Saturday, September 30, 2023

ಭೀಕರ ಅಪಘಾತ : ಸ್ಥಳದಲ್ಲಿ ಮೂವರ ದುರ್ಮರಣ.

    ಭದ್ರಾವತಿ: ತಾಲೂಕಿನ ಕಲ್ಲಿಹಾಳ್-ಅರಹತೊಳಲು ನಡುವೆ  ಎರಡು ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿರುವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಒಂದು ಬೈಕ್‌‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ದೇಹಗಳು ಲಾರಿಯ ಚಕ್ರದ ಕೆಳಗೆ ಸಿಲುಕಿ ಛಿದ್ರವಾಗಿವೆ. ಮರಣ ಹೊಂದಿದ ಯುವಕರು ಯಾವ ಗ್ರಾಮದವರು ಎಂಬುದು ಇನ್ನೂ ತಿಳಿದು ಬಂದಿಲ್ಲ. 

ಅ.1ರಂದು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು

    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಹಿರಿಯ ನಾಗರಿಕರಿಗೆ ಅ.1ರಂದು ಬೆಳಿಗ್ಗೆ 10.30ಕ್ಕೆ ನಗರಸಭೆ ವಾರ್ಡ್ ನಂ.4ರ ಹಳೇನಗರ ಕಾಳಮ್ಮ ದೇವಸ್ಥಾನ ರಸ್ತೆಯಲ್ಲಿರುವ ಸಂಘದ ನೂತನ ಕಟ್ಟಡದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

    ದೇಶಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆ ಮತ್ತು ನಗೆ ಚಟಾಕಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದಶರ್ಶ ಎಚ್.ಎನ್ ಮಹಾರುದ್ರ ಕೋರಿದ್ದಾರೆ.

ಅಪಘಾತ : ಎಮ್ಮೆ ಸಾವು

    ಭದ್ರಾವತಿ: ರಸ್ತೆ ಅಪಘಾತದಲ್ಲಿ ಎಮ್ಮೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಗಂಗೂರು ಗ್ರಾಮದ ಉದ್ದಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಡೆದಿದೆ.

    ಗಂಗೂರು ಗ್ರಾಮದ ಬಾಬು ಎಂಬುವರಿಗೆ ಸೇರಿದ ಸುಮಾರು 40 ಸಾವಿರ ರು. ಮೌಲ್ಯದ 4 ವರ್ಷದ ಎಮ್ಮೆ ಮೃತಪಟ್ಟಿದ್ದು, ಬಾಬುರವರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದಾಗ ಬುಲೋರೋ ಪಿಕಪ್ ವಾಹನದ ಚಾಲಕ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿಯೇ ಒಂದು ಎಮ್ಮೆ ಮೃತಪಟ್ಟಿದ್ದು, ಉಳಿದ ಎಮ್ಮೆಗಳಿಗೆ ಗಾಯವಾಗಿರುತ್ತದೆ.

    ಈ ಸಂಬಂಧ ಬಾಬುರವರು ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅ.1ರಂದು "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ"

    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಅ.1ರಂದು ಬೆಳಿಗ್ಗೆ 9.30ರಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

    ತ್ಯಾಜ್ಯ ಮುಕ್ತ ಭಾರತ ಪರಿಕಲ್ಪನೆಯಡಿ "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ" ತರಂಗ ಕಿವುಡು ಮಕ್ಕಳ ಶಾಲೆ ಮತ್ತು ಸಿದ್ದಾರ್ಥ ಅಂಧರ ವಿಕಾಸ ಕೇಂದ್ರದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ.

ಪೌರಕಾರ್ಮಿಕರು ದೇವರ ಸ್ವರೂಪ : ಬಿ.ಕೆ ಸಂಗಮೇಶ್ವರ

 

ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.

ಭದ್ರಾವತಿ: ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರನ್ನು ದೇವರ ಸ್ವರೂಪ ಎಂದು ಭಾವಿಸಿದರೇ ತಪ್ಪಾಗಲಾರದು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ ಹೇಳಿದರು.
    ಅವರು ಶನಿವಾರ ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
        ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅವಿಸ್ಮರಣೀಯವಾಗಿದೆ. ಅವರ ಬದುಕು ಸಹ ಉತ್ತಮಗೊಳ್ಳಬೇಕು. ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರ ಪೌರಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಪ್ರಾಮಾಣಿಕವಾಗಿ ಅವರಿಗೆ ತಲುಪುವಂತಾಗಬೇಕೆಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಪೌರಕಾರ್ಮಿಕರು ಸಹ ಸಮಾಜದಲ್ಲಿ ನಮ್ಮೆಲ್ಲರಂತೆ ಬದುಕುತ್ತಿದ್ದಾರೆ. ಅವರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ, ಗೌರವವಿದೆ ಇದನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ.
    ಪೌರಕಾರ್ಮಿಕರು ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಪೌರಕಾರ್ಮಿಕರ ಕೆಲಸ ಪೌರಕಾರ್ಮಿಕರೇ ನಿರ್ವಹಿಸಬೇಕಾಗಿದೆ. ಇದನ್ನು ಬೇರೆಯವರಿಂದ ಮಾಡಲು ಸಾಧ್ಯವಿಲ್ಲ. ಅವರಿಂದಾಗಿ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ, ಸ್ವಚ್ಛವಾಗಿ, ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ. ಅವರಿಗೂ ಸಮಾಜದಲ್ಲಿ ಎಲ್ಲರೂ ಗೌರವ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಹಿರಿಯ ಕಾರ್ಮಿಕರಾದ ಸರೋಜಮ್ಮ ಪೌರ ಸೇವಾ ನೌಕರರ ಸೇವಾ ಸಂಘದ ಉಪಾಧ್ಯಕ್ಷ ಅಬ್ಬಯ್ಯ ಹಾಗೂ ನಗರಸಭೆ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ರಂಗಕರ್ಮಿ ಕಿರುತೆರೆ ನಟ ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಪೌರಕಾರ್ಮಿಕರ ಕುರಿತ ನಾಟಕ ಪ್ರದರ್ಶನ ನಡೆಯಿತು.
20 ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ ಆದೇಶ ಪ್ರತಿಗಳನ್ನು ವಿತರಿಸಿದರು.
    ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು ಕಂದಾಯ ಅಧಿಕಾರಿ ರಾಜಕುಮಾರ್ ನಿರೂಪಿಸಿದರು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರಿಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಶಾಸಕ ಬಿ.ಕೆ ಸಂಗಮೇಶ್ವರ ಪುಷ್ಪಾವೃಷ್ಟಿಯೊಂದಿಗೆ ಪೌರಕಾರ್ಮಿಕರನ್ನು ಗೌರವಿಸಿದರು.
    ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಕಾಯಂ ನೇಮಕಾತಿಗೊಂಡ ಪೌರಕಾರ್ಮಿಕರಿಗೆ ಆದೇಶ ಪ್ರತಿಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.

Friday, September 29, 2023

ಕೂಡ್ಲಿಗೆರೆಯಲ್ಲಿ "ನನ್ನ ಮಣ್ಣು ನನ್ನ ದೇಶ" ಅಭಿಯಾನಕ್ಕೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ "ನನ್ನ ಮಣ್ಣು ನನ್ನ ದೇಶ" ಅಭಿಯಾನ ಕಾರ್ಯಕ್ರಮ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ "ನನ್ನ ಮಣ್ಣು ನನ್ನ ದೇಶ" ಅಭಿಯಾನ ಕಾರ್ಯಕ್ರಮ ತಾಲೂಕು ಬಿಜೆಪಿ ಮಂಡಲ ವತಿಯಿಂದ ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ದೇಶಾದ್ಯಂತ ಸಂಚಲನ ಮೂಡಿಸಿರುವ ಅಭಿಯಾನಕ್ಕೆ ಕ್ಷೇತ್ರದಲ್ಲೂ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದ್ದು, ಪ್ರಧಾನಿಯವರ ಈ ಮಹತ್ವಕಾಂಕ್ಷೆಯ ವಿಶೇಷ ಅಭಿಯಾನ ಹುತಾತ್ಮ ವೀರಯೋಧರು ಹಾಗೂ ವೀರಾಂಗನೆಯರಿಗೆ ಗೌರವಿಸಿ ಸನ್ಮಾನ ಸಲ್ಲಿಸಲಿರುವ "ಏಕ್ ಭಾರತ್ ಶ್ರೇಷ್ಠ ಭಾರತ್" ಪ್ರತೀಕವಾಗಿದೆ ಎಂದರು.

    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮುಖಂಡರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಮೂರ್ತಿ ಹಾಗು ಪಕ್ಷದ ಮುಖಂಡರು, ಕಾರ್ಯಕರ್ತೆಯರು ಉಪಸ್ಥಿತರಿದ್ದರು.


ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತನೆ : ಪ್ರಕರಣ ದಾಖಲು


    ಭದ್ರಾವತಿ: ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.

    ಹಳೇನಗರ ಪೊಲೀಸ್ ಠಾಣಾಧಿಕಾರಿ-1 ಶರಣಪ್ಪ ಅವರು ಸಿಬ್ಬಂದಿ ಮೌನೇಶ್ ಜೊತೆ ಗಸ್ತು ಕರ್ತವ್ಯದಲ್ಲಿರುವಾಗ ರೈಲ್ವೆ ನಿಲ್ದಾಣದ ಕಡೆ ಹೋಗುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೋರ್ವ ನಿಂತುಕೊಂಡು ಅನುಮಾನಾಸ್ಪದವಾಗಿ ಹಾಗು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿಯೇ ಬಿಟ್ಟರೆ ಸಾರ್ವಜನಿಕ ಶಾಂತಿಗೆ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂದು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೆ.30 ಪೌರಕಾರ್ಮಿಕರಿಗೆ ರಜೆ

ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ಪೌರಕಾರ್ಮಿಕರ ದಿನಾಚರಣೆ ಸೆ.30ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪೌರಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ.

    ಪೌರಕಾರ್ಮಿಕರ ದಿನಾಚರಣೆಗೆ ಸರ್ಕಾರ ರಜೆ ಘೋಷಿಸಿದ್ದು, ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.

ಬಿಸಿ ಮುಟ್ಟದ ಕರ್ನಾಟಕ ಬಂದ್ : ವಕೀಲರ ಸಂಘ ಬೆಂಬಲ

ಕರ್ನಾಟಕ ಬಂದ್ ಬೆಂಬಲಿಸಿ ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು.

    ಭದ್ರಾವತಿ : ರಾಜ್ಯಾದ್ಯಂತ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಗರದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

    ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆಯಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದವು. ಉಳಿದಂತೆ ಪೆಟ್ರೋಲ್ ಬಂಕ್, ಹೋಟೆಲ್, ಮಾಲ್, ಕ್ಲಿನಿಕ್, ಬ್ಯಾಂಕ್, ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಉಳಿದಂತೆ ವಾಹನಗಳ ಸಂಚಾರ ಎಂದಿನಂತೆ ಕಂಡು ಬಂದಿತು.

    ವಕೀಲರಿಂದ ರಸ್ತೆ ತಡೆ :

    ಕರ್ನಾಟಕ ಬಂದ್ ಬೆಂಬಲಿಸಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ವಕೀಲರು ಕಲಾಪಗಳಿಂದ ಹೊರಗುಳಿದು ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಕಾವೇರಿ ನೀರು ತಮಿಳುನಾಡಿಗೆ ಬಿಡದೆ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.

    ಮಳೆ ಇಲ್ಲದೆ ಇದೀಗ ರಾಜ್ಯದೆಲ್ಲೆಡೆ ಬರಗಾಲ ಎದುರಾಗಿದ್ದು, ರಾಜ್ಯದಲ್ಲಿ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ರಾಜ್ಯದ ಜನರ ಹಿತಕಾಪಾಡಬೇಕೆಂದರು.

ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ನಗರದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


ಸೆ.30ರಂದು ಪೌರಕಾರ್ಮಿಕರ ದಿನಾಚರಣೆ

    ಭದ್ರಾವತಿ:ನಗರಸಭೆ ವತಿಯಿಂದ ಈ ಬಾರಿ ಪೌರಕಾರ್ಮಿಕರ ದಿನಾಚರಣೆ ಸೆ.30ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದೆ.

    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರೆಗೂ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರುವವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಕೋರಿದ್ದಾರೆ.

Thursday, September 28, 2023

ಟಾರ್ಪಲ್ ನಲ್ಲಿ ಮುಚ್ಚಿಟ್ಟಿದ್ದ ಅಡಕೆ ಕಳವು

    ಭದ್ರಾವತಿ: ಬೇಯಿಸಿ ಒಣಗಲು ಟಾರ್ಪಲ್‌ ನಲ್ಲಿ ಹರಡಿ ಮುಚ್ಚಿಟ್ಟಿದ್ದ ಅಡಕೆಯನ್ನು ಕಳವು ಮಾಡಿರುವ ಘಟನೆ ಹಳೇ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ಸುರೇಶ್ ಎಂಬುವರು ಸುಮಾರು 5 ಕ್ವಿಂಟಲ್ ಅಡಕೆ ರಾಶಿಯನ್ನು ರಾತ್ರಿ ಟಾರ್ಪಲ್ ನಲ್ಲಿ ಹರಡಿ ಮುಚ್ಚಿಟ್ಟಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಯಾರೋ ಟಾರ್ಪಲ್ ಸರಿಸಿ ಅಡಕೆ ರಾಶಿಯಲ್ಲಿ ಸುಮಾರು 12 ಸಾವಿರ ರು. ಮೌಲ್ಯದ 25 ಕೆ.ಜಿಯಷ್ಟು ಅಡಕೆಯನ್ನು ತುಂಬಿಕೊಂಡು ಹೋಗಿರುತ್ತಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರವಾದಿ ಮಹಮದ್ ಫೈಗಂಬರ್ ಹುಟ್ಟುಹಬ್ಬ : ರಕ್ತದಾನ ಶಿಬಿರ

ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ಭದ್ರಾವತಿ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಶಿವಮೊಗ್ಗ ಮಿಡ್ ಟೌನ್, ರೋಟರಿ ಚಾರಿಟಿ ಫೌಂಡೇಷನ್, ರೋಟರಿ ರಕ್ತ ಕೇಂದ್ರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ 36 ಮಂದಿ ರಕ್ತದಾನ ಮಾಡಿದರು.

    ಇತ್ತೀಚೆಗೆ ಟ್ರಸ್ಟ್ ಉದ್ಘಾಟನೆಗೊಂಡಿದ್ದು, ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ನ.4, 5ರಂದು ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ : ದೊಡ್ಡಣ್ಣ

ಭದ್ರಾವತಿಯಲ್ಲಿ ನ.4, 5ರಂದು ಆಯೋಜಿಸಲಾಗಿರುವ ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭವಿಷ್ಯದ ಪೀಳಿಗೆಗೆ ಉಳಿಸಿಕೊಂಡಬೇಕೆಂಬ ಏಕೈಕ ಉದ್ದೇಶದೊಂದಿಗೆ ಶತಮಾನೋತ್ಸವ ಸಂಭ್ರಮ ನ.4 ಮತ್ತು 5 ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾರ್ಖಾನೆಯ ನಿವೃತ್ತ ಉದ್ಯೋಗಿ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಹೇಳಿದರು.

    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಬಾಬಬುಡನ್‌ಗಿರಿ ಹಾಗೂ ಕೆಮ್ಮಣ್ಣು ಗುಂಡಿಗಳಲ್ಲಿ ಇದ್ದ ಅಪಾರ ಖನಿಜ ನಿಕ್ಷೇಪಗಳನ್ನು ಬಳಸಿಕೊಳ್ಳುವುದು ಮತ್ತು ಕಬ್ಬಿಣ, ಉಕ್ಕು ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಕ್ಸ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಗೆ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು ಎಂದರು.

    1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಅಮಿಟೆಡ್ (VISL) ಎಂಬುದಾಗಿ ಮರುನಾಮಕರಣವಾಯಿತು. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು 1989ರಲ್ಲಿ ಕಾರ್ಖಾನೆಯನ್ನು ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಕ್ಷೇತ್ರದ ಜೀವನಾಡಿಯಾಗಿ ಉಳಿದು ಲಕ್ಷಾಂತರ

ಜನರಿಗೆ ಬದುಕು ನಿರ್ಮಿಸಿಕೊಟ್ಟ ನಾಡಿನ ಹೆಮ್ಮೆಯ ಈ ಕಾರ್ಖಾನೆ ಇದೀಗ 100 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದರು.

    ಈ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ವರ್ಗ, ಕಾರ್ಮಿಕ ವರ್ಗ - ಗುತ್ತಿಗೆದಾರರು ಮತ್ತು ಇವರೆಲ್ಲರ ಕುಟುಂಬಗಳು ಒಂದೆಡೆ ಸೇರಿ ನ. 4 ಮತ್ತು 5 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರು ಸೇರಿದಂತೆ ಪ್ರತಿಯೊಬ್ಬರು ಸಂತೋಷದಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಸಂತ ಶ್ರೇಷ್ಠರ ಸಾನ್ನಿಧ್ಯದಲ್ಲಿ ಮೈಸೂರು ಸಂಸ್ಥಾನದ ಇಂದಿನ ಮಹಾರಾಜರನ್ನು ಗೌರವದಿಂದ ಆಹ್ವಾನಿಸಿ ಅವರ ವಂಶಸ್ಥರ ಕೊಡುಗೆಯನ್ನು ಸ್ಮರಿಸೋಣ ಎಂದರು.

    ದೇಶದ ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತರು ಮತ್ತು ಜಿಲ್ಲೆಯ ಪುರಜನರು ಒಂದೆಡೆ ಆಚರಿಸುವ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಕಲಾವಿದರಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಮಾದರಿಯ ಮೆರವಣಿಗೆ ಹಾಗೂ ಕಾರ್ಖಾನೆಯ ಗತವೈಭವ ಸಾರುವ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇದು ಬಹುವೆಚ್ಚದ ಸಮಾರಂಭವಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಬೆಕೆಂದರು.

    ಪತ್ರಿಕಾಗೋಷ್ಠಿಯಲ್ಲಿ ವಿಐಎಸ್ಎಲ್ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ರೇವಣ್ಣ ಸಿದ್ದಯ್ಯ, ಕಾರ್ಯದರ್ಶಿ ಜಿ. ಅಮೃತ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ರಘುರಾಂ, ಎನ್.ಟಿ ಸತ್ಯನಾರಾಯಣ, ಎಸ್‌. ಅಡವೀಶಯ್ಯ, ಬಿ.ಜಿ ರಾಮಲಿಂಗಯ್ಯ, ಬಿ. ಮಂಜುನಾಥ್, ಎಸ್. ನರಸಿಂಹಚಾರ್, ಜೆ. ಜಗದೀಶ್, ಯು.ಎ ಬಸಂತ್ ಕುಮಾರ್, ಬಿ.ಸಿ ಶೈಲಶ್ರೀ, ಡಿ. ಕುಮಾರ್, ಎಚ್.ಜಿ. ಸುರೇಶ್, ಕುಮಾರಸ್ವಾಮಿ, ಪಿ. ರಾಕೇಶ್, ಡಿ. ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, September 27, 2023

ಜ್ಞಾನದೀಪಿಕಾ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಭದ್ರಾವತಿ ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಭದ್ರಾವತಿ : ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ, ಸಿ. ಅರ್ಪಿತ 800 ಮೀಟರ್ ಓಟ, 1500 ಮೀಟರ್ ಓಟದಲ್ಲಿ ಪ್ರಥಮ ಹಾಗು ಸಿ. ಕಾವ್ಯಶ್ರೀ, ಟಿ.ಡಿ ದಿಶಾ, ಸಿ. ದುರ್ಗಾಶ್ರೀ ಮತ್ತು ಸಿ. ಅರ್ಪಿತ ಪ್ರಥಮ ಸ್ಥಾನ ಮತ್ತು 100 ಮೀಟರ್ ಓಟದಲ್ಲಿ ಸಿ. ಕಾವ್ಯಶ್ರೀ ದ್ವಿತೀಯ ಹಾಗು 800 ಮೀಟರ್ ಓಟದಲ್ಲಿ ಟಿ.ಡಿ ದಿಶಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

    ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿಗಳು ಹಾಗು ಮುಖ್ಯೋಪಾಧ್ಯಾಯರು, ಶಿಕ್ಷಕರು, ತರಬೇತಿದಾರರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ 13,52,378 ರು. ನಿವ್ವಳ ಲಾಭ

ಭದ್ರಾವತಿ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

    ಭದ್ರಾವತಿ : ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ ಈ ಬಾರಿ 13,52,378 ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಹೇಳಿದರು.

    ಅವರು ನಗರದ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ವಿನಂತಿಸುವ ಮೂಲಕ ಸದಸ್ಯರ ಸಹಕಾರವೇ ಸಂಘದ ಅಭಿವೃದ್ಧಿಗೆ ಶ್ರೀ ರಕ್ಷೆ ಎಂದರು.

    ಸಭೆಯಲ್ಲಿ ಷೇರುದಾರರಿಗೆ ಶೇ.10ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಭೆಯಲ್ಲಿ ಉಪಾಧ್ಯಕ್ಷ ಜಿ. ಶಂಕರ್, ನಿರ್ದೇಶಕರಾದ ತಮ್ಮೇಗೌಡ, ದೇವರಾಜ್, ಪರಮಶಿವ, ಬಿ.ಜೆ ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಅನನ್ಯ ಪ್ರಾರ್ಥಿಸಿ, ನಿರ್ದೇಶಕರಾದ ಗೊಂದಿ ಜಯರಾಮ್ ಸ್ವಾಗತಿಸಿದರು. ಸಂಪತ್ ಕುಮಾರ್ ನಿರೂಪಿಸಿ, ಕೆಂಪಯ್ಯ ವಂದಿಸಿದರು.

ಸೆ.29ರಿಂದ 2 ದಿನ ತಾಲೂಕು ಮಟ್ಟದ ಕ್ರೀಡಾಕೂಟ

    ಭದ್ರಾವತಿ, ಸೆ. 27: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಗಾಂಧಿನಗರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಸೆ.29 ಮತ್ತು 30 ಎರಡು ದಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ನಡೆಯಲಿದೆ.

    ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. .

