Thursday, August 3, 2023

ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಆ.೧೦ ರಿಂದ ಬಾರ್‌ಮಿಲ್‌ ಘಟಕ ಆರಂಭ

ಪ್ರಧಾನಿ, ಕೇಂದ್ರ ಸಚಿವರು, ಸಂಸದರಿಗೆ ಬಿಜೆಪಿ ಕೃತಜ್ಞತೆ

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗು ವಿಐಎಸ್‌ಎಲ್‌ ಕಾರ್ಖಾನೆ ಕಾರ್ಮಿಕ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಆ. ೩:  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಯಲ್ಲಿ ಸ್ಥಗಿತಗೊಂಡಿರುವ ಬಾರ್‌ಮಿಲ್‌  ಘಟಕ ಆ.೧೦ ರಿಂದ ಪುನಃ ಆರಂಭಗೊಳ್ಳಲಿದ್ದು,  ನಂತರದ ದಿನಗಳಲ್ಲಿ ಪ್ರೈಮರಿ ಮಿಲ್ ಘಟಕ ಕಾರ್ಯಾರಂಭಗೊಳ್ಳಲಿದೆ. ಇದರಿಂದಾಗಿ ಮುಚ್ಚುವ ಹಂತ ತಲುಪಿರುವ ಕಾರ್ಖಾನೆಗೆ ಮರುಜೀವ ಬಂದಂತಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್‌ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಸಂಘಟನೆಗಳು, ಸ್ಥಳೀಯ ಮತ್ತು ಜಿಲ್ಲಾ ಹಾಗು ರಾಜ್ಯಮಟ್ಟದ ಮುಖಂಡರು, ಜನಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಕೈಗೊಂಡ ಪರಿಶ್ರಮದಿಂದಾಗಿ ಘಟಕಗಳು ಕಾರ್ಯಾರಂಭಗೊಳ್ಳುತ್ತಿವೆ ಎಂದರು.
    ಕಾರ್ಖಾನೆಗೆ ಬಂಡವಾಳ ತೊಡಗಿಸಲು ಸಾಧ್ಯವಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದ ಉಕ್ಕು ಪ್ರಾಧಿಕಾರ (ಸೈಲ್) ಆಡಳಿತ ಮಂಡಳಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಥವಾ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಬಂಡವಾಳ ತೊಡಗಿಸಲು ಯಾವ ಕಂಪನಿಗಳು/ಬಂಡವಾಳಶಾಹಿಗಳು ಮುಂದೆ ಬಾರದ ಹಿನ್ನಲೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಮುಚ್ಚುವ ಪ್ರಕ್ರಿಯೆಗೆ ಆದೇಶ ನೀಡಿತ್ತು. ಆದರೆ ಕಾರ್ಮಿಕರ ಹೋರಾಟ ಹಾಗೂ ಕೇಂದ್ರ ಸಚಿವರು ಮತ್ತು ಕೇಂದ್ರ ಸರ್ಕಾರದ ನಡುವೆ ಸಂಸದ ಬಿ.ವೈ ರಾಘವೇಂದ್ರರವರು ನಡೆಸಿದ ನಿರಂತರ ಸಂಪರ್ಕದಿಂದಾಗಿ ಮುಚ್ಚುವ ಪ್ರಕ್ರಿಯೆಗೆ ಆದೇಶ ನೀಡಿದ್ದ ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿಯೇ ಇಂದು ಬಾರ್ ಮಿಲ್ ಹಾಗೂ  ಪ್ರೈಮರಿ ಮಿಲ್ ಘಟಕಗಳ ಆರಂಭದ ಶುಭಸೂಚನೆ ನೀಡಿದೆ. "ಬಾರ್ ಮಿಲ್ ಘಟಕದಲ್ಲಿ ಉತ್ಪಾದನೆ ಆ,೧೦ ರಿಂದ ಆರಂಭವಾಗಲಿದೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಿ" ಎಂಬ ಸಂದೇಶದ ಪ್ರತಿಯನ್ನು ಸಹ ಇಲ್ಲಿನ ಆಡಳಿತ ಮಂಡಳಿಯ ಅಧಿಕಾರಿಗಳು ನೋಟೀಸಿನಲ್ಲಿ ಹಾಕುವಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದರು.
