Sunday, August 1, 2021

ಬಿ.ವಿ ಗಿರೀಶ್ ಸ್ಮರಣಾರ್ಥ ಆ.೨ರಂದು ಸವಿ ನೆನಪು ಕಾರ್ಯಕ್ರಮ

ಬಿ.ವಿ ಗಿರೀಶ್
     ಭದ್ರಾವತಿ, ಆ. ೧: ಸಾಮಾಜಿಕ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸ್ಮರಣಾರ್ಥ ಸವಿ ನೆನಪಿನ ಕಾರ್ಯಕ್ರಮ ಆ.೨ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಪದ್ಮನಿಲಯ ಹೋಟೆಲ್ ಸುನಂದ ಹಾಲ್‌ನಲ್ಲಿ ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದೆ.
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಬಿ.ವಿ ಗಿರೀಶ್ ಅವರ ಭಾಗಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.
    ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪ ತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೋಲಿಸ್ ಠಾಣಾಧಿಕಾರಿ ಕವಿತ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಿ.ವಿ ಗಿರೀಶ್ ಕುಟುಂಬಸ್ಥರಾದ ತಂದೆ ವೆಂಕಟೇಶ್, ತಾಯಿ ಲಕ್ಷ್ಮಮ್ಮ, ದೇವಿಕಾ ಗಿರೀಶ್, ಅಂಕಿತ ಮತ್ತು ಧನುಷ್ ಉಪಸ್ಥಿತರಿರುವವರು.

ಅರ್ಹ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪಲಿ : ಸುಂದರ್ ಬಾಬು

ಭದ್ರಾವತಿ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಭಾನುವಾರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಆ. ೧: ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಲಭಿಸುವಂತಾಗಬೇಕೆಂದು  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
   ಅವರು ಭಾನುವಾರ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ಅಸಂಘಟಿತ ಕಾರ್ಮಿಕರು ಗುರುತಿಸುವ ವಿಧಾನಗಳು ಬದಲಾಗಿದೆ. ಯಾರು ಕಟ್ಟಡ ಕಾರ್ಮಿಕರು ಎಂಬುದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ಕಾರ್ಮಿಕರ ವ್ಯಾಪ್ತಿಯಲ್ಲಿ ಇನ್ನಿತರ ಅಸಂಘಟಿತ ಕಾರ್ಮಿಕರನ್ನು ಸಹ ಸೇರ್ಪಡೆಗೊಳಿಸಿರುವ ಕಾರಣ ಅರ್ಹ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
    ಶ್ರಮಜೀವಿಗಳಾದ ಕಟ್ಟಡ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಅವಶ್ಯಕವಾಗಿದೆ. ಸಂಘಟನೆ ಹೆಚ್ಚು ಬಲಗೊಂಡಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಘಟನೆಯೊಂದಿಗೆ ಕೈಜೋಡಿಸಬೇಕೆಂದರು.
    ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಶ್ರೀಧರ ಶೆಟ್ಟಿ, ಸದಸ್ಯ ಎಂ.ಆರ್ ಅಭಿನಂದನ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್‌, ತಾಂತ್ರಿಕ ಸಲಹೆಗಾರ ಮನೋಹರ್‌,  ಕಾರ್ಯಾಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ನಾಗೇಂದ್ರ ರೆಡ್ಡಿ, ಖಜಾಂಚಿ ಕೃಷ್ಣ, ನಿರ್ದೇಶಕ ಅಂತೋಣಿ ಕ್ರೂಸ್, ಗೌರವ ಸಲಹೆಗಾರ ಶಿವಣ್ಣಗೌಡ, ಮಹಿಳಾ ಘಟಕದ ಮುಖ್ಯಸ್ಥೆ ಭಾಗ್ಯಮ್ಮ, ಭಾರತೀಯ ಮಜ್ದೂರ್ ಸಂಘದ ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Saturday, July 31, 2021

ಯೋಧನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಯೋಧ ಹಾಗು ಯೋಧನ ಕುಟುಂಬದವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಶನಿವಾರ ಸಂಜೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಜು. ೩೧: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಯೋಧ ಹಾಗು ಯೋಧನ ಕುಟುಂಬದವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಶನಿವಾರ ಸಂಜೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
    ಮಡಿಕೇರಿಯಲ್ಲಿ ಯೋಧ ಅಶೋಕ್‌ಕುಮಾರ್ ಹಾಗು ಅವರ ಕುಟುಂಬ ಸದಸ್ಯರ ಮೇಲೆ ನಡೆದಿರುವ ಹಲ್ಲೆಯನ್ನು ಮಾಜಿ ಸೈನಿಕರು ತೀವ್ರವಾಗಿ ಖಂಡಿಸಿದರು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
     ಸಂಘದ ಉಪಾಧ್ಯಕ್ಷ ಬಿ.ಆರ್ ದಿನೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಕಲಾ, ಸುಪ್ರಿಯಾ ಹಾಗು ಮಾಜಿ ಸೈನಿಕರು ಮತ್ತು ಕುಟುಂಬ ವರ್ಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ‘ಶ್ರೀ ಸಿದ್ದಗಂಗ ಅರಣ್ಯ’ ನಿರ್ಮಾಣಕ್ಕೆ ಚಾಲನೆ

ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಮಠದ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ 'ಶ್ರೀ ಸಿದ್ದಗಂಗ ಅರಣ್ಯ' ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
     ಭದ್ರಾವತಿ, ಜು. ೩೧:  ತುಮಕೂರಿನ ಶ್ರೀ ಸಿದ್ದಗಂಗಾ ಮಠದ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ 'ಶ್ರೀ ಸಿದ್ದಗಂಗ ಅರಣ್ಯ' ನಿರ್ಮಾರ್ಣಕ್ಕೆ ಚಾಲನೆ ನೀಡಲಾಯಿತು.
      ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ೨ ಎಕರೆ ಜಾಗದಲ್ಲಿ ಸುಮಾರು ೧೦ ಸಾವಿರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.  ಅಲ್ಲದೆ ಸವಿ ನೆನಪಿಗಾಗಿ 'ರಕ್ತದಾನ ಶಿಬಿರ' ಆಯೋಜಿಸಲಾಗಿತ್ತು.
     ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ, ರಾಜ್ಯ ಕಾರ್ಯದರ್ಶಿ ಪ್ರಶಾಂತ್, ಭದ್ರಾವತಿ ಘಟಕದ ಅಧ್ಯಕ್ಷ ಎಚ್. ಮಂಜುನಾಥ್ ಕಾರ್ಯದರ್ಶಿ ಕೆ.ಆರ್ ಆನಂದ್,  ಖಜಾಂಚಿ ಬಿ.ಎಂ ರಮೇಶ್ ಹಾಗೂ ಮಂಡ್ಯ ಪ್ರದೀಪ್,  ಅರುಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲು ಮನವಿ

ಭದ್ರಾವತಿಯಲ್ಲಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ನಗರದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಕರುನಾಡು ಸಂರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜು. ೩೧: ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ನಗರದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಕರುನಾಡು ಸಂರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
     ಕೋವಿಡ್-೧೯ರ ಹಿನ್ನಲೆಯಲ್ಲಿ ಜನಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿರುವ ನಗರ ಮತ್ತು ಗ್ರಾಮಾಂತರ ಭಾಗದ ಸರ್ಕಾರಿ ಬಸ್‌ಗಳ ಸಂಚಾರವನ್ನು ಇದುವರೆಗೂ ಪುನಃ ಆರಂಭಿಸಿಲ್ಲ. ಈಗಾಗಲೇ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದು, ಖಾಸಗಿ ಬಸ್‌ಗಳು ದುಬಾರಿ ದರ ನಿಗದಿಪಡಿಸಿರುವುದರಿಂದ ಕೂಲಿ ಕಾರ್ಮಿಕರು, ಕೃಷಿಕರು ಸೇರಿದಂತೆ ಜನಸಾಮಾನ್ಯರಿಗೆ ಹೆಚ್ಚಿನ ಅನಾನುಕೂಲವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಸರ್ಕಾರಿ ಬಸ್‌ಗಳ ಸಂಚಾರ ಆರಂಭಿಸಿ ಅನುಕೂಲ ಕಲ್ಪಿಸಿಕೊಡುವಂತೆ ಕೋರಲಾಗಿದೆ.
    ವೇದಿಕೆ ಜಿಲ್ಲಾಧ್ಯಕ್ಷ ಶಿವಮೂರ್ತಿ, ರಾಜ್ಯ ಸಂಚಾಲಕ ಎಂ. ನಂಜುಂಡಪ್ಪ, ರಾಜಶೇಖರ್, ಮಂಜಾನಾಯ್ಕ, ರವಿನಾಯ್ಕ ಮತ್ತು ಚಂದ್ರಶೇಖರ್ ಉಪಸ್ಥಿತರಿದ್ದರು.

ಭವ್ಯ ಪರಂಪರೆ ಅನಾವರಣಕ್ಕೆ ಎದುರು ನೋಡುತ್ತಿದೆ ಪೂರ್ಣಗೊಂಡ ಭದ್ರೆ – Prathikshana

ಭವ್ಯ ಪರಂಪರೆ ಅನಾವರಣಕ್ಕೆ ಎದುರು ನೋಡುತ್ತಿದೆ ಪೂರ್ಣಗೊಂಡ ಭದ್ರೆ – Prathikshana

Friday, July 30, 2021

ಭವ್ಯ ಪರಂಪರೆ ಅನಾವರಣಕ್ಕೆ ಎದುರು ನೋಡುತ್ತಿದೆ ಪೂರ್ಣಗೊಂಡ ಭದ್ರೆ

ಆ.೩ರಂದು ಶಾಸಕರಿಂದ ಬಾಗಿನ ಸಮರ್ಪಣೆ, ಗಂಗಾಪೂಜೆ


ಭದ್ರಾ ನದಿ ಜಲಾಶಯ
* ಅನಂತಕುಮಾರ್
     ಭದ್ರಾವತಿ: ತಾಲೂಕಿನ ಜೀವನದಿ ಭದ್ರಾನದಿ ಈ ಬಾರಿ ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಅದರಲ್ಲೂ ವಿಶೇಷತೆ ಎಂದರೆ ಬಹುಬೇಗನೆ ಭರ್ತಿಯಾಗಿರುವುದು. ಈ ಬಾರಿ ಮತ್ತೊಂದು ವಿಶೇಷತೆ ಎಂದರೆ ಇತಿಹಾಸದ ಗರ್ಭದಲ್ಲಿ ಅಡಗಿರುವ ಭದ್ರೆಯ ಭವ್ಯ ಪರಂಪರೆ ಅನಾವರಣಗೊಳ್ಳಲಿದೆ.
      ರಂಗದಾಸೋಹಿ, ಶಿಲ್ಪ ಕಲಾವಿದ ದಿವಂಗತ ಎಸ್.ಜಿ ಶಂಕರಮೂರ್ತಿ ಅವರ ಪರಿಶ್ರಮ ಇದೀಗ ಸಾರ್ಥಕಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಭದ್ರಾ ನದಿಯ ಪೌರಾಣಿಕ ಇತಿಹಾಸ ಕುರಿತ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಎಸ್.ಜಿ ಶಂಕರಮೂರ್ತಿಯವರು ಅಂದಿನ ನಗರಸಭಾ ಪೌರಾಯುಕ್ತರಾಗಿದ್ದ ಮನೋಹರ್ ಅವರ ಗಮನಕ್ಕೆ ತರುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಭದ್ರೆಯ ಭವ್ಯ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಇದರ ಪರಿಣಾಮ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಆಚಾರ್ಯ ವಿನೋಬಾ ಭಾವೆ ಪಾರ್ಕ್ ಇದೀಗ ನಿರ್ಮಾಣಗೊಂಡಿದೆ. ಈ ಉದ್ಯಾನವನ ಕೆಲವು ವರ್ಷಗಳ ಹಿಂದೆ ನಗರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಾಡಾಗಿತ್ತು.



