ನು ಸಹ ದ್ವೇಷಿಸಬಾರದು ಎಂದು ಮಾರ್ಗದರ್ಶನ ನೀಡುತ್ತಿದ್ದರು. ಇದೆ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅಪ್ಪಾಜಿಯವರ ಬೆಂಬಲದಿಂದಾಗಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷನಾಗಲು ಸಾಧ್ಯವಾಯಿತು. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಆದರ್ಶಗಳು ನಮ್ಮೊಂದಿಗಿವೆ. ಈ ಹಿನ್ನಲೆಯಲ್ಲಿ ಸದಾ ಕಾಲ ಅವರ ಕುಟುಂಬದ ಜೊತೆಗಿದ್ದು, ಅವರ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
   ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಮಾತನಾಡಿ, ಅಪ್ಪಾಜಿಯವರು ಎಲ್ಲಾ ವರ್ಗದ ಜನರಿಗೂ ಅಧಿಕಾರ ದೊರಕಿಸಿ ಕೊಡುವ ಮೂಲಕ ಗೌರವದಿಂದ ಕಾಣುತ್ತಿದ್ದರು. ಅವರ ನಾಯಕತ್ವದಲ್ಲಿ ಬೆಳೆದ ಅನೇಕರು ಇಂದು ಬೇರೆಯವರ ಮನೆ ಬಾಗಿಲಿಗೆ ಹೋಗಿದ್ದಾರೆ, ಅಪ್ಪಾಜಿ ಕುಟುಂಬದಲ್ಲಿ ಅಪ್ಪಾಜಿ ಒಬ್ಬರೆ ರಾಜಕಾರಣ ಮಾಡುತ್ತಿದ್ದರು. ಆದರೆ ಅಲ್ಲಿ ಮನೆಯವರೆಲ್ಲರೂ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅವರು ಮನಗಾಣಬೇಕಿದೆ ಎಂದರು.
   ಅಪ್ಪಾಜಿ ಪತ್ನಿ ಶಾರದಾ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯ ಧರ್ಮೇಗೌಡ, ಬದರಿನಾರಾಯಣ್, ಬಿ.ಎನ್ ರಾಜು, ಕೃಷ್ಣರಾಜ್, ರಾಮಚಂದ್ರ, ಜವರಪ್ಪ, ವಿಜಯಕುಮಾರ್, ಮಂಜುನಾಥ್, ಅಶೋಕ್‌ಕುಮಾರ್, ಶೋಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ನೆಲೆಕಾಣದ ಬಿಜೆಪಿಯಿಂದ ಕ್ಷೇತ್ರದಲ್ಲಿ ಆಶಾಂತಿ ವಾತಾವರಣಕ್ಕೆ ಯತ್ನ

ತಾಲೂಕು ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಭದ್ರಾವತಿಯಲ್ಲಿ ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
   ಭದ್ರಾವತಿ, ಮಾ. ೨: ಕ್ಷೇತ್ರದಲ್ಲಿ ಇದುವರೆಗೂ ನೆಲೆಕಾಣದ ಬಿಜೆಪಿ ಪಕ್ಷ ಇದೀಗ ವಿನಾಕಾರಣ ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ರೂಪುಗೊಳ್ಳಲು ಕಾರಣವಾಗುತ್ತಿದ್ದು, ಒಂದು ವೇಳೆ ಅಹಿತಕರ ಘಟನೆಗಳು ನಡೆದು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದ್ದಲ್ಲಿ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಎಚ್ಚರಿಸಿದರು.
  ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು.
  ಒಂದೇ ದೈವ, ಒಂದೇ ಧರ್ಮ, ಒಂದೇ ಜಾತಿ ಎಂಬ ತತ್ವದಡಿ ನಾವೆಲ್ಲರೂ ಹಿಂದೂಗಳಾಗಿ ಬದುಕುತ್ತಿದ್ದೇವೆ. ಮಾನವ ಕುಲ ಒಂದೇ ಎಂಬ ಭಾವನೆ ನಮ್ಮದಾಗಿದೆ. ನಾನು ರಾಜಕಾರಣವನ್ನು ಈ ನಿಟ್ಟಿನಲ್ಲಿ ನಡೆಸಿಕೊಂಡು ಬಂದಿದ್ದೇನೆ. ಮತದಾರರು ಸಹ ನನ್ನನ್ನು ಕೈಬಿಡದೆ ಬೆಂಬಲಿಸಿಕೊಂಡು ಬಂದಿದ್ದಾರೆ. ಇದೀಗ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ ಲಾಭ ಪಡೆದುಕೊಳ್ಳಬಹುದೆಂಬ ದುರಾಸೆ ಬಿಜೆಪಿ ಪಕ್ಷಕ್ಕೆ ಬಂದಿರುವಂತೆ ಕಂಡು ಬರುತ್ತಿದೆ. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸಲು ಮುಂದಾಗುತ್ತಿದ್ದಾರೆ. ಆದರೆ ಕ್ಷೇತ್ರದ ಮತದಾರರಿಗೆ ಎಲ್ಲವೂ ತಿಳಿದಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ನಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾದಲ್ಲಿ ಬಿಜೆಪಿ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ. ತಕ್ಷಣ ಅಶಾಂತಿ ವಾತಾವರಣ ಸೃಷ್ಟಿಸಲು ಯತ್ನಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
   ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಸದಾ ಕಾಲ ಶಾಂತಿ ನೆಲೆಗೊಳ್ಳಬೇಕೆಂಬ ಭಾವನೆಯೊಂದಿಗೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ಸಂಗಮೇಶ್ವರ್ ನಿಜವಾದ ಶಾಂತಿಪ್ರಿಯ ಶಾಸಕರಾಗಿದ್ದಾರೆ. ಇದು ಭದ್ರಾವತಿ ಕ್ಷೇತ್ರದಲ್ಲಿರುವ ಎಲ್ಲರಿಗೂ ತಿಳಿದಿದೆ. ಶ್ರೀರಾಮನ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಬಿಜೆಪಿಯವರು ಶ್ರೀರಾಮನ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅಕ್ರಮಗಳು ನಿಲ್ಲಬೇಕು. ಈ ರೀತಿಯ ಘಟನೆ ಇಲ್ಲಿ ಮಾತ್ರವಲ್ಲ ಎಲ್ಲೆಡೆ ನಡೆಯುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
   ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ ಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಅತ್ತಿಗುಂದ ಚಂದ್ರಶೇಖರಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ನಗರಸಭೆ ಮಾಜಿ ಅಧ್ಯಕ್ಷರಾದ ವೈ. ರೇಣುಕಮ್ಮ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಮುಖಂಡರಾದ ಎಸ್.ಪಿ ದಿನೇಶ್, ಸಿ.ಎಂ ಖಾದರ್, ಅಮಿರ್‌ಜಾನ್, ದಿಲ್‌ದಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Monday, March 1, 2021

ಜನೌಷಧಿ ದಿನಾಚರಣೆ ಅಂಗವಾಗಿ ಫೆ.೭ರ ವರೆಗೆ ಜನಸೇವಾ ಕಾರ್ಯಕ್ರಮ

ಭದ್ರಾವತಿ, ಮಾ. ೧: ಮೂರನೇ ವರ್ಷದ ಜನೌಷಧಿ ದಿನಾಚರಣೆ ಅಂಗವಾಗಿ ನಗರದ ಸ್ಕಂದ ಟ್ರಸ್ಟ್ ವತಿಯಿಂದ ಜನಸೇವಾ ಕಾರ್ಯಕ್ರಮಗಳನ್ನು ಮಾ.೭ರ ವರೆಗೆ ಹಮ್ಮಿಕೊಳ್ಳಲಾಗಿದೆ.
     ಸೋಮವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು.
     ಮಾ.೩ರಂದು ಸಂಜೆ ೬ ಗಂಟೆಗೆ ನಗರದ ಬೈಪಾಸ್ ರಸ್ತೆಯಲ್ಲಿರುವ ಎಂಪಿಎಂ ಬಡಾವಣೆಯ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಆರೋಗ್ಯ ಶಿಬಿರ ಹಾಗು ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.೪ರಂದು ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಹಾಗು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.೬ರಂದು ನ್ಯೂಟೌನ್ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿರವರಿಂದ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಯಲಿದೆ.
  ಮಾ.೭ರಂದು ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ಜನೌಷಧಿ ಮಾಲೀಕರು ಹಾಗು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಸ್ವಿಗೊಳಿಸುವಂತೆ ಕೋರಲಾಗಿದೆ.

ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ : ಪ್ರಸಾದ್ ಅತ್ತಾವರ್

ಭದ್ರಾವತಿಗೆ ಆಗಮಸಿದ್ದ ರಾಮ್ ಸೇನ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಪತ್ರಿಕೆಯೊಂದಿಗೆ ಮಾತನಾಡಿದರು.

   ಭದ್ರಾವತಿ, ಫೆ. ೨೮: ಯುವ ಸಮುದಾಯ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದು ರಾಮ್ ಸೇನಾ ಕರ್ನಾಟಕ ಸಂಘಟನೆಯ ಆಶಯವಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ತಿಳಿಸಿದರು.
   ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜದಲ್ಲಿ ಉತ್ತಮ ಕುಟುಂಬ ನಿರ್ಮಾಣ ಮಾಡುವುದೇ ಸಂಘಟನೆ ಧ್ಯೇಯವಾಗಿದೆ. ಇಂತಹ ಧ್ಯೇಯ ಹೊಂದಿರುವ ಸಂಘಟನೆಯಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಂಡತಿ, ಮಕ್ಕಳು ಹೀಗೆ ಎಲ್ಲರನ್ನು ಒಳಗೊಂಡಿರುವ ಕುಟುಂಬದ ಜವಾಬ್ದಾರಿ ಯುವ ಸಮುದಾಯ ಹೊರಬೇಕು. ಈ ಹಿನ್ನಲೆಯಲ್ಲಿ ಯುವ ಸಮುದಾಯ ಮೊದಲು ಉದ್ಯೋಗ ಹೊಂದುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳಬೇಕು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಮೊದಲ ಆದ್ಯತೆ ಕುಟುಂಬಕ್ಕೆ ನೀಡಬೇಕು. ಉಳಿದ ಸಮಯವನ್ನು ಸಂಘಟನೆಗಾಗಿ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಕುಟುಂಬ ತೊರೆದು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು. ಇಂತಹ ಕಾರ್ಯಕರ್ತರ ಅಗತ್ಯ ನಮ್ಮ ಸಂಘಟನೆಗೆ ಬೇಕಿಲ್ಲ ಎಂದರು.
      ಧರ್ಮ ರಕ್ಷಣೆ, ರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ:
  ದೇವರಿಗೆ ಸರಿಸಮಾನವಾದ ಸತ್ಯ, ಧರ್ಮ, ನ್ಯಾಯದ ದಾರಿಯಲ್ಲಿ ಸಾಗುವುದೇ ಧರ್ಮ ಎಂಬ ಪರಿಕಲ್ಪನೆಯನ್ನು ಸಂಘಟನೆ ಹೊಂದಿದೆ. ಪ್ರತಿಯೊಬ್ಬರಲ್ಲೂ ಉತ್ತಮ ಸಂಸ್ಕಾರ, ಆಧ್ಯಾತ್ಮಿಕ ಚಿಂತನೆಗಳು ಬೆಳೆಯಬೇಕು. ಈ ಕಾರ್ಯ ಪ್ರತಿ ಮನೆಗಳಿಂದ ಆರಂಭಗೊಳ್ಳಬೇಕು. ಇದು ಸಂಘಟನೆಯ ಉದ್ದೇಶಗಳಲ್ಲಿ ಒಂದಾಗಿದ್ದು, ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತ ಇದನ್ನು ಅಳವಡಿಸಿಕೊಂಡು ತಮ್ಮ ಸುತ್ತಲಿನ ಪರಿಸರದಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ನಮ್ಮ ಧರ್ಮ ಹಾಗೂ ರಾಷ್ಟ್ರ ಉಳಿಯಬೇಕಾದರೆ ನಮ್ಮ ಆಶಯಗಳಿಗೆ ಆಳುವ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಾನೂನು ಕೈಗೆತ್ತಿಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಹಿಂದೆ ಕೆಲವು ಬಾರಿ ಸಂಘಟನೆ ಕಾನೂನು ಕೈಗೆತ್ತಿಕೊಂಡಿದೆ. ಮುಂದೆ ಸಹ ಕೈಗೆತ್ತಿಗೊಳ್ಳಲಿದೆ. ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟವಿಲ್ಲ. ಬದಲಿಗೆ ಧರ್ಮ ವಿರೋಧಿಗಳ, ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.
      ಅಯೋಧ್ಯೆ ಶ್ರಿರಾಮಜ್ಮನಭೂಮಿಯಲ್ಲಿ ಹೊಸ ಬೆಳಕು:
    ಆಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಶಾದ್ಯಂತ ಕೋಟ್ಯಾಂತರ ಜನರು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಮರ್ಪಿಸುತ್ತಿದ್ದಾರೆ. ಇದೆ ರೀತಿ ಸಂಘಟನೆ ಸಹ ತನ್ನದೇ ಆದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಶ್ರೀರಾಮ ಪುನರ್ ಪ್ರತಿಷ್ಠಾಪನೆಗೊಂಡು ಸಿಂಹಾಸನವೇರುವ ಗತವೈಭವವನ್ನು ದೇಶದ ಜನರು ಎದುರು ನೋಡಿದ್ದಾರೆ. ಅಂದು ಈ ದೇಶದಲ್ಲಿ ಹೊಸ ಬೆಳಕು ಮೂಡುವ ವಿಶ್ವಾಸವಿದೆ. ಜೊತೆಗೆ ರಾಮನ ಸೈನಿಕರಂತೆ ಈ ಸಂಘಟನೆ ಕಾರ್ಯಕರ್ತರು ಸಹ ದೇಶಾದ್ಯಂತ ವಿಸ್ತಾರಗೊಳ್ಳುವ ದಿನಗಳು ಬರಲಿವೆ ಎಂದರು.
       ಕನ್ನಡ ಭಾಷೆಗೆ ಗೌರವ:
     ಕನ್ನಡ ಅತ್ಯದ್ಭುತ ಭಾಷೆಯಾಗಿದ್ದು, ಈ ಭಾಷೆ ತನ್ನದೇ ಆದ ವಿಶಿಷ್ಟತೆಹೊಂದಿದೆ. ಕನ್ನಡ ಭಾಷೆ ಹಾಗು ತಾಯಿ ಭುವನೇಶ್ವರಿಗೆ ಸಂಘಟನೆ ಎಂದೆಂಗೂ ಗೌರವ ಸಲ್ಲಿಸುತ್ತದೆ. ಕನ್ನಡ ಪರ ಹೋರಾಟಗಳಲ್ಲೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ದೇಶದ ಚಿಂತನೆಯಲ್ಲಿ ನಮ್ಮ ಹೋರಾಟಗಳು ನಡೆಯುತ್ತಿವೆ ಎಂದರು.