    ಕಾರ್ಖಾನೆಯಲ್ಲಿ ನಿರಂತರ ಉತ್ಪಾದನೆಗಳು ನಡೆದರೆ ಕಾರ್ಮಿಕರಿಗೆ ಪೂರ್ಣ ಪ್ರಮಾಣ ಉದ್ಯೋಗ ದೊರಕುವುದಲ್ಲದೆ. ಮಂಜೂರಾಗಿರುವ ಗಣಿ ಕೂಡ ತನ್ನ ಕಾರ್ಯ ಆರಂಭಿಸಲಿದೆ. ಆ ಮೂಲಕ ನಿರಂತರ ಉತ್ಪಾದನೆಯಿಂದಾಗಿ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಬಹುದು. ಇದು ಬಂಡವಾಳ ಹೂಡಿಕೆಯ ಮೇಲೂ ಪರಿಣಾಮ ಬೀರಲಿದ್ದು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಹಂತದಿಂದ ಹೊರತರುವ ಸಾಧ್ಯತೆಗಳಿವೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಮಿಕರು ಹೊಂದಿರುವ ವಿಶ್ವಾಸ ಹಾಗು ನಂಬಿಕೆಯನ್ನುಉಳಿಸಿಕೊಂಡಿದ್ದಾರೆ. ಸುಮಾರು ೧೨ ವರ್ಷಗಳಿಂದಲೂ ಖಾಸಗಿಕರಣ, ಬಂಡವಾಳ ಹಿಂತೆಗೆದಂತಹ ಹಲವಾರು ಸಮಸ್ಯೆಗಳ ನಡುವೆ ಮುಚ್ಚುವ ಪ್ರಕ್ರಿಯೆ ಎದುರಾದರೂ ಉತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲದಂತೆ ನೋಡಿಕೊಂಡು, ಮುಚ್ಚಿದ್ದ ಬಾರ್ ಮಿಲ್ ತೆರೆಯಲು ಬೇಕಾದ ಅಗತ್ಯವಾದ ಬಜೆಟ್ ಸಿದ್ದಪಡಿಸಿ, ಬೇಕಾದಂತಹ ಕಚ್ಚಾವಸ್ತುಗಳು ಕಾರ್ಖಾನೆಗೆ ಸರಬರಾಜಾಗುವಂತೆ ಮಾಡುವಲ್ಲಿ ಸಂಸದರ ಪ್ರಯತ್ನ ಹೆಚ್ಚಿನದ್ದಾಗಿದೆ ಎಂದರು.
ಘಟಕಗಳು ಕಾರ್ಯಾರಂಭಗೊಳ್ಳಲು ಕಾರಣಕರ್ತರಾಗಿರುವ ಸಂಸದ ಬಿ.ವೈ ರಾಘವೇಂದ್ರ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಾರ್ಖಾನೆಯ ಕಾರ್ಮಿಕ ಸಂಘಟನೆಗಳು ಹಾಗೂ ಬಿಜೆಪಿ ಘಟಕದವತಿಯಿಂದ ಧನ್ಯವಾದ ಅರ್ಪಿಸಲಾಗುವುದು ಎಂದರು.  
    ಕಾರ್ಮಿಕ ಸಂಘದ  ಅಧ್ಯಕ್ಷ ಜೆ.ಜಗದೀಶ್ ಮಾತನಾಡಿ, ಕಾರ್ಖಾನೆಯ ವಸ್ತು ಸ್ಥಿತಿಯನ್ನು ಅಗತ್ಯ ದಾಖಲೆಗಳ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಸಂಸದರು ಯಶಸ್ವಿಯಾಗಿದ್ದಾರೆ. ಸಂಸದರು ಸರ್ಕಾರದ ಮಟ್ಟದಲ್ಲಿ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಅವರ ನಿರಂತರ ಪ್ರಯತ್ನದಿಂದ ಮುಚ್ಚುವ ಪ್ರಕ್ರಿಯೆ ಆದೇಶವಿದ್ದ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡುವಂತಾಗಿದೆ. ಇದು ಕಾರ್ಖಾನೆಯನ್ನು ಉಳಿಸಿಕೊಳ್ಳುವ ಒಂದು ಪ್ರಯತ್ನವಾಗಿದ್ದು, ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು. ಕಾರ್ಖಾನೆ ವಿಚಾರದಲ್ಲಿ ನಿರಂತರ ಪ್ರಯತ್ನದಲ್ಲಿರುವ ಬಿ.ವೈ ರಾಘವೇಂದ್ರ ಅವರಿಗೆ ಕಾರ್ಮಿಕರ ಪರವಾಗಿ ಅಭಿನಂದನೆ  ಸಲ್ಲಿಸುತ್ತೇನೆ ಎಂದರು.
    ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಕಾರ್ಖಾನೆಗೆ ಶಾಶ್ವತ ಬಂಡವಾಳ ತೊಡಗಿಸಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ, ಇದುವರೆಗಿನ ಹೋರಾಟದಿಂದಲೇ ಘಟಕಗಳು ಆರಂಭವಾಗಲು ಸಾಧ್ಯವಾಗಿದೆ. ಸರ್ಕಾರದ ಪಾಲಿಸಿ ಮ್ಯಾಟರ್ ಎಂದು ಸಂಸದರು ಕೈಕಟ್ಟಿ ಕುಳಿತುಕೊಳ್ಳದೆ ಕೆಲಸ ಮಾಡಿದ್ದಕ್ಕಾಗಿ ಉತ್ತಮ ಫಲಿತಾಂಶ ಹೊರಬಂದಿದೆ ಎಂದರು.
    ಗುತ್ತಿಗೆ ಕಾರ್ಮಿಕರ ಸಂಘಟನೆ(ಎಐಟಿಯುಸಿ) ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರುಗಳಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ತೀರ್ಥಯ್ಯ, ಮಂಜುಳ, ಮಂಗಳ, ಸುರೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, August 2, 2023

ಮಹಿಳೆಯರ ರಕ್ಷಣೆ ಮುಂದಾಗಿ, ತಪ್ಪಿತಸ್ಥರ ಗಲ್ಲು ಶಿಕ್ಷೆ ವಿಧಿಸಿ

ವಿವಿಧ ಮಹಿಳಾ ಸಂಘಟನೆಗಳಿಂದ ರಾಜ್ಯಪಾಲರಿಗೆ ಮನವಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಜೊತೆಗೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬುಧವಾರ  ಭದ್ರಾವತಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಜೊತೆಗೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬುಧವಾರ  ವಿವಿಧ ಮಹಿಳಾ ಸಂಘಟನೆಗಳಿಂದ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಮಹಿಳಾ ಪ್ರಮುಖರಾದ ಹೇಮಾವತಿ ವಿಶ್ವನಾಥ್‌, ಡಾ. ವಿಜಯದೇವಿ, ಎಂ.ಎಸ್‌ ಸುಧಾಮಣಿ, ರೂಪರಾವ್‌, ಆರ್.ಎಸ್‌ ಶೋಭಾ,  ರೂಪ ನಾಗರಾಜ್‌ ಸೇರಿದಂತೆ ಇನ್ನಿತರರು ಮಾತನಾಡಿ,  ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಹೇಯಕೃತ್ಯ ಮನುಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಉಡುಪಿ ಜಿಲ್ಲೆಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯರ ಮಾನ ಹಾನಿ ಪ್ರಕರಣ, ಮಂಗಳೂರಿನಲ್ಲಿ ದಲಿತ ಹೆಣ್ಣು ಮಗಳಿಗೆ ನಿರಂತರ ೪ ವರ್ಷ ಅತ್ಯಾಚಾರ ನಡೆಸಿರುವ  ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ  ನಿರಂತರವಾಗಿ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ.  ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಅಮಾನವೀಯ ಹಾಗೂ ರಾಕ್ಷಸತನದ ಪರಮಾವಧಿಯ ಹೇಯಕೃತ್ಯಗಳಾಗಿದ್ದು, ಇದನ್ನು ಲಿಂಗ ತಾರತಮ್ಯವಿಲ್ಲದೆ, ಜಾತಿ ಬೇಧವಿಲ್ಲದೆ, ರಾಜಕೀಯ ಬಣ್ಣ ಬಳಿಯದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಡೀ ಮನುಕುಲವನ್ನು ಜಾಗೃತಗೊಳಿಸಬೇಕಾಗಿದೆ. ಇಂತಹ ಘಟನೆಗಳು ದೇಶದಲ್ಲಿ ಮತ್ತೆ ಮರುಕಳುಹಿಸದಂತೆ ಎಚ್ಚರವಹಿಸಬೇಕೆಂದು ಹಾಗು ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು  ಆಗ್ರಹಿಸಿದರು.
    ಹಳೇನಗರದ ಮಹಿಳಾ ಸೇವಾ ಸಮಾಜ, ವೀರಶೈವ ಲಿಂಗಾಯತ ಮಹಿಳಾ ಸಮಾಜ, ನ್ಯೂಟೌನ್‌ ಚುಂಚಾದ್ರಿ ಮಹಿಳಾ ವೇದಿಕೆ, ವಾಸವಿ ಮಹಿಳಾ ಮಂಡಳಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ವಿಶ್ವ ಹಿಂದೂ ಪರಿಷತ್‌ ಮಾತೃಮಂಡಳಿ, ಸಿದ್ಧಾರೂಢನಗರದ ಶಾಶ್ವತಿ ಮಹಿಳಾ ಸಮಾಜ, ಪಂತಜಲಿ ಯೋಗ ಸಮಿತಿ, ದೈವಜ್ಞ ಮಹಿಳಾ ಸಮಾಜ ಸೇರಿದಂತೆ ಇನ್ನಿತರ ಮಹಿಳಾ ಸಂಘಟನೆಗಳು ಪಾಲ್ಗೊಂಡಿದ್ದವು.
    ಪ್ರಮುಖರಾದ ಶೋಭಾ ಗಂಗಾರಾಜ್‌, ಜಯಂತಿ ನಾಗರಾಜ್‌, ಅನ್ನಪೂರ್ಣ ಸತೀಶ್‌, ಯಶೋಧ ವೀರಭದ್ರಪ್ಪ, ಲತಾ ಪ್ರಭಾಕರ್‌, ಅನುಸೂಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಜಾಗೃತ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು.

