ಭದ್ರಾವತಿ : ವ್ಯಾಟ್ಸಪ್ನಲ್ಲಿ ಬಂದ ಮೆಸೇಜ್ ನಂಬಿ ಆನ್ಲೈನ್ನಲ್ಲಿ ರಿವ್ಯೂಸ್ ಮಾಡಿದರೇ ಹೆಚ್ಚಿಗೆ ಹಣ ಸಂಪಾದಿಸಬಹುದೆಂಬ ದುರಾಸೆಗೆ ಬಿದ್ದು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ನಗರದ ಚಾಮೇಗೌಡ ಏರಿಯಾ ನಿವಾಸಿ, ಸುಮಾರು ೪೨ ವರ್ಷದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. ವಿಪರ್ಯಾಸವೆಂದರೆ ಘಟನೆ ನಡೆದು ಸುಮಾರು ೯ ತಿಂಗಳ ನಂತರ ದೂರು ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇವರು ನಗರದ ರೈಲ್ವೆ ನಿಲ್ದಾಣದ ಹತ್ತಿರವಿದ್ದಾಗ ಇವರ ಮೊಬೈಲ್ ಸಂಖ್ಯೆಯ ವ್ಯಾಟ್ಸಪ್ಗೆ ಮೆಸೇಜ್ ಬಂದಿದ್ದು, ಬಿಡುವಿನ ಸಮಯದಲ್ಲಿ ಆನ್ಲೈನ್ನಲ್ಲಿ ರಿವ್ಯೂಸ್ ಮಾಡಿದರೇ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ತಿಳಿಸಲಾಗಿದೆ. ನಂತರ ೫ ಹೋಟೆಲ್ಗಳ ರಿವ್ಯೂಸ್ ಮಾಡಿದರೇ ೧೫೦ ರು. ಹಣ ಗಳಿಸಬಹುದೆಂದು ಮೆಸೇಜ್ ಬಂದಿದೆ. ಇದಾದ ನಂತರ ಹೋಟೆಲ್ಗಳ ಪೋಟೋ ಮತ್ತು ಲಿಂಕ್ಗಳನ್ನು ಕಳುಹಿಸಿ ರಿವ್ಯೂಸ್ ಕೊಡಲು ತಿಳಿಸಲಾಗಿದೆ. ಮುಂದಿನ ಪ್ರಕ್ರಿಯೆ ಆರಂಭಿಸಿದಾಗ ಇವರ ಬ್ಯಾಂಕ್ ಖಾತೆ ೩ ಬಾರಿ ೧೫೦ ರು. ಬಂದಿದೆ. ನಂತರ ಟಾಸ್ಕ್ ೨೦ ಎಂದು ಮೆಸೇಜ್ ಬಂದಿದ್ದು, ಈ ಮೆಸೇಜ್ನಲ್ಲಿ ೧೦೦೦ ರು. ಹೂಡಿದರೇ ೧೨೦೦ ರು. ೧೦ ನಿಮಿಷದಲ್ಲಿ ವಾಪಸ್ ಬರುತ್ತದೆ ಎಂದು ತಿಳಿಸಿದ್ದು, ಅದರಂತೆ ೧೦೦೦ ರು. ಹೂಡಿದ್ದು, ಇವರ ಬ್ಯಾಂಕ್ ಖಾತೆಗೆ ೧೨೦೦ ರು. ವಾಪಸ್ ಬಂದಿದೆ.
ಇದರಿಂದ ದುರಾಸೆಗೆ ಬಿದ್ದು, ಹೆಚ್ಚಿನ ಹಣ ಸಂಪಾದಿಸಬಹುದು ಎಂದು ತನ್ನ ೩ ಬ್ಯಾಂಕ್ ಖಾತೆಗಳಿಂದ ಸುಮಾರು ೭೦ ಸಾವಿರ ರು. ಹಣ ಹೂಡಿದ್ದು, ಆದರೆ ಈ ಹಣ ವಾಪಸ್ ಬಂದಿಲ್ಲ. ಸುಮಾರು ೯ ತಿಂಗಳಾದರೂ ಸಹ ಈ ಸಂಬಂಧ ಯಾವುದೇ ಮಾಹಿತಿ ಬಾರದ ಹಿನ್ನಲೆಯಲ್ಲಿ ಮೋಸ ಹೋಗಿರುವುದು ಅರಿವಾಗಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಗೆ ದೂರು ನೀಡಿ, ವಂಚನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
No comments:
Post a Comment