Wednesday, January 12, 2022

ಕಾಗದನಗರ ಆಂಗ್ಲಶಾಲೆಯಲ್ಲಿ ಸೈಬರ್ ಅಪರಾಧ ಕುರಿತು ಜಾಗೃತಿ ಕಾರ್ಯಕ್ರಮ


ಭದ್ರಾವತಿ ಕಾಗದನಗರ ಆಂಗ್ಲಶಾಲೆಯಲ್ಲಿ ಶಿವಮೊಗ್ಗ ಸಿಇಎನ್ ಮತ್ತು ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೨: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೈಬರ್ ಅಪರಾಧ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಶಿವಮೊಗ್ಗ ಸಿಇಎನ್ ಮತ್ತು ಅಪರಾಧ ಪೊಲೀಸ್ ಠಾಣೆ ತೊಡಗಿಸಿಕೊಂಡಿದೆ.
    ಬುಧವಾರ ನಗರದ ಕಾಗದನಗರ ಆಂಗ್ಲ ಶಾಲೆಯಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಠಾಣೆಯ ಸಿಬ್ಬಂದಿ ನಿರ್ಮಲ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
    ಅಲ್ಲದೆ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನಗಳ ಬಗ್ಗೆವಿವರಿಸಿ ಹೆಣ್ಣು ಮಕ್ಕಳು ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟರು. ಶಾಲೆಯ ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಹಿಸಿದ್ದರು. ಶಿಕ್ಷಕರಾದ ಸಿದ್ದಯ್ಯ, ಮಾರುತಿಕುಮಾರ್ ಮತ್ತು ಎಂ.ಸಿ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಿ. ನಾಗರಾಜ್ ಸ್ವಾಗತಿಸಿದರು. ಮಮತ ವಂದಿಸಿದರು.

ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಿ, ವಿತರಕರ ಬೇಡಿಕೆಗಳನ್ನು ಈಡೇರಿಸಿ : ಟಿ. ಕೃಷ್ಣಪ್ಪ

ಭದ್ರಾವತಿ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭವನ್ನು ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಉದ್ಘಾಟಿಸಿದರು.  
    ಭದ್ರಾವತಿ, ಜ. ೧೨: ಸರ್ಕಾರ ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ವಿತರಕರ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಹಿತಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಆಗ್ರಹಿಸಿದರು.
    ಅವರು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜ್ಯದಲ್ಲಿ ಬಯೋಮೆಟ್ರಿಕ್ ಪದ್ದತಿಯಿಂದಾಗಿ ಪಡಿತರ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಪ್ರಮುಖವಾಗಿ ಸರ್ವರ್ ಸಮಸ್ಯೆ ಇದ್ದು, ಹಲವಾರು ಬಾರಿ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಪದ್ದತಿಯನ್ನು ರದ್ದುಪಡಿಸಿ ಈ ಹಿಂದಿನಂತೆ ಓಟಿಪಿ ಅಥವಾ ಚೆಕ್‌ಲಿಸ್ಟ್ ಪದ್ದತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಈ ಹಿಂದಿನ ಪದ್ದತಿಯಲ್ಲಿ ಕೆಲವು ವಿತರಕರು ಅಕ್ರಮ ವೆಸಗಿದ್ದಾರೆಂದು ಇಡೀ ವಿತರಕರನ್ನು ಗುರಿಯಾಗಿಸಿಕೊಂಡು ಪದ್ದತಿಯನ್ನು ಬದಲಿಸುವುದು ಸರಿಯಾದ ಕ್ರಮವಲ್ಲ. ಬದಲಿಗೆ ಅಕ್ರಮ ವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಎಲ್ಲವೂ ಸರಿಯಾಗುತ್ತದೆ ಎಂದರು.
    ಕೇರಳ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ಹೆಚ್ಚಿನ ಕಮಿಷನ್ ನೀಡಲಾಗುತ್ತಿದ್ದು, ಅಲ್ಲದೆ ಪಡಿತರ ವಿತರಣೆಯೊಂದಿಗೆ ದಿನ ಬಳಕೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ. ಇದೆ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ಕಲ್ಪಿಸಿಕೊಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಇಂದಿನ ಸರ್ಕಾರ ವಿತರಕರಿಗೆ ನಿಗದಿತ ಸಮಯದಲ್ಲಿ ಕಮಿಷನ್ ಹಣ ಜಮಾ ಮಾಡದೆ ಬಾಕಿ ಉಳಿಸಿಕೊಂಡಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ವಿತರಕರು ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ತಕ್ಷಣ ಕಮಿಷನ್ ಬಾಕಿ ನೀಡಬೇಕೆಂದು ಆಗ್ರಹಿಸಿದರು.
    ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ಪರಮೇಶ್ವರಪ್ಪ, ಕೆ. ಈಶ್ವರಾಚಾರಿ, ಎಸ್.ಆರ್ ನಾಗರಾಜ್, ಜವರಾಯಿ, ರಾಜೇಶ್, ಕೆ. ನಾಗರಾಜ್, ಕೆ. ಲಕ್ಷ್ಮೀಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಕುವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ. ಬಿ.ಜಿ ಧನಂಜಯ

