Monday, December 4, 2023

ರಾಜಮಹಾರಾಜರಂತೆ ಇಂದಿನ ಸರ್ಕಾರಗಳು ಕಲಾವಿದರಿಗೆ ಪ್ರೋತ್ಸಾಹ ನೀಡಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ: ಹಿಂದೆ ಕಲಾವಿದರಿಗೆ ರಾಜಮಹಾರಾಜರು ನೀಡುತ್ತಿದ್ದ ಗೌರವ, ಪ್ರೋತ್ಸಾಹ ಇಂದು ಕಂಡು ಬರುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಇಂದಿನ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು.
    ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದರು.
    ರಾಜರ ಆಳ್ವಿಕೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದ ಮಾದರಿಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಜರ ಕಾಲದಲ್ಲಿ ಇನಾಂ ನೀಡುತ್ತಿದ್ದಂತೆಯೇ ಇಂದು ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
    ಜಾನಪದ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರಮಾಡಲು ಕಲೆಗಳನ್ನು ಕಲಿಸುವುದು ಮುಖ್ಯ. ವಿದ್ಯಾಭ್ಯಾಸದ ಜೊತೆಗೆ ಕಲೆಗಳು ಸಹ ಮುಖ್ಯ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳಿಗೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.
    ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಜಾನಪದರು ವಿದ್ಯಾವಂತರಲ್ಲ, ಆದರೆ ಬದುಕಿನ ಮಹತ್ವ ಅರಿತವರು. ಆರೋಗ್ಯದ ಮಹತ್ವ ತಿಳಿದವರು. ೬೪ವಿದ್ಯೆಗಳಿಗೂ ತಾಯಿ ಬೇರು ಭಾರತ. ಜ್ಞಾನಪೀಠ ಪಡೆದ ಎಲ್ಲ ಸಾಹಿತಿಗಳು ಹಳ್ಳಿಯ ಮಹತ್ವ ಅರಿತಿದ್ದರು. ಆದ್ದರಿಂದ ಅವರಿಗೆ ಬದುಕು-ಬವಣೆಗಳ ಮಹತ್ವ ತಿಳಿದಿತ್ತು ಎಂದರು.
    ವೇದಿಕೆಯಲ್ಲಿ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣಾಧಿಕಾರಿ ಸಿ. ಯೋಗೀಶ್ ಕುಮಾರ್, ರಂಗಕರ್ಮಿ ಸಾಸ್ವೇಹಳ್ಳಿ ಸತೀಶ್, ಚಲನಚಿತ್ರ ನಿರ್ದೇಶಕ ಹರ್ಷಪ್ರಿಯ, ನಗರಸಭೆ ಸದಸ್ಯ ಬಿ.ಎಂ ಮಂಜುನಾಥ್, ಮುಖಂಡರಾದ ಬಿ.ಕೆ ಜಗನ್ನಾಥ್, ಬಿ.ಎಸ್ ಗಣೇಶ್, ಉಮೇಶ್, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಕಾರ್ಯದರ್ಶಿ ಜಗದೀಶ್, ದಿವಾಕರ್ ಸೇರಿದಂತೆ ಮತ್ತಿತರರಿದ್ದರು.
    ಸಿಂಧು ಪ್ರಾರ್ಥಿಸಿ, ಜಗದೀಶ್ ಸ್ವಾಗತಿಸಿದರು. ಸೌಮ್ಯ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಿಂದ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

Sunday, December 3, 2023

ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದು ಬಾಲಕನಿಗೆ ತೀವ್ರ ಗಾಯ

ಆಟವಾಡುತ್ತಿದ್ದ ಬಾಲಕನೋರ್ವನ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದಿರುವ ಘಟನೆ ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಪೊಲೀಸ್ ವಸತಿ ಗೃಹದ ಮುಖ್ಯದ್ವಾರದ ಬಳಿ ನಡೆದಿದ್ದು, ತೀವ್ರ ಗಾಯಗೊಂಡಿರುವ ಬಾಲಕನ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
    ಭದ್ರಾವತಿ: ಆಟವಾಡುತ್ತಿದ್ದ ಬಾಲಕನೋರ್ವನ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದಿರುವ ಘಟನೆ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಪೊಲೀಸ್ ವಸತಿ ಗೃಹದ ಮುಖ್ಯದ್ವಾರದ ಬಳಿ ನಡೆದಿದೆ.
    ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರೂಪೇಶ್‌ರವರ ೮ ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಯಿತು.
    ಈ ದುರ್ಘಟನೆಗೆ ಕಳಪೆ ಗುಣಮಟ್ಟದ ಕಬ್ಬಿಣದ ಗೇಟ್ ಅಳವಡಿಸಿರುವುದೇ ಕಾರಣ ಎಂದು ಬಾಲಕನ ತಂದೆ ರೂಪೇಶ್ ಆರೋಪಿಸಿದ್ದಾರೆ. ಸಂಬಂಧಿಸಿದವರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಆಗ್ರಹಿಸಿದ್ದಾರೆ.

ವಿಶೇಷ ಚೇತನ‌ ಮಕ್ಕಳಲ್ಲಿ ಪ್ರತಿಭೆ 6ನೇ ಇಂದ್ರಿಯ


ಭದ್ರಾವತಿ ನಗರದ ರೋಟರಿ ಸಭಾಂಗಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ರೋಟರಿ ಕ್ಲಬ್ ಹಾಗು ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ: ವಿಶೇಷ ಚೇತನ‌ ಮಕ್ಕಳಲ್ಲಿ ಪಂಚೇಂದ್ರಿಯಗಳಲ್ಲಿ ನ್ಯೂತನೆಯಿದ್ದರೂ 6ನೇ ಇಂದ್ರಿಯವಾಗಿ ಅವರೊಳಗಿನ ಪ್ರತಿಭೆ ಕಾರ್ಯನಿರ್ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ರೋಟರಿ ಕ್ಲಬ್ ಹಾಗು ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ವಿಶೇಷ ಚೇತನರ ದಿನಾಚರಣೆಗಳು ಆಚರಣೆಗೆ ಸೀಮಿತವಾಗದೆ ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ಕಾರ್ಯಕ್ರಮಗಳಾಗಬೇಕು. ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮಗಳ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ವಿಶಿಷ್ಟ ಚೇತನ ಸಾಧಕರನ್ನು ಮಕ್ಕಳಿಗೆ ಪರಿಚಯಿಸಬೇಕು. ಈ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಇಂತಹ ಪ್ರಯತ್ನಕ್ಕೆ ಸಂಘಸಂಸ್ಥೆಗಳು, ಮಾಧ್ಯಮಗಳು, ಜನಪ್ರತಿನಿಧಿಗಳು, ಪೋಷಕರು, ಶಿಕ್ಷಕರು ಎಲ್ಲರೂ ಕೈಜೋಡಿಸಬೇಕೆಂದರು.
       ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಮಾತನಾಡಿ, ಮಕ್ಕಳ ದಿನಾಚರಣೆ ಎಷ್ಟು ಮುಖ್ಯವೋ, ಅದೇರೀತಿ ವಿಶೇಷ ಚೇತನ ಮಕ್ಕಳಿಗೆ ವಿಶ್ವ ವಿಶೇಷಚೇತನರ ದಿನಾಚರಣೆ ಮುಖ್ಯ. ಪ್ಯಾರಾ ಒಲಂಪಿಕ್ ಕ್ರೀಡೆಯಲ್ಲಿ ಇವರ ಸಾಧನೆ ಅಪಾರವಾಗಿರುವುದು ಭಾರತೀಯರ ಹೆಮ್ಮೆ ಎಂದರು.
      ಹಳೆನಗರದ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಮಾತನಾಡಿ, ಪೋಷಕರು ಮಕ್ಕಳನ್ನು ತರಬೇತಿ ನೀಡಿ ಪ್ರೋತ್ಸಾಹಿಸಬೇಕು. ತಾವೇ ಎಲ್ಲ ಕೆಲಸ ಮಾಡುವುದರಿಂದ ಮಕ್ಕಳ ಸಾಮರ್ಥ್ಯ ಕುಗ್ಗಿಸಿದಂತಾಗುತ್ತದೆ. ಆದ್ದರಿಂದ ವಿಶೇಷ ಚೇತನ ಮಕ್ಕಳಿಗೆ ನೆರವಾಗುವುದಕ್ಕಿಂತ ಅವರನ್ನು ಸ್ವಾವಲಂಬಿಗಳಾಗಿಸುವುದು ಮುಖ್ಯ ಎಂದರು.
   ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಪಂಚಾಕ್ಷರಿ, ಮಹಿಳಾ ಸೇವಾ ಸಮಾಜದ ಪ್ರಮುಖರಾದ ಅನ್ನಪೂರ್ಣ ಸತೀಶ್, ಜಯಂತಿ ಶೇಟ್, ಅನುಸೂಯ, ಇಂದಿರಾ ರಮೇಶ್ ಮತ್ತಿತರರಿದ್ದರು.
      ಟಿ.ಎನ್.ಪ್ರತಿಭಾ ಸಂವಿಧಾನ ಪೀಠಿಕೆ ವಾಚಿಸಿದರು. ತೀರ್ಥಪ್ಪ ಸ್ವಾಗತಿಸಿ, ನಿರೂಪಿಸಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಬಹುಮಾನ ವಿತರಿಸಲಾಯಿತು.