Tuesday, September 26, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಬೋನಿಗೆ ಬಿದ್ದ ಚಿರತೆ ಮರಿ






ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಚಿರತೆ ಮರಿಯೊಂದು ಸಿಕ್ಕಿಬಿದ್ದಿರುವ ಘಟನೆ  ಬುಧವಾರ ನಡೆದಿದೆ.

ಕಾರ್ಖಾನೆಯಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಚಿರತೆ ಕಾಣಿಸಿಕೊಂಡಿರುವುದಾಗಿ  ಆಡಳಿತ ಮಂಡಳಿ ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿತ್ತು. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಖಾನೆಗೆ  ಭೇಟಿ ನೀಡಿ ಚಿರತೆ ಕಾಣಿಸಿಕೊಂಡಿರುವ ಸ್ಥಳ  ಪರಿಶೀಲನೆ ನಡೆಸಿದ್ದರು ದಲ್ಲಿ ಚಿರತೆ  ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಬೋನ್ ಇಡಲಾಗಿತ್ತು. 

ಆದರೆ ಚಿರತೆ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಬುಧವಾರ ಬೆಳಗ್ಗೆ ಬೋನಿನಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ನಾಗರಾಜ್ ಹಾಗೂ ಕಾರ್ಖಾನೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಆಗಮಿಸಿ ಚಿರತೆಗೆ ಮದ್ದು ಬರುವ ಚುಚ್ಚುಮದ್ದು ನೀಡಿದ್ದು, ಕೆ ಚಿರತೆಯನ್ನು ಅರಣ್ಯಕ್ಕೆ ಬಿಟ್ಟುಬಿಡಲು ಸಿದ್ಧತೆಗಳು ನಡೆದಿವೆ.  

ಕಳೆದ ಸುಮಾರು ಒಂದು ವರ್ಷದ ಹಿಂದೆ ಚಿರತೆಯೊಂದು ಕಾರ್ಖಾನೆಗಯ  ವಸತಿ ಗೃಹದಲ್ಲಿ  ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು 8 ಗಂಟೆಗಳ ಕಾಲ ಕಾರ್ಯಾಚರಣೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಕೃತಜ್ಞತೆ

ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಈ ಸಂಬಂಧ ನಡೆದ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಸಂಜೆ ನಿರೀಕ್ಷಿಗೂ ಮೀರಿದ ಜನಸ್ತೋಮ ಕಂಡು ಬಂದಿತು.

    ಭದ್ರಾವತಿ : ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಮಂಗಳವಾರ ಶಾಂತಿಯುತವಾಗಿ ನಡೆಯಿತು.

    ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ವಿಸರ್ಜಿಸಲಾಯಿತು. ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆ ತಡವಾಗಿ ಮುಕ್ತಾಯಗೊಂಡಿದ್ದು, ಸಂಜೆ ವೇಳೆಗೆ ಉತ್ಸವ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿದ ಜನಸ್ತೋಮ ಕಂಡು ಬಂದಿತು. ಈ ನಡುವೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಆದರೂ ಸಹ ಮಳೆಯಲ್ಲೂ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.

    

ಉತ್ಸವ ಮೆರವಣಿಗೆ ಕೆಎಸ್ ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಸಾಗುತ್ತಿದ್ದಂತೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಭಿಮಾನಿಗಳು, ಬೆಂಬಲಿಗರು ಅಪ್ಪಾಜಿ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸಿದರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಭಾವಚಿತ್ರ:

    ಉತ್ಸವ ಮೆರವಣಿಗೆ ಕೆಎಸ್ ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಸಾಗುತ್ತಿದ್ದಂತೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಭಿಮಾನಿಗಳು, ಬೆಂಬಲಿಗರು ಅಪ್ಪಾಜಿ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಅಪ್ಪಾಜಿ ಕುಟುಂಬಸ್ಥರು ಸಹ ಪಾಲ್ಗೊಂಡಿದ್ದರು.

    ಕ್ಷೇತ್ರದ ಜನತೆಗೆ ಕೃತಜ್ಞತೆ:

    ವಿನಾಯಕ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಹಾಗು ಶಾಂತಿಯುತವಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.

ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ : ಅಡಕೆ, ತೆಂಗು ಬೆಳೆ ನಾಶವಾಗುವ ಭೀತಿ

ಭದ್ರಾ ಜಲಾಶಯ


    * ಅನಂತಕುಮಾರ್

    ಭದ್ರಾವತಿ : ಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆ ಇದ್ದು, ಈ ನಡುವೆ ರೈತರಿಂದ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಮಳೆಯಾಗುವ ಲಕ್ಷಣಗಳು ದೂರವಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ತೀವ್ರವಾಗಿ ಎದುರಾಗಲಿದೆ. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ದೀರ್ಘಾವಧಿ ತೆಂಗು, ಅಡಕೆ ಬೆಳೆಗಳು ನಾಶವಾಗುವ ಭೀತಿ ರೈತರಿಗೆ ಎದುರಾಗಿದೆ.

    ಪ್ರಸ್ತುತ ಜಲಾಶಯದಲ್ಲಿ 160 ಅಡಿ ಮಾತ್ರ ನೀರಿದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ನೀರು ಹಂಚಿಕೆ ಮಾಡಲಾಗುತ್ತಿದೆ. ಯಾರು ಸಹ ನಿರೀಕ್ಷಿಸಲಾಗದಂತಹ ತೀವ್ರ ಬರಗಾಲ ಇದೀಗ ಎದುರಾಗಿದ್ದು, ಒಂದೆಡೆ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾದರೇ, ಮತ್ತೊಂದೆಡೆ ಪ್ರಸ್ತುತ ರೈತರು ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಬೇಕಾಗದ ಸ್ಥಿತಿ ಎದುರಾಗಿದೆ. ಈ ಹಿಂದೆ ಸರ್ಕಾರ 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ರೈತರು ಭತ್ತದ ಬೆಳೆಗಳನ್ನು ಬೆಳೆದಿದ್ದರು. ಇದೀಗ ಬರಗಾಲ ಎದುರಾಗಿರುವ ಹಿನ್ನಲೆಯಲ್ಲಿ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈ ನಡುವೆ ದಾವಣಗೆರೆ ಭಾಗದ ರೈತರು ತಕ್ಷಣ ನೀರು ಬಿಡಬೇಕೆಂದು ಹೋರಾಟ ನಡೆಸಿದ ಪರಿಣಾಮ ಸಲಹಾ ಸಮಿತಿ 43 ದಿನ 2 ಹಂತದಲ್ಲಿ ನೀರು ಪೂರೈಸಲು ತೀರ್ಮಾನಿಸಿದೆ. ಅದರಂತೆ ಬಲದಂಡೆ ನಾಲೆಗೆ ಮಂಗಳವಾರದಿಂದ ಅ.15ರ ವರೆಗೆ ಒಟ್ಟು 20 ದಿನ ಹಾಗು ಅ.26 ರಿಂದ ನ.17ರ ವರೆಗೆ ಒಟ್ಟು 23 ದಿನ ನೀರು ಪೂರೈಸಲಾಗುತ್ತಿದೆ. ಉಳಿದಂತೆ ಎಡದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದು, ಅ.1ರವರೆಗೆ ಒಟ್ಟು 15 ದಿನಗಳು, ಅ.12ರಿಂದ 26ರವರೆಗೆ ಒಟ್ಟು 15 ದಿನಗಳು ಹಾಗು ನ.6 ರಿಂದ 17ರವರೆಗೆ ಒಟ್ಟು 12 ದಿನಗಳು ನೀರು ಪೂರೈಕೆಯಾಗಲಿದೆ.

    43 ದಿನ ನೀರು ಪೂರೈಕೆಯಾದರೂ ಭತ್ತದ ಬೆಳೆ ನಾಶವಾಗುವ ಭೀತಿ:

    ಈ ಬಾರಿ ಮುಂಗಾರು ಮಳೆ ಸಹ ಕೈಕೊಟ್ಟಿದ್ದು, ಈ ನಡುವೆ 100 ದಿನಗಳ ಬದಲು 43 ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಭತ್ತದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದು, ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಬೆಳೆ ಕಾಳುಕಟ್ಟುವ ಕೊನೆಯ ಹಂತದಲ್ಲಿ ನೀರು ಲಭ್ಯವಾಗದೆ ನಾಶವಾಗಲಿವೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

    ದೀರ್ಘಾವಧಿ ಅಡಕೆ, ತೆಂಗು ಬೆಳೆಗಳಿಗೆ ಹೆಚ್ಚಿನ ನಷ್ಟ :

ದೀರ್ಘಾವಧಿ ಅಡಕೆ, ತೆಂಗು ಬೆಳೆಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಈ ಬಾರಿ ಹೆಚ್ಚಾಗಲಿದ್ದು, ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಅಡಕೆ, ತೆಂಗು ಬೆಳೆಗಳು ಹಾನಿಯಾದಲ್ಲಿ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಇದೀಗ ದೊಡ್ಡ ಸವಾಲು ಎದುರಾಗಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಾಗಿದೆ.


'ಶತಮಾನದ ದೊಡ್ಡ ಬರಗಾಲ ಇದಾಗಿದ್ದು, ಇಂತಹ ಸಂದರ್ಭದಲ್ಲಿ ವಿವೇಚನೆ ಇಲ್ಲದವರು 100 ದಿನ ನೀರು ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಂಬಿದ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಈ ಹಿನ್ನಲೆಯಲ್ಲಿ ನಷ್ಟವನ್ನು ಸರ್ಕಾರವೇ ತುಂಬಿ ಕೊಡಬೇಕು. ಬೇಸಿಗೆಯಲ್ಲಿ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ನೀರನ್ನು ಮಿತವಾಗಿ ಬಳಸಿ ಸದ್ಬಳಕೆ ಮಾಡಿಕೊಳ್ಳಬೇಕು.'

                                 - ಕೆ.ಟಿ ಗಂಗಾಧರ್, ರೈತ ಮುಖಂಡರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ.


ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಮೆರವಣಿಗೆ

ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ ಚಾಲನೆ

ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸಂಜೆ ನಡೆಯಲಿದ್ದುಈ ಸಂಬಂಧ ಹಮ್ಮಿಕೊಳ್ಳಲಾಗಿರುವ ರಾಜಬೀದಿ ಉತ್ಸವ ಮೆರವಣಿಗೆಗೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶಾಸಕ ಸಂಗಮೇಶ್ವರ್‌ ಬೆಳಿಗ್ಗೆ ಚಾಲನೆ ನೀಡಿದರು.

    ಭದ್ರಾವತಿ, ಸೆ. ೨೬ : ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸಂಜೆ ನಡೆಯಲಿದ್ದು, ಸಂಬಂಧ ಹಮ್ಮಿಕೊಳ್ಳಲಾಗಿರುವ ರಾಜಬೀದಿ ಉತ್ಸವ ಮೆರವಣಿಗೆಗೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶಾಸಕ ಸಂಗಮೇಶ್ವರ್‌ ಬೆಳಿಗ್ಗೆ ಚಾಲನೆ ನೀಡಿದರು.

ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸುಮಾರು ೧೧.೩೦ರ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್‌ ಹಾಗು ಪದಾಧಿಕಾರಿಗಳು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ ಕುಮಾರ್‌ ಹಾಗು ಸದಸ್ಯರು, ಪೌರಾಯುಕ್ತ ಮನುಕುಮಾರ್‌, ತಹಸೀಲ್ದಾರ್‌ ನಾಗರಾಜ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸಂಜೆ ನಡೆಯಲಿದ್ದುಈ ಸಂಬಂಧ ಹಮ್ಮಿಕೊಳ್ಳಲಾಗಿರುವ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಸೇವಾಕರ್ತರಿಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ರಾಜಬೀದಿ ಉತ್ಸವ ಮೆರವಣಿಗೆ ನಿರೀಕ್ಷೆಗೂ ಮೀರಿ ವೈಭವಯುತವಾಗಿ ನಡೆಯುತ್ತಿದ್ದು, ಉತ್ಸವ ಮೆರವಣಿಗೆ ಹಬ್ಬದಂತೆ ಕಂಡು ಬರುತ್ತಿದೆ. ಜಾತಿ, ಧರ್ಮ ಬೇಧಭಾವವಿಲ್ಲದೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ತೋರಣಗಳು, ಧ್ವಜಗಳು ಕಂಗೊಳಿಸುವ ಜೊತೆಗೆ ಸೇವಾಕರ್ತರಿಂದ ಅನ್ನಸಂತರ್ಪಣೆ, ಹೋಳಿಗೆ, ಲಾಡು, ಮಜ್ಜಿಗೆ, ಕೋಸಂಬರಿ ಸೇರಿದಂತೆ ಬಗೆ ಬಗೆಯ ಪ್ರಸಾದ ವಿತರಣೆ ನಡೆಯುತ್ತಿದ್ದು, ಬಗೆ ಬಗೆಯ ಬೃಹತ್ ಹಾರಗಳ ಸಮರ್ಪಣೆ, ಬೃಹತ್ ಓಂಕಾರದ ಚಿತ್ತಾರದೊಂದಿಗೆ ಭಕ್ತಿ ಸಮರ್ಪಣೆ ಕಂಡು ಬರುತ್ತಿದೆ. ಅಲ್ಲದೆ ವೀರಗಾಸೆ, ಡೊಳ್ಳು ಕುಣಿತ, ಗೊಂಬೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆ ಮತ್ತಷ್ಟು ಮೆರಗು ನೀಡಿವೆ.

ಮೆರವಣಿಗೆ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದ್ದು, ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.  ಉತ್ಸವ ಮೆರವಣಿಗೆ ಹೊಸಮನೆ ಮುಖ್ಯ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್‌ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್‌ ವೃತ್ತ, ಲೋಯರ್‌ ಹುತ್ತಾ ಬಸ್‌ ನಿಲ್ದಾಣದವರೆಗೂ ಸಾಗಿ ಪುನಃ ಹಿಂದಿರುಗಿ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದವರೆಗೆ ಸಾಗಿ ಪುನಃ ಹಿಂದಿರುಗಿ ಅಂತ್ಯಗೊಳ್ಳಲಿದೆ. ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.   

Monday, September 25, 2023

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ : ಬಿಗಿ ಪೊಲೀಸ್ ಬಂದೋಬಸ್ತ್

ಪೂರ್ವ ಸಿದ್ದತೆ ಪರಿಶೀಲಿಸಿ, ಸಲಹೆ, ಸೂಚನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ


ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಭದ್ರಾವತಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರ ಮಂಗಳವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಸೋಮವಾರ ಖುದ್ದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನಗರಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳನ್ನು ಪರಿಶೀಲನೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದರು.
    ಭದ್ರಾವತಿ, ಸೆ. 25 : ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರ ಮಂಗಳವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

    ಪ್ರತಿ ವರ್ಷ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ. ರಾಜಬೀದಿ ಉತ್ಸವದ ಪ್ರತಿ ಹೆಜ್ಜೆಗೂ ಕಣ್ಗಾವಲಿರಿಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಬಾರಿ ಸಹ ಮುಂದುವರೆದಿದ್ದು, ಸೋಮವಾರ ಖುದ್ದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನಗರಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ಮತ್ತ ಸಿಬ್ಬಂದಿಗಳಿಗೆ ಮುನ್ನಚ್ಚರಿಕೆ ವಹಿಸುವಂತೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ವಿನಾಯಕ ಸೇವಾ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ರಾಜಬೀದಿ ಉತ್ಸವ ಮೆರವಣಿಗೆ ಯಶಸ್ವಿಯಾಗಿ ನಡೆಸುವಂತೆ ಮನವಿ ಮಾಡಿದ್ದಾರೆ.

    ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿಗಳು:

    ಜಿಲ್ಲಾ ರಕ್ಷಣಾಧಿಕಾರಿ-1, ಹೆಚ್ಚುವರಿ ರಕ್ಷಣಾಧಿಕಾರಿ-1, ವೃತ್ತ ನಿರೀಕ್ಷಕರು-20, ಪೊಲೀಸ್ ನಿರೀಕ್ಷರು-50, ಸಹಾಯಕ ಪೊಲೀಸ್ ನಿರೀಕ್ಷಕರು-85, ಆರಕ್ಷಕ ಸಿಬ್ಬಂದಿಗಳು-500, ಗೃಹ ರಕ್ಷಕ ದಳ-250, ಕ್ಷಿಪ್ರ ಕಾರ್ಯಪಡೆ ತುಕಡಿ-1, ಸಶಸ್ತ್ರ ಮೀಸಲು ಪಡೆ ತುಕಡಿ-6 ಮತ್ತು ಸಂಚಾರಿ ಪೊಲೀಸ್ ದಳ-1 ಬಂದೋಬಸ್ತ್ ನಲ್ಲಿ ಕಾರ್ಯ ನಿರ್ವಹಿಸಲಿವೆ.

    ವೈಭವಯುತ ರಾಜಬೀದಿ ಉತ್ಸವ ಮೆರವಣಿಗೆ :

ರಾಜಬೀದಿ ಉತ್ಸವ ಮೆರವಣಿಗೆ ಪ್ರತಿವರ್ಷ ನಿರೀಕ್ಷೆಗೂ ಮೀರಿ ವೈಭವಯುತವಾಗಿ ನಡೆಯುತ್ತಿದ್ದು, ಉತ್ಸವ ಮೆರವಣಿಗೆ ಹಬ್ಬದಂತೆ ಕಂಡು ಬರುತ್ತಿದೆ. ಜಾತಿ, ಧರ್ಮ ಬೇಧಭಾವವಿಲ್ಲದೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ತೋರಣಗಳು, ಧ್ವಜಗಳು ಕಂಗೊಳಿಸುವ ಜೊತೆಗೆ ಸೇವಾಕರ್ತರಿಂದ ಅನ್ನಸಂತರ್ಪಣೆ, ಲಾಡು, ಮಜ್ಜಿಗೆ, ಕೋಸಂಬರಿ ಸೇರಿದಂತೆ ಬಗೆ ಬಗೆಯ ಪ್ರಸಾದ ವಿತರಣೆ. ಬಗೆ ಬಗೆಯ ಬೃಹತ್ ಹಾರಗಳ ಸಮರ್ಪಣೆ, ಬೃಹತ್ ಓಂಕಾರದ ಚಿತ್ತಾರದೊಂದಿಗೆ ಭಕ್ತಿ ಸಮರ್ಪಣೆ ಕಂಡು ಬರುತ್ತಿದೆ. ಅಲ್ಲದೆ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ನಾದಸ್ವರ, ಕೋಲಾಟ, ಗೊಂಬೆ ನೃತ್ಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆ ಮೆರಗು ನೀಡುತ್ತಿವೆ. ಉತ್ಸವ ಮೆರವಣಿಗೆ ಪ್ರತಿ ವರ್ಷ ನಿರೀಕ್ಷೆಗೂ ಮೀರಿ ವೈಭವ ಪಡೆದುಕೊಳ್ಳುತ್ತಿದೆ.


ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಕಾಗದನಗರದ ಚಂದ್ರಾಲಯದಲ್ಲಿ ಸೋಮವಾರ ನಡೆಯಿತು.

    ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಕಾಗದನಗರದ ಚಂದ್ರಾಲಯದಲ್ಲಿ ಸೋಮವಾರ ನಡೆಯಿತು.

    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಮತ್ತು ಆಯವ್ಯಯ ಮಂಡನೆ ನಡೆಯಿತು. ಅಲ್ಲದೆ ಸದಸ್ಯರಲ್ಲದವರಿಗೆ ನೀಡಿರುವ 74 ನಿವೇಶನಗಳ ಮುಟ್ಟುಗೋಲು ವಿಚಾರಕ್ಕೆ ಸಂಬಂಧಿಸಿದಂತೆ ಉಪಸಮಿತಿ ನೇಮಕಗೊಳಿಸಲು ಅನುಮೋದನೆ ಪಡೆಯಲಾಯಿತು.

    ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗು ಕಾರ್ಯಕಾರಿ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.

ಶತಾಯುಷಿ ಗುರುಸಿದ್ದಮ್ಮ ನಿಧನ

ಗುರುಸಿದ್ದಮ್ಮ

    ಭದ್ರಾವತಿ : ಜೇಡಿಕಟ್ಟೆ ಹೊಸೂರು ಮರುಳಸಿದ್ದೇಶ್ವರ ಸ್ವಾಮಿ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಎಸ್. ವಾಗೀಶ್ ಅವರ ಅಜ್ಜಿ, ಶತಾಯುಷಿ ಗುರುಸಿದ್ದಮ್ಮ(102) ಸೋಮವಾರ ನಿಧನ ಹೊಂದಿದರು.

    ಇವರ ಅಂತ್ಯಕ್ರಿಯೆ ಜೇಡಿಕಟ್ಟೆ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮರುಳಸಿದ್ದೇಶ್ವರ ಸ್ವಾಮಿ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು ಹಾಗು ಗ್ರಾಮಸ್ಥರು ಗುರುಸಿದ್ದಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅ.15ರಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘಕ್ಕೆ ಚುನಾವಣೆ


    ಭದ್ರಾವತಿ : ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಚುನಾವಣೆ ಅ.15ರಂದು ನಡೆಯಲಿದ್ದು, ಅ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

    ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಎಂ.ಸಿ ಮಂಜುನಾಥ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಈಗಾಗಲೇ ಈ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 6ರಂದು ನಾಮಪತ್ರ ಹಿಂಪಡೆಯ ಬಹುದಾಗಿದೆ.ಅ.15ರಂದು ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

Sunday, September 24, 2023

34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ



ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಸೆ.25ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾಗದನಗರದ ಚಂದ್ರಾಲಯದಲ್ಲಿ ನಡೆಯಲಿದೆ. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಮತ್ತು ಆಯವ್ಯಯ ಮಂಡನೆ ಮತ್ತು ಅನುಮೋದನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
 ಎಲ್ಲಾ ಸದಸ್ಯರುಗಳೂ ತಪ್ಪದೆ ಸಭೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ವಿವಿಧೆಡೆ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

    ಭದ್ರಾವತಿ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಹೊಸಮನೆಯಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದರು.

    ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

    ನಂತರ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ದರ್ಶನ ಪಡೆದರು.

