Tuesday, October 6, 2020

ಸಾಗುವಳಿ ಚೀಟಿ, ಖಾತೆ ಪಹಣಿ ನೀಡಲು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಆರ್‌ಟಿಸಿಯಲ್ಲಿ ಅರಣ್ಯ ಭೂಮಿ ನಮೂದು, ಗ್ರಾಮಸ್ಥರಲ್ಲಿ ಆತಂಕ

ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ಭದ್ರಾವತಿ ತಾಲೂಕಿನ ದಾನವಾಡಿ ಮತ್ತು ಕೋಡಿ ಹೊಸೂರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದರು.
ಭದ್ರಾವತಿ, ಅ. ೬: ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ತಾಲೂಕಿನ ದಾನವಾಡಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.
        ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಒಟ್ಟು ೪೬೯ ಎಕರೆ ಗೋಮಾಳ ಜಮೀನು ಇದ್ದು, ೨೦೧೨-೧೩ನೇ ಸಾಲಿನಲ್ಲಿ ಅರಣ್ಯ ಎಂದು ಗಣಕೀಕೃತ ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿದೆ.
        ಈ ಜಮೀನಿನಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕುಟುಂಬದ ರೈತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗುತ್ತಿದ್ದಾರೆ. ಒಟ್ಟು ೯೦ ರಿಂದ ೯೫ ಕುಟುಂಬಗಳು ವಾಸಿಸುತ್ತಿದ್ದು, ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ರೈತರು ಹಲವಾರು ಬಾರಿ ತಾಲೂಕು ಕಛೇರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ೨೦೧೨-೧೩ರವರೆಗೆ ಜಮೀನಿನ ಆರ್‌ಟಿಸಿ ದಾಖಲೆಯಲ್ಲಿ ಗೋಮಾಳ ಜಮೀನು ಎಂದು ನಮೂದಾಗಿರುತ್ತದೆ. ನಂತರ ಯಾವುದೇ ದಾಖಲಾತಿ ಇಲ್ಲದೆ ಅರಣ್ಯ ಇಲಾಖೆ ಜಮೀನು ಎಂದು ತಪ್ಪಾಗಿ ನಮೂದಿಸಲಾಗಿರುತ್ತದೆ.
       ತಕ್ಷಣ ಆರ್‌ಟಿಸಿ ದಾಖಲೆಯಲ್ಲಿ ನಮೂದಾಗಿರುವ ತಪ್ಪನ್ನು ಸರಿಪಡಿಸಿಕೊಂಡು ರೈತರಿಗೆ ೫೦, ೫೩ ಮತ್ತು ೫೭ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು  ಪರಿಗಣಿಸಿ ಸಾಗುವಳಿ ಚೀಟಿ ಹಾಗು ಖಾತೆ ಪಹಣಿಯನ್ನು ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
     ಇದೆ ರೀತಿ ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ಕೋಡಿ ಹೊಸೂರು ಗ್ರಾಮದ ಗ್ರಾಮಸ್ಥರು ಸಹ ಮನವಿ ಸಲ್ಲಿಸಿದ್ದು, ಸರ್ವೆ ನಂ. ೧೨ ಮತ್ತು ೨೨ರಲ್ಲಿ ಒಟ್ಟು ೨೩ ಎಕರೆ ೨೬ ಗುಂಟೆ ಹಾಗು ಸರ್ವೆ ನಂ. ೨೨ರಲ್ಲಿ ೧೪೫ ಎಕರೆ ೨೮ ಗುಂಟೆ ಗೋಮಾಳ ಮತ್ತು ದನಗಳ ಮುಫತ್ತು ಜಮೀನು ಇದ್ದು, ೧೯೮೪-೮೫ರ ನಂತರ ಈ ಎರಡು ಜಮೀನು ಸಹ ದಾನವಾಡಿ ಮೈನರ್ ಫಾರೆಸ್ಟ್ ಎಂದು ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿರುತ್ತದೆ. ಈ ಹಿನ್ನಲೆಯಲ್ಲಿ ಎರಡು ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ತಕ್ಷಣ ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿದೆ.
       ಮನವಿಯನ್ನು ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಸ್ವೀಕರಿಸಿದರು. ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜನ ಸೈನ್ಯ ಅಧ್ಯಕ್ಷ ಕೆ. ಮಂಜುನಾಥ್, ಗ್ರಾಮಸ್ಥರಾದ ನಾಗಪ್ಪ, ಕೃಷ್ಣಪ್ಪ, ಬಸಪ್ಪ, ಎಂ. ಚಂದ್ರಪ್ಪ, ಎಚ್. ಬಸ ವರಾಜ, ಚಂದ್ರಮ್ಮ, ಶೋಭ, ಜಯಮ್ಮ, ರವಿ, ರತ್ನಮ್ಮ, ನಂಜಮ್ಮ, ನರಸಿಂಹಪ್ಪ, ಕಮಲಮ್ಮ, ಜಯಮ್ಮ, ಬಿ.ಆರ್ ಬಸವರಾಜಪ್ಪ, ಟಿ.ಎಲ್ ಶೇಖರಪ್ಪ, ದೇವಮ್ಮ, ಶಾಂತಮ್ಮ, ಎಸ್.ಎಂ ನಾಗರಾಜಪ್ಪ, ಕರಿಯಮ್ಮ, ರತ್ನಾಬಾಯಿ, ಆರ್. ರವಿಚಂದ್ರ, ಶರಣಪ್ಪ, ಎಂ. ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, October 5, 2020

ವಿದ್ಯುತ್ ಕ್ಷೇತ್ರ ಖಾಸಗಿಕರಣ, ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ

ವಿದ್ಯುತ್ ಕ್ಷೇತ್ರ ಖಾಸಗಿಕರಣ ಹಾಗು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಭದ್ರಾವತಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಅ. ೫: ವಿದ್ಯುತ್ ಕ್ಷೇತ್ರ ಖಾಸಗಿಕರಣ ಹಾಗು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
     ಕೆಪಿಟಿಸಿಎಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅಧಿಕಾರಿಗಳು, ನೌಕರರು ಕಪ್ಪುಪಟ್ಟಿ ಧರಿಸಿ ಖಾಸಗಿಕರಣ ಹಾಗು ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.
       ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಕುಮಾರ್, ಲೆಕ್ಕಾಧಿಕಾರಿ ರಾಮಾಚಂದ್ರಪ್ಪ, ಯೂನಿಯನ್ ಕೇಂದ್ರ ಸಮಿತಿ ಸದಸ್ಯ ಹೇಮಣ್ಣ ಸೇರಿದಂತೆ ಇನ್ನಿತರರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
      ಯೂನಿಯನ್ ಅಧ್ಯಕ್ಷ  ಆನಂದ್, ಪರಿಶಿಷ್ಟ ಜಾತಿ, ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಲೋಕೇಶ್, ಅಬ್ದುಲ್ ಮುನಾಫ್,  ಎಲ್ಲಾ ಕಚೇರಿಗಳ ಸಹಾಯಕ ಇಂಜಿನಿಯರ್‌ಗಳು, ಶಾಖಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.


ದ್ವಿಚಕ್ರ ವಾಹನ ಕಾಲುವೆಗೆ ಬಿದ್ದು ಮಹಿಳೆ ಸಾವು

ಭದ್ರಾವತಿ, ಅ. ೫: ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
        ತಾಲೂಕಿನ ಎರೆಹಳ್ಳಿ ಗ್ರಾಮದ ಗೀತಾ(೩೩) ಎಂಬುವರು ಮೃತಪಟ್ಟಿದ್ದು, ಅಂತರಗಂಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸ್ಥಾಪಕರ ಆಶಯದಂತೆ ಜಯ ಕರ್ನಾಟಕ ಸಂಘಟನೆ ಬಲವರ್ಧನೆ

ಯುವಕರಿಗೆ ಹೆಚ್ಚಿನ ಆದ್ಯತೆ, ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳ ನೇಮಕ : ಜಗದೀಶ್


ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸಿದ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್‌ರವರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ, ಅಭಿನಂದಿಸಿದರು.
ಭದ್ರಾವತಿ, ಅ. ೫: ರಾಜ್ಯಾದ್ಯಂತ ಜಯ ಕರ್ನಾಟಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಘಟನೆಯ ಸಂಸ್ಥಾಪಕರ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಕರೆ ನೀಡಿದರು.
      ಅವರು ಅಧ್ಯಕ್ಷರಾದ ನಂತರ ಸೋಮವಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸಂಘಟನೆಯ ಪ್ರಮುಖರು ಹಾಗು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.  ಮುತ್ತಪ್ಪ ರೈರವರು ಸಮಾಜಮುಖಿ ಚಿಂತನೆಗಳೊಂದಿಗೆ, ಜನಪರ ಕಾಳಜಿಯಿಂದ ಸಂಘಟನೆಯನ್ನು ಹುಟ್ಟು ಹಾಕಿದರು. ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋಗಿರುವ ಸಂಘಟನೆ ನಮ್ಮೊಂದಿಗಿದೆ. ಈ ಹಿನ್ನಲೆಯಲ್ಲಿ ಆ ಮೂಲಕ ಅವರನ್ನು ಕಾಣುವ ಪ್ರಯತ್ನ ಸಂಘಟನೆಯ ಎಲ್ಲರೂ ಮಾಡಬೇಕಾಗಿದೆ.
      ಜಯ ಕರ್ನಾಟಕ ಸಂಘಟನೆ ಕೇವಲ ನೆಲ, ಜಲ, ಭಾಷೆ ಹೋರಾಟಕ್ಕೆ ಸೀಮಿತವಾಗಿರದೆ ಜನರ ಮಾನವೀಯ ಮೌಲ್ಯಗಳಿಗೆ ಸ್ಪಂದಿಸಲಿದೆ ಎಂಬುದನ್ನು ಕಳೆದ ೫-೬ ತಿಂಗಳುಗಳಿಂದ ಕೈಗೊಳ್ಳುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳಿಂದ ಎಲ್ಲರೂ ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಮಾದಕ ವ್ಯಸನ ವಿರುದ್ಧ ಸಂಘಟನೆ ಹೋರಾಟ ಇಳಿದಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಹಿಂದಿ ಭಾಷೆ ಏರಿಕೆ ಮಾಡಲು ಯತ್ನಿಸಿದ್ದು, ಇದರ ವಿರುದ್ಧ ಸಹ ಹೋರಾಟ ನಡೆಸಿ ಕನ್ನಡ ನೆಲದಲ್ಲಿ ಕನ್ನಡಕ್ಕೆ ಮಾತ್ರ ಮೊದಲ ಆದ್ಯತೆ ಎಂಬುದನ್ನು ತಿಳಿಸಲಾಗಿದೆ. ಇದೆ ರೀತಿ ಹಲವಾರು ಜನಪರ ಹೋರಾಟಗಳಲ್ಲಿ ಸಂಘಟನೆ ಮುಂಚೂಣಿಯಲ್ಲಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ೩೦ ಮಂದಿ ರಾಜ್ಯ ಪದಾಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಸಂಘಟನೆಯಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಅವರಿಗೆ ತರಬೇತಿ ಸಹ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆ ಹಾಗು ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳನ್ನು ರಚಿಸಲಾಗುತ್ತಿದೆ ಎಂದರು.
      ಇದಕ್ಕೂ ಮೊದಲು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಅಧ್ಯಕ್ಷರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
        ಪ್ರಧಾನ ಕಾರ್ಯದಶಿ ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷ ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಹರೀಶ್, ತಾಲೂಕು ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪ್ರಮುಖರಾದ ಪ್ರಾನ್ಸಿಸ್, ಮುಕುಂದಪ್ಪ, ಪ್ರಸನ್ನ, ಜ್ಯೋತಿ ಪ್ರಸಾದ್, ಕಿರಣ್, ರಾಖಿ, ಗಾಂಧಿ ಅಶೋಕ, ಚಂದ್ರು, ದಾಸ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಘಟನೆಗೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಸಿ.ಎಂ ಆದಿತ್ಯನಾಥ ಪ್ರತಿಕೃತಿ ದಹಿಸಿ ಆಕ್ರೋಶ

