Monday, January 2, 2023

ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ, ದೀಪೋತ್ಸವ

ಭದ್ರಾವತಿ ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಾಲ್ಗೊಂಡು ವೈಕುಂಠನಾಥ ದರ್ಶನ ಪಡೆದರು.
    ಭದ್ರಾವತಿ, ಜ. ೨: ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ  ಸೋಮವಾರ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಾಲ್ಗೊಂಡು ವೈಕುಂಠನಾಥ ದರ್ಶನ ಪಡೆದರು.
    ಪ್ರತಿವರ್ಷದಂತೆ ಈ ಬಾರಿ ಸಹ ದೇವಸ್ಥಾನದಲ್ಲಿ ದೀಪೋತ್ಸವ ಹಾಗು ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಸಂಜೆ ದೀಪೋತ್ಸವಕ್ಕೂ ಮೊದಲು ಪ್ರಮುಖ ರಸ್ತೆಯಲ್ಲಿ ಶ್ರೀ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ನಂತರ ಶಾರದ ಅಪ್ಪಾಜಿ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
    ನಗರಸಭಾ ಸದಸ್ಯ ಬಸವರಾಜ ಬಿ. ಆನೇಕೊಪ್ಪ ನೇತೃತ್ವದಲ್ಲಿ ಶಾರದ ಅಪ್ಪಾಜಿ ಹುಟ್ಟುಹಬ್ಬ ಆಚರಿಸಿ ಕೇಕ್ ಕತ್ತರಿಸಿ ಲಾಡು ವಿತರಿಸಲಾಯಿತು. ದೇವಸ್ಥಾನ ಸಮಿತಿ ವತಿಯಿಂದ ಶಾರದ ಅಪ್ಪಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ದೇವಸ್ಥಾನದಲ್ಲಿರುವ ಎಲ್ಲಾ ಮೂಲ ವಿಗ್ರಹಗಳಿಗೂ ವಿಶೇಷ ಅಲಂಕಾರದೊಂದಿಗೆ ಪೂಜೆ, ಹೋಮ-ಹವನ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.


    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ರೂಪಾವತಿ ಗುಣಶೇಖರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಉದಯ್‌ಕುಮಾರ್, ಕುಶಾಲ್, ಭಾಗ್ಯಮ್ಮ, ದೇವಸ್ಥಾನ ಸಮಿತಿ ಪ್ರಮುಖರಾದ ನಿಂಗಪ್ಪ, ಗೋಪಿನಾಥ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಉಕ್ಕಿನ ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ


ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ಸೋಮವಾರ ಭವ್ಯ ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ವೈಕುಂಠ ದರ್ಶನ ಭಕ್ತರ ಗಮನ ಸೆಳೆಯಿತು.
    ಭದ್ರಾವತಿ, ಜ. ೨: ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಾಗು ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆ ಹಾಗು ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯ ಸೇರಿದಂತೆ ವಿವಿಧೆಡೆ ಸೋಮವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವೈಕುಂಠ ದರ್ಶನ ಪಡೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಪ್ರತಿ ವರ್ಷದಂತೆ ಈ ಬಾರಿ ಸಹ ಭವ್ಯ ವೇದಿಕೆಯಲ್ಲಿ ನಿರ್ಮಿಸಲಾದ ವೈಕುಂಠ ದರ್ಶನ ಭಕ್ತರನ್ನು ಆಕರ್ಷಿಸಿದವು.
    ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥಶರ್ಮ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಪ್ರಮೋದ್ ಕುಮಾರ್, ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಬೆಳಿಗ್ಗೆಯೇ ಗಣ್ಯರು, ಜನಪ್ರತಿನಿಧಿನಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ನೂತನ ವರ್ಷದ ಆರಂಭದಲ್ಲಿಯೇ ಆಗಮಿಸಿರುವ ವೈಕುಂಠ ಏಕಾದಶಿ ಶುಭಾಶಯ ಕೋರುವ ಮೂಲಕ ದೇವಸ್ಥಾನಗಳಿಗೆ ತೆರಳಿ ವೈಕುಂಠ ದರ್ಶನ ಪಡೆದು ಪ್ರಾರ್ಥಿಸಿದರು.  
    ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಜ.8ರಂದು ಉದ್ಯೋಗ ಮೇಳ


ಭದ್ರಾವತಿ, ಜ. 2: ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಜ.8ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಮಂಗೋಟೆ ರುದ್ರೇಶ್ ತಿಳಿಸಿದರು. 
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಮ್ಮ ತಂದೆಯವರ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಗಿದೆ.  ಈ ಟ್ರಸ್ಟ್ ಮೂಲಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಮಸ್ಯೆ ಹೆಚ್ಚಾಗಿರುವುದರಿಂದ ಈ  ಮೇಳ ಅವಶ್ಯಕವಾಗಿದೆ ಎಂದರು. 
    ಜ.8ರಂದು ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮೇಳ ನಡೆಯಲಿದ್ದು ಸುಮಾರು 25ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.  ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮ, ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವೀಧರ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
   ಪತ್ರಿಕಾಗೋಷ್ಠಿಯಲ್ಲಿ ಬಿ.ಎಮ್ ಸಂತೋಷ್, ಆನಂದ್ ಕುಮಾರ್, ಬಿ.ಎಸ್ ಮಂಜುನಾಥ್,  ಸುನಿಲ್ ಗಾಯಕ್ವಾಡ್, ರವಿ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, January 1, 2023

ಕ್ಷೇತ್ರದಾದ್ಯಂತ ಹುಟ್ಟುಹಬ್ಬ ಅದ್ದೂರಿ ಆಚರಣೆ : ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ


ಶಾರದ ಅಪ್ಪಾಜಿಯವರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಬಳಿ ಇರುವ ಶ್ರೀ ಮಾರಿಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಹುಟ್ಟುಹಬ್ಬದ ಅಂಗವಾರಿ ವಿಶೇಷ ಪೂಜೆ ಸಲ್ಲಿಸಿದರು.


ಭದ್ರಾವತಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಭಾನುವಾರ ಹುಟ್ಟುಹಬ್ಬದ ಅಂಗವಾಗಿ ನಗರದ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.
    ಭದ್ರಾವತಿ, ಜ. ೧ : ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಪಕ್ಷದ ಜಿಲ್ಲಾ ಯುವ ಘಟಕ ಹಾಗು ವಿವಿಧ ಸಂಘಟನೆಗಳಿಂದ ಮತ್ತು ಅಭಿಮಾನಿಗಳಿಂದ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.  
    ಬೆಳಿಗ್ಗೆ ಅಪ್ಪಾಜಿಯವರ ನಿವಾಸದಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್ ನೇತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಸಾವಿರಾರು ಮಂದಿಗೆ ಲಾಡು ವಿತರಿಸಲಾಯಿತು. ನಂತರ ಕೆಎಸ್‌ಆರ್‌ಟಿಸಿ ಮುಖ್ಯಬಸ್‌ನಿಲ್ದಾಣ ಮುಂಭಾಗ ಆಟೋ ಚಾಲಕರು ಹಮ್ಮಿಕೊಂಡಿದ್ದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಇಲ್ಲೂ ಸಹ ಲಾಡು ವಿತರಿಸಲಾಯಿತು.
    ಹುಟ್ಟುಹಬ್ಬ ಆಚರಣೆಯಲ್ಲಿ ಕಣ್ಣೀರಿಟ್ಟ ಶಾರದ ಅಪ್ಪಾಜಿ :
    ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಶಾರದ ಅಪ್ಪಾಜಿ, ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿಯವರ ಮೇಲೆ ಕ್ಷೇತ್ರದ ಜನರು ಹೊಂದಿರುವ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿಯವರು ಕೈಗೊಂಡಿರುವ ಜನಪರ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅವರೊಂದಿಗೆ ಇದ್ದು, ಎಲ್ಲಾ ರೀತಿಯಲ್ಲೂ ಬೆಳವಣಿಗೆಯೊಂದಿದ ಬಹಳಷ್ಟು ಮಂದಿ ಇಂದು ಅವರಿಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಂದು ಹೇಳುವ ಮೂಲಕ ಶಾರದ ಅಪ್ಪಾಜಿ ಕಣ್ಣೀರಿಟ್ಟರು.


ಕೆಎಸ್‌ಆರ್‌ಟಿಸಿ ಮುಖ್ಯಬಸ್‌ನಿಲ್ದಾಣ ಮುಂಭಾಗ ಆಟೋ ಚಾಲಕರು ಹಮ್ಮಿಕೊಂಡಿದ್ದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡು ಮಾತನಾಡಿದರು.


ಭದ್ರಾವತಿಯಲ್ಲಿ ಶಾರದ ಅಪ್ಪಾಜಿಯವರು ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ನಗರದ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
    ಕ್ಷೇತ್ರದ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಮಾಲಾರ್ಪಣೆ :
    ಶಾರದ ಅಪ್ಪಾಜಿಯವರು ಹುಟ್ಟುಹಬ್ಬದ ಅಂಗವಾಗಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆ ಹಾಗು ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಸೇರಿದಂತೆ ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
    ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ :
    ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬ್ರೆಡ್, ಹಣ್ಣು ವಿತರಿಸಿದರು.
    ದೇವಸ್ಥಾನ, ದರ್ಗಾದಲ್ಲಿ ವಿಶೇಷ ಪೂಜೆ:
    ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಶಾರದ ಅಪ್ಪಾಜಿಯವರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಬಳಿ ಇರುವ ಶ್ರೀ ಮಾರಿಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಹುಟ್ಟುಹಬ್ಬದ ಅಂಗವಾರಿ ವಿಶೇಷ ಪೂಜೆ ಸಲ್ಲಿಸಿದರು. ಇದೆ ರೀತಿ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ನಗರದ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.


ಭದ್ರಾವತಿಯಲ್ಲಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬ್ರೆಡ್, ಹಣ್ಣು ವಿತರಿಸಿದರು.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ಆರ್. ಕರುಣಾಮೂರ್ತಿ, ಜೆ.ಪಿ ಯೋಗೇಶ್, ಟಿ.ಡಿ ಶ್ರೀಧರ್, ಉಮೇಶ್, ಎನ್. ರಾಮಕೃಷ್ಣ, ಗೊಂದಿ ಜಯರಾಂ, ಭಾಗ್ಯಮ್ಮ, ಪುಷ್ಪಾವತಿ, ನಗರಸಭಾ ಸದಸ್ಯರಾದ ವಿಜಯ, ನಾಗರತ್ನ, ಸವಿತಾ, ಜಯಶೀಲ, ರೇಖಾ, ರೂಪಾವತಿ, ಬಸವರಾಜ ಬಿ ಆನೇಕೊಪ್ಪ, ಉದಯ್‌ಕುಮಾರ್, ಕೋಟೇಶ್ವರರಾವ್, ಮಾಜಿ ಸದಸ್ಯರಾದ ಎಚ್.ಬಿ ರವಿಕುಮಾರ್, ಎಂ. ರಾಜು, ಆನಂದ್, ಮೈಲಾರಪ್ಪ, ವಿಶಾಲಾಕ್ಷಿ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ಪತ್ರಿಕೆ ವಿತರಣೆ ಮಾಡುವುದು ಕೀಳರಿಮೆ ವೃತ್ತಿಯಲ್ಲ : ಮಧುಕರ್ ವಿ. ಕಾನಿಟ್ಕರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಪತ್ರಿಕಾ ವಿತರಕರ ಒಕ್ಕೂಟದಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೧ : ಮನೆ ಮನೆಗಳಿಗೆ ದಿನ ಪತ್ರಿಕೆ ವಿತರಣೆ ಮಾಡುವ ವೃತ್ತಿ ಕೀಳರಿಮೆಪಡುವ ಕಾಯಕವಲ್ಲ. ಅದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿಯಾಗಿದೆ ಎಂದು ತರುಣ ಭಾರತಿ ವಿಸ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಜ್ಯೂನಿಯರ್ ಪಾಲಿಟೆಕ್ನಿಕ್ ಶಾಲೆ(ಜೆಟಿಎಸ್) ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ನಾನು ಸಹ ಬಾಲ್ಯದಲ್ಲಿ ಸುಮಾರು ೧೨ ವರ್ಷಗಳ ಕಾಲ ಪತ್ರಿಕೆಗಳನ್ನು ವಿತರಣೆ ಮಾಡಿದ್ದೇನೆ. ಈ ಹಿನ್ನಲೆಯಲ್ಲಿ ಪತ್ರಿಕೆ ವಿತರಕರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ ಎಂದರು.
    ಪತ್ರಿಕೆ ವಿತರಣೆ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪತ್ರಿಕೆ ವಿತರಣೆ ಮಾಡುವುದು ಸುಲಭದ ಮಾತಲ್ಲವಾದರು ಪ್ರಜ್ಞಾಪೂರ್ವಕವಾಗಿ ಜನರನ್ನು ಮುಟ್ಟುವ ಹೆಮ್ಮೆಯ ಸಾಧನವಾಗಿದ್ದೀರಿ. ನೀವೆಲ್ಲರೂ ಒಗ್ಗಟ್ಟಾಗಿ ಸರಕಾರಗಳ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಆಹಮ್ಮದ್ ಮಾತನಾಡಿ, ಪತ್ರಿಕಾ ವಿತರಕರು ಕೊರೊನಾ ಕಾಲದಲ್ಲಿ ವಾರಿಯರ‍್ಸ್ ಎಂದು ಬಿರುದು ಪಡೆದು ಒಗ್ಗಟ್ಟಿನಲ್ಲಿ ವಿಫಲರಾಗಿದ್ದಾರೆ. ಚಿಂದಿ ಆರಿಸುವವರ ಕಲ್ಯಾಣಕ್ಕೆ ಸರಕಾರ ೩೫೦ ಕೋಟಿ ರು. ನೀಡಿದೆ. ಆದರೆ ಪತ್ರಿಕಾ ವಿತರಕರು ಒಗ್ಗಟ್ಟಿಲ್ಲದೆ ಅವರಿಗಿಂತ ಕೀಳಾಗಿದ್ದಾರೆ. ಇವೆಲ್ಲವನ್ನು ಗಮನಿಸಿದ ಒಕ್ಕೂಟದ ರಾಜ್ಯಾಧ್ಯಕ್ಷರ ಹೋರಾಟದಿಂದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರು ಪತ್ರಿಕಾ ವಿತರಕರಿಗೆ ಇ-ಶ್ರಮ್ ಮತ್ತು ಪ್ರಧಾನ ಮಂತ್ರಿಗಳ ಆರೋಗ್ಯ ಕಾರ್ಡುಗಳು ದೊರೆಯುವಂತೆ ಮಾಡಿದ್ದಾರಲ್ಲದೆ, ಇತ್ತೀಚೆಗೆ ಸಾಗರದ ಪತ್ರಿಕಾ ವಿತರಕ ಅಪಘಾತದಲ್ಲಿ ಸಾವು ಕಂಡು ಆ ಬಡ ಕುಟುಂಬಕ್ಕೆ ೨ ಲಕ್ಷ ರು. ಪರಿಹಾರ ದೊರಕಿಸಿ ಕೊಟ್ಟಿದ್ದಾರೆ. ಆದ್ದರಿಂದ ಇಲ್ಲಿನ ವಿತರಕರು ಕೀಳರಿಮೆ ಬಿಟ್ಟು ಎಲ್ಲರೂ ಸಂಘಟಿತರಾಗಿ ಎಂದರು.
    ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಕಾರ್ಯದರ್ಶಿ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರಾದ ಎನ್. ಬಾಬು, ಕೆ.ಎನ್.ರವೀಂದ್ರನಾಥ್ ಮಾತನಾಡಿದರು. ಪತ್ರಕರ್ತ ಅನಂತಕುಮಾರ್ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪರಶುರಾಮ್, ಸೋಮಶೇಖರ್, ಮಧು, ಯತೀಶ್, ನಿಂಗೋಜಿರಾವ್, ಸತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಟೋ ಚಾಲಕರಿಂದ ಶಾರದ ಅಪ್ಪಾಜಿ ಹುಟ್ಟುಹಬ್ಬ ಆಚರಣೆ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಜನ್ನಾಪುರ ಜಯಶ್ರೀ ವೃತ್ತದ ಬಳಿ ಶ್ರೀ ರವೀಂದ್ರನಾಥ ಠಾಕೋರ್ ಆಟೋ ನಿಲ್ದಾಣದ ವತಿಯಿಂದ ಪಕ್ಷದ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಎ.ಜಿ ರಾಧಮ್ಮ ಪ್ರಭಾಕರ್ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.
    ಭದ್ರಾವತಿ, ಜ. ೧ : ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಜನ್ನಾಪುರ ಜಯಶ್ರೀ ವೃತ್ತದ ಬಳಿ ಶ್ರೀ ರವೀಂದ್ರನಾಥ ಠಾಗೋರ್ ಆಟೋ ನಿಲ್ದಾಣದ ವತಿಯಿಂದ ಪಕ್ಷದ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಎ.ಜಿ ರಾಧಮ್ಮ ಪ್ರಭಾಕರ್ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.
    ಆಟೋ ಚಾಲಕರು, ಸ್ಥಳೀಯರು ನಿವಾಸಿ, ಅಭಿಮಾನಿಗಳು ಹಾಗು ಮುಖಂಡರು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾರದ ಅಪ್ಪಾಜಿಯವರು ನಮ್ಮ ಮೇಲೆ ಹೊಂದಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಆಟೋ ಚಾಲಕರಾದ ಅಪ್ಪಿ( ಆಟೋ ರಾಜು), ದೂದಾನಾಯ್ಕ, ನೂರುಲ್ಲಾ, ಮುಲಾಲಿ, ಹಂಪುಲ, ಮೋಹನ್, ಮುನ್ನ, ದಾದಾಪೀರ್, ಬಾಬಣ್ಣ, ರಾಜು, ಸೋಮಣ್ಣ, ಶಿವಣ್ಣ, ಪರಮಿ,  ವಾರ್ಡ್ ನಗರಸಭಾ ಸದಸ್ಯೆ ನಾಗರತ್ನ ಅನಿಲ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, December 31, 2022

ಪತ್ರಕರ್ತರಿಗೆ ನೂತನ ವರ್ಷದ ಡೈರಿ ವಿತರಣೆ

ಪ್ರತಿವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನ ವರ್ಷದ ಡೈರಿ ಬಿಡುಗಡೆಗೊಂಡಿದ್ದು, ಭದ್ರಾವತಿ ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕರವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಿಸಿದರು.
    ಭದ್ರಾವತಿ, ಡಿ. ೩೧: ಪ್ರತಿವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನ ವರ್ಷದ ಡೈರಿ ಬಿಡುಗಡೆಗೊಂಡಿದ್ದು, ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕರವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಿಸಿದರು.
    ಶನಿವಾರ ಸಂಜೆ ಹಳೇನಗರದ ಪ್ರತಿಕಾಭವನದಲ್ಲಿ ಡೈರಿಯನ್ನು ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.