Sunday, August 8, 2021

ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ದೆಹಲಿಯಲ್ಲಿ ಹೋರಾಟ : ರಾಷ್ಟ್ರೀಯ ಯುವ ಕಾಂಗ್ರೆಸ್ ಬೆಂಬಲ

ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ, ಬೆಂಬಲಿಗರಿಂದ ವಿವಿಧ ಹಂತದ ಹೋರಾಟ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಉಳಿವಿಗಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಚಾಲನೆ ನೀಡಿದರು.
     ಭದ್ರಾವತಿ, ಆ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಉಳಿವಿಗಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಹಾಗು ಬೆಂಬಲಿಗರು ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಚಾಲನೆ ನೀಡಿದ್ದಾರೆ.
    ಈಗಾಗಲೇ ಬಿ.ಎಸ್ ಗಣೇಶ್ ನೇತೃತ್ವದಲ್ಲಿ ವಿವಿಧ ಹಂತದಲ್ಲಿ ಹೋರಾಟಗಳು ನಡೆಯುತ್ತಿದ್ದು, ಕಳೆದ ಸುಮಾರು ೬ ವರ್ಷಗಳಿಂದ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಯನ್ನು ಪುನಃ ಆರಂಭಿಸುವಂತೆ ಹಾಗು ಹಲವಾರು ವರ್ಷಗಳಿಂದ ರೋಗಗ್ರಸ್ತ ಕಾರ್ಖಾನೆಯಾಗಿರುವ ವಿಐಎಸ್‌ಎಲ್ ಅಭಿವೃದ್ಧಿಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಸೇವ್ ವಿಐಎಸ್‌ಎಲ್ ಸೇವ್ ಭದ್ರಾವತಿ ಫಲಕವನ್ನಿಡಿದು ಹೋರಾಟ ನಡೆಸಲಾಗುತ್ತಿದೆ.
     ಈ ನಡುವೆ ಮೂಲತಃ ಭದ್ರಾವತಿ ನಗರದವರಾದ ಬಿ.ವಿ ಶ್ರೀನಿವಾಸ್, ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ನಂಬಿಕೊಂಡು ಸಾವಿರಾರು ಕಾರ್ಮಿಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಪ್ರಸ್ತುತ ಎರಡು ಕಾರ್ಖಾನೆಗಳಲ್ಲೂ ಉದ್ಯೋಗವಿಲ್ಲದೆ ಕಾರ್ಮಿಕರು ಹಾಗು ಅವರ ಅವಲಂಬಿತರು ಬೀದಿ ಪಾಲಾಗಿದ್ದಾರೆ. ಅಲ್ಲದೆ ಜಿಲ್ಲೆಯ ಆರ್ಥಿಕ ಬೆಳವಣಿಗೆ ಸಹ ಕುಠಿತವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
     ಹೋರಾಟದ ನೇತೃತ್ವ ವಹಿಸಿರುವ ಬಿ.ಎಸ್ ಗಣೇಶ್, ಎರಡು ಕಾರ್ಖಾನೆಗಳ ಉಳಿವಿಗಾಗಿ ನಿರಂತರ ಹೋರಾಟ ನಡೆಯಲಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  

ಪ್ರೇಕ್ಷಕರ ಮನ ಸೂರೆಗೊಂಡ ‘ರಸ ರಾಮಾಯಣ

ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
     ಭದ್ರಾವತಿ, ಆ. ೮:  ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಗಜಾನನ ಹೆಗಡೆ ಮೈಸೂರು ಇವರ ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಳಿಸಿತು.
    ಗಾಯನಕ್ಕೆ ತಕ್ಕಂತೆ ಭಾವಾಭಿನಯ, ವ್ಯಾಖ್ಯಾನ ಇವೆರಡರ ನಡುವೆ ಆಕರ್ಷಕ ಚಿತ್ರಣ ಕಲಾವಿದರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿ ಕಂಡು ಬಂದವು. ಕೋವಿಡ್-೧೯ರ ನಡುವೆಯೂ ಅದ್ಭುತವಾದ ಕಾರ್ಯಕ್ರಮ ಆಯೋಜಿಸುವಲ್ಲಿ ವೇದಿಕೆ ಶ್ರಮ ಹೆಚ್ಚಿನದ್ದಾಗಿದ್ದು,  ಹಲವಾರು ವರ್ಷಗಳಿಂದ ನಿರಂತರವಾಗಿ ವಿಭಿನ್ನವಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಿದ್ದರು.
     ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ, ಮುನಿರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸುಬ್ಬರಾಯ ಭಾಗ್ವತ ಕಪ್ಪೆಕೆರೆ-ಯಕ್ಷ ಧ್ವನಿ, ಶಿವರಾಮ ಭಾಗ್ವತ ಕನಕನಹಳ್ಳಿ-ಗಾನಧ್ವನಿ, ಮಂಜುನಾಥ-ಕಂಚಿಮನೆ ಮೃದಂಗ, ಎನ್.ಜಿ ಹೆಗಡೆ ಕಪ್ಪೆಕೆರೆ-ತಬಲ, ಚಂದ್ರಶೇಖರ ಭಂಡಾರಿ-ಕೀಬೋರ್ಡ್, ನಿರ್ಮಲಾ ಗೋಳಿಕೊಪ್ಪ-ಭಾವಾಭಿನಯ, ಯತೀಶ್ ಯಲ್ಲಾಪುರ-ಚಿತ್ರ ಮತ್ತು ಡಾ. ಡಿ.ಕೆ ಗಾಂವ್ಕರ-ವ್ಯಾಖ್ಯಾನ ಎಲ್ಲಾ ಕಲಾವಿದರಿಂದ ಅದ್ಭುತ ಪ್ರತಿಭೆ ಅನಾವರಣಗೊಂಡಿತು. ಮಹಾಬಲೇಶ್ವರ ಹೆಗಡೆ ಕಪ್ಪೆಕೆರೆ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

Saturday, August 7, 2021

ಭದ್ರಾ ಜಲಾಶಯದಿಂದ ನದಿಗೆ ನೀರು : ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆ

ಭದ್ರಾ ಜಲಾಶಯದಿಂದ ಕಳೆದ ೨ ದಿನಗಳಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಇದರಿಂದಾಗಿ ಭದ್ರಾವತಿ ನಗರದಲ್ಲಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ನೀರಿನಲ್ಲಿ ಮುಳುಗಡೆಗೊಳ್ಳುವ ಹಂತಕ್ಕೆ ತಲುಪಿರುವುದು.
    ಭದ್ರಾವತಿ, ಆ. ೭: ಭದ್ರಾ ಜಲಾಶಯದಿಂದ ಕಳೆದ ೨ ದಿನಗಳಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಇದರಿಂದಾಗಿ ನಗರದಲ್ಲಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
    ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಮುಳುಗುವ ಹಂತಕ್ಕೆ ಬಂದು ತಲುಪಿದ್ದು, ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯ ಸಹ ಈಗಾಗಲೇ ಮುಳುಗಡೆ ಹಂತ ತಲುಪಿದೆ. ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು, ಶನಿವಾರ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ. ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ.
    ಅಲ್ಲದೆ ಜಲಾಶಯದ ವ್ಯಾಪ್ತಿಯಲ್ಲೂ ಮಳೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ನದಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಸಹ ತಗ್ಗು ಪ್ರದೇಶದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗುವುದು ಸಹ ಬಹುತೇಕ ಖಚಿತವಾಗಿದ್ದು, ಹಳೇ ಸೇತುವೆ ಮೇಲೆ ಸಂಚಾರ ದಟ್ಟಣೆ ಅಧಿಕವಾಗಲಿದ್ದು, ಈ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಬದಲಿ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಈ ಸೇತುವೆ ಇನ್ನೂ ಪೂರ್ಣಗೊಂಡಿಲ್ಲ.

ಕೊರೋನಾ ಸೋಂಕು ಪುನಃ ಏರಿಕೆ : ಒಬ್ಬರು ಬಲಿ

ಭದ್ರಾವತಿ, ಆ. ೭: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಹೆಚ್ಚಾಗುತ್ತಿದ್ದು, ಶನಿವಾರ ಒಟ್ಟು ೧೧ ಪ್ರಕರಣಗಳು ದಾಖಲಾಗಿವೆ.
ಕಳೆದ ಸುಮಾರು ೧೫ ದಿನಗಳಿಂದ ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿತ್ತು. ಇದೀಗ ಏಕಾಏಕಿ ೧೧ ಪ್ರಕರಣಗಳು ಹೆಚ್ಚಾಗಿದ್ದು, ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಗ್ರಾಮಾಂತರ ಭಾಗದಲ್ಲಿ ೫ ಮತ್ತು ನಗರ ಪ್ರದೇಶದಲ್ಲಿ ೬ ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲಿ : ಬಿ.ವೈ ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಶನಿವಾರ ಭದ್ರಾವತಿ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.
     ಭದ್ರಾವತಿ, ಆ. ೭: ಶಿವಮೊಗ್ಗ ಜಿಲ್ಲೆಯನ್ನು ಕೃಷಿ ನೀರಾವರಿ ಜಿಲ್ಲೆಯನ್ನಾಗಿ ರೂಪಿಸುವ ಮೂಲಕ ಜಿಲ್ಲೆಯ ಮಹತ್ವ ಎತ್ತಿ ಹಿಡಿಯಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
    ಅವರು ಶನಿವಾರ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಬಿ.ಎಸ್ ಯಡಿಯೂರಪ್ಪನವರು ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಸುಮಾರು ೩ ಸಾವಿರ ಕೋ. ರು. ಹಾಗು ಇತರೆ ನೀರಾವರಿ ಯೋಜನೆಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಗೊಳಿಸಿದ್ದರು. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು. ಯೋಜನೆಗಳಲ್ಲಿ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಗಮನ ನೀಡಬೇಕು. ನಾಲೆಗಳಲ್ಲಿ ಹೂಳು ತುಂಬಿಕೊಳ್ಳದಂತೆ ಹಾಗು ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಬೇಕೆಂದರು.
    ಮಧ್ಯ ಕರ್ನಾಟಕ ಭಾಗದ ಬರ ಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಬಹಳ ವರ್ಷಗಳ ಕನಸು ಈಡೇರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.  
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ ೧೪ ಟಿಎಂಸಿ ಹಾಗು ಭದ್ರಾ ಜಲಾಶಯದಿಂದ ೧೫ ಟಿಎಂಸಿ ನೀರನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರ ಯೋಜನೆ  ರೂಪಿಸಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಹೆಚ್ಚಿನ ಅನಾನುಕೂಲವಾಗಲಿದೆ. ತುಂಗಾ ಜಲಾಶಯದಲ್ಲಿ ಸಂಗ್ರಹವಾಗುವ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದನ್ನು ತಪ್ಪಿಸಲು ತುಂಗಾ ಜಲಾಶಯದಿಂದಲೇ ೩೦ ಟಿಎಂಸಿ ಹೆಚ್ಚುವರಿ ನೀರನ್ನು ಈ ಯೋಜನೆಗೆ ಬಳಸಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು.
    ಪ್ರಮುಖರಾದ ಪದ್ಮನಾಭ ಭಟ್, ಎಸ್. ದತ್ತಾತ್ರಿ, ಎಸ್.ಎಸ್ ಜ್ಯೋತಿಪ್ರಕಾಶ್, ನಾಗಸಮುದ್ರ ಷಡಾಕ್ಷರಿ, ಸಾಲೂರು ರುದ್ರಮೂರ್ತಿ, ರಾಜಪ್ಪ, ಹನುಮಂತಪ್ಪ, ಮಂಜುನಾಥ, ಸ್ಥಳೀಯ ಮುಖಂಡರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್,  ಜಿ. ಆನಂದ ಕುಮಾರ್, ಮಂಗೋಟೆ ರುದ್ರೇಶ್, ಬಿ.ಜಿ ರಾಮಲಿಂಗಯ್ಯ, ಮಂಜುನಾಥ್, ಕೂಡ್ಲಿಗೆರೆ ಹಾಲೇಶ್, ವಿ.ಕದಿರೇಶ್, ಅನಿತಾ ಮಲ್ಲೇಶ್, ಅನುಪಮ ಚನ್ನೇಶ್, ಮಂಡಳಿ ನಿರ್ದೇಶಕ ವಿನಾಯಕ, ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಅಧೀಕ್ಷಕ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ವೆಂಕಟೇಶ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Friday, August 6, 2021

ಆ.೭ರಂದು ‘ರಸ ರಾಮಾಯಣ’

     ಭದ್ರಾವತಿ, ಆ. ೬: ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಪ್ರೊ. ಗಜಾನನ ಹೆಗಡೆ ಮೈಸೂರು ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಆ.೭ರಂದು ಸಂಜೆ ೫.೩೦ಕ್ಕೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
    ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಆ.೮ರಂದು ವಿದ್ಯುತ್ ವ್ಯತ್ಯಯ

      ಭದ್ರಾವತಿ, ಆ. ೬: ನಗರ ಉಪವಿಭಾಗ ಘಟಕ-೪ರ ಶಾಖಾ ವ್ಯಾಪ್ತಿಯ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
       ಸೀಗೇಬಾಗಿ, ಶ್ರೀ ಸತ್ಯ ಸಾಯಿ ನಗರ, ಸೈಯ್ಯದ್  ಕಾಲೋನಿ, ಅಂಬೇಡ್ಕರ್ ಬೀದಿ, ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರ ಹಳ್ಳಿ, ಬಾಬಳ್ಳಿ ಮತ್ತು ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.