Wednesday, April 16, 2025

ನಾಟಕದ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ : ಡಿ. ಪ್ರಸನ್ನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಕಲ್ಪನೆಗಳನ್ನು ಮನಮುಟ್ಟುವಂತೆ ಮಾಡಬಹುದು. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಡಿ. ಪ್ರಸನ್ನ ಹೇಳಿದರು. 
    ಅವರು ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಶಿಕ್ಷಕರಿಗೆ ಮಾತುಗಾರಿಕೆ, ಸಂವಹನ, ಹಾವಭಾವ, ಅಭಿನಯ ಮುಂತಾದ ಕೌಶಲ್ಯಗಳು ಅತ್ಯವಶ್ಯಕ. ಈ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಪರಿಣಾಕಾರಿ ಬೋಧನೆಯಿಂದ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯ ಎಂದರು. 
    ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್ ಮಾತನಾಡಿ, ಶಿಕ್ಷಕರಿಗೆ ಶಿಸ್ತು ಮುಖ್ಯ. ಕೇವಲ ಅಂಕಗಳಿಕೆಯೇ ಜೀವನದ ಅತಿದೊಡ್ಡ ಸಾಧನೆಯಲ್ಲ. ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಜೀವನದಲ್ಲಿ ಸಫಲರಾಗುವೇ ಪ್ರಮುಖ ಗುರಿಯಾಗಬೇಕು ಎಂದರು. 
    ಇಂದಿನ ಯುವ ಜನತೆ ಮೊಬೈಲ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದು, ಸೃಜನಶೀಲನೆ, ಬುದ್ಧಿವಂತಿಕೆ, ಭಾವನಾತ್ಮಕತೆಯನ್ನು ಕಳೆದುಕೊಂಡು ಕೇವಲ ಯಾಂತ್ರಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಎಷ್ಟು ಅವಶ್ಯಕತೆಯೋ ಅಷ್ಟೇ ಮೊಬೈಲನ್ನು ಬಳಕೆ ಮಾಡಿಕೊಂಡು ಸಾಮಾಜಿಕ ಸಂವಹನ ಹೆಚ್ಚಿಸಿಕೊಂಡು, ಸಮಾಜದಲ್ಲಿ ಉತ್ತಮ ಮೌಲ್ಯಾಧಾರಿತ, ಧೀಮಂತ ನಾಯಕರು, ಆದರ್ಶ ವ್ಯಕ್ತಿಗಳಾದ ಅಂಬೇಡ್ಕರ್, ಬುದ್ಧ, ಬಸವಣ್ಣನವರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಸಂಶೋಧಕ ಎಸ್. ಹನುಮಂತಪ್ಪ ಮಾತನಾಡಿ, ಶಿಕ್ಷಣವೇ ಶಕ್ತಿ, ದೇಶ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ಎಂದರು. 
ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ನಿರ್ದೇಶಕರಾದ ಸಾವಿತ್ರಿ ಗಣೇಶಪ್ಪ, ನೇತ್ರಾವತಿ ಸುಭಾಷ್, ಪವನ್ ಕುಮಾರ್, ಪ್ರಜ್ವಲ್‌ಕುಮಾರ್ ಹಾಗು ಕಾಲೇಜಿನ ಬೋಧಕ ಹಾಗು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಏ.೧೭ರಂದು ವಿದ್ಯುತ್ ವ್ಯತ್ಯಯ



    ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪವಿಭಾಗದ ಘಟಕ ೨/೩/೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೧೭ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟೆವರೆಗೆ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. 
    ಮಾಳೇನಹಳ್ಳಿ, ನೆಲ್ಲಿಸರ, ಬಾಬಳ್ಳಿ, ಗೌಡರಹಳ್ಳಿ, ಲಕ್ಷ್ಮೀಪುರ, ಮಜ್ಜಿಗೇನಹಳ್ಳಿ, ಬೊಮ್ಮೇನಹಳ್ಳಿ, ನಿರ್ಮಲಾಪುರ ಮತ್ತು ಕೆಂಪೇಗೌಡನಗರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ಏ.೩೦ರಂದು ಅದ್ದೂರಿಯಾಗಿ ಬಸವ ಜಯಂತಿ ಆಚರಣೆಗೆ ತೀರ್ಮಾನ

ಬಸವ ಜಯಂತಿ ಆಚರಣೆ ಅಂಗವಾಗಿ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಾಭಾವಿ ಸಭೆ ಏರ್ಪಡಿಸಲಾಗಿತ್ತು. 
    ಭದ್ರಾವತಿ: ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣನವರ ಜಯಂತಿ ಏ.೩೦ರಂದು ಅದ್ದೂರಿಯಾಗಿ ಆಚರಿಸಲು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತೀರ್ಮಾನಿಸಲಾಗಿದೆ. 
    ಬಸವ ಜಯಂತಿ ಆಚರಣೆ ಅಂಗವಾಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮಹಾಪುರುಷರ, ದಾರ್ಶನಿಕರ ಹಾಗು ಆದರ್ಶ ವ್ಯಕ್ತಿಗಳ ಜಯಂತ್ಯೋತ್ಸವದಲ್ಲಿ ಎಲ್ಲಾ ಸಮಾಜ ಬಾಂಧವರು, ಸ್ತ್ರೀ ಶಕ್ತಿ, ಸ್ವಸಹಾಯ ಸಂಘ-ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ನಾಮ ನಿರ್ದೇಶಿತರು ಸೇರಿದಂತೆ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.  
    ನಗರದ ಸೂಕ್ತ ಸ್ಥಳದಲ್ಲಿ ವಿಶ್ವಮಾನವ ಬಸವಣ್ಣನವರ ಪ್ರತಿಮೆ ಸ್ಥಾಪಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು. ಈ ಹಿನ್ನಲೆಯಲ್ಲಿ ಬಸವಣ್ಣನವರು ಕುದುರೆ ಮೇಲೆ ಕುಳಿತಿರುವ ಪುತ್ಥಳಿಯನ್ನು ಸ್ಥಾಪಿಸುವ ಕುರಿತಂತೆ ಚರ್ಚಿಸಲಾಯಿತು. ಅಲ್ಲದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಯಿತು.  
    ಸಭೆಯ ತೀರ್ಮಾನದಂತೆ ಹಾಗು ಸರ್ಕಾರದ ನಿರ್ದೇಶನದಂತೆ ಏ.೩೦ರಂದು ಬಸವ ಜಯಂತಿ ಆಚರಿಸಲು ನಿರ್ಧರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನೇತೃತ್ವದಲ್ಲಿ ಅಂದು ಬೆಳಗ್ಗೆ ೯ ಗಂಟೆಗೆ ನಗರದ ಅಂಡರ್‌ಬ್ರಿಡ್ಜ್, ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ಶ್ರೀ ಬಸವೇಶ್ವರರ ಭಾವಚಿತ್ರದೊಂದಿಗೆ ಕನಕಮಂಟಪ ವೇದಿಕೆವರೆಗೂ ಮೆರವಣಿಗೆ ನಡೆಸುವುದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ  ತಂಡಗಳು ಭಾಗವಹಿಸುವ ಕುರಿತು ಹಾಗು ಬಸವಣ್ಣನವರ ಜೀವನ ಸಾಧನೆ ಕುರಿತು ವಿಶೇಷ  ಉಪನ್ಯಾಸ ಏರ್ಪಡಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 
    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಪರುಸಪ್ಪ ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ್ ಬಿ. ಆನೆಕೊಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೌರಾಯುಕ್ತ  ಪ್ರಕಾಶ್ ಎಂ. ಚನ್ನಪ್ಪನವರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ. ಗಂಗಣ್ಣ, ವೀರಶೈವ  ಸಮಾಜದ ಮುಖಂಡರುಗಳಾದ ಎಚ್. ತೀರ್ಥಯ್ಯ, ಕೆ.ಎಸ್ ವಿಜಯಕುಮಾರ್, ರವಿಕುಮಾರ್, ಸಾಕಮ್ಮ ಮಹೇಶ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 
ಮಾತನಾಡಿದರು. 
    ಸಭೆಯಲ್ಲಿ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಬಿ.ಎನ್ ರಾಜು, ಸಂಜೀವ್ ಕುಮಾರ್, ಟಿ.ಜಿ ಬಸವರಾಜಯ್ಯ,  ಶಾಂತಕುಮಾರ್, ನಟರಾಜ್ ಹೆಬ್ಬಂಡಿ, ಬಸವರಾಜ್, ವಾಗೀಶ್, ಎಚ್. ಮಲ್ಲಿಕಾರ್ಜುನ್, ಜಿ.ಎಂ ಮಲ್ಲಿಕಾರ್ಜುನ್, ಸೂಡ ಸದಸ್ಯ ಎಚ್. ರವಿಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ಚಿರಾಗ್ ಗೌಡ, ಕರ್ನಾಟಕ ರಾಜ್ಯ ಮಾದಿಗ ಸಮಾಜದ ಅಧ್ಯಕ್ಷ ಎಸ್ ಮಂಜುನಾಥ್, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪುಟ್ಟರಾಜು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಉಪ ತಹಸೀಲ್ದಾರ್ ಮಂಜಾನಾಯ್ಕ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Tuesday, April 15, 2025

ಬೆಂಕಿಗಾಹುತಿಯಾದ ಎರಡು ಮನೆಗಳ ಪುನರ್ ನಿರ್ಮಾಣಕ್ಕೆ ಸಹಾಯ ಧನ ವಿತರಣೆ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮಪಂಚಾಯಿತಿ ಕೆಂಪೇಗೌಡ ಗ್ರಾಮದಲ್ಲಿ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಯಾಗಿದ್ದ ೨ ವಾಸ್ತವ್ಯದ ಮನೆಗಳ ಪುನರ್ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು.  
    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮಪಂಚಾಯಿತಿ ಕೆಂಪೇಗೌಡ ಗ್ರಾಮದಲ್ಲಿ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಯಾಗಿದ್ದ ೨ ವಾಸ್ತವ್ಯದ ಮನೆಗಳ ಪುನರ್ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು.  
    ಗ್ರಾಮದ ನಿವಾಸಿಗಳಾದ ನೇತ್ರಾವತಿ, ಹಾಗೂ ಅಂಜುವಮ್ಮ ಎಂಬುವರ ವಾಸ್ತವ್ಯದ ಮನೆಗಳು ಇತ್ತೀಚಿಗೆ ವಿದ್ಯುತ್ ಅವಘಡದಿಂದ ಬೆಂಕಿಗಾಹುತಿಯಾಗಿ ಸಂಪೂರ್ಣ ನಷ್ಟ ಸಂಭವಿಸಿತ್ತು. ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎರಡು ಕುಟುಂಬಗಳಿಗೂ ತಲಾ ೧೫ ಸಾವಿರ ರು. ಒಟ್ಟು ೩೦ ಸಾವಿರ ರು. ಸಹಾಯಧನ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ್ದಾರೆ. 
    ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ನಾಯ್ಕ್, ಪಂಚಾಯತಿ ಸದಸ್ಯ ಯೋಗೀಶ್, ಸೇವಾಪ್ರತಿನಿಧಿ ದುರ್ಗಮ್ಮ ಸೇರಿದಂತೆ ಇನ್ನಿತರರು ಸಹಾಯಧನದ ಚೆಕ್ ಫಲನುಭವಿಗಳಿಗೆ ವಿತರಿಸಿದರು. 

ಏ.೨೦ರಂದು ವಾರ್ಷಿಕ ಪೂಜಾ ಮಹೋತ್ಸವ

    ಭದ್ರಾವತಿ : ನಗರದ ಹೊಸಬುಳ್ಳಾಪುರ, ಬೈಪಾಸ್ ರಸ್ತೆ ಸಮೀಪದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಏ.೨೦ರ ಭಾನುವಾರ ನಡೆಯಲಿದೆ. 
    ಬೆಳಿಗ್ಗೆ ೬.೩೦ಕ್ಕೆ ಗಂಗಾ ಪೂಜೆ, ಬೆಳಿಗ್ಗೆ ೯ ಗಂಟೆಗೆ ವಿಘ್ನೇಶ್ವರ ಪೂಜೆ, ಮಹಾಸಂಕಲ್ಪ, ಅನುಜ್ಞ ವಾಚನ, ಪುಣ್ಯಾಃ ವಾಚನ, ಕಳಸ ಪೂಜೆ, ಶ್ರೀ ಮುನೇಶ್ವರ ಸ್ವಾಮಿಗೆ ಮೂಲ ಮಂತ್ರ ಹೋಮ ಮತ್ತು ಮಹಾ ಪೂರ್ಣಾಹುತಿ, ಮಹಾ ಅಭಿಷೇಕ, ಕುಂಭಾಭಿಷೇಕ, ಅಲಂಕಾರದೊಂದಿಗೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ಹಾಗು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. 
    ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ಕೋರಿದೆ. ಹೆಚ್ಚಿನ ಮಾಹಿತಿಗೆ ಮೊ: ೯೬೧೧೪೭೪೯೧೬, ೯೯೮೦೮೭೪೧೭೪ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅಂಬೇಡ್ಕರ್ : ಎನ್. ರವಿಕುಮಾರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಆಯೋಜಿಸಲಾಗಿದ್ದ.   ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ನೀ ಜನ್ಮದಿನಾಚರಣೆ ಪತ್ರಕರ್ತ, ಲೇಖಕ ಟೆಲೆಕ್ಸ್ ಎನ್. ರವಿಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ದೇಶದ ಜಾತಿವ್ಯವಸ್ಥೆಯಿಂದ ಘೋರ ಅವಮಾನ, ದೌರ್ಜನ್ಯಗಳನ್ನು ಅನುಭವಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾವು ಬರೆದ ಸಂವಿಧಾನದಲ್ಲಿ ಯಾವ ಜಾತಿಗಳ ವಿರುದ್ದವೂ  ಕೇಡು, ಸೇಡು ಬಯಸದೆ  ಎಲ್ಲಾ ಜಾತಿ, ಧರ್ಮ ವರ್ಗಗಳಿಗೂ ಸಮಾನ ನ್ಯಾಯವನ್ನು ಕಲ್ಪಿಸುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ ಎಂದು ಪತ್ರಕರ್ತ, ಲೇಖಕ ಟೆಲೆಕ್ಸ್ ಎನ್. ರವಿಕುಮಾರ್ ಹೇಳಿದರು.  
    ಅವರು ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಆಯೋಜಿಸಲಾಗಿದ್ದ.   ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ನೀ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 
    ಅವಮಾನ, ನೋವು, ದೌರ್ಜನ್ಯಗಳನ್ನು ನುಂಗಿ ಈ ದೇಶದ ದಲಿತರ, ದಮನಿತರ ಪಾಲಿಗೆ ಬದುಕನ್ನು ರೂಪಿಸಿಕೊಟ್ಟವರು. ಜಾತೀಯತೆಯಿಂದ ಕುರುಡಾಗಿದ್ದ ಭಾರತಕ್ಕೆ ಅರಿವಿನ ಕಣ್ಣುಗಳನ್ನು ಕೊಟ್ಟ ನಿಜ ನಾಯಕ, ತಾಯಿಯಂತೆ ಎಲ್ಲಾ ನೋವುಗಳನ್ನು ಒಡಳಿನಲ್ಲಿಟ್ಟುಕೊಂಡು ಸರ್ವ ಸಮಾನತೆಯ ದೇಶ ರೂಪಿಸಿದ ಮಹಾನ್ ನಾಯಕ ಅಂಬೇಡ್ಕರ್. ಭಾರತದ ಮಹಾತಾಯಿಯೇ ಅಂಬೇಡ್ಕರ್ ಆಗಿದ್ದಾರೆ ಎಂದರು. 