ಭದ್ರಾವತಿ ನಗರಸಭೆ ಮುಂಭಾಗದಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡಿರುವ ಆಚಾರ್ಯ ವಿನೋಬ ಭಾವೆ ಪಾರ್ಕ್.
       
       ಭದ್ರೆಯ ಪೌರಾಣಿಕ ಹಿನ್ನಲೆ:
    ಕ್ರಿ.ಶ ೧೨೧೬ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದ ವೀರನರಸಿಂಹ ಭೂಪತೆ (ವಿಷ್ಣುವರ್ಧನ ಹಾಗು ಶಾಂತಲೆಯ ಮರಿ ಮೊಮ್ಮೊಗ) ವೆಂಕಿ ಮಹರ್ಷಿಯವರು ಭದ್ರಾ ನದಿ ದಡದಲ್ಲಿ ತಪ್ಪಸ್ಸು ನಡೆಸಿದ್ದ ಹಿನ್ನಲೆಯಲ್ಲಿ ಅಂದು ವಂಕಿ ತಾಣವಾಗಿದ್ದ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಮಾಡಿ, ೧೨೨೬ನೇ ವ್ಯಯನಾಮ ಸಂವತ್ಸರದಂದು ಲೋಕಾರ್ಪಣೆ ಮಾಡಿ ವಂಕಿಪುರ ಎಂದು ನಾಮಕರಣ ಮಾಡುವ ಮೂಲಕ ಭದ್ರೆಯ ಆರಾಧನೆಗೂ ಮುನ್ನುಡಿ ಬರೆದಿದ್ದನು ಎನ್ನಲಾಗಿದೆ. ಈ ಕುರಿತ ಮಾಹಿತಿ ಪೌರಾಣಿಕ ಇತಿಹಾಸದಲ್ಲಿ ದಾಖಲಾಗಿದೆ ಎಂಬುದು ಊರಿನ ಹಿರಿಯರ ಉಲ್ಲೇಖವಾಗಿದೆ.  


ಪಾರ್ಕಿನಲ್ಲಿ ಪ್ರತಿಷ್ಠಾಪಿಸಲಾಗಿರುವ ೮.೫ ಅಡಿ ಎತ್ತರದ ಭದ್ರೆ ವಿಗ್ರಹ
        ೮.೫ ಅಡಿ ಎತ್ತರದ ಭದ್ರೆ ವಿಗ್ರಹ:
     ದೈವ ಸ್ವರೂಪಿಣಿ ಭದ್ರೆಯ ವಿಗ್ರಹದ ಅಡಿಭಾಗದಲ್ಲಿ ವೀರನರಸಿಂಹ ಭೂಪತೆ ಭದ್ರಾಪಾನ ಮಾಡುವ ಸುಂದರ ವಿಗ್ರಹ ಎಸ್.ಜಿ ಶಂಕರಮೂರ್ತಿರವರ ಕಲಾ ಕೌಶಲ್ಯತೆಯಲ್ಲಿ ಆಕರ್ಷಕವಾಗಿ ನಿರ್ಮಾಣಗೊಂಡಿದೆ. ಆದರೆ ಇದೀಗ ಶಂಕರಮೂರ್ತಿ ನಮ್ಮೊಂದಿಗಿಲ್ಲ.  ಸುಮಾರು ೮.೫ ಅಡಿ ಎತ್ತರದ ವಿಗ್ರಹವನ್ನು ಶಂಕರಮೂರ್ತಿಯವರ ಶಿಷ್ಯರಾದ ಜಯರಾಂ ಅವರು ಬಣ್ಣದ ಲೇಪನದಿಂದ ಇದೀಗ ಕಂಗೊಳಿಸುವಂತೆ ಮಾಡಿದ್ದು, ಅನಾವರಣಕ್ಕೆ ಎದುರು ನೋಡುತ್ತಿದೆ.
       ಅಭಿವೃದ್ದಿ ಕಾಣದ ಹಳೇಯ ಉದ್ಯಾನವನ :
     ಈ ಉದ್ಯಾನ ವನ ನಗರಸಭೆಯ ಅತ್ಯಂತ ಹಳೇಯ ಉದ್ಯಾನ ವನವಾಗಿದೆ. ಕಳೆದ ೩-೪ ದಶಕಗಳಿಂದ ಅಭಿವೃದ್ಧಿಕಾಣದೆ ಪಾಳುಬಿದ್ದ ಸ್ಥಳವಾಗಿ ಮಾರ್ಪಾಡಾಗಿತ್ತು. ನಗರಸಭೆಯ ಹಳೇಯ ಗುಜರಿ ವಾಹನಗಳು, ಕಂಟೈನರ್‌ಗಳಿಂದ ತುಂಬಿಕೊಂಡಿದ್ದ ಸ್ಥಳದಲ್ಲಿಯೇ ವಾಹನಗಳನ್ನು ಸಹ ನಿಲುಗಡೆ ಮಾಡಲಾಗುತ್ತಿತ್ತು. ನಗರಸಭೆ ಪೌರಾಯುಕ್ತರಾಗಿ ಮನೋಹರ್ ಅವರು ಬಂದ ನಂತರ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಯಿತು. ಇದೀಗ ಲೋಕಾರ್ಪಣೆಗೆ ಎದುರು ನೋಡುತ್ತಿದೆ.


