Friday, March 19, 2021

ಕುಡಿಯುವ ನೀರಿನ ಸಂಪರ್ಕಕ್ಕೆ ಠೇವಣಿ, ಮೀಟರ್ ಲೆಕ್ಕದಲ್ಲಿ ಬಿಲ್ ಪಾವತಿ ಆದೇಶಕ್ಕೆ ಆಕ್ರೋಶ

ಕರ್ನಾಟಕ ಜನಸೈನ್ಯ ವತಿಯಿಂದ ನಗರಸಭೆ ಮುಂಭಾಗ ಅಸಹಕಾರ ಚಳುವಳಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
    ಭದ್ರಾವತಿ, ಮಾ. ೧೯: ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
   ಚಳುವಳಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ನಗರಸಭೆ ವತಿಯಿಂದ ಪ್ರತಿ ಮನೆಗೆ ಕುಡಿಯುವ ನೀರಿಗಾಗಿ ೨೦೦೦ ರು. ಠೇವಣಿ ಪಡೆಯಲಾಗಿದ್ದು, ಇದೀಗ ಪುನಃ ನಲ್ಲಿ ಸಂಪರ್ಕ ಕಲ್ಪಿಸಲು ೨೮೮೦ ರು. ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಲಾಗಿದೆ. ಪ್ರಸ್ತುತ ನಗರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಅಲ್ಲದೆ ಕೋವಿಡ್-೧೯ರ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹಣ ಕೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಉಚಿತವಾಗಿ ಕುಡಿಯುವ ನೀರು ಒದಗಿಸಬೇಕು. ಈಗಾಗಲೇ ಹಣ ಪಾವತಿಸಿರುವವರಿಗೆ ಹಣ ಹಿಂದಿರುಗಿಸಬೇಕು. ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ನೇತೃತ್ವವಹಿಸಿದ್ದರು. ಗೌರವಾಧ್ಯಕ್ಷ ಅನಿಲ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಅನಂತರಾಮು, ತಾಲೂಕು ಅಧ್ಯಕ್ಷ ರಾಜು, ಜಿಲ್ಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಐ.ವಿ ಸಂತೋಷ್‌ಕುಮಾರ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಪ್ರದೀಪ್, ಕನ್ನಡ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹಾಗು ಪದಾಧಿಕಾರಿಗಳು, ಡಿಎಸ್‌ಎಸ್ ಮುಖಂಡ ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment