Thursday, September 30, 2021

ಅಭಿವೃದ್ಧಿ ಅಧಿಕಾರಿ ಮಧುಸೂದನ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ : ಕಾನೂನು ಕ್ರಮಕ್ಕೆ ಆಗ್ರಹ

ಈ ಹಿಂದೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಒತ್ತಾಯಿಸಿದರು.
    ಭದ್ರಾವತಿ, ಸೆ. ೩೦: ಈ ಹಿಂದೆ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಆರೋಪಿಸಿದರು.
    ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ಅವ್ಯವಹಾರ ನಡೆಸಲಾಗಿದೆ. ದಾಖಲೆಗಳಲ್ಲಿ ಕಾಮಗಾರಿ ನಡೆಸಿರುವುದಾಗಿ ನಮೂದಿಸಲಾಗಿದ್ದು, ಆದರೆ ವಾಸ್ತವವಾಗಿ ಯಾವುದೇ ಕಾಮಗಾರಿ ನಡೆದಿಲ್ಲ. ಅಲ್ಲದೆ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳಿಗೂ ಯಾವುದೇ ಅನುಕೂಲವಾಗಿಲ್ಲ. ಉದ್ಯೋಗ ಚೀಟಿಯಲ್ಲಿ ನಕಲಿ ಕೆಲಸಗಾರರ ಹೆಸರನ್ನು ಸೇರಿಸಿ ಲಕ್ಷಾಂತರ ರು. ಭ್ರಷ್ಟಾಚಾರ ನಡೆಸಲಾಗಿದೆ. ೧೪ನೇ ಹಣಕಾಸಿನ ಯೋಜನೆ ಹಾಗು ವರ್ಗ-೧ರಲ್ಲಿ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ನೀಡಿರುವ ಹೊಲಿಗೆ ಯಂತ್ರ ಹಾಗು ಸೋಲಾರ್ ದೀಪಗಳು ಅರ್ಹ ಫಲಾನುಭವಿಗಳಿಗೆ ನೀಡದೇ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.
    ಗ್ರಾಮದಲ್ಲಿರುವ ಸರ್ಕಾರಿ ಜಾಗಗಳನ್ನು ನಿಯಮಗಳನ್ನು ಮೀರಿ ಹಣವಂತರಿಗೆ ಖಾತೆ ಮಾಡಿಕೊಡಲಾಗಿದೆ. ಅಲ್ಲದೆ ಖಾಸಗಿ ವ್ಯಕ್ತಿಗಳ ರೆವಿನ್ಯೂ ಜಾಗವನ್ನು ರಿಜಿಸ್ಟ್ರಾರ್ ಪತ್ರದ ಆಧಾರದ ಮೇಲೆ ಸ್ಥಳ ಪರಿಶೀಲನೆ ಮಾಡದೆ ಖಾತೆ ಮಾಡಿ ಇ-ಸ್ವತ್ತು ನೀಡಲಾಗಿದೆ. ಆಶ್ರಯ ವಸತಿ ಯೋಜನೆಯಡಿ ಹಾಗು ಕೊಟ್ಟಿಗೆ ನಿರ್ಮಾಣದಲ್ಲೂ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹಳೆ ಹಿರಿಯೂರು ಗ್ರಾಮದ ಗ್ರಾಮ ಠಾಣಾ ಜಾಗದಲ್ಲಿ ಅಕ್ರಮವಾಗಿ ಸುಮಾರು ೯ ಮಂದಿ ಹೆಸರಿಗೆ ಎಕರೆಗಟ್ಟಲೆ ಜಾಗವನ್ನು ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
    ಮಧುಸೂದನ್ ಅವರು ಒಟ್ಟಾರೆ ಸಾಕಷ್ಟು ಭ್ರಷ್ಟಾಚಾರಗಳನ್ನು ನಡೆಸಿರುವುದು ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವ ಬದಲು ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ತಕ್ಷಣ ಮಧುಸೂದನ್ ಅವರನ್ನು ಕೆಲಸದಿಂದ ಅಮಾನುತ್ತುಗೊಳಿಸಬೇಕೆಂದರು ಆಗ್ರಹಿಸಿದರು. ಅಲ್ಲದೆ ಇತ್ತೀಚೆಗೆ ವರ್ಗಾವಣೆಗೊಂಡು ಬಂದಿದ್ದ ಪ್ರಾಮಾಣಿಕ ಅಧಿಕಾರಿಯಾಗಿರುವ ಸುಮಿತ್ರ ಸುಬೇದಾರ್ ಅವರನ್ನು ಕಾರಣ ನೀಡದೆ ೨ ತಿಂಗಳು ಕಳೆಯುವಷ್ಟರಲ್ಲಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿದರು.
    ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ವೈ ಕುಮಾರ್ ಮತ್ತು ಕಮಲಬಾಯಿ ಹಾಗು ಮಾಜಿ ಸದಸ್ಯರಾದ ಸತ್ಯನಾರಾಯಣ, ಕೆ.ಟಿ ಪ್ರಸನ್ನ, ಗ್ರಾಮದ ಮುಖಂಡರಾದ ಕೋಡ್ಲುಯಜ್ಞಯ್ಯ, ಬಿ. ರವಿ, ಗಿರಿ, ಜಯದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Wednesday, September 29, 2021

ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ಜರುಗಿದ ಪೋಷಣ್ ಅಭಿಯಾನ್

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಸಹಕಾರದೊಂದಿಗೆ ಬುಧವಾರ ಪೋಷಣ್ ಅಭಿಯಾನ ಆಯೋಜಿಸಲಾಗಿತ್ತು.   
    ಭದ್ರಾವತಿ, ಸೆ. ೨೯: ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಸಹಕಾರದೊಂದಿಗೆ ಬುಧವಾರ ಪೋಷಣ್ ಅಭಿಯಾನ ಆಯೋಜಿಸಲಾಗಿತ್ತು.
    ವಿಶೇಷವಾಗಿ ಆಕರ್ಷಕ ರಂಗು ರಂಗಿನ ರಂಗೋಲೆ ಮೂಲಕ ಪೋಷಣ್ ಅಭಿಯಾನದ ಮಹತ್ವ ಸಾರಲಾಯಿತು. ಜೊತೆಗೆ ಸಂಪನ್ಮೂಲ ವ್ಯಕ್ತಿಗಳು ಅಭಿಯಾನದ ಸಂಪೂರ್ಣ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
    ಡಾ. ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯ ಪ್ರೇಮ್‌ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ಪರಮೇಶ್, ಕರಾವೇ ತಾಲೂಕು ಅಧ್ಯಕ್ಷ ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಡಕೆ ತೋಟದಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಸಾಗುವಾನಿ ಮರದ ತುಂಡುಗಳ ಪತ್ತೆ

ಉಂಬ್ಳೆಬೈಲು ಅರಣ್ಯ ಸಿಬ್ಬಂದಿಗಳಿಂದ ಯಶಸ್ವಿ ಕಾರ್ಯಾಚರಣೆ


ಭದ್ರಾವತಿ ಭದ್ರಾವತಿ ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಟ್ರಂಚ್ ಹೊಡೆದು ಬಚ್ಚಿಟ್ಟಿದ್ದು, ಉಂಬ್ಳೆಬೈಲು ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿರುವುದು.
    ಭದ್ರಾವತಿ, ಸೆ. ೨೮: ಅಡಕೆ ತೋಟವೊಂದರಲ್ಲಿ ಟ್ರಂಚ್ ಹೊಡೆದು ಅಡಕೆ ಗರಿಗಳಿಂದ ಅಕ್ರಮವಾಗಿ ಬಚ್ಚಿಡಲಾಗಿದ್ದ ಸುಮಾರು ೮೦ ಸಾವಿರ ರು. ಮೌಲ್ಯದ ಸಾಗುವಾನಿ ಮರದ ತುಂಡುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ತಾಲೂಕಿನ ಅರಣ್ಯ ಉಪ ವಿಭಾಗದ ಉಂಬ್ಳೆಬೈಲು ವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ.
    ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಬಚ್ಚಿಡಲಾಗಿದ್ದು, ೧೪ ಸಾಗುವಾನಿ ಮರದ ತುಂಡುಗಳು ಒಟ್ಟು ೨೦ ಅಡಿ ಉದ್ದ ಹೊಂದಿವೆ. ಇವುಗಳ ಅಂದಾಜು ಮೌಲ್ಯ ಸುಮಾರು ೮೦ ಸಾವಿರ ರು.ಗಳಾಗಿದ್ದು, ಈ ಸಂಬಂಧ ಜಾನಪ್ಪ ಖೈರು ಮತ್ತು ಈತನ ಮಗ ಜದೀಶ್ ವಿರುದ್ದ ದೂರು ದಾಖಲಾಗಿದೆ.
    ದಾಳಿಯಲ್ಲಿ ಉಂಬ್ಳೆಬೈಲು ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಟಿ.ಆರ್ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಂ, ಪವನ್, ಗಿರಿಸ್ವಾಮಿ, ಅರಣ್ಯ ರಕ್ಷಕರಾದ ಸುನಿಲ್, ಸೂರ್ಯವಂಶಿ ಮತ್ತು ಸುಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



ಭದ್ರಾವತಿ ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಟ್ರಂಚ್ ಹೊಡೆದು ಬಚ್ಚಿಟ್ಟಿರುವುದು.

ಆಧುನಿಕ ಒತ್ತಡದ ಜೀವನ ಶೈಲಿ, ಆಹಾರ ಪದ್ದತಿಯಿಂದ ಅನಾರೋಗ್ಯ : ಡಾ. ಮಂಜುನಾಥ್

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಮಾತನಾಡಿದರು.
    ಭದ್ರಾವತಿ, ಸೆ. ೨೯: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿ ಹಾಗು ಆಹಾರ ಪದ್ದತಿ ಬಹಳಷ್ಟು ರೀತಿಯ ಅನಾರೋಗ್ಯಗಳಿಗೆ ಕಾರಣಗಳಾಗುತ್ತಿವೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದರು.
    ಅವರು ಬುಧವಾರ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒತ್ತಡದ ಜೀವನ ಶೈಲಿ ಜೊತೆಗೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳು ಸಹ ಅನಾರೋಗ್ಯಕ್ಕೆ ಕಾರಣಗಳಾಗುತ್ತಿವೆ. ಇಂದು ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ರೋಗಗಳು ತಕ್ಷಣಕ್ಕೆ ಕಂಡು ಬರುತ್ತಿಲ್ಲ. ಉಲ್ಬಣವಾದ ನಂತರ ಕಂಡು ಬರುವುದರಿಂದ ಚಿಕಿತ್ಸೆ ನೀಡುವುದು ಬಹಳ ಕಷ್ಟ. ನಿಶ್ಯಕ್ತಿ, ನಡೆದಾಡಲು, ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದು ಹಾಗು ಆಯಾಸವಾಗುವ ಲಕ್ಷಣ ಕಂಡು ಬಂದಲ್ಲಿ ಅದು ನಿಶ್ಚಿತವಾಗಿ ಹೃದಯ ಖಾಯಿಲೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಾಗ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
    ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್ ಮಾತನಾಡಿ, ಹೃದಯ ಸಂಬಂಧಿ ಹಾಗು ಮಧುಮೇಹ ಈ ಎರಡು ರೋಗಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕು. ಮಧುಮೇಹ ಕಾಣಿಸಿಕೊಂಡವರಲ್ಲಿ ಸಹಜವಾಗಿ ಹೃದಯ ಸಂಬಂಧಿ ರೋಗಗಳು ಸಹ ಕಾಣಿಸಿಕೊಳ್ಳಲಿವೆ. ಉತ್ತಮ ಆರೋಗ್ಯಕರ ಜೀವನ, ಹಿತಮಿತವಾದ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು ಇತ್ಯಾದಿ ಕ್ರಮಗಳಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಸಾಂಕ್ರಾಮಿಕ ರೋಗಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದರೆ ಆಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ರೋಗಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುವ ಬದಲು ಅವುಗಳು ಕಾಣಿಸಿಕೊಳ್ಳದಂತೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದರು.  
    ಶ್ರಮರಹಿತ ಚಟುವಟಿಕೆಗಳು, ರಾಸಾಯನಿಕಯುಕ್ತ ಆಹಾರಗಳು, ಬೇಕರಿ ಪದಾರ್ಥಗಳ ಸೇವನೆಯಿಂದ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಎಚ್ಚರವಹಿಸುವುದು ಅವಶ್ಯಕ ಎಂದರು.  
    ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ.ಎಂ ರವೀಂದ್ರನಾಥ ಕೋಠಿ ಪ್ರಸ್ತಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ರೋಗಗಳಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 'ವಿಶ್ವ ಹೃದಯ ದಿನ' ಆಚರಿಸಲಾಗುತ್ತಿದೆ ಎಂದರು.
    ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ವಿ ಆದರ್ಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಹಾಗು ರಕ್ತ ತಪಾಸಣೆ ನಡೆಸಲಾಯಿತು. ಬಿ.ಆರ್ ಯಶೋಧ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ವಂದಿಸಿದರು.  

Tuesday, September 28, 2021

ಬಗರ್‌ಹುಕುಂ ಸಾಗುವಳಿ ಸಮಿತಿಗೆ ೫ ಮಂದಿ ಸದಸ್ಯರ ನಾಮನಿರ್ದೇಶನ

ಅಧ್ಯಕ್ಷರಾಗಿ ಅಂತರಗಂಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ನೇಮಕ

ಬಿ. ನಾಗೇಶ್
    ಭದ್ರಾವತಿ, ಸೆ. ೨೮: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಹೊಸದಾಗಿ ೫ ಮಂದಿ ಸದಸ್ಯರನ್ನು ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಅಂತರಗಂಗೆ ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು, ಉಳಿದಂತೆ ಒಕ್ಕಲಿಗ ಸಮಾಜದ ಹಿರಿಯ ಮುಖಂಡ, ಅಪ್ಪರ್‌ಹುತ್ತಾ ನಿವಾಸಿ ಎಚ್. ಕರಿಗೌಡ, ಭದ್ರಾಕಾಲೋನಿ ನಿವಾಸಿ, ಪರಿಶಿಷ್ಟ ಜಾತಿಯ ಮಾಲಾ ಧರ್ಮನಾಯ್ಕ್ ಮತ್ತು ಗುಡ್ಡದನೇರಲೆಕೆರೆ ಗ್ರಾಮದ ನಿವಾಸಿ ಸರಸ್ವತಿ ಅವರನ್ನು ಸದಸ್ಯರನ್ನಾಗಿ ಹಾಗು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಬಲರಾಮ್ ಆದೇಶ ಹೊರಡಿಸಿದ್ದಾರೆ.
    ಈ ಹಿಂದೆ ಸರ್ಕಾರ ೨೪.೦೧.೨೦೨೦ರಲ್ಲಿ ನಾಮನಿರ್ದೇಶನಗೊಳಿಸಿದ್ದ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಇದೀಗ ಹೊಸದಾಗಿ ಸದಸ್ಯರನ್ನು ನೇಮಕಗೊಳಿಸಿದೆ.

ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪರಿಗೆ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ

ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಪ್ರತಿ ಜಿಲ್ಲೆಯಿಂದ ಒಬ್ಬರಂತೆ ರಾಜ್ಯಾದ್ಯಂತ ಸುಮಾರು ೩೨ ಸಾಧಕ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಆಯ್ಕೆಮಾಡುವ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಹೊಸಮಠದ ನಟರಾಜ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಅನುಭವ ಮಂಟಪದ ಡಾ. ಶ್ರೀ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು.
    ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶರಣು ವಿಶ್ವ ವಚನ ಫೌಂಡೇಶನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ವಿಶ್ರಾಂತ ಉಪ ನಿರ್ದೇಶಕ ಸ್ವಾಮಿ, ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ ಸೋಮೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಅನಿಲ್, ಕ್ರಿಷ್ಟಿ, ಪ್ರಶಸ್ತಿ ಪುರಸ್ಕೃತ ಸಿ.ಎಚ್ ನಾಗೇಂದ್ರಪ್ಪನವರ ಅವರ ತಾಯಿ ಚಂದ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಭದ್ರಾವತಿ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಭದ್ರಾವತಿ, ಸೆ. ೨೮: ನಗರದ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ವಲಯದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವಾ ಯೋಜನೆಗಳ ಜೊತೆಗೆ ಸದಸ್ಯರಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗಿದೆ.
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್, ವಲಯದ ಮೇಲ್ವಿಚಾರಕ ವೀರೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರೀತಿ, ಸೇವಾ ಪ್ರತಿನಿಧಿ ಹಾಗು ಕೇಂದ್ರದ ಎಲ್ಲಾ  ಸದಸ್ಯರು ಉಪಸ್ಥಿತರಿದ್ದರು.