3 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ : ವಿಜಯೋತ್ಸವ

3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.
ಭದ್ರಾವತಿ:  3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.
ಪಕ್ಷದ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ನೇತೃತ್ವದಲ್ಲಿ ಪಕ್ಷದ ಬಾವುಟ ಹಿಡಿದು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಗಿರುವ.
ಪಕ್ಷದ ಪ್ರಮುಖರಾದ ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಚನ್ನೇಶ್, ರಂಗಸ್ವಾಮಿ, ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಸಂಚಾರಿ ಪೊಲೀಸ್ ಠಾಣೆಯಲ್ಲಿ ಶಿಬಿರ : ೫೪ ಮಂದಿ ರಕ್ತದಾನ

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗು ಪೊಲೀಸ್ ಉಪವಿಭಾಗದ ವತಿಯಿಂದ ಭದ್ರಾವತಿ ನ್ಯೂಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗು ಪೊಲೀಸ್ ಉಪವಿಭಾಗದ ವತಿಯಿಂದ ನಗರದ ನ್ಯೂಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬ ವರ್ಗದವರು ಮಾತ್ರವಲ್ಲದೆ ಸಾರ್ವಜನಿಕರು ಸಹ ಶಿಬಿರದಲ್ಲಿ ಪಾಲ್ಗೊಂಡಿದ್ದರು. ೬ ಜನ ಮಹಿಳೆಯರು ಸೇರಿದಂತೆ ಒಟ್ಟು ೫೪ ಮಂದಿ ರಕ್ತದಾನ ಮಾಡಿದರು.
    ವೈದ್ಯರಾದ ಡಾ. ಚೈತನ್ಯ ಮತ್ತು ಡಾ. ಪ್ರದ್ಯುಹ್ನ ನೇತೃತ್ವದ ತಂಡ ಹಾಗು ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ ಶಾಂತಲಾ, ರಮೇಶ್, ಕೃಷ್ಣಕುಮಾರ್, ಶರಣಪ್ಪ ಹಂಡ್ರಗಲ್, ಸಹಾಯಕ ಠಾಣಾಧಿಕಾರಿಗಳಾದ ಸೂರ್ಯನಾರಾಯಣ, ಶಿವಸ್ವಾಮಿ, ಸಿಬ್ಬಂದಿ ಹಾಲೇಶಪ್ಪ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಶಿಬಿರದ ಯಶಸ್ವಿಗೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು.

