ವಾರ್ಡ್ ನಂ.೨೧ರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ : ಆಕ್ರೋಶ
ಭದ್ರಾವತಿ ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಭದ್ರಾವತಿ, ನ. ೨೫: ನಗರಸಭೆ ಅಧ್ಯಕ್ಷೆಯಾಗಿ ಅನುಸುಧಾ ಮೋಹನ್ ಪಳನಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಸಾಮಾನ್ಯ ಸಭೆ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ ಎದುರಿಸುವಂತಾಯಿತು.
ಶುಕ್ರವಾರ ಮಧ್ಯಾಹ್ನ ೨.೩೦ಕ್ಕೆ ಆರಂಭಗೊಳ್ಳಬೇಕಿದ್ದ ಸಭೆ ಸಂಜೆ ೪ ಗಂಟೆಗೆ ಆರಂಭಗೊಂಡಿತು. ಸಭೆ ಆರಂಭಗೊಳ್ಳುವ ಮೊದಲು ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕಾಗದನಗರ, ಜೆಪಿಎಸ್ ಕಾಲೋನಿ, ಉಜ್ಜನಿಪುರ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ನಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಈ ವಾರ್ಡ್ಗೆ ಇದುವರೆಗೂ ಯಾವುದೇ ಅನುದಾನ ಸಹ ಬಿಡುಗಡೆಗೊಳಿಸಿಲ್ಲ. ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ನೀರಿನ ವ್ಯವಸ್ಥೆ ಸಹ ಇಲ್ಲವಾಗಿದೆ. ಇದರಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ.
ರಸ್ತೆ, ಚರಂಡಿಗಳು ಸಹ ಹಾಳಾಗಿದ್ದು, ಇವುಗಳನ್ನು ದುರಸ್ತಿಪಡಿಸಿಲ್ಲ. ಕೆಲವು ಕಾಮಗಾರಿಗಳನ್ನು ಸ್ವಂತ ಹಣದಲ್ಲಿ ಕೈಗೊಳ್ಳಲಾಗಿದೆ. ಮಲತಾಯಿ ಧೋರಣೆ ಅನುಸರಿಸುವ ಮೂಲಕ ವಾರ್ಡ್ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಲಾಯಿತು.
ತಕ್ಷಣ ವಾರ್ಡ್ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಪೌರಾಯುಕ್ತ ಮನುಕುಮಾರ್ ಸಮಸ್ಯೆಗಳನ್ನು ಆಲಿಸಿ ಮುಂದಿನ ೧೦ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯಕುಮಾರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಕೋಟೇಶ್ವರರಾವ್, ಮಂಜುಳ ಸುಬ್ಬಣ್ಣ, ರೂಪಾವತಿ, ನಾಗರತ್ನ ಅನಿಲ್ಕುಮಾರ್ ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅಶೋಕ್ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.