ಡಾ. ಬಿ.ಜಿ ಧನಂಜಯ
    ಭದ್ರಾವತಿ, ಜ. ೧೨: ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ನಾಮನಿರ್ದೇಶನಗೊಂಡಿದ್ದಾರೆ.
    ಸೇವಾ ಜೇಷ್ಠತೆ ಹಾಗು ಸರದಿ ಆಧಾರದ ಮೇರೆಗೆ ಮುಂದಿನ ಒಂದು ವರ್ಷದ ಅವಧಿಗೆ ಅಥವಾ ವಯೋನಿವೃತ್ತಿ ದಿನಾಂಕದವರೆಗೂ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಳಿಸಿ ಕುಲಪತಿಗಳು ಆದೇಶ ಹೊರಡಿಸಿದ್ದಾರೆ.
    ಡಾ. ಬಿ.ಜಿ ಧನಂಜಯ ಸೇರಿದಂತೆ ಪಂಚನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಬಿ ರಾಜಶೇಖರ, ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತಿ ಮತ್ತು ಚಿಕ್ಕಮಗಳೂರು ಸರ್ಕಾರಿ ಮಹಿಳಾ ಕಾಲೇಜಿನ ಎಸ್.ಎಂ ನಟೇಶ್ ಒಟ್ಟು ೪ ಜನರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.

Tuesday, January 11, 2022

ಡಿಎಫ್ಒ ಕಛೇರಿ ಮುಂಭಾಗ ಕಾರು ಅಪಘಾತ


ಭದ್ರಾವತಿ : ನಗರದ ಬಿ.ಎಚ್ ರಸ್ತೆ  ಉಪಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ ಬಳಿ ಮಂಗಳವಾರ ಮಧ್ಯಾಹ್ನ ರಾತ್ರಿ ಕಾರು ಅಪಘಾತ ಸಂಭವಿಸಿದೆ.
       KA-14 ME 6537 ಕೆಂಪು ಬಣ್ಣದ  ಕಾರು ಅಪಘಾತಕ್ಕೆ ಒಳಗಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.  ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಡ್ಜ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಪ್ರಕರಣ ದಾಖಲು : ಓರ್ವನ ಬಂಧನ


    ಭದ್ರಾವತಿ, ಜ. ೧೧:  ಅಪ್ರಾಪ್ತ ಬಾಲಕಿಯೊಬ್ಬಳನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂಬ ದೂರು ನಗರದ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
    ಕಳೆದ ೨ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಿದಿಗೆ ನಿವಾಸಿ ಉಮೇಶ್(೨೮) ಎಂಬಾತನನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ.
    ಬಾರಂದೂರು ಗ್ರಾಮದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಸುಮಾರು ೧೫ ವರ್ಷದ ಪುತ್ರಿಯನ್ನು ಶಾಲೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ತಡೆದು ತರೀಕೆರೆಗೆ ಕರೆದೊಯ್ದು ಲಾಡ್ಜ್ ಒಂದರಲ್ಲಿ ಅತ್ಯಾಚಾರ ನಡೆಸಲಾಗಿದ್ದು, ಅಲ್ಲದೆ ಈ ವಿಚಾರ ಯಾರಿಗಾದರೂ ತಿಳಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಈ ನಡುವೆ ಪೊಲೀಸರು ಬಾಲಕಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆಗೆ ಒಳಪಡಿಸಿದ್ದು, ಬಾಲಕಿಯಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಲೋಕೋಪಯೋಗಿ ಇಲಾಖೆ ಕಛೇರಿಯಲ್ಲಿ ಸುಮಾರು ೭ ಮಂದಿಗೆ ಕೋವಿಡ್ ಸೋಂಕು

ನಗರಸಭೆ ವತಿಯಿಂದ ಸೋಂಕು ನಿವಾರಕ ಸಿಂಪಡಣೆ


    ಭದ್ರಾವತಿ, ಜ. ೧೧: ನಗರದ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ತಿಳಿದು ಬಂದಿದೆ.
    ಕಛೇರಿಯಲ್ಲಿ ಕಾರ್ಯಪಾಲಕ ಇಂಜಿನಿಯರ್(ಎಇಇ) ಸೇರಿದಂತೆ ಸುಮಾರು ೧೧ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೈಕಿ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ೭ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
    ಕಛೇರಿ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಮಂಗಳವಾರ ಮಧ್ಯಾಹ್ನ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಒಂದು ದಿನದ ಮಟ್ಟಿಗೆ ಕಛೇರಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಎಸಿಬಿ ಬಲೆಗೆ ಬಿಳಿಕಿ ಗ್ರಾ.ಪಂ. ಪಿಡಿಓ : ರು.೭೦ ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಡಿ. ಕೇಶವಮೂರ್ತಿ

ಭದ್ರಾವತಿ ಬಿಳಿಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಕೇಶವಮೂರ್ತಿ
    ಭದ್ರಾವತಿ ಜ. ೧೧: ಲಂಚ ಸ್ವೀಕರಿಸುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬಿಳಕಿ ಗ್ರಾಮ ಪಂಚಾಯತ್‌ಯಲ್ಲಿ ಮಂಗಳವಾರ ನಡೆದಿದೆ.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಕೇಶವಮೂರ್ತಿ ಎಸಿಬಿ ಬಲೆಗೆ  ಬಿದ್ದಿದ್ದು, ಜಮೀನಿಗೆ ಸಂಬಂಧಿಸಿದಂತೆ ಎನ್‌ಓಸಿ ನೀಡಲು ರು. ೧ ಲಕ್ಷ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿಂದೆ ರು. ೫ ಸಾವಿರ ಲಂಚ ಪಡೆದುಕೊಂಡಿದ್ದು, ಉಳಿದಂತೆ ರು. ೭೦ ಸಾವಿರ ಲಂಚ ಸ್ವೀಕರಿಸುವಾಗ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  
    ಕೇಶವಮೂರ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ದಾಳಿಯಲ್ಲಿ ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ಪಿಎಸ್‌ಐ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.