   ಉದ್ಯಾನವನ ಮತ್ತು ವಿಗ್ರಹ ಪ್ರತಿಷ್ಠಾಪನೆಗೆ ಒಟ್ಟು ಸುಮಾರು ೧೫ ಲಕ್ಷ ರು. ವೆಚ್ಚವಾಗಿದೆ. ವಿಗ್ರಹ ಪೂರ್ಣಗೊಂಡ ನಂತರ ಪ್ರತಿಷ್ಠಾಪನೆಗೊಳ್ಳುವ ಮೊದಲೇ ವಿಗ್ರಹದ ಶಿಲ್ಪಿಗಳಾದ ಎಸ್.ಜಿ ಶಂಕರಮೂರ್ತಿಯವರು ವಿಧಿವಶರಾದರು. ಪ್ರತಿಷ್ಠಾಪಿಸುವ ಕಾರ್ಯವನ್ನು ಪೂರ್ಣಗೊಳಿಸಿಕೊಡುವಂತೆ ಅವರ ಶಿಷ್ಯರಾದ ಜಯರಾಂ ಅವರನ್ನು ಕೇಳಿಕೊಂಡಾಗ ಅವರು ಈ ಕಾರ್ಯವನ್ನು ನೇರವೇರಿಸಿದ್ದಾರೆ.
                                 - ಮನೋಹರ್, ಜಿಲ್ಲಾ ಯೋಜನಾ ನಿರ್ದೇಶಕರು, ಚಿಕ್ಕಮಗಳೂರು(ಹಿಂದಿನ ಪೌರಾಯುಕ್ತರು)
      ಶಾಸಕ ಬಿ.ಕೆ ಸಂಗಮೇಶ್ವರ್ ಆ.೩ರಂದು ಬಾಗಿನಾ ಸಮರ್ಪಣೆ:
    ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆ.೩ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ವ ಧರ್ಮ ಗುರುಗಳ ನೇತೃತ್ವದಲ್ಲಿ ಬಾಗಿನಾ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಲಿದ್ದಾರೆ.
೩ ಬಾರಿ ಶಾಸಕರಾಗಿರುವ ಸಂಗಮೇಶ್ವರ್ ಪ್ರತಿವರ್ಷ ಬಾಗಿನಾ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ವಿಶೇಷತೆ ಎಂದರೆ ಇವರು ಶಾಸಕರಾದ ಎಲ್ಲಾ ಅವಧಿಯಲ್ಲೂ ಜಲಾಶಯ ಭರ್ತಿಯಾಗಿರುವುದು. ಕಾರ್ಯಕ್ರಮದಲ್ಲಿ ಕ್ಷೇತ್ರದ ಸಾವಿರಾರು ಮಂದಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷತೆಯಾಗಿದೆ.