Tuesday, March 2, 2021

ಗಲಭೆ : ಮಾ.೫ರ ವರೆಗೆ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

   ಭದ್ರಾವತಿ, ಮಾ. ೨: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಮಾ.೫ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
    ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಉಂಟಾದ ಗಲಭೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಗುಪ್ತ ವರದಿ ಆಧರಿಸಿ ಮಾ.೨ರ ಮಧ್ಯಾಹ್ನ ೧೧ ಗಂಟೆಯಿಂದ ಮಾ.೫ರ ಮಧ್ಯರಾತ್ರಿ ೧೨ ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಾ.೩ರಂದು ಆಯ-ವ್ಯಯ ಮಂಡನೆ

   ಭದ್ರಾವತಿ, ಮಾ. ೨: ಈ ಬಾರಿ ನಗರಸಭೆ ಆಯ-ವ್ಯಯ ಮಂಡನೆ ಮಾ.೩ರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ.
  ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು, ಪೌರಾಯುಕ್ತ ಮನೋಹರ್ ಉಪಸ್ಥಿತರಿರುವರು. ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು ಸೇರಿದಂತೆ ಇನ್ನಿತರರು ಹಲವಾರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ನಗರಸಭೆ ಆದಾಯ ಕ್ರೋಢೀಕರಣದ ಜೊತೆಗೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಭರವಸೆ ನೀಡಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ನಗರದ ನಾಗರೀಕರು ಹಲವಾರು ನಿರೀಕ್ಷೆಗಳನ್ನು ಎದುರು ನೋಡುತ್ತಿದ್ದಾರೆ.

ಅಂತರಾಷ್ಟ್ರೀಯ ಯೋಗ ಪಂದ್ಯಾವಳಿಯಲ್ಲಿ ಡಿ. ನಾಗರಾಜ್‌ಗೆ ಚಿನ್ನ, ಬೆಳ್ಳಿ ಪದಕ

ಯೋಗಪಟು ಡಿ. ನಾಗರಾಜ್
   ಭದ್ರಾವತಿ, ಮಾ. ೨: ಆನ್‌ಲೈನ್ ಲೈವ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
   ಯುರೋಪ್ ಯೋಗ ಸ್ಪೋಟ್ಸ್ ಅಸೋಷಿಯೇಷನ್ ಮತ್ತು ತಮಿಳುನಾಡಿನ ತಿರುವರೂರ್ ಶ್ರೀ ಸಾಯಿಬಾಬಾ ಇನ್‌ಸ್ಟಿಟ್ಯೂಟ್ ಆಫ್ ಯೋಗ, ಒಹಿರಾವನ್ ಯೋಗ ಆಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯ ೫೧ ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಸ್ಪರ್ಧಿಸಿ ೧ ಚಿನ್ನ, ೧ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ವಿವಿಧ ರಾಷ್ಟ್ರಗಳಿಂದ ಸುಮಾರು ೩೩೧ ಯೋಗ ಪಟುಗಳು ಭಾಗವಹಿಸಿದ್ದರು.
   ಇದೆ ರೀತಿ ಬೆಂಗಳೂರಿನ ಕುಂಡಲಿನಿ ಯೋಗ ಕೇಂದ್ರದವರು ನಡೆಸಿದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲೂ ಭಾಗವಹಿಸಿ ಡಿ. ನಾಗರಾಜ್ ೧ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಹಾಗು ಕಾರ್ಯದರ್ಶಿ ಡಿ. ಪುಟ್ಟೇಗೌಡ ಇವರನ್ನು ಅಭಿನಂದಿಸಿದ್ದಾರೆ.  

ಅಧಿಕಾರ ದುರುಪಯೋಗಪಡಿಸಿಕೊಳ್ಳದೆ ಒಳ್ಳೆಯ ಕಾರ್ಯಕ್ಕೆ ಬಳಸಿ : ಆನಂದ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ,ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮ ಶಾರದಾ ಅಪ್ಪಾಜಿ ಉದ್ಘಾಟಿಸಿದರು.
 ಭದ್ರಾವತಿ, ಮಾ. ೨: ರಾಜಕಾರಣದಲ್ಲಿ ನಮಗೆ ಲಭಿಸಿದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಒಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್ ತಿಳಿಸಿದರು.
    ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮಸ್ಥರು ಹಾಗೂ ಎಂ.ಜೆ.ಅಪ್ಪಾಜಿ ಅಭಿಮಾನಿ ಬಳಗದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಯಾರು ಏನೇ ಮಾಡಿದರೂ ನಾವು ಒಳ್ಳೆಯದನ್ನೇ ಮಾಡಬೇಕು ಹೊರತು ಕೆಟ್ಟದ್ದನ್ನು ಮಾಡಬಾರದು. ಯಾರನ್ನು ಸಹ ದ್ವೇಷಿಸಬಾರದು ಎಂದು ಮಾರ್ಗದರ್ಶನ ನೀಡುತ್ತಿದ್ದರು. ಇದೆ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅಪ್ಪಾಜಿಯವರ ಬೆಂಬಲದಿಂದಾಗಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷನಾಗಲು ಸಾಧ್ಯವಾಯಿತು. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಆದರ್ಶಗಳು ನಮ್ಮೊಂದಿಗಿವೆ. ಈ ಹಿನ್ನಲೆಯಲ್ಲಿ ಸದಾ ಕಾಲ ಅವರ ಕುಟುಂಬದ ಜೊತೆಗಿದ್ದು, ಅವರ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
   ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಮಾತನಾಡಿ, ಅಪ್ಪಾಜಿಯವರು ಎಲ್ಲಾ ವರ್ಗದ ಜನರಿಗೂ ಅಧಿಕಾರ ದೊರಕಿಸಿ ಕೊಡುವ ಮೂಲಕ ಗೌರವದಿಂದ ಕಾಣುತ್ತಿದ್ದರು. ಅವರ ನಾಯಕತ್ವದಲ್ಲಿ ಬೆಳೆದ ಅನೇಕರು ಇಂದು ಬೇರೆಯವರ ಮನೆ ಬಾಗಿಲಿಗೆ ಹೋಗಿದ್ದಾರೆ, ಅಪ್ಪಾಜಿ ಕುಟುಂಬದಲ್ಲಿ ಅಪ್ಪಾಜಿ ಒಬ್ಬರೆ ರಾಜಕಾರಣ ಮಾಡುತ್ತಿದ್ದರು. ಆದರೆ ಅಲ್ಲಿ ಮನೆಯವರೆಲ್ಲರೂ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅವರು ಮನಗಾಣಬೇಕಿದೆ ಎಂದರು.
   ಅಪ್ಪಾಜಿ ಪತ್ನಿ ಶಾರದಾ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯ ಧರ್ಮೇಗೌಡ, ಬದರಿನಾರಾಯಣ್, ಬಿ.ಎನ್ ರಾಜು, ಕೃಷ್ಣರಾಜ್, ರಾಮಚಂದ್ರ, ಜವರಪ್ಪ, ವಿಜಯಕುಮಾರ್, ಮಂಜುನಾಥ್, ಅಶೋಕ್‌ಕುಮಾರ್, ಶೋಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ನೆಲೆಕಾಣದ ಬಿಜೆಪಿಯಿಂದ ಕ್ಷೇತ್ರದಲ್ಲಿ ಆಶಾಂತಿ ವಾತಾವರಣಕ್ಕೆ ಯತ್ನ

ತಾಲೂಕು ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಭದ್ರಾವತಿಯಲ್ಲಿ ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
   ಭದ್ರಾವತಿ, ಮಾ. ೨: ಕ್ಷೇತ್ರದಲ್ಲಿ ಇದುವರೆಗೂ ನೆಲೆಕಾಣದ ಬಿಜೆಪಿ ಪಕ್ಷ ಇದೀಗ ವಿನಾಕಾರಣ ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ರೂಪುಗೊಳ್ಳಲು ಕಾರಣವಾಗುತ್ತಿದ್ದು, ಒಂದು ವೇಳೆ ಅಹಿತಕರ ಘಟನೆಗಳು ನಡೆದು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದ್ದಲ್ಲಿ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಎಚ್ಚರಿಸಿದರು.
  ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು.
  ಒಂದೇ ದೈವ, ಒಂದೇ ಧರ್ಮ, ಒಂದೇ ಜಾತಿ ಎಂಬ ತತ್ವದಡಿ ನಾವೆಲ್ಲರೂ ಹಿಂದೂಗಳಾಗಿ ಬದುಕುತ್ತಿದ್ದೇವೆ. ಮಾನವ ಕುಲ ಒಂದೇ ಎಂಬ ಭಾವನೆ ನಮ್ಮದಾಗಿದೆ. ನಾನು ರಾಜಕಾರಣವನ್ನು ಈ ನಿಟ್ಟಿನಲ್ಲಿ ನಡೆಸಿಕೊಂಡು ಬಂದಿದ್ದೇನೆ. ಮತದಾರರು ಸಹ ನನ್ನನ್ನು ಕೈಬಿಡದೆ ಬೆಂಬಲಿಸಿಕೊಂಡು ಬಂದಿದ್ದಾರೆ. ಇದೀಗ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ ಲಾಭ ಪಡೆದುಕೊಳ್ಳಬಹುದೆಂಬ ದುರಾಸೆ ಬಿಜೆಪಿ ಪಕ್ಷಕ್ಕೆ ಬಂದಿರುವಂತೆ ಕಂಡು ಬರುತ್ತಿದೆ. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸಲು ಮುಂದಾಗುತ್ತಿದ್ದಾರೆ. ಆದರೆ ಕ್ಷೇತ್ರದ ಮತದಾರರಿಗೆ ಎಲ್ಲವೂ ತಿಳಿದಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ನಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾದಲ್ಲಿ ಬಿಜೆಪಿ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ. ತಕ್ಷಣ ಅಶಾಂತಿ ವಾತಾವರಣ ಸೃಷ್ಟಿಸಲು ಯತ್ನಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
   ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಸದಾ ಕಾಲ ಶಾಂತಿ ನೆಲೆಗೊಳ್ಳಬೇಕೆಂಬ ಭಾವನೆಯೊಂದಿಗೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ಸಂಗಮೇಶ್ವರ್ ನಿಜವಾದ ಶಾಂತಿಪ್ರಿಯ ಶಾಸಕರಾಗಿದ್ದಾರೆ. ಇದು ಭದ್ರಾವತಿ ಕ್ಷೇತ್ರದಲ್ಲಿರುವ ಎಲ್ಲರಿಗೂ ತಿಳಿದಿದೆ. ಶ್ರೀರಾಮನ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಬಿಜೆಪಿಯವರು ಶ್ರೀರಾಮನ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅಕ್ರಮಗಳು ನಿಲ್ಲಬೇಕು. ಈ ರೀತಿಯ ಘಟನೆ ಇಲ್ಲಿ ಮಾತ್ರವಲ್ಲ ಎಲ್ಲೆಡೆ ನಡೆಯುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
   ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ ಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಅತ್ತಿಗುಂದ ಚಂದ್ರಶೇಖರಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ನಗರಸಭೆ ಮಾಜಿ ಅಧ್ಯಕ್ಷರಾದ ವೈ. ರೇಣುಕಮ್ಮ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಮುಖಂಡರಾದ ಎಸ್.ಪಿ ದಿನೇಶ್, ಸಿ.ಎಂ ಖಾದರ್, ಅಮಿರ್‌ಜಾನ್, ದಿಲ್‌ದಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Monday, March 1, 2021

ಜನೌಷಧಿ ದಿನಾಚರಣೆ ಅಂಗವಾಗಿ ಫೆ.೭ರ ವರೆಗೆ ಜನಸೇವಾ ಕಾರ್ಯಕ್ರಮ

ಭದ್ರಾವತಿ, ಮಾ. ೧: ಮೂರನೇ ವರ್ಷದ ಜನೌಷಧಿ ದಿನಾಚರಣೆ ಅಂಗವಾಗಿ ನಗರದ ಸ್ಕಂದ ಟ್ರಸ್ಟ್ ವತಿಯಿಂದ ಜನಸೇವಾ ಕಾರ್ಯಕ್ರಮಗಳನ್ನು ಮಾ.೭ರ ವರೆಗೆ ಹಮ್ಮಿಕೊಳ್ಳಲಾಗಿದೆ.
     ಸೋಮವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು.
     ಮಾ.೩ರಂದು ಸಂಜೆ ೬ ಗಂಟೆಗೆ ನಗರದ ಬೈಪಾಸ್ ರಸ್ತೆಯಲ್ಲಿರುವ ಎಂಪಿಎಂ ಬಡಾವಣೆಯ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಆರೋಗ್ಯ ಶಿಬಿರ ಹಾಗು ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.೪ರಂದು ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಹಾಗು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.೬ರಂದು ನ್ಯೂಟೌನ್ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿರವರಿಂದ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಯಲಿದೆ.
  ಮಾ.೭ರಂದು ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ಜನೌಷಧಿ ಮಾಲೀಕರು ಹಾಗು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಸ್ವಿಗೊಳಿಸುವಂತೆ ಕೋರಲಾಗಿದೆ.

ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ : ಪ್ರಸಾದ್ ಅತ್ತಾವರ್

ಭದ್ರಾವತಿಗೆ ಆಗಮಸಿದ್ದ ರಾಮ್ ಸೇನ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಪತ್ರಿಕೆಯೊಂದಿಗೆ ಮಾತನಾಡಿದರು.

