Tuesday, October 19, 2021

ನೂತನ ಅಂಬ್ಯುಲೆನ್ಸ್ ಕಾರ್ಯಾರಂಭಕ್ಕೆ ಚಾಲನೆ

ಭದ್ರಾವತಿ ಅನ್ವರ್ ಕಾಲೋನಿಯ ಉಸ್ಮಾನಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಅಂಬ್ಯುಲೆನ್ಸ್ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
    ಭದ್ರಾವತಿ: ನಗರದ ಅನ್ವರ್ ಕಾಲೋನಿಯ ಉಸ್ಮಾನಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಅಂಬ್ಯುಲೆನ್ಸ್ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
    ಟ್ರಸ್ಟ್ ವತಿಯಿಂದ ಹಲವಾರು ವರ್ಷಗಳಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈ ಹಿಂದೆ ಖರೀದಿಸಲಾಗಿದ್ದ ಅಂಬ್ಯುಲೆನ್ಸ್ ಹಳೇಯದಾಗಿದ್ದು, ಬಳಕೆಗೆ ಉಪಯೋಗಕ್ಕೆ ಬಾರದ ಕಾರಣ ಪುನಃ ಹೊಸ ಅಂಬ್ಯುಲೆನ್ಸ್ ಖರೀದಿಸಲಾಗಿದೆ.
    ಪ್ರವಾದಿ ಮಹಮ್ಮದ್ ಫೈಗಂಬರರ ಜನ್ಮದಿನದ ಅಂಗವಾಗಿ ಟ್ರಸ್ಟ್ ಹೊಸ ಅಂಬ್ಯುಲೆನ್ಸ್ ಸೇವೆಯನ್ನು ಸಮರ್ಪಣೆ ಮಾಡಿಕೊಂಡಿದೆ. ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಟ್ರಸ್ಟ್ ಅಧ್ಯಕ್ಷ ಹಬಿಬುಲ್ಲಾ ಖಾನ್, ಉಪಾಧ್ಯಕ್ಷ ಮೆಹಬೂಬ್ ಪಾಷ, ಮಾಜಿ ಅಧ್ಯಕ್ಷ ಜೆಬಿಟಿ ಬಾಬು, ಖಜಾಂಚಿ ನೂರುಲ್ಲಾ ಷರೀಫ್, ಕಾರ್ಯದರ್ಶಿ ಮುಸ್ವೀರ್ ಬಾಷಾ, ಟ್ರಸ್ಟಿಗಳಾದ ಅಬ್ದುಲ್ ವಹೀದ್, ಮೊಹಮದ್ ಅನ್ಸರ್ ಪಾಷಾ, ಸೈಯದ್ ಸಮೀವುಲ್ಲಾ, ಎಸ್.ಎಂ ಮುಜೀಬ್‌ಉಲ್ಲಾ, ನೂರ್ ಅಹಮದ್, ಮೊಹಮದ್ ಖಲಂದರ್, ಮೊಹಮದ್ ಜಾಕೀರ್, ಸೈಯದ್ ಅಸ್ಲಂ, ಪ್ರಮುಖರಾದ ಸಿ.ಎಂ ಖಾದರ್, ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಲ್ಟಿ ಸರ್ವಿಸ್ ಸೆಂಟರ್ ಕಟ್ಟಡದ ಶಂಕು ಸ್ಥಾಪನೆ

