Thursday, August 10, 2023

ಅಂಬೇಡ್ಕರ್‌ ಭವನ ನಿರ್ಲಕ್ಷ್ಯ, ಶಾಲಾ-ಕಾಲೇಜುಗಳ ಅವ್ಯವಸ್ಥೆಗಳ ವಿರುದ್ದ ಆ.೧೪ರಂದು ಪ್ರತಿಭಟನಾ ಧರಣಿ

ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ  ಅಧ್ಯಕ್ಷ ಬಿ.ಎನ್‌ ರಾಜು ಮಾತನಾಡಿದರು.
    ಭದ್ರಾವತಿ, ಆ. ೧೦: ನಗರದ ಡಾ. ಬಿ.ಆರ್‌ ಅಂಬೇಡ್ಕರ್‌ ಭವನ ನಿರ್ಲಕ್ಷ್ಯ ಹಾಗು ಸರ್ಕಾರಿ ಶಾಲಾ-ಕಾಲೇಜುಗಳ ಅವ್ಯವಸ್ಥೆಗಳ ವಿರುದ್ಧ ಆ.೧೪ರಂದು ಪ್ರತಿಭಟನಾ ಧರಣಿ ಸತ್ಯಾಗ್ರಹ ಹಾಗು  ಆ.೧೫ರಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ  ಅಧ್ಯಕ್ಷ ಬಿ.ಎನ್‌ ರಾಜು ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ೧೯೪೭ರಲ್ಲಿ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂತು ಎಂಬುದು ನಿಜವಾಗಿದ್ದರು. ಸ್ವಾತಂತ್ರ್ಯ ಎಂದರೇ ಪ್ರತಿ ವ್ಯಕ್ತಿಗೂ ಸಮಾನತೆ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಸಮಭಾಗ ಇದ್ದಾಗ ಮಾತ್ರ ಬಹಳ ಮುಖ್ಯವಾಗಿ ಶಿಕ್ಷಣ, ಸೂರು, ಆರೋಗ್ಯ ಮತ್ತು ರಕ್ಷಣೆಯು ಮೂಲಭೂತ ಹಕ್ಕುಗಳಾಗಿದ್ದು, ಸ್ವಾತಂತ್ರ್ಯ ಬಂದು ಸುಮಾರು ೭೬ ವರ್ಷಗಳಾದರೂ ತಾರತಮ್ಯದಿಂದ ಇಂದಿಗೂ ಸಹ ಉಚಿತ ಶಿಕ್ಷಣ, ಆರೋಗ್ಯ, ಜೀವಿಸಲು ಸೂರು ಕಲ್ಪಿಸದಾ ಅನೇಕ ಸರ್ಕಾರಗಳು ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಎಂಬ ಅರ್ಥವನ್ನು ಅನರ್ಥಗೊಳಿಸಿರುವುದು ಖಂಡನೀಯವಾಗಿದೆ ಎಂದರು.
    ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣವನ್ನು ಗುಣಮಟ್ಟದಿಂದ ನೀಡದೇ ಪ್ರತಿ ವಿಷಯವಾರು ಶಿಕ್ಷಕರಿಲ್ಲದೆ ಕಟ್ಟಡಗಳ ಶಿಥಿಲಾವಸ್ಥೆಗಳನ್ನು ಸರಿಪಡಿಸದೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಮತ್ತು ಪ್ರೌಷ್ಠಿಕಾಂಶಕ್ಕಾಗಿ ಬಡ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಪೌಷ್ಠಿಕಾಂಶವಿಲ್ಲದೆ ಅರ್ಧಂಬರ್ಧ ನೀಡುತ್ತಾ ಬಡ ಮಕ್ಕಳಿಗೆ ಮೋಸ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
    ದೇಶದ ಕೆಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದ್ದು, ರಾಜದಲ್ಲಿ ಇದುವರೆಗೂ ಈ ಬಗ್ಗೆ ಸರಿಯಾದ ಅಧ್ಯಯನ ನಡೆದಿರುವುದಿಲ್ಲ. ಸರ್ಕಾರಿ ಶಿಕ್ಷಕರು ತಮ್ಮ ವೇತನಕ್ಕಾಗಿ ಶಾಲೆಗಳನ್ನು ಉಳಿಸಿಕೊಂಡಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುವುದಾದರೆ ಇವರ ಸೇವೆ ಸರ್ಕಾರಿ ಶಾಲೆಗೆ ಅಗತ್ಯವಿದೆಯೇ  ಎಂದು ಪ್ರಶ್ನಿಸಿದರು.
    ಇನ್ನೂ ದುರಂತ ಎಂದರೆ ಸರ್ಕಾರಿ ನೌಕರರ ಸಂಘದಲ್ಲಿ ಇರುವ ಕೆಲ ಶಿಕ್ಷಕರು ತರಗತಿಯಲ್ಲಿ ಪಾಠ ಪ್ರವಚನ ಕೈಗೊಳ್ಳದೆ ಮನಸೋ ಇಚ್ಛೆ ನಡೆದುಕೊಂಡು ಪ್ರತಿ ತಿಂಗಳು ವೇತನ ಪಡೆಯುತ್ತಿದ್ದು, ಕನಿಷ್ಠ ಕಾಳಜಿಯಿಂದ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡದೆ ಮೋಸ ಮಾಡುತ್ತಿರುವುದು ಯಾವುದೇ ಸರ್ಕಾರ ಜವಾಬ್ದಾರಿಯಿಂದ ಇವನ್ನು ಕೇಳದೇ ಇರುವುದು ಬಡ ಮಕ್ಕಳಿಗೆ ಮಾಡಿದ ಮೋಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ತಕ್ಷಣ ಎಲ್ಲಾ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಮತ್ತು ಸಿ.ಸಿ ಟಿವಿ ಅಳವಡಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗುವಂತೆ ಮುಖ್ಯಮಂತ್ರಿಗಳಿಗೆ ಹಾಗು ಶಿಕ್ಷಣ ಸಚಿವರಿಗೆ ಈ ಮೂಲಕ ಆಗ್ರಹಿಸುತ್ತೇನೆ ಎಂದರು.
    ನಗರದ ಹೃದಯ ಭಾಗದಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ೨೦೧೭ರಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ಭವನ ಕಾಮಗಾರಿ ಆರಂಭಗೊಂಡಿದ್ದು, ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಸಲಾಗಿದೆ. ಇದನ್ನು ಸಮಿತಿ ಖಂಡಿಸುವ ಜೊತೆಗೆ ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ  ಹಾಗು ಈ ಭವನದ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸುಂತೆ ಆಗ್ರಹಿಸುತ್ತೇನೆ ಎಂದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್‌ ಅರುಣ್‌ಕುಮಾರ್‌, ಪ್ರಧಾನ  ಕಾರ್ಯದರ್ಶಿ ಅಕ್ರಮ್‌ ಖಾನ್‌, ಬ್ರಹಲಿಂಗಯ್ಯ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Wednesday, August 9, 2023

ಕಂಬದಾಳ್‌ ಹೊಸೂರು ಗ್ರಾ.ಪಂ. ಅಧ್ಯಕ್ಷ ನಿರ್ಮಲರಾಜು, ಉಪಾಧ್ಯಕ್ಷ ಸೋಮಶೇಖರಪ್ಪ

ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಿರ್ಮಲರಾಜು ಹಾಗು ಉಪಾಧ್ಯಕ್ಷರಾಗಿ ಸೋಮಶೇಖರಪ್ಪ ಅವಿರೋಧವಾಗಿ ಆಯ್ಕೆಯಾದರು.
    ಭದ್ರಾವತಿ, ಆ. ೯ : ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಿರ್ಮಲರಾಜು ಹಾಗು ಉಪಾಧ್ಯಕ್ಷರಾಗಿ ಸೋಮಶೇಖರಪ್ಪ ಅವಿರೋಧವಾಗಿ ಆಯ್ಕೆಯಾದರು.
    ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ಹೊಂದಿರುವ  ಅಧ್ಯಕ್ಷ ಸ್ಥಾನಕ್ಕೆ ನಿರ್ಮಲರಾಜು  ಹಾಗು ಬಿಸಿಎಂ(ಎ) ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ  ಸೋಮಶೇಖರಪ್ಪ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಪಿಎಲ್‌ಡಿ) ಬ್ಯಾಂಕ್ ಅಧ್ಯಕ್ಷ ಎಸ್. ವಿರೂಪಾಕ್ಷಪ್ಪ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಶಾಂತಕುಮಾರ್, ಯುವ ಮುಖಂಡ ಎಚ್.ಎಂ ಪ್ರದೀಪ್, ಮಣಿ  ಸೇರಿದಂತೆ ಇನ್ನಿತರರು  ಅಭಿನಂದಿಸಿದ್ದಾರೆ.

ಭದ್ರಗಿರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಆಡಿ ಕೃತಿಕಾ ಜಾತ್ರಾ ಮಹೋತ್ಸವ

ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಆಡಿ ಕೃತ್ತಿಕಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ, ಆ. ೯ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಆಡಿ ಕೃತ್ತಿಕಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.  
    ಶ್ರೀ ಕ್ಷೇತ್ರದಲ್ಲಿನ ಎಲ್ಲಾ ಮೂಲ ವಿಗ್ರಹಗಳಿಗೆ ಹಾಗು ಶ್ರೀ ದವತ್ತಿರು ಸ್ವಾಮೀಜಿಯವರ ಶಕ್ತಿ ಪೀಠಕ್ಕೆ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು.  ಬೆಳಗಿನ ಜಾವ ೪ ಗಂಟೆಗೆ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ ನಡೆಯಿತು.


    ಭರಣಿ ಕಾವಡಿ ಉತ್ಸವ ಮಂಗಳವಾರ ಜರುಗಿದ್ದು, ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡರು.  ಚಿಕ್ಕಮಗಳೂರು ಹಾಗು ಶಿವಮೊಗ್ಗ ಜಿಲ್ಲೆಗಳಿಂದ, ರಾಜ್ಯದ ವಿವಿಧ ಭಾಗಗಳಿಂದ ಹಾಗು ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
    ವಿಶೇಷವಾಗಿ ಕಾವಡಿ ಹರಕೆ ಹೊತ್ತ ಭಕ್ತರು ಗಮನ ಸೆಳೆದರು. ಬಾಯಿ, ಬೆನ್ನಿಗೆ ಕಾವಡಿ ಚುಚ್ಚಿಕೊಂಡು ಹರಕೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದರು.


    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್‌ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕ್ಷೇತ್ರದ ಪ್ರಮುಖರಾದ ಎ. ಚಂದ್ರಘೋಷಣ್‌  ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರುಗಳು, ಭದ್ರಗಿರಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಹಾಗು ಸೇವಾಕರ್ತರು ಉಪಸ್ಥಿತರಿದ್ದರು.

Tuesday, August 8, 2023

ಚಿರತೆ ದಾಳಿ ರೈತ ಮಹಿಳೆ ಬಲಿ



ಭದ್ರಾವತಿ: ಚಿರತೆ ದಾಳಿಗೆ ಬಿಕ್ಕೋನಹಳ್ಳಿಯಲ್ಲಿ ರೈತ ಮಹಿಳೆ ಯಶೋಧಮ್ಮ (43) ಬಲಿಯಾಗಿದ್ದಾರೆ.
      ಕಾಡಂಚಿನ ಹೊಲದಲ್ಲಿ ಕಳೆ ತೆಗೆಯುವ ವೇಳೆ‌ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ.  ಮೃತ ದೇಹವನ್ನು ಎಳೆದುಕೊಂಡು ಹೋಗಿ  ಅರ್ಧಂಬರ್ಧ ತಿಂದಿ ಬಿಟ್ಟು ಹೋಗಿದೆ. ಗ್ರಾಮದ ಸುತ್ತಮುತ್ತ ಚಿರತೆಗಳ ಉಪಟಳ ಹೆಚ್ಚಾಗಲು ಅರಣ್ಯ ಇಲಾಖೆಯವರೇ ಕಾರಣ. ಬೇರೆಡೆ ಹಿಡಿದ ಚಿರತೆಗಳನ್ನು ಸಿದ್ದರಮಟ್ಟಿ ಭಾಗದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಸೊಮ್ಮಿನಕೊಪ್ಪ ಸುತ್ತಮುತ್ತ ಚಿರತೆಗಳು ಆಶ್ರಯಪಡೆದಿವೆ.
       ಚಿರತೆ ದಾಳಿಯಿಂದ ಕುತ್ತಿಗೆ ಬೆನ್ನಿನ ಭಾಗ ಕಿತ್ತುಹೋಗಿದೆ. ಈ ದಾಳಿ ಬಿಕ್ಕೋನಹಳ್ಳಿ ಸುತ್ತಮುತ್ತ ಗ್ರಾಮಸ್ಥರನ್ನು ಗಾಬರಿಗೊಳಿಸಿದೆ. ಈ ಭಾಗದಲ್ಲಿ ಚಿರತೆ ಹೆಚ್ಚಿದ್ದರು ಅರಣ್ಯ ಇಲಾಖೆ‌ಯವರ ನಿರ್ಲಕ್ಷ ಹೆಚ್ಚಿದೆ. ಯಾವ ಕ್ರಮವೂ ಜರುಗಿಸಿಲ್ಲ. ಬೋನ್ ಇಟ್ಟು ಹೋಗುತ್ತಾರೆ ಆದರೆ ಚಿರತೆ ಬೋನಿಗೆ ಬೀಳುವ ವರೆಗೂ ಯಾವ ಕ್ರಮವೂ ಜರುಗಿಸಿಲ್ಲ ಎಂದು ಗ್ರಾಮಸ್ಥರು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂತರಗಂಗೆ ಗ್ರಾ. ಪಂ. ಅಧ್ಯಕ್ಷರಾಗಿ ನಾಗೇಶ್‌, ಉಪಾಧ್ಯಕ್ಷರಾಗಿ ಗಂಗಮ್ಮ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಾಗೇಶ್‌ ಮತ್ತು  ಉಪಾಧ್ಯಕ್ಷರಾಗಿ ಗಂಗಮ್ಮ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ : ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಾಗೇಶ್‌ ಮತ್ತು  ಉಪಾಧ್ಯಕ್ಷರಾಗಿ ಗಂಗಮ್ಮ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ೧೫ ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ  ಅಧ್ಯಕ್ಷ ಸ್ಥಾನಕ್ಕೆ ಅಂತರಗಂಗೆ ನಾಗೇಶ್  ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ  ಗಂಗಮ್ಮ  ತಲಾ ಒಂದು ಮತಗಳ ಅಂತರದಿಂದ ಆಯ್ಕೆಯಾದರು. ಚುನಾವಣೆಯಲ್ಲಿ ಎಲ್ಲಾ ೧೫ ಮಂದಿ ಸದಸ್ಯರು ಭಾಗವಹಿಸಿ ಮತಚಲಾಯಿಸಿದರು.
    ನೂತನ ಅಧ್ಯಕ್ಷರು- ಉಪಾಧ್ಯಕ್ಷರನ್ನು ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್. ಕುಮಾರ್, ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಮುಖಂಡರುಗಳು, ಅಭಿಮಾನಿಗಳು, ಕಾರ್ಯಕರ್ತರು ಅಭಿನಂದಿಸಿದರು.