    ಬಿಜೆಪಿ ಪಕ್ಷದ ಯುವ ಮುಖಂಡರಾದ ಮಂಗೋಟೆ ರುದ್ರೇಶ್‌, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಡಿ. ಜಯಶ್ರೀ ನಿಧನ

ಡಿ. ಜಯಶ್ರೀ

ಭದ್ರಾವತಿ : ಜೇಡಿಕಟ್ಟೆ ಹೊಸೂರು ನಿವಾಸಿ ಡಿ. ಜಯಶ್ರೀ(42) ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಸದಸ್ಯ, ಪತಿ ಎಲ್. ದೇವರಾಜ್ ಹಾಗು ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಜೇಡಿಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ನಗರಸಭೆ ಸದಸ್ಯೆ ರೇಖಾ ಪ್ರಕಾಶ್, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಸಿದ್ದಲಿಂಗಯ್ಯ, ಎಸ್. ವಾಗೀಶ್, ಪ್ರಕಾಶ್, ರಾಮಲಿಂಗಣ್ಣ, ಹೋಟೆಲ್ ಶಿವಣ್ಣ, ಜವರೇಲಿಂಗೇಗೌಡ್ರು, ನಂಜಪ್ಪ, ಶಾರದಾಬಾಯಿ ಸೇರಿದಂತೆ ಗ್ರಾಮಸ್ಥರು ಜಯಶ್ರೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸುಜಾನಮ್ಮ ನಿಧನ

ಸುಜಾನಮ್ಮ

    ಭದ್ರಾವತಿ: ನಗರದ ಕೂಲಿಬ್ಲಾಕ್ ಶೆಡ್, ಮಾರಿಯಮ್ಮ ದೇವಸ್ಥಾನ ಸಮೀಪದ ನಿವಾಸಿ ಸುಜಾನಮ್ಮ(72) ನಿಧನ ಹೊಂದಿದರು.

    ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕವಿ ಪೀಟರ್ ಸೇರಿದಂತೆ ಇಬ್ಬರು ಪುತ್ರರು ಹಾಗು ಪುತ್ರಿ ಇದ್ದರು. ಭಾನುವಾರ ಸಂಜೆ ನಗರದ ಮಿಲ್ಟ್ರಿಕ್ಯಾಂಪ್, ಬೈಪಾಸ್ ರಸ್ತೆ, ಕ್ರೈಸ್ತರ ಸಮಾಧಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ಸುಜಾನಮ್ಮ ದಿವಂಗತ ಸುಂದರ್ ರಾಜ್ ಅವರ ಪತ್ನಿಯಾಗಿದ್ದಾರೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಜಾನಪದ ವೇದಿಕೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮ್ಯಾನ್ ಸಾವು

ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಭದ್ರಾವತಿ: ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಮಾಚೇನಹಳ್ಳಿ ಮೆಸ್ಕಾಂ ಘಟಕ –5ರ ಕಿರಣ್ (25) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಚನ್ನಗಿರಿ ತಾಲೂಕಿನ ನಿವಾಸಿಯಾಗಿದ್ದು, ರಾಣೆಬೆನ್ನೂರು ಮೂಲದ ಸುನೀಲ್ (26) ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇವರಿಬ್ಬರು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮೊದಲನೇ ಕ್ರಾಸ್ ನಲ್ಲಿ ಭಾನುವಾರ ಬೆಳಗ್ಗೆ ನಿರ್ವಹಣೆ ಸಂಬಂಧ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. 10.30ರ ವೇಳೆಗೆ ಕಂಬದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು ಕಿರಣ್ ಮೃತಪಟ್ಟಿದ್ದು, ಸುನಿಲ್ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Saturday, September 23, 2023

ಸೆ.24ರಂದು ಕಾಗದನಗರ ಗಣಪತಿ ವಿಸರ್ಜನೆ

ಭದ್ರಾವತಿ ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ.

    ಭದ್ರಾವತಿ : ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಸೆ.24ರ ಭಾನುವಾರ ನಡೆಯಲಿದೆ.

    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು 10 ರಿಂದ 15 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.

    ಕಳೆದ ಸುಮಾರು 8 ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಜನರಿಲ್ಲದೆ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಜನಸಂದಣಿ ಇಲ್ಲವಾಗಿದೆ. ಆದರೂ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.

    ಈ ಬಾರಿ 7 ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.

ಸೆ.26ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ವಿವಿಧ ಧಾರ್ಮಿಕ ಆಚರಣೆ


ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿವತಿಯಿಂದ 51ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವ ಅಂಗವಾಗಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಶುಕ್ರವಾರ ಬಜರಂಗದಳ ವತಿಯಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಭದ್ರಾವತಿ : ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರಂದು ನಡೆಯಲಿದೆ.

    ಪ್ರತಿ ವರ್ಷದಂತೆ ಈ ಬಾರಿ ಸಹ ವಿಸರ್ಜನೆಗೂ ಮೊದಲು ವೈಭವದ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಜಾತಿಯ, ಧರ್ಮದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಹಬ್ಬದ ವಾತಾವರಣ ಕಂಡು ಬರುತ್ತದೆ.

    ಮೆರವಣಿಗೆಗೆ ವಿನಾಯಕ ಸೇವಾ ಸಮಿತಿ ಈಗಾಗಲೇ ಸಿದ್ದತೆಗಳನ್ನು ಕೈಗೊಂಡಿದ್ದು, ಪೊಲೀಸ್ ಇಲಾಖೆ ಸಹ ಈ ಬಾರಿ ಹೆಚ್ಚಿನ ಬಿಗಿ ಬಂದೋಬಸ್ತ್ ಕೈಗೊಳ್ಳಲು ಮುಂದಾಗಿದೆ.



    ಪ್ರತಿದಿನ ಧಾರ್ಮಿಕ ಕಾರ್ಯಕ್ರಮ:

    ವಿನಾಯಕ ಮೂರ್ತಿ ಮಹೋತ್ಸವ ಅಂಗವಾಗಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಶುಕ್ರವಾರ ಬಜರಂಗದಳ ವತಿಯಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಹಾಗು ಪದಾಧಿಕಾರಿಗಳು, ಬಜರಂಗದಳ ಜಿಲ್ಲಾ ಸಂಯೋಜಕ ರಾಘವನ್ ವಡಿವೇಲು ಇನ್ನಿತರರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ವತಿಯಿಂದ ಅನಾಥ, ವೃದ್ದಾಶ್ರಮಕ್ಕೆ ಹಾಸಿಗೆ, ದಿಂಬು ವಿತರಣೆ

ಭದ್ರಾವತಿ ಹೊಸಸಿದ್ದಾಪುರ ಸುರಕ್ಷ ಅನಾಥ ಮತ್ತು ವೃದ್ದಾಶ್ರಮಕ್ಕೆ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಶನಿವಾರ ಮಲಗುವ ಹಾಸಿಗೆ ಮತ್ತು ದಿಂಬುಗಳನ್ನು ಉಚಿತವಾಗಿ ವಿತರಿಸಲಾಯಿತು.

    ಭದ್ರಾವತಿ : ನಗರದ ಹೊಸಸಿದ್ದಾಪುರ ಸುರಕ್ಷ ಅನಾಥ ಮತ್ತು ವೃದ್ದಾಶ್ರಮಕ್ಕೆ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಶನಿವಾರ ಮಲಗುವ ಹಾಸಿಗೆ ಮತ್ತು ದಿಂಬುಗಳನ್ನು ಉಚಿತವಾಗಿ ವಿತರಿಸಲಾಯಿತು.

    ವಿಭಿನ್ನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಸುಮಾರು 25 ಸಾವಿರ ರು. ಮೌಲ್ಯದ ಒಟ್ಟು ೧೨ ಹಾಸಿಗೆ ಮತ್ತು ದಿಂಬುಗಳನ್ನು ವಿತರಣೆ ಮಾಡಲಾಯಿತು. ಅನಾಥ ಮತ್ತು ವೃದ್ಧರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ಲಬ್ ಬದ್ಧವಾಗಿದೆ ಎಂದು ಭರವಸೆ ನೀಡಲಾಯಿತು. ಸುರಕ್ಷ ಅನಾಥ ಮತ್ತು ವೃದ್ದಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಅಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಸೇವಾ ಕಾರ್ಯವನ್ನು ಅಭಿನಂದಿಸಿದರು.

    ಲಯನ್ ಪ್ರಾಂತೀಯ ಅಧ್ಯಕ್ಷ ದೇವರಾಜ್, ಕ್ಲಬ್ ಅಧ್ಯಕ್ಷ ಟಿ. ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಎಚ್.ಡಿ ಕೃಷ್ಣ, ಲಯನ್ ಪ್ರಾಂತೀಯ ಮಾಜಿ ಅಧ್ಯಕ್ಷ ಅನಂತ ಕೃಷ್ಣ ನಾಯಕ್, ಡಾ. ನರೇಂದ್ರ ಭಟ್, ಡಾ. ವೃಂದಭಟ್, ಆರ್. ಉಮೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಕ್ಲಬ್ ಸದಸ್ಯರು ಹಾಗು ಸುರಕ್ಷ ಅನಾಥ ಮತ್ತು ವೃದ್ದಾಶ್ರಮದ ಟ್ರಸ್ಟಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Friday, September 22, 2023

ಜಾತ್ರೆ ರೂಪದಲ್ಲಿ ನ.4, 5 ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮಾಚರಣೆಗೆ ಭರದ ಸಿದ್ದತೆ

ಕಾರ್ಮಿಕ ವಲಯದಲ್ಲಿಯೇ ಅಸಮಾಧಾನ, ಸಂಭ್ರಮಾಚರಣೆ ಫಲ ನೀಡುವುದೇ?

ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಸಂಭ್ರಮಾಚರಣೆ ಆಮಂತ್ರಣ ಪತ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ದೊಡ್ಡಣ್ಣ ಮತ್ತು ತಂಡದವರು ನೀಡಿ ಆಹ್ವಾನಿಸುತ್ತಿರುವುದು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ ಇತರರು ಉಪಸ್ಥಿತರಿದ್ದರು.

    ಭದ್ರಾವತಿ : ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡು ಶತಮಾನ ಪೂರೈಸಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಸಂಕಷ್ಟದಲ್ಲಿ ಮುನ್ನಡೆಯುತ್ತಿದ್ದು, ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಾಗಿದೆ. ಈ ನಡುವೆ ಇದೀಗ ಕಾರ್ಖಾನೆ ಶತಮಾನೋತ್ಸವ ಸಂಭ್ರಮಾಚರಣೆ ನಡೆಯಲಿದ್ದು, ಇದಕ್ಕೆ ಕಾರ್ಮಿಕ ವಲಯದಲ್ಲಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ.

    ಕಾರ್ಖಾನೆಯ ನಿವೃತ್ತ ನೌಕರ, ಚಲನಚಿತ್ರ ನಟ ದೊಡ್ಡಣ್ಣ ಅವರು ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಶತಮಾನೋತ್ಸವ ಸಂಭ್ರಮಾಚರಣೆ ಕೈಗೊಂಡಿದ್ದಾರೆ. ಸಂಭ್ರಮಾಚರಣೆಗಾಗಿ ಸುಮಾರು 6 ತಿಂಗಳಿನಿಂದ ನಿರಂತರವಾಗಿ ಶ್ರಮವಹಿಸಿದ್ದಾರೆ. ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದಾರೆ.

    ಮೈಸೂರು ಮಹಾರಾಜರ ವಂಶಸ್ಥರ 4 ನಾಲ್ಕು ತಲೆಮಾರುಗಳ ಪರಂಪರೆಯೊಂದಿಗೆ ಸಂಬಂಧ ಹೊಂದಿರುವ ಕಾರ್ಖಾನೆಯ ಶತಮಾನೋತ್ಸವ ಸಂಭ್ರಮಾಚರಣೆ ಜಾತ್ರೆ ರೂಪದಲ್ಲಿ ನಡೆಯಲಿದ್ದು, ಮೈಸೂರು ಮಹಾರಾಜ ಶ್ರೀ ಯದುವೀರ್ ಒಡೆಯರ್ ಅವರು ನ.4ರಂದು ಉದ್ಘಾಟಿಸಲಿದ್ದಾರೆ. ಎರಡು ದಿನ ಸಂಭ್ರಮಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ರಾಜ್ಯದ ಸಂಸದರು, ಶಾಸಕರು, ರಾಜ್ಯದ ವಿವಿಧ ಮಠಗಳ ಮಠಾಧೀಶರು, ಹೋರಾಟದ ಹಿರಿಯ ಮುತ್ಸದ್ದಿಗಳು, ಚಲನಚಿತ್ರ ನಟರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಹುತೇಕ ಆಮಂತ್ರಣ ಪತ್ರ ವಿತರಿಸಲಾಗಿದ್ದು, ದೊಡ್ಡಣ ಅವರೇ ಖುದ್ದಾಗಿ ತೆರಳಿ ಆಮಂತ್ರಣ ವಿತರಿಸುತ್ತಿರುವುದು ವಿಶೇಷತೆಯಾಗಿದೆ.

    ಶತಮಾನೋತ್ಸವ ಸಂಭ್ರಮಾಚರಣೆಗಾಗಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಒಳಗೊಂಡಿದ್ದಾರೆ. ಈ ನಡುವೆ ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸದೆ ಕೆಲವೇ ಕೆಲವು ಮಂದಿ ತಮ್ಮದೇ ಆದ ವೈಯಕ್ತಿಕ ನೆಲೆಗಟ್ಟಿನಲ್ಲಿ ನಿರ್ಧಾರ ಕೈಗೊಂಡು ಸಂಭ್ರಮಾಚರಣೆ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

    ಸಂಭ್ರಮಾಚರಣೆ ಫಲ ನೀಡುವುದೇ ?:

    ಕಾರ್ಖಾನೆ ಮುಚ್ಚುವ ಆದೇಶ ಕೈಬಿಡುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಹಾಗು ಕಾರ್ಮಿಕರ ಹಿತ ಕಾಪಾಡುವಂತೆ ಆಗ್ರಹಿಸಿ ಕಳೆದ ಸುಮಾರು 9 ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ವಿಭಿನ್ನ ರೀತಿಯ ಹಲವು ಹಂತದ ಹೋರಾಟಗಳು ನಡೆದಿವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

    ಹೋರಾಟ ಇಂದಿಗೂ ಮುನ್ನಡೆಯುತ್ತಿದ್ದು, ಬಹುತೇಕ ಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ ಬೀದಿಪಾಲಾಗಿದ್ದಾರೆ. ಇನ್ನೂ ಕೆಲವು ಕಾರ್ಮಿಕರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾರ್ಖಾನೆ ವಲಯದಲ್ಲಿ ಸಂಭ್ರಮ ಮರೆಯಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಾತ್ರೆ ರೂಪದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆ ನಡೆಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ನಿರಂತರ ಹೋರಾಟದಿಂದ ಸಾಧ್ಯವಾಗದ್ದು, ಸಂಭ್ರಮಾಚರಣೆಯಿಂದ ಸಾಧ್ಯವೇ? ಎಂಬ ಪ್ರಶ್ನೆ ಇದೀಗ ಕಾರ್ಮಿಕರಲ್ಲಿ ಕೇಳಿ ಬರುತ್ತಿದೆ.