ಭದ್ರಾವತಿ ತಾಲೂಕಿನ ಹಿರಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಮಲ್ಟಿ ಸರ್ವಿಸ್ ಸೆಂಟರ್ ಕಟ್ಟಡದ ಶಂಕು ಸ್ಥಾಪನೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ನೆರವೇರಿಸಿದರು.
    ಭದ್ರಾವತಿ: ತಾಲೂಕಿನ ಹಿರಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಮಲ್ಟಿ ಸರ್ವಿಸ್ ಸೆಂಟರ್ ಕಟ್ಟಡದ ಶಂಕು ಸ್ಥಾಪನೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ನೆರವೇರಿಸಿದರು.
    ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಿರ್ದೇಶಕ ಜೆ.ಪಿ ಯೋಗೇಶ್, ವ್ಯವಸ್ಥಾಪಕ ಮಂಜಪ್ಪ, ಮೋಹನ್, ಸಹಕಾರ ಸಂಘಗಳ ಸಹಾಯಕ ಸೈಯದ್ ಜುನೈದ್ ಪಾಷಾ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಚ್.ಬಿ ಮಂಜುನಾಥ್, ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಗುರುಸ್ವಾಮಿ, ಸಾಲೇರ ಶೇಖರಪ್ಪ, ಎಚ್.ಎಸ್ ಮುರುಗೆಪ್ಪ, ಎಚ್.ಸಿ ಪ್ರಕಾಶ್, ಎಚ್.ಎಸ್ ರಮೇಶ್, ಜಿ.ಕೆ ಹಾಲ್ಯನಾಯ್ಕ, ಜವರೇಗೌಡ, ಕೆ. ಉಮೇಶ್, ಸುಧಾ, ಶ್ರೀನಿವಾಸ್ ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಎಂ.ಎ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಅ. ೧೯ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಅ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರ ವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.


Monday, October 18, 2021

ಡಿಎಸ್‌ಎಸ್ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ ಭದ್ರಾವತಿ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಸಮಿತಿಯ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆಯಿತು.
    ಭದ್ರಾವತಿ, ಅ. ೧೮: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಸಮಿತಿಯ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆಯಿತು.
     ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. 
    ರಾಜ್ಯ ಸಂಘಟನಾ ಸಂಚಾಲಕರಾದ ಹಾಸನದ ಎಸ್.ಎನ್ ಮಲ್ಲಪ್ಲ, ಧಾರವಾಡದ ಮರೀಶ್ ನಾಗಣ್ಣವರ್, ಚಿಕ್ಕಬಳ್ಳಾಪುರದ ವಿಜಯನರಸಿಂಹ, ಕೋಲಾರದ ಸೂಲಿಕುಂಟೆ ರಮೇಶ್, ಗದಗದ ಎಸ್.ಎನ್ ಬಳ್ಳಾರಿ ಹಾಗೂ ದಲಿತ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಂಗಳೂರಿನ ಶ್ರೀನಿವಾಸಲು,  ಕಾರ್ಯಾಧ್ಯಕ್ಷ ಸಿ. ಜಯಪ್ಪ, ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಚಿಕ್ಕಮಗಳೂರಿನ ಕೆ.ಸಿ ವಸಂತಕುಮಾರ್, ವಿಭಾಗೀಯ ಸಂಚಾಲಕ ಸೊರಬದ ಗುರುರಾಜ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮಂಡ್ಯದ ನಂಜುಂಡಮೌರ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಮುನಿರಾಜ್, ಪ್ರಮುಖರಾದ ಸತ್ಯ ಭದ್ರಾವತಿ, ತಾಲೂಕು ಸಂಚಾಲಕ ರಂಗನಾಥ್, ಜಿಲ್ಲಾ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸರ್ಕಾರದ ಆದೇಶ ಉಲ್ಲಂಘಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಥಾನಕ್ಕೆ ಗ್ರೇಡ್-೨ ಕಾರ್ಯದರ್ಶಿ ನೇಮಕ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಗ್ರಹ

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಶಿವಕುಮಾರ್
    ಭದ್ರಾವತಿ, ಅ. ೧೮: ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಸ್ಥಾನಕ್ಕೆ ಪ್ರಭಾರವಾಗಿ ಪಂಚಾಯಿತಿ ಗ್ರೇಡ್-೨  ಕಾರ್ಯದರ್ಶಿಗಳನ್ನು ನೇಮಕ ಮಾಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಲಾಗಿದ್ದು, ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.
    ಸರ್ಕಾರದ ಆದೇಶದ ಪ್ರಕಾರ ನಿವೃತ್ತಿ, ವರ್ಗಾವಣೆ ಸೇರಿದಂತೆ ಇನ್ನಿತರ ಕಾರಣಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸ್ಥಾನ ಖಾಲಿ ಇದ್ದಲ್ಲಿ  ಪ್ರಭಾರವಾಗಿ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಯನ್ನು ನೇಮಿಸಬಹುದಾಗಿದೆ. ಒಂದು ಗ್ರೇಡ್-೧ ಕಾರ್ಯದರ್ಶಿ ಇಲ್ಲದಿದ್ದಲ್ಲಿ ಬೇರೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಹೆಚ್ಚುವರಿಯಾಗಿ ಪ್ರಭಾರ ವಹಿಸಬಹುದಾಗಿದೆ. ಆದರೆ ತಾಲೂಕಿನಲ್ಲಿ ಈ ಆದೇಶವನ್ನು ಉಲ್ಲಂಘಿಸಿ ಅರಳಿಕೊಪ್ಪ, ಕಾರೇಹಳ್ಳಿ, ಮಂಗೋಟೆ, ಕಾಗೆಕೋಡಮಗ್ಗಿ, ದೊಡ್ಡೇರಿ, ಸೈದರಕಲ್ಲಹಳ್ಳಿ, ಗುಡಮಘಟ್ಟ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳಿಗೆ ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿಗಳನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ.
    ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿಗಳಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕೋಟ್ಯಾಂತರ ರು. ಹಣಕಾಸಿನ ವ್ಯವಹಾರ ನಿರ್ವಹಿಸುವುದು ಕಷ್ಟಕರವಾಗಿದೆ. ಅಲ್ಲದೆ ಕೆ.ಸಿ.ಎಸ್.ಆರ್ ನಿಯಮಾಳಿ ೧೯೫೭ರ ಪ್ರಕಾರ ಹಣಕಾಸಿನ ವ್ಯವಹಾರ ನಿರ್ವಹಿಸುವುದು ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.
    ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿ ಹುದ್ದೆಗಳಲ್ಲಿ ಕೆಲವರು ಬಹಳ ವರ್ಷಗಳಿಂದ ವರ್ಗಾವಣೆಗೊಳ್ಳದೆ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸರ್ಕಾರದ ಪೂರ್ವಾನುಮತಿ ಪಡೆಯದೇ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಕಾರ್ಯದರ್ಶಿಗಳನ್ನು ಶೇ.೬೦ ರಿಂದ ೭೦ರಷ್ಟು ಮೂಲ ಗ್ರಾಮ ಪಂಚಾಯಿತಿಗಳಿಂದ ಬೇರೆ ಗ್ರಾಮ ಪಂಚಾಯಿತಿಗಳಿಗೆ ಪ್ರಭಾರವಾಗಿ ನೇಮಕ ಮಾಡಲಾಗಿರುತ್ತದೆ ಎಂದು ಆರೋಪಿಸಲಾಗಿದೆ.
ಸರ್ಕಾರದ ಆದೇಶಗಳಿಗೆ ಬೆಲೆಕೊಡದೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ತೆರವು : ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ನಿವಾಸಿಗಳಿಂದ ಮನವಿ


ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ನಿವಾಸಿಗಳಿಗೆ, ವ್ಯಾಪಾರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೮: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಈ ಜಾಗದಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ.೬ರಂದು ನಡೆದ ಸಭೆಯಲ್ಲಿ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಾಗು ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ ತೆರವು ಮಾಡುವಂತೆ ಮೌಕಿಕವಾಗಿ ಸೂಚಿಸುವ ಮೂಲಕ ನಿವಾಸಗಳನ್ನು ಹೊಂದಿರುವವರಿಗೆ ಪರಿಹಾರವಾಗಿ ೫ ಲಕ್ಷ ರು. ಹಾಗು ಜೇಡಿಕಟ್ಟೆಯಲ್ಲಿ ೨೦*೩೦ ನಿವೇಶನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ನಡುವೆ ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರಸ್ತುತ ೫ ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪರಿಹಾರ ಮೊತ್ತವನ್ನು ೧೦ ಲಕ್ಷ  ರು. ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದರು.
    ಈ ಜಾಗದಲ್ಲಿ ಕುಲುಮೆ, ಕಟಿಂಗ್ ಶಾಪ್, ಹೋಟೆಲ್, ಚಿಲ್ಲರೆ ಅಂಗಡಿ ಹಾಗು ಜೆರಾಕ್ಸ್ ಅಂಗಡಿ ಸೇರಿದಂತೆ ಇನ್ನಿತರ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರು ಮುಂದೆ ಸಹ ಇದೆ ವೃತ್ತಿಗಳನ್ನು ನಡೆಸಿಕೊಂಡು ಹೋಗುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ವಿನಂತಿಸಲಾಗಿತ್ತು.
    ಈ ಹಿನ್ನಲೆಯಲ್ಲಿ ಇದೀಗ ಈ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದರು.

Sunday, October 17, 2021

ನ್ಯಾಯಾಲಯದಲ್ಲಿ ಮೇಲ್ಮನವಿ ಬಾಕಿ ಇರುವಾಗ ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿರುವ ಎಂ. ಗುರುಮೂರ್ತಿ

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಪತ್ರಿಕಾಗೋಷ್ಠಿಯಲ್ಲಿ ಆರೋಪ


ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಸೇರಿದಂತೆ ಇನ್ನಿತರರು ಮಾತನಾಡಿದರು.
    ಭದ್ರಾವತಿ, ಅ. ೧೭: ಪ್ರೊ. ಬಿ. ಕೃಷ್ಣಪ್ಪ ಅವರು ೭೦ರ ದಶಕದಲ್ಲಿ ರಾಜ್ಯಾದ್ಯಂತ ಹುಟ್ಟುಹಾಕಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಸಂಬಂಧಿಸಿದಂತೆ ಕಿರಿಯ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಎಂ. ಗುರುಮೂರ್ತಿ ಎಂಬುವರು ಸಮಿತಿಗೆ ಸಂಬಂಧಿಸಿದ ವಿಚಾರದಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂದು ಎಂ. ಗುರುಮೂರ್ತಿ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಸಮಿತಿಯ ಹೆಸರನ್ನು ನನ್ನ ಹೊರತುಪಡಿಸಿ ಬೇರೆ ಯಾರೂ ಬಳಸಬಾರದು, ಬಳಸಿದರೆ ಕೇಸು ದಾಖಲಿಸುತ್ತೇನೆ. ಭದ್ರಾವತಿ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ನನ್ನ ಹೊರತುಪಡಿಸಿ ರಾಜ್ಯದಲ್ಲಿ ಬೇರೆ ಯಾರೂ ಸಮಿತಿಯ ಹೆಸರನ್ನು ಬಳಸಕೂಡದು ಎಂದು ನ್ಯಾಯಾಲಯದ ಆದೇಶವಾಗಿರುತ್ತದೆ ಎಂದು ಹೇಳಿಕೊಂಡು ಗೊಂದಲ ಮೂಡಿಸುತ್ತಿದ್ದಾನೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ಬಾಕಿ ಇರುವಾಗ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ೨೦೦೪ ರಿಂದ ೨೦೦೮ರವರೆಗಿನ ಅವಧಿಯಲ್ಲಿ ಚಿಂತಾಮಣಿಯ ಎನ್. ಶಿವಣ್ಣನವರು ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದರು. ಈ ಅವಧಿಯಲ್ಲಿ ಅವರು ಅನಾರೋಗ್ಯದ ನಿಮಿತ್ತ ಸಮಿತಿಯ ನವೀಕರಣ ಮಾಡಲು ಸಾಧ್ಯವಾಗಲಿಲ್ಲ. ಇದೆ ಸಮಯವನ್ನು ಬಳಸಿಕೊಂಡು ಶಿವಮೊಗ್ಗ ತಾಲೂಕಿಗೆ ಸೀಮಿತವಾದಂತೆ ಕೆಲ ಸ್ಥಳೀಯರನ್ನು ಸೇರಿಸಿಕೊಂಡು ರಾಜ್ಯ ಪದಾಧಿಕಾರಿಗಳೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಯಾರಿಗೂ ತಿಳಿಯದಂತೆ ಸಮಿತಿಗೆ ದ್ರೋಹ ಮಾಡಿ ಎನ್. ಗಿರಿಯಪ್ಪನವರನ್ನು ರಾಜ್ಯ ಸಂಚಾಲಕರೆಂದು ೪ ವರ್ಷಗಳ ನವೀಕರಣವನ್ನು ಏಕಕಾಲದಲ್ಲಿ ಒಂದೇ ದಿನಾಂಕದಂದು ನವೀಕರಿಸಿಕೊಂಡಿರುತ್ತಾರೆಂದು ಆರೋಪಿಸಿದರು.