ದರೋಡೆ ಪ್ರಕರಣದ ಆರೋಪಿಗೆ ೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕಾರಾಗೃಹ ಶಿಕ್ಷೆಗೆ ಒಳಗಾಗಿರುವ ಆರೋಪಿ ಕುಮಾರ
    ಭದ್ರಾವತಿ, ಆ. ೮:  ದರೋಡೆ ಪ್ರಕರಣದ ಆರೋಪಿಯೊಬ್ಬರಿಗೆ ನ್ಯಾಯಾಲಯ ೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
    ಕುಮಾರ(೪೨)  ಶಿಕ್ಷೆಗೊಳಗಿದ್ದು,  ಈತನ ವಿರುದ್ಧ ನ್ಯೂಟೌನ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.  ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರು. ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.

ಸಮಾಜದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಸಾಧ್ಯ : ಪ್ರಕಾಶ್‌ ರಾಜ್‌

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ಭದ್ರಾವತಿ, ಆ. ೮ :  ಸಮಾಜದ ಸಮಸ್ಯೆಗಳಿಗೆ ನಾವುಗಳು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ನಗರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಮತ್ತು ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ)ಗಳ ಸಮಸ್ಯೆಗಳು ಕೇವಲ ಕಾರ್ಮಿಕರ ಸಮಸ್ಯೆಗಳಲ್ಲ. ಇಡೀ ಊರಿನ ಸಮಸ್ಯೆಯಾಗಿದೆ ಎಂದು ಜನರು ಭಾವಿಸಿ, ಪ್ರತಿಕ್ರಿಯಿಸಿದಾಗ ಮಾತ್ರ  ಸಮಸ್ಯೆ ನಿವಾರಣೆ ಸಾಧ್ಯ  ಎಂದರು.  
    ಕಲಾವಿದರು ಸಮಾಜದ ಪ್ರತಿನಿಧಿಗಳು:
    ಕಲಾವಿದರು ಹೇಡಿಗಳಾದರೆ, ಸಮಾಜ ಹೇಡಿಯಾದಂತೆ. ಏಕೆಂದರೆ ಕಲಾವಿದರು ಸಹ ಸಮಾಜದ ಪ್ರತಿನಿಧಿಗಳು. ಕಲಾವಿದ ಕೇವಲ ಪ್ರತಿಭೆಯಿಂದ ಮಾತ್ರ ಬೆಳೆಯಲು ಸಾಧ್ಯವಿಲ್ಲ. ಸಮಾಜದ ಜನ ಪ್ರೋತ್ಸಾಹಿಸಿದಾಗ, ಒಪ್ಪಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದರು.
    ಧರ್ಮದ ಹೆಸರಿನಲ್ಲಿ ವಿವಾದಗಳು ಬೇಡ :
    ಧರ್ಮದ ಹೆಸರಿನಲ್ಲಿ ವಿವಾದಗಳು ಸೃಷ್ಟಿಸಬಾರದು. ಏಕೆಂದರೆ ಧರ್ಮ ಕರುಣೆಯನ್ನು ಸಾರುತ್ತದೆ ಹೊರತು, ಹಿಂಸೆಯನ್ನಲ್ಲ. ಆದ್ದರಿಂದ ನಾವುಗಳು ವಿಶ್ವ ಮಾನವರಾಗೋಣ, ವಿಶ್ವ ಗುರುವಾಗುವುದು ಬೇಡ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿರಬೇಕು. ಆದರೆ ಭಿನ್ನಾಭಿಪ್ರಾಯವನ್ನು ಅವಾಚ್ಯ ಶಬ್ದಗಳ ಮೂಲಕ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.