ನೂತನ ಅಧ್ಯಕ್ಷ ಎಸ್. ಕುಮಾರ್‌ಗೆ ಕ್ರೈಸ್ತ ಮುಖಂಡರಿಂದ ಅಭಿನಂದನೆ

ಭದ್ರಾವತಿ ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಭದ್ರಾವತಿ, ಆ. ೨ :  ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಪಕ್ಷ ಸಂಘಟನೆ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗು ಅನ್ಯಾಯ, ಶೋಷಣೆ ವಿರುದ್ಧ ಹೋರಾಟ ನಡೆಸುವ ಮೂಲಕ ಜನಸಾಮಾನ್ಯರ ಧ್ವನಿಯಾಗುವಂತೆ ಅಭಿನಂದಿಸಿ ಕ್ರೈಸ್ತ ಸಮುದಾಯದವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಸೆಲ್ವಾರಾಜ್, ನಗರ ಸಭೆ ಮಾಜಿ ಸದಸ್ಯ ಫ಼್ರಾನ್ಸಿಸ್, ದಾಸ್, ಐ.ವಿ ಸಂತೋಷ್, ಸಂಪತ್, ಅಂತೋಣಿ ವಿಲ್ಸನ್, ಶಾಮ್, ಲಾರೆನ್ಸ್ ಪೊಲ್ ಸೇರಿದಂತೆ ಕ್ರೈಸ್ತ ಸಮುದಾಯದ ಮುಖಂಡರು  ಉಪಸ್ಥಿತರಿದ್ದರು.

ಯೋಧಯೊಬ್ಬರಿಗೆ ಸೇರಿದ ಜಾಗ ಕಬಳಿಕೆ ಆರೋಪ

ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ

ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ ಬುಧವಾರ ಭದ್ರಾವತಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ನಗರಸಭೆ ಮುಂಭಾಗ  ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಆ. ೨: ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ ಬುಧವಾರ ನಗರದ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ  ನಗರಸಭೆ ಮುಂಭಾಗ  ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಬೊಮ್ಮನಕಟ್ಟೆ ವಾರ್ಡ್‌ನಂ.೨೩ರಲ್ಲಿರುವ ಸರ್ವೆ ನಂ.೯೧ರ ಬಡಾವಣೆಯಲ್ಲಿ ವಿ. ಗುರುವಯ್ಯನ ಹೆಸರಿನಲ್ಲಿರುವ ಖಾತೆ ನಂ.೧೨೦೨/೩೮, ಸೈಟ್‌ ನಂ.೩೮ನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸಲಾಗುತ್ತಿದೆ. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗಹಿಸಲಾಯಿತು.
    ಸೈಟ್‌ ನಂ.೭ರ ಸ್ವತ್ತಿನ ಮಾಲೀಕರು ಸೈಟ್‌ ನಂ.೩೮ರ ಸ್ವತ್ತಿನ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ. ವಿನಾಕಾರಣ ಯೋಧರ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸ್ವತ್ತಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲವನ್ನು ತಕ್ಷಣ ಬಗೆಹರಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು.  
    ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಿಎಸ್‌ಎಸ್‌ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್‌  ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು.
    ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಚಿನ್ನಯ್ಯ, ಹಾವು ಮಂಜು, ದಾಸ್‌, ಶ್ಯಾಮ್‌, ಜಗದೀಶ್‌, ಚನ್ನಪ್ಪ, ಕಾಣಿಕ್‌ರಾಜ್‌, ಈಶ್ವರಪ್ಪ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
    ನಗರಸಭೆಯಿಂದ ಪೇಪರ್‌ ಟೌನ್‌ ಪೊಲೀಸ್‌ ಠಾಣೆಗೆ ದೂರು :
    ಸರ್ವೆ ನಂ.೯೧ರ ಸೈಟ್‌ ನಂ.೭ ಮತ್ತು ೩೮ಕ್ಕೆ ಸಂಬಂಧಿಸಿದಂತೆ ನಗರಸಭೆ ವತಿಯಿಂದ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದು, ಸೈಟ್‌ ನಂ.೭ ಮತ್ತು ೩೮ ಬೇರೆ ಬೇರೆಯಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸೂಕ್ತ  ಕ್ರಮ ಕೈಗೊಳ್ಳುವಂತೆ ಪೇಪರ್‌ಟೌನ್‌ ಪೊಲೀಸ್‌ ಠಾಣೆಗೆ ಪೌರಾಯುಕ್ತ ಮನುಕುಮಾರ್‌ ದೂರು ನೀಡಿದ್ದಾರೆ.

