Saturday, October 31, 2020

ರೈತರಿಂದ ಭೂಮಿ ಹುಣ್ಣಿಮೆ ಪೂಜೆ

ಭದ್ರಾವತಿ ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೧: ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
      ಮುಂಜಾನೆ ಹೊಲ, ಗದ್ದೆ, ತೋಟಗಳಲ್ಲಿ ಬೆಳೆಗಳ ನಡುವೆ ಚಪ್ಪರ ಹಾಕಿ ಭೂಮಿಯನ್ನು ಸಾರಿಸಿ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳ ನಡುವೆ ಕಳಸವಿಟ್ಟು, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಾಳೆಕಂದು, ತಳಿರುತೋರಣಗಳಿಂದ ಸಿಂಗರಸಿ ಭೂ ಮಾತೆಯನ್ನು ಪೂಜೆಸಲಾಯಿತು. ಕೆಲವು ಭಾಗಗಳಲ್ಲಿ ತೋಟದಲ್ಲಿನ ಅಡಕೆ, ತೆಂಗಿನ ಮರಗಳಿಗೆ ಬಣ ಬಣ್ಣದ ಸೀರೆಗಳಿಂದ ಸಿಂಗರಿಸಿ ಭೂ ಮಾತೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು.

ಮುಂದಿನ ಒಂದು ವರ್ಷದೊಳಗೆ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಪೂರ್ಣ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಹಕಾರದೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೩೧:  ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಣದ ಕೊರತೆಯಿಂದ ವಾಲ್ಮೀಕಿ ಭವನ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ನೆರವು ಕೋರಬೇಕಾಗಿದೆ. ಅಲ್ಲದೆ ಸಮಾಜದ ಬಂಧುಗಳು ಸಹ  ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ನೆರವು ನೀಡಲು ಮುಂದಾಗಬೇಕು. ಮುಂದಿನ ವಾಲ್ಮೀಕಿ ಜಯಂತಿಯನ್ನು ನೂತನ ಭವನದಲ್ಲಿ ಆಚರಿಸುವಂತಾಗಬೇಕೆಂದರು.


ಭದ್ರಾವತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
     ಪ್ರಸ್ತುತ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಯವರ ಆದರ್ಶತನಗಳು ಅವಶ್ಯಕವಾಗಿದ್ದು, ಅವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ಪ್ರೀತಿ, ಸಹೋದರತ್ವ, ಸಹಬಾಳ್ವೆ, ಸಮಾನತೆ, ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕು. ಇದು ಮಹರ್ಷಿ ವಾಲ್ಮೀಕಿಯವರು ಈ ಜಗತ್ತಿಗೆ ನೀಡಿರುವ ದೊಡ್ಡ ಸಂದೇಶವಾಗಿದೆ. ಇದನ್ನು ಅರಿತು ಎಲ್ಲರೂ ಮುನ್ನಡೆಯಬೇಕೆಂದರು.
     ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ. ಲಕ್ಷ್ಮೀದೇವಿ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ನಗರ ವೃತ್ತ ನಿರೀಕ್ಷ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ಠಾಣಾಧಿಕಾರಿ ದೇವರಾಜ್, ಶಿರಸ್ತೇದಾರ್ ಮಂಜಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
     ಸಮಾಜದ ಗೌರವಾಧ್ಯಕ್ಷ ಬಸವರಾಜಪ್ಪ ಉಪನ್ಯಾಸ ನೀಡಿದರು. ಅಧ್ಯಕ್ಷ ಬಸವರಾಜ ಬಿ. ಆನೆಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ್, ನಾಗಣ್ಣ, ಪುಟ್ಟಸ್ವಾಮಿ ನಾಯಕ, ಪಾಲಯ್ಯ, ಜಯಮ್ಮ ಸೇರಿದಂತೆ ಇನ್ನಿತರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಸಮಾಜದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಶಿವಾನಂದ, ಕಾರ್ಯದಶಿ ಮಂಜುನಾಥ್ ಸೇರಿದಂತೆ, ನಿರ್ದೇಶಕರಾದ ಕಡದಕಟ್ಟೆ ಬಸವರಾಜ್, ಸದಾನಂದ, ಸದಾಶಿವಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್‌ನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‌ಭಾಯಿ ಪಟೇಲರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಕಛೇರಿ ಸಮೀಪದ ಇಸ್ಪಾತ್ ಭವನದ ಮುಂಭಾಗ ಶನಿವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
ಭದ್ರಾವತಿ, ಅ. ೩೧: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‌ಭಾಯಿ ಪಟೇಲರ ಹುಟ್ಟುಹಬ್ಬದ ಅಂಗವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಕಛೇರಿ ಸಮೀಪದ ಇಸ್ಪಾತ್ ಭವನದ ಮುಂಭಾಗ ಶನಿವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
      ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಎಂ.ವೈ. ಸುರೇಶ್ ಕನ್ನಡದಲ್ಲಿ, ಡಾ. ಸುಜೀತ್‌ಕುಮಾರ್ ಹಿಂದಿಯಲ್ಲಿ ಮತ್ತು ಡಾ. ರಾಜು ಆಂಗ್ಲ ಭಾಷೆಯಲ್ಲಿ ಪ್ರತಿಙ ವಿಧಿ ಬೋಧಿಸಿದರು. ವಿಶೇಷವಾಗಿ ಕೊರೋನಾ ಯೋಧರಿಗೆ ಗೌರವ ಸೂಚಿಸಲಾಯಿತು.
     ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್, ಸುರಜೀತ್‌ಮಿಶ್ರ, ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಪ್ರವೀಣ್‌ಕುಮಾರ್‌ದೇವಾಂಗಮಠ ನಿರೂಪಿಸಿದರು.

Friday, October 30, 2020

ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಭೂಮಿಪೂಜೆ

ಭದ್ರಾವತಿಯಲ್ಲಿ ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೦: ನಗರದ ಬಿ.ಹೆಚ್ ರಸ್ತೆ ಗೌಳಿಗರ ಬೀದಿ ಶ್ರೀರಾಮ ಮಂದಿರ ಆವರಣದಲ್ಲಿ ನಾಯ್ಡು ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಿವಮೊಗ್ಗ ಲೋಕಸಭಾ ಸದಸ್ಯರ ನಿಧಿsಯಿಂದ ರು. ೨೫ ಲಕ್ಷ ಬಿಡುಗಡೆಯಾಗಿದ್ದು,  ಶಾಸಕ ಬಿ.ಕೆ. ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
     ಬಿಜೆಪಿ ಪಕ್ಷದ ಮುಖಂಡರಾದ ವಿ. ಕದಿರೇಶ್, ಟಿ. ವೆಂಕಟೇಶ್, ಆನಂದ್, ಮಂಗೋಟೆ ರುದ್ರೇಶ್, ನಾಯ್ಡು ಸಮಾಜದ ಗೌರವಾಧ್ಯಕ್ಷರಾದ ಎಸ್. ಮೋಹನ್‌ನಾಯ್ಡು, ಅಧ್ಯಕ್ಷ ವಿ. ಗೋವಿಂದ್‌ರಾಜ್, ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ಉಪಾಧ್ಯಕ್ಷರಾದ ಪ್ರಭಾಕರ್. ಖಜಾಂಚಿ ಇಂದು ಶೇಖರ್, ಮೋಹನ್, ಜಯಕುಮಾರ್, ಚಲುವರಾಜ್, ವಾಸು, ಪಿ.ಎಸ್ ಬಾಬು, ಮುನಿಸ್ವಾಮಿ, ಬಾಲಚಂದ್ರ ಮುಂತಾದವರು ಉಪಸ್ಥಿತರಿದ್ದರು.