Saturday, December 2, 2023

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಿವಮೊಗ್ಗ ಪ್ರಾದೇಶಿಕ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಕ್ಪ ಯಾತ್ರೆಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
    ಭದ್ರಾವತಿ : ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಿವಮೊಗ್ಗ ಪ್ರಾದೇಶಿಕ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಕ್ಪ ಯಾತ್ರೆಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸದರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನ ಸುರಕ್ಷಾ ಯೋಜನೆಗಳ ಮಹತ್ವ ತಿಳಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
    ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್, ಯುವ ಮುಖಂಡ ಮಂಗೋಟೆ ರುದ್ರೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಛೇರಿ ಅಧಿಕಾರಿಗಳು  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಡಿ.೩ರಂದು ಜನಪದ ಜಾತ್ರೆ


    ಭದ್ರಾವತಿ: ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವದ ಪ್ರಯುಕ್ತ ಡಿ.೩ರಂದು ಸಂಜೆ ೬ ಗಂಟೆಗೆ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ.
    ಡಾ. ಬಿ.ಆರ್ ಅಂಬೇಡ್ಕರ ಜಾನಪದ ಕಲಾ ಸಂಘದ ಕಲಾವಿದರಿಂದ ಜನಪದ ಹಾಡುಗಾರಿಕೆ, ತಾಲೂಕಿನ ಅತ್ತಿಗುಂದ ಗ್ರಾಮದ ಚಂದ್ರಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಎಮ್ಮೆಹಟ್ಟಿ ಗ್ರಾಮದ ಗಜಾನನ ಡೊಳ್ಳು ಯುವಕರ ಸಂಘದಿಂದ ಡೊಳ್ಳು ಕುಣಿತ, ಡಿ.ಬಿ ಹಳ್ಳಿ ಶ್ರೀ ಮುಗ್ದ ಸಂಗಮೇಶ್ವರ ವೀರಗಾಸೆ ಕಲಾತಂಡದಿಂದ ಪುರುಷರ ವೀರಗಾಸೆ, ಶಿವಮೊಗ್ಗ ಬೆಳಲಕಟ್ಟೆ ಸರಸ್ವತಿ ಕಲಾ ತಂಡದಿಂದ ಲಂಬಾಣಿ ನೃತ್ಯ, ಸಾಗರ ಬಂದಗದ್ದೆ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಕೋಲಾಟ ಕಲಾ ತಂಡದಿಂದ ಕೋಲಾಟ, ತರೀಕೆರೆ ಲಿಂಗದಹಳ್ಳಿ ಶ್ರೀ ಗುರುವೀರ ಮಹಿಳಾ ವೀರಗಾಸೆ ಕಲಾ ತಂಡದಿಂದ ಮಹಿಳಾ ವೀರಗಾಸೆ, ಉತ್ತರ ಕನ್ನಡ ಜಿಲ್ಲೆಯ ಅಂಚೊ ಮೂಳ ಸಿದ್ಧಿ ಸಾಂಸ್ಕೃತಿಕ ಕಲಾ ತಂಡದಿಂದ ಡಮಾಮಿ ನೃತ್ಯ, ಮಂಡ್ಯ ಅರೇಚಾಕನಹಳ್ಳಿ ಸುಂದರೇಶ್ ಮತ್ತು ತಂಡದವರಿಂದ ಪೂಜಾ ಕುಣಿತ ಹಾಗು ಮೈಸೂರು ಪಿರಿಯಾಪಟ್ಟಣ ಕುಮಾರನಾಯ್ಕ ಮತ್ತು ತಂಡದವರಿಂದ ಕಂಸಾಳೆ ನಡೆಯಲಿದೆ.


    ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ೨೦೧೩ರಲ್ಲಿ ಜನ್ನಾಪುರದಲ್ಲಿ ತಮಟೆ ಮೇಳದ ತಂಡವಾಗಿ ಹುಟ್ಟಿ ಕೊಂಡಿದ್ದು, ತದನಂತರ ಜನಪದ ಕಲೆಗಳ ಪ್ರದರ್ಶನ, ಜನಪದ ಗೀತೆಗಳ ಹಾಡುಗಾರಿಕೆ ಹಾಗು ಬೀದಿನಾಟಕ ಪ್ರದರ್ಶನಗಳನ್ನು ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ.
    ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಬಿರಗಳು ಹಾಗು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಸಂಘಕ್ಕೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಸಂಘದ ಕಾರ್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಳ್ಳಲಿ, ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂಬ ಆಶಯದೊಂದಿಗೆ ದಶಮಾನೋತ್ಸವ ಆಚರಿಸುತ್ತಿದ್ದು, ಕಲಾವಿದರು, ಕಲಾಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.