Tuesday, January 16, 2024

ಲಯನ್ಸ್ ಸೇವಾ ಕಾರ್ಯ ಶ್ಲಾಘನೀಯ : ಬಿ. ಸಿದ್ದಬಸಪ್ಪ

ಭದ್ರಾವತಿ ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಿ.ಎಲ್ ರಂಗಸ್ವಾಮಿ ಸ್ವಾಮಿ, ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಲಯನ್ಸ್ ಒಂದು ಸೇವಾಧಾರಿತ ಸಂಸ್ಥೆ, ತಮ್ಮ ಕಾರ್ಯದ ಒತ್ತಡದ ನಡುವೆಯೂ ಕೂಡ ಸಂಸ್ಥೆಯು ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದ ಜಯಂತಿಯನ್ನು ರಕ್ತದಾನ ಹಾಗೂ ಆರೋಗ್ಯ ಶಿಬಿರ ಮೂಲಕ ನಡೆಸುತ್ತಿರುವುದು ಶ್ಲಾಘನೀಯ ಎಂದು ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
    ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ರಕ್ತದಾನ ಹಾಗು ಆರೋಗ್ಯ ಶಿಬಿರ ಜಾಗತಿಕ ಆದರ್ಶ ರೂಪಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ನಾವು ಸಲ್ಲಿಸುತ್ತಿರುವ ಗೌರವದ ಸಮರ್ಪಣೆಯಾಗಿದೆ ಎಂದು ತಿಳಿಸಲು ಹೆಮ್ಮೆಯಾಗಿದೆ. ಲಯನ್ಸ್ ಕ್ಲಬ್ ಮಾದರಿಯಲ್ಲಿ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಲ್ಲಿ ಭಾರತ ದೇಶ ಆರೋಗ್ಯಪೂರ್ಣರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವೇ ಮಹಾಭಾಗ್ಯ, ರಕ್ತದಾನ ಮಹಾದಾನ ಎಂದು ಲಯನ್ಸ್ ಕ್ಲಬ್ ಸೇವೆಯನ್ನು ಪ್ರಶಂಸಿಸಿದರು.
    ಮಾಜಿ ಜಿಲ್ಲಾ ಗವರ್ನರ್ ದಿವಾಕರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಯುವದಿನವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
    ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಎಲ್ ರಂಗಸ್ವಾಮಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಮೊಹಮ್ಮದ್ ಇಸ್ಮಾಯಿಲ್ ಶರೀಫ್ ಹಾಗೂ ಭರತ್ ಕ್ಯಾನ್ಸರ್ ತಡೆಗಟ್ಟುವ ಮಾರ್ಗೋಪಾಯಗಳು ಹಾಗೂ ಜೀವನ ಶೈಲಿ ಕುರಿತು ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು.
    ರಕ್ತನಿಧಿ ಅಧ್ಯಕ್ಷ ಮೌನೇಶ್, ರವಿಚಂದ್ರ ರಕ್ತದಾನ ಶಿಬಿರ ಹಾಗು ಮೀನಾ ನರ್ಸಿಂಗ್ ಹೋಂ ವೈದ್ಯರಾದ ಡಾ.ವರ್ಷಾ ಹಾಗೂ ಹಿತೇಶ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು.
    ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಸ್ವಾಗತಿಸಿ, ಕಾರ್ಯದರ್ಶಿ ಎಂ. ದಿವಾಕರ್ ನಿರೂಪಿಸಿ, ಬಿ.ಎಸ್ ರಾಜೇಶ್ ವಂದಿಸಿದರು. ಶ್ರೀನಿವಾಸ್, ಎಸ್.ಕೆ ಮೋಹನ್, ನಾಗರಾಜ್, ಶ್ರೀನಿವಾಸ್, ಅಶೋಕ್, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾಜಿ ಸೈನಿಕರಿಂದ ಭಾರತೀಯ ಭೂ ಸೇನಾ ದಿನಾಚರಣೆ

ಭದ್ರಾವತಿಯಲ್ಲಿ ಭಾರತೀಯ ಭೂ ಸೇನಾ ದಿನಾಚರಣೆ ಅಂಗವಾಗಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ದೇಶಕ್ಕಾಗಿ ಸೈನಿಕರು ಸಲ್ಲಿಸುತ್ತಿರುವ ಸೇವೆ ಹಾಗು ಅವರ ದೇಶಭಕ್ತಿ ಸ್ಮರಣೆಯೊಂದಿಗೆ ಸಂಭ್ರಮಿಸಲಾಯಿತು. ಅಲ್ಲದೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ವಯೋವೃದ್ಧರು, ಅಶಕ್ತರಿಗೆ ಹಣ್ಣು ಹಂಪಲು ವಿತರಿಸಲಾಯಿತು.
    ಭದ್ರಾವತಿ: ಭಾರತೀಯ ಭೂ ಸೇನಾ ದಿನಾಚರಣೆ ಅಂಗವಾಗಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ದೇಶಕ್ಕಾಗಿ ಸೈನಿಕರು ಸಲ್ಲಿಸುತ್ತಿರುವ ಸೇವೆ ಹಾಗು ಅವರ ದೇಶಭಕ್ತಿ ಸ್ಮರಣೆಯೊಂದಿಗೆ ಸಂಭ್ರಮಿಸಲಾಯಿತು. ಅಲ್ಲದೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ವಯೋವೃದ್ಧರು, ಅಶಕ್ತರಿಗೆ ಹಣ್ಣು ಹಂಪಲು ವಿತರಿಸಲಾಯಿತು.
    ನಗರಸಭೆ ವಾಡ್ ನಂ.೨೯ರ ಸಿದ್ದಾಪುರದಲ್ಲಿರುವ ಮಾಜಿ ಸೈನಿಕರ ಸಂಘದ ಕಛೇರಿಯಿಂದ ಆರಂಭಗೊಂಡ ಬೈಕ್ ಜಾಥಾ ಜಯಶ್ರೀ ಮುಖ್ಯ ರಸ್ತೆ ಮೂಲಕ ಜಯಶ್ರೀ ವೃತ್ತ, ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ಡಬ್ಬಲ್ ರಸ್ತೆ ಮೂಲಕ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಿತು.
    ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಉಪಾಧ್ಯಕ್ಷ ಮಹೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಸಹಕಾರ್ಯದರ್ಶಿ ಹರೀಶ್, ಹಿರಿಯ ಮಾಜಿ ಸೈನಿಕರಾದ ಗೋವಿಂದಪ್ಪ,  ವಾಸುದೇವನ್, ಮುದುಗಲ ರಾಮರೆಡ್ಡಿ, ಕೃಷ್ಣೋಜಿರಾವ್, ಸುರೇಶ್, ಅಭಿಲಾಷ್, ಗಿರಿ, ಶ್ರೀಧರ, ಉಮೇಶ್, ರಮೇಶ್, ದಿನೇಶ್, ಶೇಷಾಚಲ, ಉದಯ್,  ಸ್ಥಳೀಯರಾದ ರಾಜಶೇಖರ್, ಈಶ್ವರ್ ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, January 15, 2024

ಪಿಕಪ್ ವಾಹನ ಪಲ್ಟಿ : ೩ ಸಾವು

        ಭದ್ರಾವತಿ : ಅಡಕೆ ಕಾಯಿ ತುಂಬಿದ ಬುಲೇರೊ ಪಿಕಪ್ ವಾಹನ ಪಲ್ಟಿಯಾಗಿ ಬಿದ್ದು ೩ ಜನ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ತಾಲೂಕಿನ ಹೊಳೆಹೊನ್ನೂರು ಪಟ್ಟಣ ಸಮೀಪದ ಚಂದನಕೆರೆಯ ನಿವಾಸಿಗಳಾದ ನಾಗರಾಜ (೪೭) ಮಂಜುನಾಥ (೪೦) ಗೌತಮ್ (೧೮) ಮೃತರು.
    ಶಿಕಾರಿಪುರ ಸಮೀಪದ ಅರಿಶಿನಗೆರೆಯ ಅಡಿಕೆ ತೋಟದಲ್ಲಿ ಅಡಕೆ ಕೊಯ್ಲು ಮುಗಿಸಿಕೊಂಡು ಚಂದನಕೆರೆಗೆ ವಾಪ್ಪಾಸಾಗುವಾಗ ಚಿನ್ನಿಕಟ್ಟೆ ಜೋಗದ ಬಳಿ ಶನಿವಾರ ಸಂಜೆ ಕಾಯಿ ತುಂಬಿದ ಬುಲೇರೊ ವಾಹನಕ್ಕೆ ಆಕಳೊಂದು ಅಡ್ಡ ಬಂದಿದೆ ಆಕಳು ತಪ್ಪಿಸುವ ಭರದಲ್ಲಿ ವಾಹನದ ಟೈಯರ್ ಹೊಡೆದು ಹೋಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲಿ ಪಲ್ಟಿಯಾಗಿದೆ.
    ಅಡಕೆ ಕೆಲಸಕ್ಕೆಂದು ಹೋದ ಮಂಜುನಾಥ್, ನಾಗರಾಜ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ಗೌತಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ೭ ಜನ ಅಡಕೆ ತೋಟಕ್ಕೆ ಕಾಯಿ ತರಲು ಹೋಗಿದ್ದರು. ಬುಲೆರೊದ ಒಳಗೆ ಕುಳಿತಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಮನೆ ಮುಂಭಾಗ ಮೃತ ಸಂಬಂದಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಶವಗಳ ಅಂತಿಮ ದರ್ಶನಕ್ಕೆ ಹೋದ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಂದ ಗ್ರಾಮದಲ್ಲಿ ಜನ ಗಂಜುಳಿಯಿಂದ ತುಂಬಿಹೋಯಿತ್ತು.

