Thursday, October 24, 2024

ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ' ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇನ್ನೂ ಹೆಚ್ಚು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮನವಿ ಮಾಡಿದರು. 
    ಅವರು ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಸಮಾಜದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿ ಹೆಚ್ಚಿದ್ದಾಗಿದೆ. ಶಾಸಕರಿಗೆ ಮತ್ತು ನಮ್ಮ ಕುಟುಂಬದವರಿಗೆ ಅವರ ಶ್ರಮದ ಅರಿವಿದೆ. ಈ ಹಿನ್ನಲೆಯಲ್ಲಿ ಪ್ರಾಮಾಣಿಕವಾಗಿ ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದೇವೆ. ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇದಕ್ಕೆ ಪೂರಕವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಹ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕೆಂದರು. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಶಿಮುಲ್ ನಿರ್ದೇಶಕ ಎಸ್. ಕುಮಾರ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸೂಡ ಸದಸ್ಯ ಎಚ್. ರವಿಕುಮಾರ್, ಕಾರ್ಮಿಕ ಮುಖಂಡ ವಿ. ವಿನೋದ್, ಸಿ.ಎಂ ಖಾದರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. 
    ಬಗರ್ ಹುಕುಂ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ, ನಗರಸಭೆ ಸದಸ್ಯರಾದ ಬಸವರಾಜ ಬಿ. ಆನೆಕೊಪ್ಪ, ಬಷೀರ್ ಅಹಮದ್, ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಸೈಯದ್ ರಿಯಾಜ್, ಸರ್ವಮಂಗಳ ಭೈರಪ್ಪ, ಕಾರ್ಮಿಕ ಮುಖಂಡರಾದ ಚಂದ್ರಶೇಖರ್, ಸುಂದರ್ ಬಾಬು, ಅಭಿಲಾಷ್, ಬಗರ್ ಹುಕುಂ ತಾಲೂಕು ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ, ಕಸಾಪ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಭದ್ರಾವತಿ ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ'ದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕಿಟ್‌ಗಳನ್ನು ವಿತರಿಸಿದರು. 

Wednesday, October 23, 2024

ಒಂದೇ ದಿನ ಓ.ಸಿ ಮಟ್ಕಾ ೩ ಪ್ರತ್ಯೇಕ ಪ್ರಕರಣ ದಾಖಲು

    ಭದ್ರಾವತಿ : ನಗರದ ವಿವಿಧ ಠಾಣೆಗಳಲ್ಲಿ ಒಂದೇ ದಿನ ಓ.ಸಿ ಮಟ್ಕಾ ಜೂಜಾಟ ೩ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ನಗರದ ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ. 
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಅ.೨೧ರ ಮಧ್ಯಾಹ್ನ ೩.೩೦ರ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸಂತೆ ಮೈದಾನದಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಗುಳ್ಯಪ್ಪ ಅ.೨೧ರ ರಾತ್ರಿ ೯ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ರಣಧೀರ ಪಡೆ ಸರ್ಕಲ್ ಹತ್ತಿರದ ಬಸ್ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ ಮಟ್ಕಾ ಜೂಜಾಟದಲಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಜಿ.ಎಂ ಈರಯ್ಯ ಅ.೨೧ರ ಸಂಜೆ ೪ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ವೀರಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಭವನ್ ಹೋಟೆಲ್ ಹತ್ತಿರ ಪರಿಶೀಲನೆ ನಡೆಸಿದಾಗ ಓರ್ವ ವ್ಯಕ್ತಿ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ಜಾಗೃತಿ, ಅರಿವು ಅತ್ಯಗತ್ಯ : ವೀರಬಸಪ್ಪ ಎಲ್. ಕುಶಲಾಪುರ

ಭದ್ರಾವತಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಿ.ಇಡಿ ಕಾಲೇಜ್ ಮತ್ತು ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಸಹಯೋಗದಲ್ಲಿ  `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೪' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಪ್ರಸ್ತುತ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮತ್ತು ಅರಿವು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರ ಸಹಕಾರ ಹೆಚ್ಚಿನದಾಗಿದೆ ಎಂದು ಲೋಕಾಯುಕ್ತ ಜಿಲ್ಲಾ ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್. ಕುಶಲಾಪುರ ಹೇಳಿದರು. 
     ಅವರು ಬುಧವಾರ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಿ.ಇಡಿ ಕಾಲೇಜ್ ಮತ್ತು ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೪' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
     ಸಮಾಜದ ಮುಂದಿನ ಪೀಳಿಗೆಯ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮತ್ತು ಅರಿವಿನ ಜೊತೆಗೆ ಹಗರಣಗಳ ದೂರು ನೀಡುವ ಪ್ರಕ್ರಿಯೆಗಳು ಮತ್ತು ನ್ಯಾಯದ ಪಾರದರ್ಶಕತೆ ಕುರಿತು ತಿಳಿದು ಕೊಳ್ಳಬೇಕೆಂದರು
ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಡಾ. ಎಸ್. ಪಿ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು.  ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿ ಸಂಭ್ರಮ ಪ್ರಾರ್ಥಿಸಿದರು. ಉಪನ್ಯಾಸಕಿ ಎಚ್.ವಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಸ್ವಾಗತಿಸಿ ವಂದಿಸಿದರು. 
         ಬಿ. ಇಡಿ ಕಾಲೇಜಿನ ಉಪನ್ಯಾಸಕ .ವರದರಾಜ ಸೇರಿದಂತೆ ಉಪನ್ಯಾಸಕ ವೃಂದ, ಬಿ. ಇಡಿ ಪ್ರಶಿಕ್ಷಣಾರ್ಥಿಗಳು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು.  

ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘಕ್ಕೆ ರಾಷ್ಟ್ರೀಯ ಜಲ ಪುರಸ್ಕಾರ

ಭದ್ರಾವತಿ ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಸಂಘದ ಅಧ್ಯಕ್ಷ ಸೈಯದ್ ಅಬಿದ್ ಮತ್ತು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿರುವುದು. 
    ಭದ್ರಾವತಿ: ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. 
    ನೀರು ಬಳಕೆದಾರರ ಸಹಕಾರ ಸಂಘ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ನೀರು ಸಂರಕ್ಷಣೆ ಕುರಿತು ರೈತರು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾದರಿಯಾಗಿದೆ. ಸಂಘದ ಕಾರ್ಯ ವೈಖರಿ ಕುರಿತು ಹಲವು ಬಾರಿ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇದೀಗ ೨ನೇ ಸ್ಥಾನದೊಂದಿಗೆ ಪುರಸ್ಕಾರಕ್ಕೆ ಪಾತ್ರವಾಗಿದೆ. 


    ರಾಷ್ಟ್ರಪತಿಯವರಿಂದ ಸಂಘದ ಅಧ್ಯಕ್ಷ ಸೈಯದ್ ಅಬಿದ್ ಹಾಗು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬುಧವಾರ ಪ್ರಶಸ್ತಿಯೊಂದಿಗೆ ನಗರಕ್ಕೆ ಆಗಮಿಸಿದ ಇಬ್ಬರನ್ನು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸನ್ಮಾನಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.  ಫೀರ್ ಷರೀಫ್, ಅಯುಬ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. 

