Saturday, August 5, 2023

ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷರಾಗಿ ಬದರಿನಾರಾಯಣ ನೇಮಕ

ಎಚ್.ಎಸ್‌ ಬದರಿನಾರಾಯಣ
    ಭದ್ರಾವತಿ, ಆ. ೫ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ತಾಲೂಕು ಮುಜರಾಯಿ ಅರ್ಚಕರ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಎಸ್‌ ಬದರಿನಾರಾಯಣ ನೇಮಕ ಗೊಂಡಿದ್ದಾರೆ.
    ಒಕ್ಕೂಟದ ರಾಜ್ಯಾಧ್ಯಕ್ಷ, ಶಾಸಕ ದಿನೇಶ್‌ ಗುಂಡೂರಾವ್‌ ೫ ವರ್ಷಗಳ ಅವಧಿಗೆ ಎಚ್.ಎಸ್‌ ಬದರಿನಾರಾಯಣ ಹಾಗು ಕಾರ್ಯದರ್ಶಿಯಾಗಿ ಎಂ. ಮಂಜುನಾಥ್‌  ನಾಗತಿ ಬೆಳಗಲು ಅವರನ್ನು  ನೇಮಕಾತಿಗೊಳಿಸಿ ಕೇಂದ್ರ ಸಮಿತಿಯ ಎಲ್ಲಾ ಆದೇಶಗಳನ್ನು ಪರಿಪಾಲಿಸಿಕೊಂಡು ಬರುವ ಜೊತೆಗೆ ಸಕಾಲದಲ್ಲಿ ಸಂಘದ ವರದಿಗಳನ್ನು ನೀಡುವಂತೆ ಕೋರಿದ್ದಾರೆ.


ಎಂ. ಮಂಜುನಾಥ್‌ ನಾಗತಿ ಬೆಳಗಲು
    ನೇಮಕಗೊಳ್ಳಲು ಕಾರಣಕರ್ತರಾದ ಒಕ್ಕೂಟದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌,  ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್‌ ದೀಕ್ಷಿತ್‌ ಮತ್ತು ಒಕ್ಕೂಟದ ಜಿಲ್ಲಾಧ್ಯಕ್ಷ ಮಿಥುನ್‌ ಅಯ್ಯಂಗಾರ್‌ ಅವರಿಗೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ.

Friday, August 4, 2023

ಆ.೬ರಂದು ವಿದ್ಯುತ್‌ ವ್ಯತ್ಯಯ

    ಭದ್ರಾವತಿ, ಆ. ೪ :  ನಗರಸಭೆ  ಹಳೇನಗರ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಆ.೬ರಂದು ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
    ಸಿ.ಎನ್ ರಸ್ತೆ, ಕನಕ ಮಂಟಪ ರಸ್ತೆ, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ರಸ್ತೆ(ಎನ್.ಎಸ್.ಟಿ ರಸ್ತೆ), ಬಸವೇಶ್ವರ ವೃತ್ತ, ಉಪ್ಪಾರ ಬೀದಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ  ಆ.೬ ರಂದು ಭಾನುವಾರ ಬೆಳಿಗ್ಗೆ ೧೦
ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತ ಮನುಕುಮಾರ್‌ ತಿಳಿಸಿದ್ದಾರೆ.  

ಆಡಿ ಕೃತ್ತಿಕೆ ಜಾತಾ ಮಹೋತ್ಸವಕ್ಕೆ ಚಾಲನೆ

ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಆ. ೪ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶ್ರೀ ಕ್ಷೇತ್ರದ ಶ್ರೀ ಮುರುಗೇಶ್‌ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆ.೮ರಂದು ಭರಣಿ ಕಾವಡಿ ಉತ್ಸವ ಮತ್ತು  ೯ರಂದು ಆಡಿ ಕೃತಿಕೆ ಜಾತ್ರೆ ನಡೆಯಲಿದೆ.
    ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತೀಯ ಉಪಾಧ್ಯಕ್ಷ ಹಾ. ರಾಮಪ್ಪ, ನ್ಯೂಟೌನ್‌ ಮಾರಿಯಮ್ಮ ದೇವಸ್ಥಾನದ ಪಾರ್ಥಿಬ ಕುಮಾರ್‌, ತಮಿಳು ಸಮಾಜದ ಅಧ್ಯಕ್ಷ ರವಿಕುಮಾರ್‌, ಪ್ರಮುಖರಾದ  ಚಂದ್ರಘೋಷಣ್‌, ಕರುಣಾಮೂರ್ತಿ, ಮಂಜುನಾಥ್‌, ತಿರುಮೂರ್ತಿ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರುಗಳು, ಭದ್ರಗಿರಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಹಾಗು ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಜೀವನದಲ್ಲಿಇತಿಮಿತಿಗಳನ್ನು ಅರಿತು ಯಶಸ್ಸು ಕಂಡುಕೊಳ್ಳಿ

 

ಭದ್ರಾವತಿ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೂನಿಕ್ವೆ ಫ್ಯೂಚರ್‌ ಆಫ್‌ ಹ್ಯೂಮನ್‌ ಬೀಯಿಂಗ್ಸ್‌ (Unique Features of Human Beings) ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಹನ್ ಡಿಕಾಸ್ಟ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೪ :  ಭೂಮಿ ಮೇಲೆ ಪ್ರತಿಯೊಂದು ಜೀವಿಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಅನನ್ಯ ಗುಣಗಳನ್ನು ಹೊಂದಿರುತ್ತದೆ.  ತನ್ನ ಇತಿಮಿತಿಗಳನ್ನು ಅರಿತು ಅದರಂತೆ ಜೀವನದಲ್ಲಿ ಯಶಸ್ಸನ್ನು ಕಾಣಬೇಕು. ತನ್ನಂತೆ ಇತರರನ್ನು ಬದುಕಲು ಬಿಡಬೇಕು ಎಂದು ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಹನ್ ಡಿಕಾಸ್ಟ ಹೇಳಿದರು.
    ಅವರು ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೂನಿಕ್ವೆ ಫ್ಯೂಚರ್‌ ಆಫ್‌ ಹ್ಯೂಮನ್‌ ಬೀಯಿಂಗ್ಸ್‌ (Unique Features of Human Beings) ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್  ಪ್ರಾಸ್ತಾವಿಕ ನುಡಿಗಳನ್ನಾಡಿ, ಮಾನವ ತನ್ನ ಸುತ್ತಲಿನ ಜೀವಿಗಳಿಂದ ಕಲಿಯಬೇಕಾದ ವಿಶಿಷ್ಟ ಗುಣಗಳ ಕುರಿತು ವಿವರಿಸಿದರು.
    ಆಶಯ ನುಡಿಗಳನ್ನಾಡಿದ ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ, ನಮ್ಮ ಸಾಮರ್ಥ್ಯದಲ್ಲಿ ನಮಗೆ ನಂಬಿಕೆ ಇರಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡು ನಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಸಕಲೇಶ್ ಅಧ್ಯಕ್ಷತೆ ವಹಿಸಿದ್ದರು. ಅಪೂರ್ವ  ಪ್ರಾರ್ಥಿಸಿ,     ರೇವತಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್. ಕುಮಾರ್‌  ವಂದಿಸಿದರು.
    ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಮಾರು  ೮೦ಕ್ಕೂ  ಅಧಿಕ  ವಿದ್ಯಾರ್ಥಿಗಳು ಪಾಲ್ಗೊಂಡು  ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಬಸ್-ಟ್ಯಾಕ್ಸಿ ಅಪಘಾತ : ತಪ್ಪಿದ ಅನಾಹುತ

ಶಿವಮೊಗ್ಗ-ಭದ್ರಾವತಿ ನಡುವಿನ 206 ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಕ್ಸಿ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಭದ್ರಾವತಿ, ಆ. ೪: ಶಿವಮೊಗ್ಗ-ಭದ್ರಾವತಿ ನಡುವಿನ 206 ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಕ್ಸಿ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಜೈನ್ ಪಬ್ಲಿಕ್ ಶಾಲೆಯ ಬಳಿಯಲ್ಲಿ ಅಪಘಾತ ಸಂಭವಿಸಿದ್ದು, ಮೈಸೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಕೆಎಸ್ಆರ್‌ಟಿಸಿ  ಬಸ್ ಹಾಗೂ ಶಿವಮೊಗ್ಗದಿಂದ ಭದ್ರಾವತಿಗೆ ತೆರಳುತ್ತಿದ್ದ ಟ್ಯಾಕ್ಸಿ ನಡುವೆ ಡಿಕ್ಕಿ ಸಂಭವಿಸಿದೆ.
    ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಹಾಗೂ ಟ್ಯಾಕ್ಸಿ ಮುಂಭಾಗ ಜಖಂಗೊಂಡಿದೆ.
    ಶಿವಮೊಗ್ಗ-ಭದ್ರಾವತಿ ನಡುವೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಹಲವು ಕಡೆಗಳಲ್ಲಿ ರಸ್ತೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗವೂ ಸಹ ಹೆಚ್ಚಾಗಿರುವುದು ಇಂತಹ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

Thursday, August 3, 2023

ಮಣಿಪುರ ಸರ್ಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ

ರಾಷ್ಟ್ರಪತಿಗಳಿಗೆ ತಹಸೀಲ್ದಾರ್‌ ಮೂಲಕ ಡಿಎಸ್‌ಎಸ್‌ ಮನವಿ

ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನಸಿಂಗ್ ನೇತೃತ್ವದ  ಸರ್ಕಾರ  ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೩: ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನಸಿಂಗ್ ನೇತೃತ್ವದ  ಸರ್ಕಾರ  ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ಈಶಾನ್ಯ ರಾಜ್ಯವಾದ ಮಣಿಪುರ ಸುಮಾರು ಮೂರು ತಿಂಗಳುಗಳ ಹಿಂದೆ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲು ಮಾಡಿ ಅವರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಅಘಾತಕರ ಮುಖವನ್ನು ತೆರೆದಿಟ್ಟಿದೆ. ಹಿಂಸಾಚಾರದ ಕರಾಳ ಮುಖ ಇಡೀ ದೇಶಕ್ಕೆ ತೋರಿಸಿದೆ. ಮಹಿಳೆಯರಿಗೆ ಯಾವ ಮಟ್ಟದ ಅವಮಾನ ಮಾಡುವುದಕ್ಕೂ ಹೇಸದ ಮನಸ್ಥಿತಿ ಪೋಲೀಸರು ಮತ್ತು ಮಧ್ಯ ಪ್ರವೇಶ ಮಾಡಲು ಕೇಂದ್ರ ಸರ್ಕಾರದ ಹಿಂದೇಟು ಮತ್ತು ಎಲ್ಲಕ್ಕಿಂತ ಮಾನವೀಯತೆಯನ್ನೇ ಮರೆತಿರುವ ಸ್ಥಿತಿ ಎಲ್ಲದಕ್ಕೂ ಈ ವಿಡಿಯೋ ಕನ್ನಡಿ ಹಿಡಿದಿದೆ. ಈ ಕೃತ್ಯವು ಮಣಿಪುರ ಮಾತ್ರವಲ್ಲ ಇಡೀ ದೇಶ ಬೆಚ್ಚಿ ಬೀಳಿಸುವಂತೆ ಮಾಡಿದ ಈ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೇ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದರು.
    ಕಾನೂನಿನ ಆಡಳಿತಕ್ಕೆ ಒಳಪಟ್ಟ ಯಾವುದೇ ನಾಗರೀಕ ಸಮಾಜ ಇಂತಹ ಹೀನಕೃತ್ಯ ಎಸಗಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಿತ್ತು. ಮೇ ತಿಂಗಳಲ್ಲಿ ಎಫ್ಐಆರ್ ದಾಖಲಾಗಿದೆ.  ಘಟನೆ ಹೇಗೆ ನಡೆದಿದೆ ಎಂಬ ವಿಡಿಯೋ ಅದರಲ್ಲಿದೆ. ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವವರೆಗೆ ಯಾವುದೇ ತನಿಖೆ ನಡೆದಿರಲಿಲ್ಲ. ಯಾರನ್ನು ಬಂಧಿಸಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇಷ್ಟೆಲ್ಲಾ ನಡೆದಿರುವಾಗ ಪ್ರಧಾನಿ ಮೋದಿಯವರೇಕೆ ಮೌನ ವಹಿಸಿದ್ದಾರೆ ಎನ್ನುವುದು ಸಹ ಅನುಮಾನಕ್ಕೀಡು ಮಾಡಿದೆ ಎಂದು ಆರೋಪಿಸಿದರು.
    ಮುಖ್ಯಮಂತ್ರಿ ಬಿರೇನ್‌ಸಿಂಗ್ ರವರು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊತ್ತುಕೊಳ್ಳಬೇಕಾಗುತ್ತದೆ. ರಾಜಕೀಯ, ಸಾಮಾಜಿಕ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳು ಹುಟ್ಟಲು ಈಗಿನ ಪರಿಸ್ಥಿತಿ ಕಾರಣವಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ ಚಂದ್ರಚೂಢ ರವರು ಗಾಢ ಕಳವಳ ವ್ಯಕ್ತಪಡಿಸಿದ್ದಾರೆ. ತಳಮಟ್ಟದಲ್ಲಿ ಏನನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಸಂಬಂಧಿಸಿದ ತಮ್ಮ ಸುಧೀರ್ಘ ಮತ್ತು ನಿಗೂಢ ಮೌನವನ್ನು ಕೊನೆಗೂ ಮುರಿದಿದ್ದಾರೆ (ಮುಖ್ಯ ನ್ಯಾಯಮೂರ್ತಿಯವರ ಮಾತುಗಳು ಮತ್ತು ಜನರಲ್ಲಿ ಮೂಡುತ್ತಿರುವ ಆಕ್ರೋಶದಿಂದ ಅವರು ಮೌನ ಮುರಿದಿರಬಹುದು) ಈ ಘಟನೆಯಿಂದ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಮತ್ತು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲವೆಂದು ಪ್ರಧಾನಿಯವರು ಹೇಳಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಲು ಇಂತಹದೊಂದು ಘೋರಕೃತ್ಯ ನಡೆಯಬೇಕಾಗಿತ್ತೇ?  ಎಂದು ಮುಖಂಡರು ಪ್ರಶ್ನಿಸಿದರು.
    ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮಣಿಪುರದಲ್ಲಿ 2023 ಮೇ 4 ರಂದು ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಸಂಪೂರ್ಣ ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣವೇ ಗಲ್ಲಿಗೇರಿಸಬೇಕು. ಸುಮಾರು 3 ತಿಂಗಳುಗಳಿಂದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಮಣಿಪುರ ಮುಖ್ಯಮಂತ್ರಿ ಬೀರೇನ್‌ಸಿಂಗ್ ನೇತೃತ್ವದ ಸರ್ಕಾರ ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಮಣಿಪುರದ ಮುಖ್ಯಮಂತ್ರಿ ಬೀರೇನ್‌ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ರವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಮತ್ತು ಮಣಿಪುರದ ಸಂತ್ರಸ್ಥ ಮಹಿಳೆಯರ ಕುಟುಂಬಗಳಿಗೆ ಸರ್ಕಾರಸೂಕ್ತ ಭದ್ರತೆ ಒದಗಿಸಬೇಕು ಹಾಗು ಸಂತ್ರಸ್ಥ ಮಹಿಳೆಯರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
    ಡಿಎಸ್‌ಎಸ್‌  ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಹಿರಿಯ ಮುಖಂಡ ಶಿವಬಸಪ್ಪ,  ತಾಲೂಕು ಸಂಚಾಲಕ ಎಸ್. ನಾಗರಾಜ್‌, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಲಮ್ಮ, ಜಿಲ್ಲಾ ಸಂಚಾಲಕರಾದ ಆರ್. ತಮ್ಮಯ್ಯ, ಎಂ. ಏಳುಕೋಟಿ, ವಕೀಲ ಎಂ. ಶಿವಕುಮಾರ್‌  ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿವೃತ್ತ ಶಿಕ್ಷಕಿ ಜಾನಕಮ್ಮ ನಿಧನ

ಆರ್. ಅರುಣ್‌
    ಭದ್ರಾವತಿ, ಆ. ೩ : ಕಾಗದನಗರ ಎಸ್‌ಬಿಐ ಬ್ಯಾಂಕ್‌ ರಸ್ತೆ ನಿವಾಸಿ, ನಿವೃತ್ತ ಶಿಕ್ಷಕಿ ಜಾನಕಮ್ಮ(೭೫)
ನಿಧನ ಹೊಂದಿದರು.
    ಪುತ್ರ ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಅರುಣ್‌ ಇದ್ದರು. ಜಾನಕಮ್ಮ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.  ಇವರ ಅಂತ್ಯಕ್ರಿಯೆ ಗುರುವಾರ ತಿಮ್ಲಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ  ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌, ಮುಖಂಡರಾದ ಬಾಲಕೃಷ್ಣ, ಮಹೇಶ್‌(ಜೆಪಿಎಸ್‌), ಜಯರಾಜ್‌, ಬದರಿನಾರಾಯಣ, ಛಲವಾದಿ ಸಮಾಜದ ಪ್ರಮುಖರು, ನಗರಸಭಾ ಸದಸ್ಯರು, ಕಾಂಗ್ರೆಸ್‌ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.