    ಅಂಬೇಡ್ಕರ್ ಅವರ ಅಸ್ತಿತ್ವ, ಅಸ್ಮಿತೆಯನ್ನು ಹತ್ತಿಕ್ಕಲು ಹಿಂದಿನಿಂದಲೂ ಕುತಂತ್ರಗಳು ನಡೆಯುತ್ತಲೇ ಬಂದಿವೆ. ಆದರೆ ಹತ್ತಿಕ್ಕಿದಷ್ಟು ಅಂಬೇಡ್ಕರ್ ಎದ್ದು  ನಿಲ್ಲುತ್ತಿದ್ದಾರೆ. ಅವರನ್ನು ನಿರಾಕರಿಸಿದಷ್ಟು ಆವರಿಸಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನವನ್ನೇ ಬರೆದಿಲ್ಲ, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಶೋಕಿಯಾಗಿದೆ ಎಂದವರೇ ಇಂದು ಅಂಬೇಡ್ಕರ್ ಅವರನ್ನು ಎತ್ತಿಕೊಂಡು ಮೆರವಣಿಗೆ ಹೊರಟಿದ್ದಾರೆ. ಇದು ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕಿರುವ ತಾಕತ್ತು.  ಅಂಬೇಡ್ಕರ್  ಎಂದಿಗೂ ಅಳಿಸಲಾಗದ ಮಹಾ ಪ್ರಭೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
    ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲವಾಗಿ  ಶಿಕ್ಷಣ, ಉದ್ಯೋಗ, ನ್ಯಾಯ, ಹಕ್ಕುಗಳನ್ನು ಪಡೆದ ಜನಸಮುದಾಯಗಳೇ ಇಂದು ಅಂಬೇಡ್ಕರ್ ಅವರ ಸಿದ್ಧಾಂತ  ವಿರೋಧಿಗಳ, ಜಾತಿವಾದಿಗಳ, ಕೋಮುವಾದಿಗಳ ಜೊತೆ ನಿಲ್ಲುತ್ತಿವೆ. ಮೀಸಲಾತಿ ಫಲಾನುಭವಿಗಳೇ ಮೀಸಲಾತಿ ವಿರೋಧಿ ಶಕ್ತಿಗಳ ಜೊತೆ  ಕೈ ಜೋಡಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹ  ಎಂದರು.   
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ,  ಸಂಶೋಧಕ ಹನುಮಂತಪ್ಪ, ಡಾ.ಬಿಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ನಿದೇಶಕಿಯರಾದ ನೇತ್ರಾವತಿ ಸುಭಾಷ್, ಸಾವಿತ್ರಿಗಣೇಶಪ್ಪ,  ಪತ್ರಕರ್ತ ಶಿವಶಂಕರ್ ಉಪಸ್ಥಿತರಿದ್ದರು. 
    ಸಮಾರಂಭದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ  ಅಂಬೇಡ್ಕರ್ ಜೀವನ ಚರಿತ್ರೆಯ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಅಂಬೇಢ್ಕರ್ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಗುಂಡು

ಆರೋಪಿ ನಸ್ರಲ್ಲಾ ಕಾಲಿಗೆ ಗುಂಡು ಹಾರಿಸಿದ ಉಪನಿರೀಕ್ಷಕ ಚಂದ್ರಶೇಖರ ನಾಯ್ಕ 

 ಗಾಂಜಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಸ್ರುಲ್ಲಾ 
    ಭದ್ರಾವತಿ: ಇತ್ತೀಚೆಗೆ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಹಳೇನಗರ ಠಾಣೆ ಪೊಲೀಸರು ಈ ಬಾರಿ ಗಾಂಜಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಸ್ರುಲ್ಲಾ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. 
    ಮಂಗಳವಾರ ಬೆಳಗಿನ ಜಾವ ಈತನನ್ನು ಬಂಧಿಸಲು ತೆರಳಿದ್ದಾಗ ಪೊಲೀಸ್ ಸಿಬ್ಬಂದಿ ಮೌನೇಶ್ ಎಂಬುವರ ಮೇಲೆ ತೀವ್ರ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಠಾಣೆಯ ಉಪನಿರೀಕ್ಷಕ ಚಂದ್ರಶೇಖರನಾಯ್ಕರವರು ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ನಸ್ರುಲ್ಲಾನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈತನ ವಿರುದ್ಧ ಹಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. 
    ಈ ಹಿಂದೆ ಇದೆ ರೀತಿಯ ಪ್ರಕರಣಗಳಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ೨ ಬಾರಿ ಹಾಗು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣ ಕುಮಾರ್ ಮಾನೆ ಸಹ ತಪ್ಪಿಸಿಕೊಳ್ಳಲು ಯತ್ನಿಸಿದವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.