ಕಮೀಷನ್, ಪಾರ್ಟ್ ಟೈಮ್ ಕೆಲಸ ನಂಬಿ ೨೧.೯೦ ಲಕ್ಷ ಕಳೆದುಕೊಂಡ ವ್ಯಕ್ತಿ

    ಭದ್ರಾವತಿ : ಟೆಲಿಗ್ರಾಂ ಆಪ್ ಮೂಲಕ ವ್ಯಕ್ತಿಯೊಬ್ಬರಿಗೆ ತೊಡಗಿಸಿದ ಬಂಡವಾಳಕ್ಕೆ ಶೇ.೩೦ ಕಮಿಷನ್ ಹಾಗು ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ನಂಬಿಸಿ ಸುಮಾರು ೨೧.೯೦ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
    ಹಳೇನಗರ ಪೊಲೀಸ್ ಠಾಣೆಯಲ್ಲಿ ಅ.೧೫ರಂದು ಪ್ರಕರಣ ದಾಖಲಾಗಿದೆ.  ಮುಸ್ಲಿಂ ಸಮುದಾಯಕ್ಕೆ ಸೇರಿರುವ, ಕೃಷಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಐಸಿಐಸಿಐ ಬ್ಯಾಂಕ್‌ನಲ್ಲಿ ಹೊಂದಿರುವ ತಮ್ಮ ಸ್ವಂತ ಬ್ಯಾಂಕ್ ಖಾತೆ ಮತ್ತು ಇದೆ ಬ್ಯಾಂಕ್‌ನಲ್ಲಿ ಮಗಳ ಹೆಸರಿನಲ್ಲಿ ಹೊಂದಿರುವ ಜಂಟಿ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡಿದ್ದಾರೆ. 
    ಪ್ರಕರಣದ ವಿವರ: 
    ಆ.೨೮ರಂದು ವಾಟ್ಸಪ್‌ನಲ್ಲಿ ಸಾರಿಕಾ ಎಂಬ ಹೆಸರಿನಿಂದ ವ್ಯಕ್ತಿಯೊಬ್ಬರಿಗೆ ಮೆಸೇಜ್ ಬಂದಿದ್ದು, `ನೀವು ಟೆಲಿಗ್ರಾಂ ಆಪ್‌ನಲ್ಲಿನ ಟ್ರಾವೆಲ್ಸ್ ಪಾರ್ಟರ್ನರ್ ಇಂಡಿಯಾ ೭೨೯೨ ಮತ್ತು ೯೧ ಕ್ಲಬ್ ಸರ್ವಿಸ್ ೧೬೯ ಎಂಬ ಗ್ರೂಪ್ ಜಾಯಿನ್ ಆಗಿ ಹಾಗು ನೀವು ಟ್ರಾವೆಲ್ಸ್ ಗ್ರೂಪ್ ಬಂಡವಾಳ ತೊಡಗಿಸಿದರೆ ನಿಮ್ಮ ಬಂಡವಾಳಕ್ಕೆ ಶೇ.೩೦ರಷ್ಟು ಕಮಿಷನ್ ಮತ್ತು ನಿಮಗೆ ಪಾರ್ಟ್ ಟೈಮ್ ಕೆಲಸ' ಎಂದು ಮೆಸೇಜ್‌ನಲ್ಲಿ ತಿಳಿಸಲಾಗಿದೆ. 
    ಈ ಟೆಲಿಗ್ರಾಂ ಗ್ರೂಪ್‌ನಲ್ಲಿ ೪೭ ಜನರಿದ್ದು, ಇದರಲ್ಲಿ ಸಾರಿಕಾ ಏಜೆಂಟ್ ಮತ್ತು ದಿವ್ಯ ದರ್ಶನಿ ಎಂಬುವವರು ಮತ್ತು ಗ್ರೂಪ್‌ನ ಆಡ್ಮಿನ್ ಅಮ್ರಿತ್ ಪಾಟೀಲ್ ಎಂಬುವವರು ಟೆಲಿಗ್ರಾಂನಲ್ಲಿ ಮೆಸೇಜ್ ಮಾಡಿ ನೀವು ಬಂಡವಾಳ ತೊಡಗಿಸಿ ಎಂದು ತಿಳಿಸಿದ್ದಾರೆ. 
ಕಮಿಷನ್ ಹಾಗು ಪಾರ್ಟ್ ಟೈಮ್ ಕೆಲಸದ ಆಸೆಗೆ ಬಿದ್ದು,  ತಮ್ಮ ಸ್ವಂತ ಬ್ಯಾಂಕ್ ಖಾತೆ ಮತ್ತು ಇದೆ ಮಗಳ ಹೆಸರಿನಲ್ಲಿ ಹೊಂದಿರುವ ಜಂಟಿ ಬ್ಯಾಂಕ್ ಖಾತೆಯಲ್ಲಿನ ಹಣ ಪೋನ್ ಪೇ, ನೆಟ್ ಬ್ಯಾಂಕ್ ಹಾಗು ಚೆಕ್ ಮೂಲಕ ಒಟ್ಟು ೨೧,೯೦,೫೯೫ ರು. ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಳೇನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Tuesday, October 22, 2024

ಕಾಡುಕೋಣ ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಇಬ್ಬರ ಸೆರೆ

ಭದ್ರಾವತಿ ಅರಣ್ಯ ವಿಭಾಗದ ತಂಡ ಯಶಸ್ವಿ ಕಾರ್ಯಾಚರಣೆ 

ಕಾಡುಕೋಣ ಹತ್ಯೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಭದ್ರಾವತಿ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ. 
    ಭದ್ರಾವತಿ : ಕಾಡುಕೋಣ ಹತ್ಯೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ. 
    ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಶ್ರೀನಿವಾಸಪುರ ನಿವಾಸಿ ಶಿವರಾಮ(೬೫) ಮತ್ತು ಉಕ್ಕುಂದ ಗ್ರಾಮದ ನಿವಾಸಿ ರಂಗಸ್ವಾಮಿ(೩೮) ಸೇರಿದಂತೆ ೩ ಜನರ ವಿರುದ್ಧ ಅ.೧೭ರಂದು ಪ್ರಕರಣ ದಾಖಲಾಗಿತ್ತು. ಈ ಪೈಕಿ ಶಿವರಾಮ ಮತ್ತು ರಂಗಸ್ವಾಮಿ ತಲೆ ಮರೆಸಿಕೊಂಡಿದ್ದರು. 
    ಇವರ ಪತ್ತೆಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ ರತ್ನಪ್ರಭಾ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಬಿ.ಎಚ್ ದುಗ್ಗಪ್ಪರವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಉಪವಲಯ ಅರಣ್ಯ ಅಧಿಕಾರಿಗಳಾದ, ಪಿ. ಅಣ್ಣ ನಾಯ್ಕ್, ಕೃಷ್ಣಾರೆಡ್ಡಿ, ಶೇಖರ್ ಚೌಗುಲೆ, ಹನುಮಂತ ನಾಯ್ಕ್, ಕೋರ್ಟ್ ಅಂಡ್ ಸರ್ವೆ ಸಿಬ್ಬಂದಿ ಹನುಮಂತರಾಯ ಗಸ್ತು ಅರಣ್ಯ ಪಾಲಕರಾದ ಎಸ್. ಕಾಂತೇಶ್ ನಾಯ್ಕ್, ವಿನೋದ್ ಬಿರಾದರ್, ಬಾಲರಾಜ್, ಪಿ. ನಾಗೇಂದ್ರ, ಸಿ. ಚಂದ್ರಶೇಖರ್, ಪ್ರಥಮ ದರ್ಜೆ ಸಹಾಯಕ ಎಸ್. ಎಲ್ ಸಂತೋಷ್ ಕುಮಾರ್ ಹಾಗೂ ಅರಣ್ಯ ವೀಕ್ಷಕರು ತಂಡದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  ತಂಡ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಅರಣ್ಯ ವಿಭಾಗದ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

೪೩ನೇ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಡಿ. ನಾಗರಾಜ್ ಆಯ್ಕೆ.

ಕರ್ನಾಟಕ ರಾಜ್ಯ ಯೋಗ ಸಂಸ್ಥೆ ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಾ. ವಿಷ್ಣುವರ್ಧನ್ ರಸ್ತೆಯ, ಓಂಕಾರಾಶ್ರಮದ ಸತ್ಸಂಗ ಭವನದಲ್ಲಿ ನಡೆದ ೪೩ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ವಿವೇಕಾನಂದ ಯೋಗ ಕೇಂದ್ರದ ಡಿ. ನಾಗರಾಜ್ ೬೦ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡು ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಯೋಗ ಸಂಸ್ಥೆ ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಾ. ವಿಷ್ಣುವರ್ಧನ್ ರಸ್ತೆಯ, ಓಂಕಾರಾಶ್ರಮದ ಸತ್ಸಂಗ ಭವನದಲ್ಲಿ ನಡೆದ ೪೩ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಕೇಂದ್ರದ ಡಿ. ನಾಗರಾಜ್ ೬೦ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ಡಿ.೨೮, ೨೯ ಮತ್ತು ೩೦ರಂದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯಲ್ಲಿರುವ ೪೩ನೇ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಕಾರ್ಯದರ್ಶಿ ಡಿ.ಪುಟ್ಟೇಗೌಡರವರು ನಾಗರಾಜ್‌ರವರಿಗೆ ಬೆಳ್ಳಿ ಪದಕ ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.  ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಖಜಾಂಚಿ ಎಲ್.ಎಸ್ ಈಶ್ವರ್ ಹಾಗೂ ಕಾರ್ಯದರ್ಶಿ ಕೆ. ಗೋವಿಂದ ರಾವ್ ಉಪಸ್ಥಿತರಿದ್ದರು. ನಾಗರಾಜ್‌ರವರಿಗೆ ನಗರದ ಯೋಗಪಟುಗಳು, ಕ್ರೀಡಾಭಿಮಾನಿಗಳು ಹಾಗು ಗಣ್ಯರು ಅಭಿನಂದಿಸಿದ್ದಾರೆ.