ನಗರಸಭೆ ಕಾರ್ಯಾಚರಣೆ : ಬೀದಿಬದಿ ಮೀನು ವ್ಯಾಪಾರಿಗಳ ತೆರವು

ಭದ್ರಾವತಿಯಲ್ಲಿ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
ಭದ್ರಾವತಿ, ಅ. ೩೦: ನಗರದ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
     ಮೀನುಗಾರರ ಬೀದಿ ಬಿ.ಎಚ್ ರಸ್ತೆ ದುರ್ಗಾ ನರ್ಸಿಂಗ್ ಹೋಂ ಬಳಿ ಹಾಗು  ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಸಮೀಪದಲ್ಲಿ ಪ್ರತಿ ದಿನ ಬೀದಿ ಬದಿ ಹಸಿ ಮೀನು ಮಾರಾಟ ನಡೆಸಲಾಗುತ್ತಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವವರು, ಸಮೀಪದ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಮೆಸ್ಕಾಂ ಸಿಬ್ಬಂದಿಗಳು ಹಾಗು ಸಮೀಪದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬರುತ್ತಿತ್ತು. 


       ಈ ಹಿನ್ನಲೆಯಲ್ಲಿ ನಗರಸಭೆ ಇಂಜಿನಿಯರ್ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಹಾಗು ಸೂಪರ್ ವೈಸರ್ ಎನ್. ಗೋವಿಂದ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.

ಈದ್ ಮಿಲಾದ್ : ಮುಸ್ಲಿಂ ಯುವಕರಿಂದ ಹಣ್ಣು-ಹಂಪಲು ವಿತರಣೆ

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
ಭದ್ರಾವತಿ, ಅ. ೩೦: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
   ನೌಜವಾನ್ ಕಮಿಟಿ ಪ್ರಮುಖರಾದ ಸೈಯದ್ ಫೈರೋಜ್, ನೂರು ಅಹಮದ್, ಖಲೀದ್ ರಜಾ, ಅದಿಲ್ ಮತ್ತು ರಹೀಮ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ನಿರ್ಮಲಾ ಆಸ್ಪತ್ರೆ ಒಳ ರೋಗಿಗಳಿಗೆ ಮತ್ತು ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ವಿಕಲಚೇತನರಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಹಬ್ಬದ ಶುಭಾಶಯ ಕೋರಿತು.
   ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಹುತೇಕ ಮುಸ್ಲಿಂ ಸಂಘಟನೆಗಳು ಸರಳವಾಗಿ ಹಬ್ಬವನ್ನು ಆಚರಿಸಿದವು. ಆಯಾ ಭಾಗದಲ್ಲಿರುವ ಮಸೀದಿಗಳಲ್ಲಿ ಗುರುವಾರ ರಾತ್ರಿ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಹುತೇಕ ಮಸೀದಿಗಳ ಬಳಿ ಮೆಕ್ಕಾ ಮದೀನ ಮಾದರಿಗಳನ್ನು ನಿರ್ಮಿಸಲಾಗಿತ್ತು.  ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಈ ಬಾರಿ ಹಬ್ಬದ ಸಂಭ್ರಮ ಕ್ಷೀಣಿಸಿರುವುದು ಕಂಡು ಬಂದಿತು.

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನ.೨ರಂದು ಸಭೆ


ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರನ್ನು ನಾಮಕರಣಗೊಳಿಸುವಂತೆ ನಡೆಸುತ್ತಿರುವ ಹೋರಾಟದ ಮುಂದಿನ ಹಂತದ ಬಗ್ಗೆ ಚರ್ಚಿಸಲು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನ.೨ರಂದು ಬೆಳಿಗ್ಗೆ 11ಕ್ಕೆ   ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
         ಸಭೆಯನ್ನು ಮಾಜಿ ಶಾಸಕ ವೈಎಸ್‌ವಿ ದತ್ತಾ ಉದ್ಘಾಟಿಸಲಿದ್ದು, ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ಕರುಣಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾರದ ಅಪ್ಪಾಜಿ, ಮುಖಂಡರಾದ ಕರಿಯಪ್ಪ, ಎಂ.ಎ ಅಜಿತ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
      ನಗರದ ಎಲ್ಲಾ ಸಂಘ-ಸಂಸ್ಥೆಗಳ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.