   ಭದ್ರಾವತಿ, ಫೆ. ೨೮: ಯುವ ಸಮುದಾಯ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದು ರಾಮ್ ಸೇನಾ ಕರ್ನಾಟಕ ಸಂಘಟನೆಯ ಆಶಯವಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ತಿಳಿಸಿದರು.
   ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜದಲ್ಲಿ ಉತ್ತಮ ಕುಟುಂಬ ನಿರ್ಮಾಣ ಮಾಡುವುದೇ ಸಂಘಟನೆ ಧ್ಯೇಯವಾಗಿದೆ. ಇಂತಹ ಧ್ಯೇಯ ಹೊಂದಿರುವ ಸಂಘಟನೆಯಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಂಡತಿ, ಮಕ್ಕಳು ಹೀಗೆ ಎಲ್ಲರನ್ನು ಒಳಗೊಂಡಿರುವ ಕುಟುಂಬದ ಜವಾಬ್ದಾರಿ ಯುವ ಸಮುದಾಯ ಹೊರಬೇಕು. ಈ ಹಿನ್ನಲೆಯಲ್ಲಿ ಯುವ ಸಮುದಾಯ ಮೊದಲು ಉದ್ಯೋಗ ಹೊಂದುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳಬೇಕು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಮೊದಲ ಆದ್ಯತೆ ಕುಟುಂಬಕ್ಕೆ ನೀಡಬೇಕು. ಉಳಿದ ಸಮಯವನ್ನು ಸಂಘಟನೆಗಾಗಿ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಕುಟುಂಬ ತೊರೆದು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು. ಇಂತಹ ಕಾರ್ಯಕರ್ತರ ಅಗತ್ಯ ನಮ್ಮ ಸಂಘಟನೆಗೆ ಬೇಕಿಲ್ಲ ಎಂದರು.
      ಧರ್ಮ ರಕ್ಷಣೆ, ರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ:
  ದೇವರಿಗೆ ಸರಿಸಮಾನವಾದ ಸತ್ಯ, ಧರ್ಮ, ನ್ಯಾಯದ ದಾರಿಯಲ್ಲಿ ಸಾಗುವುದೇ ಧರ್ಮ ಎಂಬ ಪರಿಕಲ್ಪನೆಯನ್ನು ಸಂಘಟನೆ ಹೊಂದಿದೆ. ಪ್ರತಿಯೊಬ್ಬರಲ್ಲೂ ಉತ್ತಮ ಸಂಸ್ಕಾರ, ಆಧ್ಯಾತ್ಮಿಕ ಚಿಂತನೆಗಳು ಬೆಳೆಯಬೇಕು. ಈ ಕಾರ್ಯ ಪ್ರತಿ ಮನೆಗಳಿಂದ ಆರಂಭಗೊಳ್ಳಬೇಕು. ಇದು ಸಂಘಟನೆಯ ಉದ್ದೇಶಗಳಲ್ಲಿ ಒಂದಾಗಿದ್ದು, ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತ ಇದನ್ನು ಅಳವಡಿಸಿಕೊಂಡು ತಮ್ಮ ಸುತ್ತಲಿನ ಪರಿಸರದಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ನಮ್ಮ ಧರ್ಮ ಹಾಗೂ ರಾಷ್ಟ್ರ ಉಳಿಯಬೇಕಾದರೆ ನಮ್ಮ ಆಶಯಗಳಿಗೆ ಆಳುವ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಾನೂನು ಕೈಗೆತ್ತಿಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಹಿಂದೆ ಕೆಲವು ಬಾರಿ ಸಂಘಟನೆ ಕಾನೂನು ಕೈಗೆತ್ತಿಕೊಂಡಿದೆ. ಮುಂದೆ ಸಹ ಕೈಗೆತ್ತಿಗೊಳ್ಳಲಿದೆ. ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟವಿಲ್ಲ. ಬದಲಿಗೆ ಧರ್ಮ ವಿರೋಧಿಗಳ, ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.
      ಅಯೋಧ್ಯೆ ಶ್ರಿರಾಮಜ್ಮನಭೂಮಿಯಲ್ಲಿ ಹೊಸ ಬೆಳಕು:
    ಆಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಶಾದ್ಯಂತ ಕೋಟ್ಯಾಂತರ ಜನರು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಮರ್ಪಿಸುತ್ತಿದ್ದಾರೆ. ಇದೆ ರೀತಿ ಸಂಘಟನೆ ಸಹ ತನ್ನದೇ ಆದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಶ್ರೀರಾಮ ಪುನರ್ ಪ್ರತಿಷ್ಠಾಪನೆಗೊಂಡು ಸಿಂಹಾಸನವೇರುವ ಗತವೈಭವವನ್ನು ದೇಶದ ಜನರು ಎದುರು ನೋಡಿದ್ದಾರೆ. ಅಂದು ಈ ದೇಶದಲ್ಲಿ ಹೊಸ ಬೆಳಕು ಮೂಡುವ ವಿಶ್ವಾಸವಿದೆ. ಜೊತೆಗೆ ರಾಮನ ಸೈನಿಕರಂತೆ ಈ ಸಂಘಟನೆ ಕಾರ್ಯಕರ್ತರು ಸಹ ದೇಶಾದ್ಯಂತ ವಿಸ್ತಾರಗೊಳ್ಳುವ ದಿನಗಳು ಬರಲಿವೆ ಎಂದರು.
       ಕನ್ನಡ ಭಾಷೆಗೆ ಗೌರವ:
     ಕನ್ನಡ ಅತ್ಯದ್ಭುತ ಭಾಷೆಯಾಗಿದ್ದು, ಈ ಭಾಷೆ ತನ್ನದೇ ಆದ ವಿಶಿಷ್ಟತೆಹೊಂದಿದೆ. ಕನ್ನಡ ಭಾಷೆ ಹಾಗು ತಾಯಿ ಭುವನೇಶ್ವರಿಗೆ ಸಂಘಟನೆ ಎಂದೆಂಗೂ ಗೌರವ ಸಲ್ಲಿಸುತ್ತದೆ. ಕನ್ನಡ ಪರ ಹೋರಾಟಗಳಲ್ಲೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ದೇಶದ ಚಿಂತನೆಯಲ್ಲಿ ನಮ್ಮ ಹೋರಾಟಗಳು ನಡೆಯುತ್ತಿವೆ ಎಂದರು.
     ಬೆಳಗಾವಿಯಲ್ಲಿ ರಾಜಕೀಯ ಪ್ರೇರಿತ ಗೊಂದಲ:
   ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರ ನಡುವೆ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ರಾಜಕೀಯ ಪ್ರೇರಿತ ಗೊಂದಲಗಳು ರೂಪುಗೊಳ್ಳುತ್ತಿವೆ. ಈ ನಿಟ್ಟಿಲ್ಲಿ ರೂಪುಗೊಂಡ ಹೋರಾಟಗಳಿಗೆ ಸಂಘಟನೆ ಬೆಂಬಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳಗಾವಿ ವಿವಾದ ಬಗೆಹರಿಯುವ ವಿಶ್ವಾಸವಿದೆ ಎಂದರು.
         ಯಾವುದೇ ಸರ್ಕಾರದಿಂದ ರೈತರಿಗೆ ಮೋಸವಾಗಿಲ್ಲ :
  ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಹೋರಾಟವಾಗಿದೆ. ನಿಜವಾದ ರೈತ ತನ್ನ ಕಾಯಕವನ್ನು ಮರೆತು ಎಂದಿಗೂ ಬೇಡಿಕೆಗಾಗಿ ಹೋರಾಟ ನಡೆಸಿಲ್ಲ. ಮುಂದೆಯೂ ಸಹ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರವಿರಲಿ ರೈತರಿಗೂ ಎಂದಿಗೂ ಅನ್ಯಾಯವಾಗಿಲ್ಲ. ಪ್ರಸ್ತುತ ಹೋರಾಟ ನಡೆಸುತ್ತಿರುವವರು ರೈತರಲ್ಲದವರು ಹಾಗು ಭೂಮಿಯನ್ನು ಲೀಸ್‌ಗೆ ಕೊಟ್ಟವರಾಗಿದ್ದು ಈ ಹಿನ್ನಲೆಯಲ್ಲಿ ನಮ್ಮ ಸಂಘಟನೆ ಹೋರಾಟ ಬೆಂಬಲಿಸುತ್ತಿಲ್ಲ ಎಂದರು.
     ಸಂಘಟನೆ ಮೂಲಕ ಜಾತಿ ವಿಷಬೀಜ ನಿರ್ಮೂಲನೆ :
   ಜಾತಿ ವ್ಯವಸ್ಥೆ ತೊಲಗಬೇಕು. ಜಾತಿ ಎಂಬ ವಿಷಬೀಜ ನಿರ್ಮೂಲನೆ ಮಾಡಬೇಕೆಂಬ ಧ್ಯೇಯೋದ್ದೇಶ ಸಹ ಸಂಘಟನೆ ಗುರಿಯಾಗಿಸಿಕೊಂಡಿದೆ. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ. ಸಂಘಟನೆಯ ಮುಖಂಡರು, ಕಾರ್ಯಕರ್ತರೆಲ್ಲರ ಮನಸ್ಥಿತಿ ಒಂದೇ ರೀತಿಯಾಗಿದೆ. ಸಂಘಟನೆಗಾಗಿ ದುಡಿಯುತ್ತಿರುವ ಎಲ್ಲರೂ ಸಮಾಜದಲ್ಲಿ ಒಂದಲ್ಲ ಒಂದು ನೋವು ಅನುಭವಿಸಿ ಬಂದವರಾಗಿದ್ದಾರೆ. ಎಲ್ಲೂ ಸಹ ಸ್ವಾತಃ ಎಂಬುದು ಇಲ್ಲ. ಎಲ್ಲೋ ಅಲ್ಪಸ್ವಲ್ಪ ದೋಷಗಳಿರಬಹುದು ಅವೆಲ್ಲನ್ನೂ ಸರಿಪಡಿಸಿಕೊಂಡು ಸಂಘಟನೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ವಿಶ್ವಾಸ ಹೊಂದಿದ್ದೇನೆ ಎಂದರು.
   ರಾಮ್ ಸೇನಾ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ ಉಪಸ್ಥಿತರಿದ್ದರು.