Saturday, April 12, 2025

ಏ.೨೩ರಂದು ಬೆಂಗಳೂರಿನಲ್ಲಿ `ಜನಕ್ರಾಂತಿ ಸಮಾವೇಶ' : ಡಿಎಸ್‌ಎಸ್ ಆಯೋಜನೆ

ಭದ್ರಾವತಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಜನಕ್ರಾಂತಿ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ: ದೇಶದಲ್ಲಿ ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಪುನಃ ಮನುಧರ್ಮ ಮರುಸ್ಥಾಪಿಸುವ ಹುನ್ನಾರ ನಡೆಸಲಾಗುತ್ತಿದ್ದು, ಇದರ ಕುರಿತು ಜಾಗೃತಿ ಮೂಡಿಸುವ ಹಾಗು ದಲಿತರ ಅಭಿವೃದ್ಧಿಗಾಗಿ ಕೆಲವು ಹಕ್ಕೊತ್ತಾಯ ಮಾಡುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಜನ್ಮದಿನದ ಅಂಗವಾಗಿ ಏ.೨೩ರಂದು `ಜನಕ್ರಾಂತಿ ಸಮಾವೇಶ' ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಮುಖಂಡ ಶಿವಬಸಪ್ಪ ಹೇಳಿದರು. 
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೭೫ ವರ್ಷಗಳಿಂದ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ವಿರೋಧಿಸುತ್ತಿರುವ ಸಂಘ ಪರಿವಾರದವರು ಪ್ರಸ್ತುತ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ಗೌರವಿಸುವ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು. 
    ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜರುಗಿದ ಕುಂಭಮೇಳದಲ್ಲಿ ಮಠಾಧೀಶರು ಎಂದು ಕರೆದುಕೊಂಡ ಗುಂಪು ಧಾರ್ಮಿಕ ಸಭೆ ನಡೆಸಿ ಆ ಮೂಲಕ ಹಿಂದೂ ರಾಷ್ಟ್ರಕ್ಕಾಗಿ ೫೦೧ ಪುಟಗಳ ಸಂವಿಧಾನವನ್ನು ಸಿದ್ದಪಡಿಸಿದೆ. ಅದನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಈ ಸಂವಿಧಾನವನ್ನು ನೋಡಿದರೆ ಮತ್ತೆ ಪುನಃ ವೈದಿಕ ಧರ್ಮ, ಮನು ಧರ್ಮ ಸ್ಥಾಪಿಸುವ ಹುನ್ನಾರದಂತೆ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸುಮಾರು ೨ ವರ್ಷ, ೧೧ ತಿಂಗಳು, ೧೭ ದಿನ ಅವಿರತ ಶ್ರಮದಿಂದ ಬರೆದ ಬಲಿಷ್ಠ ಮತ್ತು ಶ್ರೇಷ್ಠ ಸಂವಿಧಾನ ಇರುವಾಗ ಪ್ರತ್ಯೇಕ ಸಂವಿಧಾನ ರಚಿಸುವುದು, ಅದನ್ನು ಬಿಡುಗಡೆ ಮಾಡುವುದು ದೇಶದ್ರೋಹದ ಕೃತ್ಯ. ಇದಕ್ಕೆ ಕೋಮುವಾದಿ ಪಕ್ಷಗಳ ರಕ್ಷಣೆಯೂ ಇರುವಂತೆ ಕಂಡು ಬರುತ್ತಿದೆ ಎಂದು ದೂರಿದರು. 
    ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಸಚಿವರು ಮತ್ತು ಸಂಘ ಪರಿವಾರದವರು ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗು ಸಂವಿಧಾನ ಗೌರವಿಸುವ ನಾಟಕವಾಡುತ್ತಿದ್ದಾರೆ. ಮತ್ತೊಂದೆಡೆ ಅಂಬೇಡ್ಕರ್‌ರವರ ಸಂವಿಧಾನ ಬದಲಿಸುವ ಹೇಳಿಕೆಗಳು, ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದನ್ನು ವಿರೋಧಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು, ಮಾಗಡಿ ರಸ್ತೆ, ಸುಮನಹಳ್ಳಿಯಲ್ಲಿರುವ ಡಾ. ಬಾಬು ಜಗಜೀವನ್ ರಾಂ ಸಂಶೋಧನಾ ಕೇಂದ್ರದಲ್ಲಿ ಏ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಜನಕ್ರಾಂತಿ ಸಮಾವೇಶ ನಡೆಯಲಿದ್ದು, ಇದಕ್ಕೂ ಮೊದಲು ಬೆಂಗಳೂರು ಚಲೋ ನಡೆಯಲಿದೆ ಎಂದರು.
    ರಾಜ್ಯ ಸಮಿತಿ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್ ಸಮಾವೇಶ ಕುರಿತು ಮಾತನಾಡಿದರು. ಜಿಲ್ಲಾ ಸಂಚಾಲಕ ಏಳುಕೋಟಿ, ತಾಲೂಕು ಸಂಚಾಲಕ ನಾಗರಾಜ್ ಕಾಚಗೊಂಡನಹಳ್ಳಿ, ಮುಖಂಡರಾದ ಶ್ರೀನಿವಾಸ್, ರಾಜಶೇಖರ್, ಬಾಷಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, April 11, 2025

ಪೇಪರ್‌ಟೌನ್ ಹೈ ಸ್ಕೂಲ್ ಮಾನ್ಯತೆ ರದ್ದು, ನೆನಪಿನಲ್ಲಿ ಉಳಿದ ಪ್ರತಿಷ್ಠಿತ ಶಾಲೆ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಹೈ ಸ್ಕೂಲ್.

   ಭದ್ರಾವತಿ: ಒಂದು ಕಾಲದಲ್ಲಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಕಾಗದನಗರ ಪ್ರೌಢಶಾಲೆ(ಪೇಪರ್‌ಟೌನ್ ಹೈ ಸ್ಕೂಲ್) ಮಾನ್ಯತೆ ಹಿಂಪಡೆಯಲಾಗಿದೆ. ಇದರಿಂದಾಗಿ ಪ್ರತಿಷ್ಠಿತ ಶಾಲೆ ಇದೀಗ ಕೇವಲ ನೆನಪಾಗಿ ಉಳಿದುಕೊಂಡಿದೆ. 
     ಸುಮಾರು ೭ ದಶಕಗಳ ಇತಿಹಾಸ ಹೊಂದಿರುವ ಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪರಿಣಿತ ಶಿಕ್ಷಕರ ತಂಡವನ್ನು ಈ ಶಾಲೆ ಹೊಂದಿತ್ತು. 
    ಈ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರು. ಅಲ್ಲದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿದ್ದರು. ನೂರಾರು ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. 
  ಕಾರ್ಖಾನೆ ಅವನತಿಯೊಂದಿಗೆ ಶಾಲೆ ಸಹ ಹಂತ ಹಂತವಾಗಿ ತನ್ನ ವೈಭವ ಕಳೆದುಕೊಳ್ಳುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾ.೧೫ರಂದು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಜ್ಞಾಪನ ಪತ್ರ ಹೊರಡಿಸಿದ್ದು, ಈಗಾಗಲೇ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಸಹ ಹಂತ ಹಂತವಾಗಿ ಪೂರೈಸಲಾಗಿದೆ.  ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.  
 

ಕಲಾವಿದನಿಗೆ ನಾನೆಂಬ ಅಹಂ ಇಲ್ಲದಿದ್ದರೆ ಕಲಾದೇವಿ ಎತ್ತರಕ್ಕೆ ಬೆಳೆಸುತ್ತದೆ: ಗುರುರಾಜ್ ಹೊಸಕೋಟೆ

ಭದ್ರಾವತಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ , ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 

  ಭದ್ರಾವತಿ: ಕಲಾವಿದರಿಗೆ ನಾನೆಂಬ ಅಹಂ ಇರಬಾರದು. ಕಲಾವಿದ ಮೊದಲು ತನ್ನನ್ನು ತಾನು ಕಂಡುಕೊಳ್ಳಬೇಕು. ನಂತರ ಬೇರೆಯವರಂತಾಗಲು ಆಸೆ ಪಡಬೇಕು. ಇಲ್ಲದಿದ್ದಲ್ಲಿ ದುರಂತವಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಿ ಮಾತನಾಡಿದರು. 
   ಇಂದಿನ ಕಲಾವಿದರಿಗೆ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಪುನೀತ್ ರಾಜ್‌ಕುಮಾರ್ ಆಗಬೇಕೆಂಬ ದುರಾಸೆ ಇದ್ದರೆ ಅವರಂತೆ ಅಗಲು ಸಾಧ್ಯವಿಲ್ಲ. ಅವರಂತೆ ತಪಸ್ಸು ಮಾಡಬೇಕು. ಕಲಾವಿದನಿಗೆ ನಾನೆಂಬುದು ಇರಬಾರದು, ಪರರನ್ನು ನೋಡಿ ಅಸೂಯೆ ಪಡಬಾರದು. ಅಹಂ ಇಲ್ಲದಿದ್ದರೆ ಕಲಾದೇವಿ ಉತ್ತಮ ಭವಿಷ್ಯ ತೋರುವ ಹಾದಿ ತೋರುತ್ತದೆ ಎಂದರು. 
 ಬೆಂಗಳೂರಲ್ಲಿ ಇಂತಹ ಸಂಸ್ಥೆಗಳು ಹಣ ಮಾಡಲು ಹುಟ್ಟಿಕೊಂಡಿವೆ. ಅವುಗಳಂತಾಗದೆ ಇಂದು ಹುಟ್ಟಿಕೊಂಡ ಈ ಸಂಸ್ಥೆ ಅಜರಾಮರವಾಗಿ ಉಳಿದು ಕಲಾವಿದರಿಗೆ ನೆರಳಾಗಿ ಕಲಾ ಸೇವೆಗೆ ಮುಡಿಪಾಗಿರಲಿ. ಈ ನಟನಾ ಶಾಲೆ ಕೇವಲ ಹೆಸರಿಗೆ ಮಾತ್ರ ನಟನಾ ಶಾಲೆ ಆಗಿರದೆ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ನಟನೆ, ಸಿನಿಮಾ, ಕಲಾ ಸೇವೆ ಮಾಡುವ ವೇದಿಕೆ ಹತ್ತುವಂತಾಗಲಿ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಲಾವಿದರು ಸದಾಕಾಲ ಸಂಕಷ್ಟದಲ್ಲಿರುತ್ತಾರೆ. ಸ್ವಾಭಿಮಾನಿಗಳಾಗಿ ತಮ್ಮಲ್ಲಿನ ಕಲೆಯನ್ನು ಸಮಾಜಕ್ಕೆ ಉಣಬಡಿಸುವ ಶ್ರಮ ಜೀವಿಗಳು. ಕಲಾವಿದರು ಸಮಸ್ಯೆಗಳನ್ನು ಹೇಳಿಕೊಂಡಾಗ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯ. ನೂತನವಾಗಿ ಆರಂಭಗೊಂಡಿರುವ ಈ ಸಂಸ್ಥೆ ಬೆಳೆಯಲು ಶಾಸಕರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಜೊತೆಗೆ ನಮ್ಮ ಇಡೀ ಕುಟುಂಬ ಸದಾ ಕಾಲ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದರು.
   ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವರ್ಷ ಮಾತನಾಡಿ, ಭೂಮಿಯೇ ಒಂದು ರಂಗ ಮಂದಿರವಾಗಿದೆ. ಅದರಲ್ಲಿ ನಾವೆಲ್ಲಾ ಪಾತ್ರದಾರಿಗಳಾಗಿದ್ದೇವೆ. ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಕಲಾವಿದರಿಗೆ ನೆರಳಾಗಿರಲಿ ಎಂದರು. 
   ಕಲ್ಲಿಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ನೀನಾಸಂ ಕಲಾವಿದ ಗಿರಿಧರ್‌ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರ ಬೀಡಲ್ಲಿ ರಂಗ ಕಲೆಯ ಬೆಳವಣಿಗೆಗಾಗಿ ರಂಗ ಮಂದಿರವಿಲ್ಲವಾಗಿದೆ. ಪ್ರಸ್ತುತ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಕನ್ನಡ ಸಾಹಿತ್ಯ ಭವನದಲ್ಲಿ ರಂಗ ಮಂದಿರವೂ ನಿರ್ಮಾಣವಾಗಲಿ ಎಂದು ಮನವಿ ಮಾಡಿದರು. 
    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಮುಖ್ಯಸ್ಥೆ, ಚಲನಚಿತ್ರ ನಟಿ ಪೂರ್ಣಿಮಾ ಪಾಟೀಲ್, ಭದ್ರಾವತಿ ರಂಗ ಕಲೆಯ ಬೀಡಾಗಿದೆ. ರಂಗಕಲೆ ಉಳಿಸಲು ಹಾಗೂ ಅನ್ನದ ರುಣ ತೀರಿಸಲು ಕಲಾ ಸೇವೆಗಾಗಿ ಇಂತಹ ಸಾಹಸಕ್ಕೆ ಕೈಹಾಕಿದ್ದೇನೆ. ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು. 
   ಕಲಾವಿದ ರವಿಶಂಕರಚಾರ್, ವಿಶ್ವಕರ್ಮ ಸಮಾಜದ ಕಾರ್ಯಾಧ್ಯಕ್ಷ ಡಾ. ಸಿ. ರಾಮಾಚಾರಿ, ಸಂಗೀತ ವಿದ್ವಾಂಸ ಶಿವರಾಜ್, ಸಂಜೀವಿನ ವೃದ್ದಾಶ್ರಮದ ಸವಿತಾ,  ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಭುವನ್ ಪ್ರಾರ್ಥಿಸಿ, ದಿವಾಕರ್ ಸ್ವಾಗತಿಸಿದರು. . ಭವ್ಯ ರಮೇಶ್ ನಿರೂಪಿಸಿ, ಬಿ.ಆರ್ ಹರೀಶ್ ವಂದಿಸಿದರು.
 

Thursday, April 10, 2025

ಏ.೧೧ರಂದು `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ


    ಭದ್ರಾವತಿ: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ.೧೧ರ ಶುಕ್ರವಾರ `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. 
    ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೪ ಗಂಟೆಗೆ ಮೂಲಸ್ಥಾನದಲ್ಲಿ ಅಭಿಷೇಕ ಪ್ರಾರಂಭ, ೫ ಗಂಟೆಗೆ ಮಹಾಮಂಗಳಾರತಿ, ೮ ಗಂಟೆಗೆ ಬೆಳಗಿನ ಸಂಧಿಪೂಜೆ ಹಾಗು ಪುಣ್ಯತೀರ್ಥ ಅಭಿಷೇಕ, ಬೆಳಿಗ್ಗೆ ೬.೩೦ ರಿಂದ ಮಧ್ಯಾಹ್ನ ೧೨ರವರೆಗೆ ಭಕ್ತರು ಹರಕೆ ಹೊತ್ತು ತರುವ ಪುಣ್ಯತೀರ್ಥ ಮತ್ತು ಕಾವಡಿ ಸಮರ್ಪಣೆ ನಂತರ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಸಂಜೆ ೫.೩೦ಕ್ಕೆ ದೀಪಾರಾಧನೆ ಮತ್ತು ರಾತ್ರಿ ೧೦ಕ್ಕೆ ಅರ್ಧಜಾಮ ಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿ ಕೋರಿದೆ. 

ಮನಸೂರೆಗೊಂಡ "ಒಡಲಾಳ" ನಾಟಕ ಪ್ರದರ್ಶನ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕ ಪ್ರದರ್ಶನದ ದೃಶ್ಯ. 
    ಭದ್ರಾವತಿ: ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಆಶ್ರಯದಲ್ಲಿ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ `ಒಡಲಾಳ' ನಾಟಕ ಪ್ರದರ್ಶನ ಮತ್ತು ರಂಗ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ ಎಸ್.ಪಿ ರಾಕೇಶ್ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್, ಹಿರಿಯ ಕಲಾವಿದರಾದ ಕೆ.ಎಸ್ ರವಿಕುಮಾರ್, ವೈ.ಕೆ ಹನುಮಂತಯ್ಯ, ಬಿ. ಪ್ರವೀಣ್‌ಕುಮಾರ್, ದಿವಾಕರ್, ರತ್ನ, ಶಿಕ್ಷಕರ ವರ್ಗದವರು ಹಾಗು ನೂರಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. 
    ಕಾರ್ಯಕ್ರಮದಲ್ಲಿ ನಾಟಕದ ಅಭಿನಯ ಮಾಡಿದ ಇಂದು ಡಿ. ನೀನಾಸಂ ಅವರನ್ನು ಗೌರವಿಸಲಾಯಿತು. ರಂಗ ಭೂಮಿಯ ಕಲೆ ಗೀಳು, ಕಲೆಯ ಉಳಿವು, ಯುವ ಸಮೂಹದ ಪಾತ್ರ, ಜಾನಪದ ಅಳಿವು-ಉಳಿವು ಹಾಗು ನಾಟಕದಲ್ಲಿನ ಕೆಲ ವಿಚಾರಗಳ ಕುರಿತು ಶಿಕ್ಷಣಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಒಡಲಾಳ ನಾಟಕದ ಪ್ರಮುಖ ಸಾಕವ್ವನ ಪಾತ್ರದಾರಿ ರಂಗ ಕಲಾವಿದೆ ಇಂದು ಡಿ. ನೀನಾಸಂ ಮತ್ತು ತಮಟೆ ಜಗದೀಶ್ ಉತ್ತರಿಸಿದರು.


ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕದ ರಂಗ ಕಲಾವಿದೆ ಇಂದು ಡಿ. ನೀನಾಸಂ ಅವರನ್ನು ಆಡಳಿತಾಧಿಕಾರಿ ಡಾ: ಎಸ್.ಪಿ.ರಾಕೇಶ್ ಗೌರವಿಸಿದರು.  
    ನಾಟಕದ ಸಾರಾಂಶ:  
    ದಲಿತ ಕವಿ ದೇವನೂರು ಮಹಾದೇವರವರ ಕಾದಂಬರಿ "ಒಡಲಾಳ" ಆಯ್ದ ಭಾಗದ ನಾಟಕದಲ್ಲಿ, ಊರಿಗೆ ಹೊಸದಾಗಿ ಆಗಮಿಸಿದ ಪೊಲೀಸ್ ಅಧಿಕಾರಿಗೆ ಊರಿನ ಗೌಡನೋರ್ವ ಭಕ್ಷ್ಯ ಭೋಜನ ಮಾಡಿಸಲು ಕೋಳಿವೊಂದನ್ನು ಕದ್ದು ಅಡಿಗೆ ಮಾಡಿಸಿ ತಿನ್ನಿಸುತ್ತಾನೆ. ಕೆಳ ವರ್ಗದ ಬಡವಿ ಸಾಕವ್ವನಿಗೆ ಸೇರಿದ ಆ ಕೋಳಿ ತಿಂದು ತೇಗಿದ ಉಳ್ಳವರ ಮತ್ತು ಅದರಿಂದ ಕೋಳಿಯ ಒಡತಿ ಸಾಕವ್ವನಿಗಾಗುವ ಅನ್ಯಾಯ, ದಮನಿತರ ಶೋಷಿತ ವರ್ಗದ ಬೆಳಕು ಚೆಲ್ಲುವ ಹಾಗೂ ಪೊಲೀಸರ ದರ್ಪ, ಉಳ್ಳವರ ಅಟ್ಟಹಾಸ ಚಿತ್ರಣದ ಆಯ್ದ ಭಾಗದ ತಿರುಳನ್ನು ಬಲು ತೀಕ್ಷವಾಗಿ ತೆರೆದಿಡುವಲ್ಲಿ ಸಾಕವ್ವನ ಪಾತ್ರ ನೋಡುಗರಿಗೆ ಮನಸೂರೆಗೊಂಡಿತು.

ಏ.೧೧ರಂದು ನಟನಾ ಶಾಲೆ, ಫಿಲಂ ಇನ್‌ಸ್ಟಿಟ್ಯೂಟ್ ಉದ್ಘಾಟನೆ


    ಭದ್ರಾವತಿ : ಹಳೇನಗರದ ತಾಲೂಕು ಕಛೇರಿ ಮುಂಭಾಗದ ಎದುರು ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲಂ ಇನ್‌ಸ್ಟಿಟ್ಯೂಟ್ ಏ.೧೧ರಂದು ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಜಾನಪದ ಮತ್ತು ಚಲನಚಿತ್ರ ಕಲಾವಿದ ಗುರುರಾಜ್ ಹೊಸಕೋಟೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ, ನ್ಯೂಟೌನ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ.ಎಫ್ ಕುಟ್ರಿ, ಚಲನಚಿತ್ರ ಸಂಗೀತ ನಿರ್ದೇಶಕ ಲಯ ಕೋಕಿಲ, ಚಲನಚಿತ್ರ ನಟ ಕುಮಾರ್, ಕಂಚಿನಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಕುಮಾರ್ ಉಡುಪ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ದಿವಾಕರ್, ಗಂಗಾವತಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ್ ಎಸ್. ಸವಡಿ, ಬಸವರಾಜ್ ಮೇಟಿ, ಡಾ. ವರ್ಷ, ಬಿ.ಎಚ್. ಗಿರಿಧರ ಮೂರ್ತಿ, ಶಂಕರ್ ಸೂಗತಿ, ಡಾ. ಸಿ. ರಾಮಚಾರಿ, ಬಸವರಾಜ್ ಸೋದರ್, ಚಂದ್ರಶೇಖರ್ ನಾಯ್ಕ್ ಮತ್ತು ರಾಜೇಶ್ ಸಂಗೊಳ್ಳಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಚಲನಚಿತ್ರ ನಟಿ, ಇನ್‌ಸ್ಟಿಟ್ಯೂಟ್ ಮುಖ್ಯಸ್ಥೆ ಪೂರ್ಣಿಮ ಪಾಟೀಲ್ ಕೋರಿದ್ದಾರೆ. 

ಏ.೧೨ರಂದು ಶ್ರೀ ಅಕ್ಕಮಹಾದೇವಿ ಜಯಂತಿ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಬಳಗದಿಂದ ಏ.೧೨ರಂದು ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ ಶ್ರೀ ಅಕ್ಕಮಹಾದೇವಿಯವರ ಜಯಂತ್ಯೋತ್ಸವ ಸಮಾರಂಭ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. 
    ಶಿವಮೊಗ್ಗ ಬಸವಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಡಾ. ಬಸವಮರುಳಸಿದ್ದ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಪಮ ಚನ್ನೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಮುಖರಾದ ಬಾರಂದೂರು ಪ್ರಕಾಶ್ ಅಕ್ಕಮಹಾದೇವಿಯವರ ಜೀವನ ಸಾಧನೆ ಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.