    ಅಧಿಕೃತ ಸಮಿತಿಯ ಅಂದಿನ ರಾಜ್ಯ ಸಂಚಾಲಕರಾಗಿದ್ದ ಎನ್. ಶಿವಣ್ಣರವರು ೨೦೦೭ರಲ್ಲಿ ಮರಣ ಹೊಂದಿದ ನಂತರ ಹಂಗಾಮಿ ರಾಜ್ಯ ಸಂಚಾಲಕರಾಗಿ ನೇಮಕಗೊಂಡಿದ್ದ ವೆಂಕಟಗಿರಿಯಯ್ಯನವರ ನಾಯಕತ್ವದಲ್ಲಿ ೨೦೦೯ರಲ್ಲಿ ಮುಂದಿನ ಅವಧಿಗೆ ನವೀಕರಣ ಮಾಡಿಕೊಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಈ ಹಂತದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ನವೀಕರಣ ಮಾಡಲು ವಿಳಂಬ ಮಾಡಿದಾಗ ರಾಜ್ಯ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು. ದೂರಿಗೆ ಸ್ಪಂದಿಸಿದ ರಾಜ್ಯ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನವೀಕರಣ ಮಾಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜಿಲ್ಲಾ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ ಎನ್. ಗಿರಿಯಪ್ಪನವರಿಗೆ ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಹಿಂಬರಹ ನೀಡಿರುತ್ತಾರೆ. ೨೦೦೯ ರಿಂದ ೨೦೨೧ರ ವರೆಗೆ ಸಮಿತಿ ನವೀಕರಣವನ್ನು ಯಾರಿಗೂ ನೀಡದೆ ತಡೆ ಹಿಡಿಯಲಾಗಿದೆ. ಇಲ್ಲಿಯವರೆಗೂ ಯಾರಿಗೂ ಕೂಡ ನವೀಕರಣವನ್ನು ಜಿಲ್ಲಾ ನೋಂದಣಾಧಿಕಾರಿಗಳು ನೀಡಿರುವುದಿಲ್ಲ. ಈ ನಡುವೆ ಎನ್. ಗಿರಿಯಪ್ಪನವರು ನಗರದ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ವಿಚಾರಣೆ ನಡೆದು ತೀರ್ಪು ಸಹ ಪ್ರಕಟಗೊಂಡಿದೆ. ಈ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
    ಈ ನಡುವೆ ಎಂ. ಗುರುಮೂರ್ತಿ ಸಮಾಜದಲ್ಲಿ ಎಲ್ಲರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದು, ಇವರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿರುವ ಆರೋಪ, ಪರಿಶಿಷ್ಟ ಜಾತಿಯವರನ್ನು ವಂಚಿಸಿರುವ ಆರೋಪಗಳಿವೆ. ಸಮಿತಿಯು ಸಾಮಾಜಿಕ ಚಳುವಳಿ ಆಗಿರುವುದರಿಂದ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆದಂತಹ ಸಂದರ್ಭದಲ್ಲಿ ಅನ್ಯಾಯ ಪ್ರಶ್ನಿಸುವ, ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರದಾಗಿದೆ. ಸಮಿತಿ ಹೆಸರನ್ನು ಬಳಸಬಾರದು ಎಂಬುದಕ್ಕೆ ಯಾರಿಗೂ ಅಧಿಕಾರವಿರುವುದಿಲ್ಲ. ಈ ವಿಚಾರವಾಗಿ ಎಂ. ಗುರುಮೂರ್ತಿ ವಿರುದ್ಧ ಎ.ಡಿ.ಜಿ.ಪಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಏಳುಮಲೈ, ವಿ. ವಿನೋದ್ ಮತ್ತು ತಾಲೂಕು ಸಂಘಟನಾ ಸಂಚಾಲಕ ಸಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.