ಭದ್ರಾವತಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಭದ್ರಾವತಿ, ಅ. ೫: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನಗರದ ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
       ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರವರ ಪ್ರತಿಕೃತಿ ದಹಿಸುವ ಮೂಲಕ ಸಾಮೂಹಿಕ ಅತ್ಯಾಚಾರ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಆರೋಪಿಗಳನ್ನು ರಕ್ಷಿಸಲು ಸಾಕ್ಷಿಗಳನ್ನು ನಾಶಮಾಡಿದ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಲಾಯಿತು.
       ಒಕ್ಕೂಟದ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ನಗರಸಭೆ ಮಾಜಿ ಬಿ.ಕೆ ಮೋಹನ್, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ  ಬಸವರಾಜ್ ಬಿ. ಆನೇಕೊಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜೋಸೆಫ್, ಜಾವಿದ್, ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ಕುಬೇಂದ್ರಪ್ಪ,  ಜೆಬಿಟಿ ಬಾಬು, ರಾಜೇಂದ್ರ, ಬದರಿನಾರಾಯಣ, ಚನ್ನಪ್ಪ, ಎಂ. ಶಿವಕುಮಾರ್, ಕರಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, October 4, 2020

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಘಟನೆಗೆ ಖಂಡನೆ

 ಅ.೫ರಂದು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಭದ್ರಾವತಿ, ಅ. ೪: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ ‘ಮನೀಷಾ ವಾಲ್ಮೀಕಿ’ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನಗರದ ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
     ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆಆರೋಪಿಗಳನ್ನು ರಕ್ಷಿಸಲು ಸಾಕ್ಷಿ ಗಳನ್ನು ನಾಶಮಾಡಿದ ಉತ್ತರ ಪ್ರದೇಶದ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕೆಂದು ಒತ್ತಾಯಿಸಲಾಯಿತು.
     ಘಟನೆಯನ್ನು ಖಂಡಿಸಿ ಅ.೫ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
     ಸಭೆಯಲ್ಲಿ ಒಕ್ಕೂಟದ ಪ್ರಮುಖರಾದ ಸುರೇಶ್, ಜಿ. ರಾಜು, ಬಸವರಾಜ್ ಬಿ. ಆನೇಕೊಪ್ಪ, ಎಚ್. ರವಿಕುಮಾರ್, ಪರಮೇಶ್ವರ ಚಾರ್, ಜೆಬಿಟಿ ಬಾಬು, ಜಗದೀಶ್, ಎ. ತಿಪ್ಪೇಸ್ವಾಮಿ, ಆದಿತ್ಯಶಾಮ, ಮುಸ್ವೀರ್ ಬಾಷಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೋಚಿಗಾರ ಸಂಘದ ಮಹಿಳೆಯರ ಕುಂದು-ಕೊರತೆ ಸಭೆ

 

ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆಯನ್ನು ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ, ಪಿ. ಗಣೇಶ್‌ರಾವ್, ರೇಖಾ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆ ಭಾನುವಾರ ನಡೆಯಿತು.
     ಬಿಜೆಪಿ ಪಕ್ಷದ ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ ಸಂಘದ ಕುಂದು ಕೊರತೆ ಆಲಿಸುವ ಜೊತೆಗೆ ಪ್ರಸ್ತುತ ಸಂಘದ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಡಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಡಾ. ಪುಷ್ಪಲತಾ, ಸುಶೀಲಮ್ಮ, ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಅಧ್ಯಕ್ಷೆ ರೇಖಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.