ಎಂಪಿಎಂ ಕಾರ್ಖಾನೆ ನಿವೃತ್ತ ನೌಕರ ಜಿ. ರಮೇಶ್‌ ನಿಧನ

ಜಿ. ರಮೇಶ್‌
    ಭದ್ರಾವತಿ, ಆ. ೨ : ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಬೊಮ್ಮನಕಟ್ಟೆ ನಿವಾಸಿ ಜಿ. ರಮೇಶ್‌(೫೫) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದರು.  ಅನಾರೋಗ್ಯದಿಂದ ಬಳಲುತ್ತಿದ್ದ  ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಎಂಪಿಎಂ ಕಾರ್ಖಾನೆಯಲ್ಲಿ ಫೋರ್‌ಮೆನ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಎಂಪಿಎಂ ಜೆಂಟ್ಸ್‌ ಕ್ಲಬ್‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.

Tuesday, August 1, 2023

ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಕ್ಕೆ ಖಂಡನೆ

ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೆ ಆಗ್ರಹ

ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು, ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಾಗು ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಆ. ೧ :  ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು, ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಾಗು ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಪ್ಪಿತಸ್ಥರಿಗೆ
    ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.  
    ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಮಾನ ಹಾನಿ ಪ್ರಕರಣ ಹಾಗೂ ಮಣಿಪುರ ರಾಜ್ಯದಲ್ಲಿ ನಡೆದ ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಪ್ರಕರಣಗಳು, ಅಮಾನವೀಯ, ರೌದ್ರ ಹಾಗೂ ರಾಕ್ಷಸತನದ ಪರಮಾವಧಿ ಮೀರಿದಂತಹ ಹೇಯ ಕೃತ್ಯಗಳಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ನೀಚ ಕೃತ್ಯಗಳು ಮರುಕಳುಹಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹಿಸಲಾಯಿತು.
    ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಅವರ ಮೂಲಕ ಮನವಿ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷೆ ಎಂ.ಎಸ್‌ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಪ್ರಧಾನ ಕಾರ್ಯದಶಿ ಲತಾ ಪ್ರಭಾಕರ್‌, ಉಪಾಧ್ಯಕ್ಷೆ ಸುಮ ಚಂದ್ರಶೇಖರ್‌, ಕಾರ್ಯದರ್ಶಿ ಶೀಲಾ ರವಿ, ಖಜಾಂಚಿ ಭಾರತಿ ಕುಮಾರ್‌ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಾಗ ಕಬಳಿಕೆ ವಿರೋಧಿಸಿ ಆ.೨ರಂದು ಧರಣಿ ಸತ್ಯಾಗ್ರಹ

    ಭದ್ರಾವತಿ, ಆ. ೧: ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ  ಆ.೨ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಬೊಮ್ಮನಕಟ್ಟೆ ವಾರ್ಡ್‌ ನಂ.೨೩ರಲ್ಲಿರುವ ಸರ್ವೆ ನಂ.೯೧ರ ಬಡಾವಣೆಯಲ್ಲಿ ವಿ. ಗುರುವಯ್ಯನ ಹೆಸರಿನಲ್ಲಿರುವ ಖಾತೆ ನಂ.೧೨೦೨/೩೮, ಸೈಟ್‌ ನಂ.೩೮ನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿದ್ದು, ಇದನ್ನು ವಿರೋಧಿಸಿ ನಗರಸಭೆ ಮುಂಭಾಗ ಬೆಳಿಗ್ಗೆ ೧೦.೩೦ಕ್ಕೆ ಧರಣಿ ಸತ್ಯಾಗ್ರಹ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.