ಭದ್ರಾವತಿ ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಿ.ಎಲ್ ರಂಗಸ್ವಾಮಿ ಸ್ವಾಮಿ, ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಲಯನ್ಸ್ ಒಂದು ಸೇವಾಧಾರಿತ ಸಂಸ್ಥೆ, ತಮ್ಮ ಕಾರ್ಯದ ಒತ್ತಡದ ನಡುವೆಯೂ ಕೂಡ ಸಂಸ್ಥೆಯು ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದ ಜಯಂತಿಯನ್ನು ರಕ್ತದಾನ ಹಾಗೂ ಆರೋಗ್ಯ ಶಿಬಿರ ಮೂಲಕ ನಡೆಸುತ್ತಿರುವುದು ಶ್ಲಾಘನೀಯ ಎಂದು ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಕ್ತದಾನ ಹಾಗು ಆರೋಗ್ಯ ಶಿಬಿರ ಜಾಗತಿಕ ಆದರ್ಶ ರೂಪಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ನಾವು ಸಲ್ಲಿಸುತ್ತಿರುವ ಗೌರವದ ಸಮರ್ಪಣೆಯಾಗಿದೆ ಎಂದು ತಿಳಿಸಲು ಹೆಮ್ಮೆಯಾಗಿದೆ. ಲಯನ್ಸ್ ಕ್ಲಬ್ ಮಾದರಿಯಲ್ಲಿ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಲ್ಲಿ ಭಾರತ ದೇಶ ಆರೋಗ್ಯಪೂರ್ಣರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವೇ ಮಹಾಭಾಗ್ಯ, ರಕ್ತದಾನ ಮಹಾದಾನ ಎಂದು ಲಯನ್ಸ್ ಕ್ಲಬ್ ಸೇವೆಯನ್ನು ಪ್ರಶಂಸಿಸಿದರು.
ಮಾಜಿ ಜಿಲ್ಲಾ ಗವರ್ನರ್ ದಿವಾಕರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಯುವದಿನವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಎಲ್ ರಂಗಸ್ವಾಮಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಮೊಹಮ್ಮದ್ ಇಸ್ಮಾಯಿಲ್ ಶರೀಫ್ ಹಾಗೂ ಭರತ್ ಕ್ಯಾನ್ಸರ್ ತಡೆಗಟ್ಟುವ ಮಾರ್ಗೋಪಾಯಗಳು ಹಾಗೂ ಜೀವನ ಶೈಲಿ ಕುರಿತು ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು.
ರಕ್ತನಿಧಿ ಅಧ್ಯಕ್ಷ ಮೌನೇಶ್, ರವಿಚಂದ್ರ ರಕ್ತದಾನ ಶಿಬಿರ ಹಾಗು ಮೀನಾ ನರ್ಸಿಂಗ್ ಹೋಂ ವೈದ್ಯರಾದ ಡಾ.ವರ್ಷಾ ಹಾಗೂ ಹಿತೇಶ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು.
ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಸ್ವಾಗತಿಸಿ, ಕಾರ್ಯದರ್ಶಿ ಎಂ. ದಿವಾಕರ್ ನಿರೂಪಿಸಿ, ಬಿ.ಎಸ್ ರಾಜೇಶ್ ವಂದಿಸಿದರು. ಶ್ರೀನಿವಾಸ್, ಎಸ್.ಕೆ ಮೋಹನ್, ನಾಗರಾಜ್, ಶ್ರೀನಿವಾಸ್, ಅಶೋಕ್, ರಾಜ್ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment