ಕಾಟಿಕ್ (ಕಲಾಲ್) ಜಾತಿಯನ್ನು ಪರಿಶಿಷ್ಟಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದವರು ತಾಲೂಕು ಕಚೇರಿ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ಭದ್ರಾವತಿ, ಮಾ. ೧೯: ಕಾಟಿಕ್(ಕಲಾಲ್) ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾಟಿಕ್ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು, ೨೦೧೧-೧೨ರಲ್ಲಿ ಸರ್ಕಾರದ ಆದೇಶದ ಮೇರೆಗೆ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಎಂ.ಗುರುಲಿಂಗಯ್ಯ ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವರದಿ ಸಿದ್ದಪಡಿಸಿದ್ದರು. ಆದರೆ ಈ ಹಿಂದಿನ ಸರ್ಕಾರಗಳು ಈ ವರದಿಯನ್ನು ಪರಿಗಣಿಸದೆ ಇರುವುದು ಈ ಸಮುದಾಯಕ್ಕೆ ಸಂವಿಧಾನಬದ್ದವಾಗಿ ಸಾಮಾಜಿಕ ನ್ಯಾಯ ಸಿಗದಂತಾಗಿದೆ. ಇಂದಿನ ಸರ್ಕಾರ ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು.
ಸಮಾಜದ ತಾಲೂಕು ಅಧ್ಯಕ್ಷ ಲಿಂಗರಾಜು, ಅಶೋಕ್, ವಸಂತಕುಮಾರ್, ಕುಮಾರ್, ಶ್ರೀನಿವಾಸ್, ಗಿರೀಶ್, ಪರಶುರಾಮ್ ಸೇರಿದಂತೆ ಇನ್ನಿತರರಿದ್ದರು.
No comments:
Post a Comment