     ಬೆಳಗಾವಿಯಲ್ಲಿ ರಾಜಕೀಯ ಪ್ರೇರಿತ ಗೊಂದಲ:
   ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರ ನಡುವೆ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ರಾಜಕೀಯ ಪ್ರೇರಿತ ಗೊಂದಲಗಳು ರೂಪುಗೊಳ್ಳುತ್ತಿವೆ. ಈ ನಿಟ್ಟಿಲ್ಲಿ ರೂಪುಗೊಂಡ ಹೋರಾಟಗಳಿಗೆ ಸಂಘಟನೆ ಬೆಂಬಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳಗಾವಿ ವಿವಾದ ಬಗೆಹರಿಯುವ ವಿಶ್ವಾಸವಿದೆ ಎಂದರು.
         ಯಾವುದೇ ಸರ್ಕಾರದಿಂದ ರೈತರಿಗೆ ಮೋಸವಾಗಿಲ್ಲ :
  ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಹೋರಾಟವಾಗಿದೆ. ನಿಜವಾದ ರೈತ ತನ್ನ ಕಾಯಕವನ್ನು ಮರೆತು ಎಂದಿಗೂ ಬೇಡಿಕೆಗಾಗಿ ಹೋರಾಟ ನಡೆಸಿಲ್ಲ. ಮುಂದೆಯೂ ಸಹ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರವಿರಲಿ ರೈತರಿಗೂ ಎಂದಿಗೂ ಅನ್ಯಾಯವಾಗಿಲ್ಲ. ಪ್ರಸ್ತುತ ಹೋರಾಟ ನಡೆಸುತ್ತಿರುವವರು ರೈತರಲ್ಲದವರು ಹಾಗು ಭೂಮಿಯನ್ನು ಲೀಸ್‌ಗೆ ಕೊಟ್ಟವರಾಗಿದ್ದು ಈ ಹಿನ್ನಲೆಯಲ್ಲಿ ನಮ್ಮ ಸಂಘಟನೆ ಹೋರಾಟ ಬೆಂಬಲಿಸುತ್ತಿಲ್ಲ ಎಂದರು.
     ಸಂಘಟನೆ ಮೂಲಕ ಜಾತಿ ವಿಷಬೀಜ ನಿರ್ಮೂಲನೆ :
   ಜಾತಿ ವ್ಯವಸ್ಥೆ ತೊಲಗಬೇಕು. ಜಾತಿ ಎಂಬ ವಿಷಬೀಜ ನಿರ್ಮೂಲನೆ ಮಾಡಬೇಕೆಂಬ ಧ್ಯೇಯೋದ್ದೇಶ ಸಹ ಸಂಘಟನೆ ಗುರಿಯಾಗಿಸಿಕೊಂಡಿದೆ. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ. ಸಂಘಟನೆಯ ಮುಖಂಡರು, ಕಾರ್ಯಕರ್ತರೆಲ್ಲರ ಮನಸ್ಥಿತಿ ಒಂದೇ ರೀತಿಯಾಗಿದೆ. ಸಂಘಟನೆಗಾಗಿ ದುಡಿಯುತ್ತಿರುವ ಎಲ್ಲರೂ ಸಮಾಜದಲ್ಲಿ ಒಂದಲ್ಲ ಒಂದು ನೋವು ಅನುಭವಿಸಿ ಬಂದವರಾಗಿದ್ದಾರೆ. ಎಲ್ಲೂ ಸಹ ಸ್ವಾತಃ ಎಂಬುದು ಇಲ್ಲ. ಎಲ್ಲೋ ಅಲ್ಪಸ್ವಲ್ಪ ದೋಷಗಳಿರಬಹುದು ಅವೆಲ್ಲನ್ನೂ ಸರಿಪಡಿಸಿಕೊಂಡು ಸಂಘಟನೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ವಿಶ್ವಾಸ ಹೊಂದಿದ್ದೇನೆ ಎಂದರು.
   ರಾಮ್ ಸೇನಾ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ ಉಪಸ್ಥಿತರಿದ್ದರು.

ಕಬಡ್ಡಿ ಪಂದ್ಯಾವಳಿ ಬಹುಮಾನ ವಿತರಣೆ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ, ಮಾರಾಮಾರಿ

ಶಾಸಕ ಬಿ.ಕೆ ಸಂಗಮೇಶ್ವರ್, ಬಿಜೆಪಿ ಮುಖಂಡ ಜಿ. ಧರ್ಮಪ್ರಸಾದ್ ಬೆಂಬಲಿಗರ ವಿರುದ್ಧ ದೂರು 


ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರರು ಹಾಗು ಬೆಂಬಲಿಗರು ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗು ತಕ್ಷಣ ತಪ್ಪಿತಸ್ಥರನ್ನು ಬಂಧಿಸಲು ಆಗ್ರಹಿಸಿ ಬಿಜೆಪಿ ಪಕ್ಷದ ಮುಖಂಡರು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
   ಭದ್ರಾವತಿ, ಮಾ. ೧: ಹಳೇನಗರದ ಕನಕಮಂಟಪ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಂತರ ಎರಡು ಗುಂಪುಗಳ ನಡುವೆ ಏಕಾಏಕಿ ಮಾರಾಮಾರಿ ನಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಈ ಸಂಬಂಧ ಸೋಮವಾರ ದೂರು, ಪ್ರತಿದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
   ಶನಿವಾರ ಮತ್ತು ಭಾನುವಾರ ಎರಡು ದಿನ ಪಂದ್ಯಾವಳಿ ಕೊನೆಯವರೆಗೂ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಯಿತು. ಈ ಪಂದ್ಯವಳಿಯಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಪೈಕಿ ಸ್ನೇಹ ಜೀವಿ ಉಮೇಶ್ ನೇತೃತ್ವದ ಮಲ್ನಾಡ್ ವಾರಿಯರ್ಸ್ ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ನೇತೃತ್ವದ ಸ್ಟೀಲ್ ಟೌನ್ ತಂಡಗಳು ಫೈನಲ್ ಪ್ರವೇಶಿಸಿದ್ದು, ಮಲ್ನಾಡ್ ವಾರಿಯರ್ಸ್ ಮೊದಲ ಬಹುಮಾನ ಹಾಗು ಸ್ಟೀಲ್‌ಟೌನ್ ಎರಡನೇ ಬಹುಮಾನ ಪಡೆದುಕೊಂಡವು. ಬಹುಮಾನ ವಿತರಣೆ ವೇಳೆ ಯುವಕನೋರ್ವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹಿನ್ನಲೆಯಲ್ಲಿ ಏಕಾಏಕಿ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲಿಗರು ಹಾಗು ಜಿ. ಧರ್ಮಪ್ರಸಾದ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿ ೨ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
    ಮಾರಾಮಾರಿಯಲ್ಲಿ ಎರಡು ಕಡೆಯವರಿಗೂ ಗಾಯಗಳಾಗಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ವರ್ ಸೇರಿದಂತೆ ೧೦ ಮಂದಿ ವಿರುದ್ಧ ದೂರು ದಾಖಲಾಗಿದ್ದು, ಇದೆ ರೀತಿ ಪ್ರತಿ ದೂರು ಸಹ ದಾಖಲಾಗಿದೆ.
      ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ:
   ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ತಕ್ಷಣ ತಪ್ಪಿತಸ್ಥರಾಗಿರುವ ಶಾಸಕರ ಪುತ್ರರನ್ನು ತಕ್ಷಣ ಬಂಧಿಸಬೇಕು. ಅಲ್ಲದೆ ಹಲ್ಲೆಗೆ ಕುಮ್ಮಕ್ಕು ನೀಡಿರುವ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಸಹ ದೂರು ದಾಖಲಿಸಿಕೊಳ್ಳಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ ಭಾನುಪ್ರಕಾಶ್, ಸಿ. ಮಂಜುಳ, ಎಸ್. ದತ್ತಾತ್ರಿ, ಚನ್ನಬಸಪ್ಪ, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಟಿ. ವೆಂಕಟೇಶ್, ಅವಿನಾಶ್, ಎಂ. ಮಂಜುನಾಥ್, ಸುಬ್ರಮಣಿ, ಗಣೇಶ್‌ರಾವ್, ಚನ್ನೇಶ್, ರವಿಚಂದ್ರನ್, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, February 28, 2021

ಸರ್ಕಾರಿ ಶಾಲೆಗಳ ಆಧುನೀಕರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹ

ಜೆಡಿಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಏಕಾಂಕಿ ಹೋರಾಟ


ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
   ಭದ್ರಾವತಿ, ಮಾ. ೧: ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ರಾಜ್ಯಾದ್ಯಂತ ಸುಮಾರು ೫೦ ವರ್ಷಗಳಿಗೂ ಹಳೇಯದಾದ ಸುಮಾರು ೧೪ ಸಾವಿರ ಶಾಲೆಗಳಿದ್ದು, ಈ ಶಾಲೆಗಳನ್ನು ಪುನರ್ ನಿರ್ಮಾಣ ಮಾಡುವುದು. ೨೨ ಸಾವಿರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ತಕ್ಷಣ ಸೌಕರ್ಯಗಳನ್ನು ಕಲ್ಪಿಸಿಕೊಡುವುದು. ೮ ಸಾವಿರ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಈ ಶಾಲೆಗಳನ್ನು ನವೀಕರಣಗೊಳಿಸಿ ಹಾಳಾಗದಂತೆ ನಿರ್ವಹಣೆ ಮಾಡುವುದು. ಪ್ರಾಥಮಿಕ ಹಂತದಿಂದಲೇ ಮಾತೃಭಾಷೆ ಜೊತೆಗೆ ಆಂಗ್ಲಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು. ಎಲ್ಲಾ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿ.ವಿ ವಿತರಿಸುವುದು ಹಾಗು ಅವಶ್ಯಕತೆ ಇರುವ ಕಲಿಕಾ ಮಾಧ್ಯಮದ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
   ಫಲಕಗಳನ್ನು ಹಿಡಿದು ಏಕಾಂಗಿ ಹೋರಾಟ ನಡೆಸಿದ ಶಶಿಕುಮಾರ್ ಎಸ್ ಗೌಡ ಕೊನೆಯಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ

'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ


ಭದ್ರಾವತಿಯಲ್ಲಿ ಭಾನುವಾರ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡು ಮಾತನಾಡಿದರು.
   ಭದ್ರಾವತಿ, ಫೆ. ೨೮: ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ ಎಂಬುದನ್ನು ಎಲ್ಲರಿಗೂ ಅರಿತುಕೊಳ್ಳಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ಅವರು ಭಾನುವಾರ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದ ಗುರಿ ಯಾವುದು ಎಂಬುದನ್ನು ಗುರುತಿಸಿಕೊಳ್ಳಬೇಕು. ಬದುಕಿನ ವಿವಿಧ ಹಂತಗಳನ್ನು ಯಶಸ್ವಿಯಾಗಿ ತಲುಪುವುದೇ ಜೀವನದ ಮುಖ್ಯ ಗುರಿಯಲ್ಲ. ನಮಗೆ ಆನಂದ, ಆತ್ಮತೃಪ್ತಿ ಸಿಗುವ ಮಾರ್ಗದಲ್ಲಿ ಸಾಗುವುದೇ ಜೀವನದ ಗುರಿಯಾಗಬೇಕು. ಇದನ್ನು ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ.
   ದೇವರು ನಮ್ಮಿಂದ ಯಾವುದನ್ನೂ ಸಹ ಅಪೇಕ್ಷಿಸದೆ ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾವು ಆ ದೇವರು ಕೊಟ್ಟಿರುವುದರಲ್ಲಿ ಸ್ವಲ್ಪ ಭಾಗವನ್ನು ಮತ್ತೊಬ್ಬರಿಗೆ ನೀಡುವಲ್ಲಿ ಹಿಂದೆ ಮುಂದೆ ನೋಡುತ್ತಿದ್ದೇವೆ. ನಮ್ಮ ಪರಿಸರದಲ್ಲಿ ಅಕ್ಕಪಕ್ಕದಲ್ಲಿ ಬದುಕುತ್ತಿರುವವರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಣವಂತರು ಬಡವರಿಗೆ ನೆರವಾಗಬೇಕು. ಅಕ್ಷರಸ್ಥರು ಅನಕ್ಷರಸ್ಥರಿಗೆ ನೆರವಾಗಬೇಕು ಹೀಗೆ ಎಲ್ಲಾ ರೀತಿಯಿಂದಲೂ ನಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಆನಂದ, ಆತ್ಮತೃಪ್ತಿ ಕಂಡುಕೊಳ್ಳಬೇಕು. ಭಾರತ ದೇಶ ಹಲವು ವೈವಿಧ್ಯತೆಗಳಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇಂತಹ ನೆಲದಲ್ಲಿ ನಮ್ಮ ಬದುಕು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
    ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಸಮ್ಮೇಳನ ಉದ್ಘಾಟಿಸಿದರು. ವಾಗ್ಮಿ ಪ್ರೊ. ಡಾ. ಕೆ.ಪಿ ಪುತ್ತುರಾಯ ಪಿಡಿಜಿ ದಿವಾಕರ್, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಸ್ವಾಗತಿಸಿದರು. ಶುಗರ್ ಟೌನ್, ಸರ್ವೋದಯ ನಗರ, ಯಡೇಹಳ್ಳಿ, ಹೊಳೆಹೊನ್ನೂರು ಮತ್ತು ಸನ್ಯಾಸಿ ಕೋಡಮಗ್ಗೆ ಪ್ರಾಂತೀಯ ವಲಯ-೧ರ ಕ್ಲಬ್‌ಗಳ ಹಾಗು ಶಿವಮೊಗ್ಗ, ಶಿವಮೊಗ್ಗ ಕಾಸ್ಮೊಪೊಲಿಟ್ಯಾನ್, ಬಿ.ಆರ್ ಪ್ರಾಜೆಕ್ಟ್, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಸಹ್ಯಾದ್ರಿ, ಹೊಸನಗರ ಕೊಡಚಾದ್ರಿ ಮತ್ತು ಶಿವಮೊಗ್ಗ ಶಾಂಭವಿ ಪ್ರಾಂತೀಯ ವಲಯ-೨ರ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.