ಸಹ್ಯಾದ್ರಿ ಬಡಾವಣೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಸೋಮವಾರ ಅಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಸೋಮವಾರ ಅಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ಬಡಾವಣೆಯಲ್ಲಿ ಇಡೀ ದಿನ ಹಬ್ಬದ ಸಂಭ್ರಮ ಕಂಡು ಬಂದಿದ್ದು, ಬೆಳಿಗ್ಗೆಯಿಂದಲೇ ಹಬ್ಬಕ್ಕಾಗಿ ಸಿದ್ದತೆಗಳು ಆರಂಭಗೊಂಡವು. ಬಡಾವಣೆಯ ಮುಖ್ಯ ಅಡ್ಡ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಸಂಜೆ ಸಂಪ್ರದಾಯದಂತೆ ಹೋರಿಗಳ ಕಿಚ್ಚಾಯಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
    ಬಡಾವಣೆಯಲ್ಲಿರುವ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೊನೆಯಲ್ಲಿ ಬಡಾವಣೆಯ ಹಿರಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಹಿರಿಯ ಅಥ್ಲೆಟಿಕ್ ಕ್ರೀಡಾಪಟು ಬಿ. ನಂಜೇಗೌಡರಿಗೆ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಬಹುಮಾನ

ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ, ಪಾರಿತೋಷಕ, ತೃತೀಯ ಸ್ಥಾನದೊಂದಿಗೆ ೨ ಕಂಚಿನ ಪದಕ

ಬಿ. ನಂಜೇಗೌಡ
    ಭದ್ರಾವತಿ: ನಗರದ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್‍ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.೧೩ ಮತ್ತು ೧೪ರಂದು ಆಯೋಜಿಸಲಾಗಿದ್ದ ೪೨ನೇ ಸ್ಟೇಟ್ ಮಾಸ್ಟರ್‍ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೧೦೦ಮೀ. ಹರ್ಡಲ್ಸ್ ಹಾಗು ೧೫೦೦ ಮೀಟರ್ ಓಟ ಹಾಗು ಉದ್ದ ಜಿಗಿತದಲ್ಲಿ ೨.೫೯ ಮೀಟರ್ ಗುರಿ ಸಾಧಿಸುವ ಮೂಲಕ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ಪಾರಿತೋಷಕ ಬಹುಮಾನ ಪಡೆದುಕೊಂಡಿದ್ದಾರೆ.
    ಇದೆ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಸ್ಟರ್‍ಸ್ ಅಸೋಸಿಯೇಷನ್ ವತಿಯಿಂದ ಜ.೬ ಮತ್ತು ೭ರಂದು ಹೊಸಕೋಟೆ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯ ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೪೦೦ ಮೀಟರ್ ಓಟದಲ್ಲಿ ಹಾಗು ಉದ್ದ ಜಿಗಿತದಲ್ಲಿ ತೃತೀಯ ಸ್ವಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ನಂಜೇಗೌಡರು ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು ೪೫ ಪದಕಗಳನ್ನು ಪಡೆದುಕೊಂಡಿದ್ದಾರೆ. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಇವರ ಕ್ರೀಡಾ ಸಾಧನೆಗೆ ಕ್ರೀಡಾಭಿಮಾನಿಗಳು ಸೇರಿದಂತೆ ನಗರದ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಬೈಕ್ ಜಾಥಾ : ಕಹಿಯಾದ ವರ್ಷದ ಮೊದಲ ಹಬ್ಬ

ಸಿಹಿಯೊಂದಿಗೆ ಸಂಭ್ರಮ ಉಂಟು ಮಾಡುವ ಬದಲು ನೋವಿನ ಕಹಿ ದಿನವಾದ ಸಂಕ್ರಾಂತಿ

ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ: ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.  
    ಕಾರ್ಖಾನೆ ಮುಂಭಾಗದಲ್ಲಿ ಬೆಳಿಗ್ಗೆ ಜಮಾಯಿಸಿದ ಗುತ್ತಿಗೆ ಕಾರ್ಮಿಕರು ಘೋಷಣೆಗಳನ್ನು ಕೂಗಿ ಜಾಥಾ ಆರಂಭಿಸಿದರು. ಮಹಿಳಾ ಕಾರ್ಮಿಕರು ಬಸ್ ಮೂಲಕ ತೆರಳಿದರು. ನಂತರ ಸಂಸದ ನಿವಾಸದ ಮುಂಭಾಗ ಪ್ರತಿಭಟನಾ ಧರಣಿ ನಡೆಸುವ ಮೂಲಕ ತಮ್ಮ ನೋವುಗಳನ್ನು ಸಂಸದರ ಮುಂದೆ ತೋರ್ಪಡಿಸಿಕೊಂಡರು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಹಾಗು ಪದಾಧಿಕಾರಿಗಳು, ನಿವೃತ್ತ ಕಾರ್ಮಿಕ ನರಸಿಂಹಚಾರ್ ಸೇರಿದಂತೆ ಇನ್ನಿತರರು ಜಾಥಾ ನೇತೃತ್ವ ವಹಿಸಿದ್ದರು. ವರ್ಷದ ಮೊದಲ ಹಬ್ಬ ಸಂಕ್ರಾಂತಿ ಗುತ್ತಿಗೆ ಕಾರ್ಮಿಕರ ಬಾಳಿಗೆ ಸಿಹಿಯೊಂದಿಗೆ ಸಂಭ್ರಮ ಉಂಟು ಮಾಡುವ ಬದಲು ನೋವಿನ ಕಹಿ ದಿನವಾಯಿತು.

Sunday, January 14, 2024

ಅಸ್ತಿತ್ವದಲ್ಲಿರುವ ದಲಿತ ಸಂಘಟನೆಗಳು ಒಗ್ಗೂಡಲಿ : ಸುರೇಶ್

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಹೊಸದಾಗಿ ದಲಿತ ಸಂಘಟನೆಗಳು ಆರಂಭಗೊಳ್ಳುವುದಕ್ಕಿಂತ ಇರುವ ಸಂಘಟನೆಗಳು ಒಗ್ಗೂಡಿ ಸಂಘಟಿತರಾಗುವುದು ಮುಖ್ಯ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಕರೆ ನೀಡಿದರು.
    ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕೋರೆಗಾಂವ್ ಎಡ-ಬಲ ತಾರತಮ್ಯವಿಲ್ಲದೆ ಸಮಾನತೆಗಾಗಿ ನಡೆದ ಹೋರಾಟ. ಆದರೆ ಇಂದು ವಿಚಾರಗಳ ಭಿನ್ನಾಭಿಪ್ರಾಯ ಮತ್ತು ರಾಜಕೀಯ ಕಾರಣಗಳಿಗಾಗಿ ದಲಿತ ಸಂಘಟನೆಗಳು ಛಿದ್ರಗೊಂಡು ಬಲ ಕುಗ್ಗುತ್ತಿರುವುದು ದುರಂತ. ಅಂಬೇಡ್ಕರ್ ಹೇಳಿರುವಂತೆ ಯಾವುದೇ ಸಮಾಜ ಮತ್ತು ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
    ಅಂಬೇಡ್ಕರ್ ಯುವಜನ ವೇದಿಕೆ ಸದಸ್ಯ ಪಿ.ಮೂರ್ತಿ ಮಾತನಾಡಿ, ಪ್ರಸ್ತುತ ದಲಿತರಿಗೆ ಶಿಕ್ಷಣದ ಕೊರತೆ, ಉದ್ಯೋಗವಾಕಾಶದ ಕೊರತೆ ಹೆಚ್ಚುತ್ತಿರುವುದರಿಂದ ಹೋರಾಟಗಳು ಅಗತ್ಯ. ಅಂಬೇಡ್ಕರ್ ವಿದ್ಯೆ, ವಿವೇಚನೆ ಮೂಲಕ ಯುದ್ಧಮಾಡಿದ್ದಾರೆ. ಆದ್ದರಿಂದ ಅಂಬೇಡ್ಕರ್ ಮಾದರಿಯಲ್ಲಿ ದಲಿತರು ಸುಶಿಕ್ಷಿತರಾಗಬೇಕು ಎಂದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಖಜಾಂಚಿ ಕಾಣಿಕ್‌ರಾಜ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿಶ್ವನಾಥ್, ಜಿ. ರಾಜು, ಜಿಂಕ್‌ಲೈನ್ ಮಣಿ, ಡಿ. ರಾಜು, ಎಸ್. ಮಂಜುನಾಥ್, ಈ.ಪಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಬೇಡ್ಕರ್ ಯುವಜನ ವೇದಿಕೆ ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಮತ್ತು ಹರೀಶ್ ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. ಮೆಸ್ಕಾಂ ಜನ ಚೈತನ್ಯ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮತ್ತು ಕಾಗದನಗರ ಯುವ ಶಕ್ತಿ ಯುವಕರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಿತು.