Tuesday, September 19, 2023

ವಿಐಎಸ್ಎಲ್ ಕಾರ್ಖಾನೆಗಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ

 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.

ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಈ ಬಾರಿ ವಿನಾಯಕ ಸೇವಾ ಸಮಿತಿಯೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದಿದೆ.

ಸಾವಿರಾರು ಕುಟುಂಬಗಳಿಗೆ ಅನ್ನದಾತವಾಗಿರುವ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ಸುಮಾರು 9 ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ವಿಭಿನ್ನ ರೀತಿಯ ಹೋರಾಟಗಳು ಸಹ ನಡೆದಿವೆ. ಇದೀಗ ನ್ಯೂಕಾಲೋನಿ ಎಸ್ಎವಿ(ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ) ವೃತ್ತದಲ್ಲಿ ವಿಐಎಸ್ಎಲ್ ಕಾರ್ಖಾನೆ ಉಳಿವಿಗಾಗಿ ಗಮನ ಸೆಳೆಯಲು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಪೆಂಡಾಲ್ ಒಳಭಾಗದಲ್ಲಿ ಕಾರ್ಖಾನೆಯ ವಿಹಂಗಮ ದೃಶ್ಯ, ಯಂತ್ರೋಪಕರಣಗಳು ಹಾಗು ಉತ್ಪಾದನೆ ಮತ್ತು ಕಚ್ಛಾ ವಸ್ತುಗಳ ಚಿತ್ರಣ ತೆರೆದಿಡಲಾಗಿದೆ. ನೋಡುಗರ ಗಮನ ಸೆಳೆಯುತ್ತಿದ್ದು, ಕಾರ್ಖಾನೆಯ ಇತಿಹಾಸದ ವೈಭವ ಮರುಕಳುಹಿಸಬೇಕೆಂಬ ಆಶಯ ಇದಾಗಿದೆ. ಪ್ರಸ್ತುತ ಎದುರಾಗಿರುವ ಸಂಕಷ್ಟಗಳನ್ನು ವಿಘ್ನ ನಿವಾರಕ ಪರಿಹರಿಸುವ ನಂಬಿಕೆ ಭಕ್ತರದ್ದಾಗಿದೆ.



ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಗಣೇಶ

 


ಭದ್ರಾವತಿ ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

    ಭದ್ರಾವತಿ: ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

    ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಬಾಲ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ. ಹಲವಾರು ವರ್ಷಗಳಿಂದ ಸಮಿತಿವತಿಯಿಂದ ವಿಭಿನ್ನ ರೀತಿಯ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅಲ್ಲದೆ ಹಲವಾರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

ಚಂದ್ರಯಾನ-3 ಅದ್ಭುತ ಸಾಧನೆ, ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯ : ಕೆ. ಅನಿಲ್ ಕುಮಾರ್

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ, ಸೆ. 19 : ಚಂದ್ರಯಾನ-3 ಅದ್ಭುತ ಸಾಧನೆಯಾಗಿದ್ದು, ಅದರಲ್ಲೂ ಈ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯವಾಗಿದೆ ಎಂದು ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಹೇಳಿದರು.

    ಅವರು ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

    ಭೂಮಿಯಿಂದ ಯಾವುದೇ ಗ್ರಹದ ಕಕ್ಷೆಗೆ ಉಪಗ್ರಹ ಸೇರಿಸಲು ಹಾಗು ಕಾರ್ಯಾಚರಣೆ ಮಾಡಲು ಲ್ಯಾಂಡರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣ ಹಾಗು ಭೂಮಿಯಿಂದ ಇತರೆ ಗ್ರಹಗಳ ದೂರ ಮತ್ತು ಆ ಗ್ರಹ ಗಳ ವಿಸ್ತೀರ್ಣ ಹಾಗು ಗುಣ ಲಕ್ಷಣಗಳನ್ನು ಸರಿಯಾಗಿ ಅಭ್ಯಸಿಸಿ ಲ್ಯಾಂಡರ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಕಾರ್ಯ ವೈಖರಿ ಅದ್ಭುತವಾಗಿದೆ ಎಂದರು.

    ಶಿವಮೊಗ್ಗ ಖಗೋಳ ತಜ್ಞ ಡಾ. ಶೇಖರ್ ಗೌಳೇರ್ ಮಾತನಾಡಿ, ನಮ್ಮೆಲ್ಲರಿಗೂ ಭವಿಷ್ಯದಲ್ಲಿ ಚಂದ್ರನ ಅಗತ್ಯತೆ ಅನಿವಾರ್ಯವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ಹೆಚ್ಚಿನ ಸಹಕಾರಿಯಾಗಲಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ದೇಶ ಉತ್ತಮ ಸಾಧನೆ ಮಾಡಿದ್ದು, ವಿಶ್ವದ ಗಮನ ಸೆಳೆದಿದೆ. ವಿಜ್ಞಾನ ಮತ್ತು ಧರ್ಮ ಎರಡೂ ಸಹ ಬೇರೆ ಬೇರೆಯಾಗಿದ್ದು, ಧರ್ಮದ ಆಚರಣೆ ಅವರವರ ವೈಯಕ್ತಿಕ ಹಿನ್ನಲೆಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಮಕ್ಕಳು ವಿಜ್ಞಾನ ಮತ್ತು ಧರ್ಮ ಎರಡನ್ನು ಹೊಂದಾಣಿಕೆ ಮಾಡಿ ನೋಡಬಾರದು ಎಂದರು.

    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಮಕ್ಕಳಿಗೆ ಪಠ್ಯೇತರ ವಿಷಯಗಳು ಕುರಿತು ಸಹ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ್ ಉದ್ಘಾಟಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ವಿದ್ಯಾಸಂಸ್ಥೆ ಸಂಸ್ಥಾಪಕರು, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮಾಪತಿ ಸ್ವಾಗತಿಸಿದರು. ಹಿರಿಯ ಸಾಹಿತಿ ಕಾಂತಪ್ಪ ಮತ್ತು ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.

    ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗು ವೇದಿಕೆ ಪ್ರಮುಖರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭದ್ರಾ ಜಲಾಶಯದಲ್ಲಿ ರಾತ್ರಿಯೊಳಗೆ ನೀರು ನಿಲ್ಲಿಸದಿದ್ದಲ್ಲಿ ಪುನಃ ಹೋರಾಟ

 

ರೈತರಿಂದ ಎಕ್ಸಿಕ್ಯುಟಿವ್ಇಂಜಿನಿಯರ್ಗೆ ಎಚ್ಚರಿಕೆ

ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ನಗರದ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಈ ಹಿಂದೆ ಹೋರಾಟ ನಡೆಸಿದ ಪರಿಣಾಮ ಭದ್ರಾ ಕಾಡಾ ಸಭೆಯಲ್ಲಿ ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಪ್ರಕಾರ ಸೆ. 16ರಂದು  ನೀರು ನಿಲ್ಲಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ಈಗ ನೀರು ನಿಲ್ಲಿಸದ್ದಿದ್ದಲ್ಲಿ ಬೇಸಿಗೆಯಲ್ಲಿ ಅಡಕೆ ತೋಟಗಳು ಒಣಗಿಹೋಗುತ್ತವೆ. ಈ ಹಿನ್ನೆಲೆಯಿಂದ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಲಾಯಿತು.

    ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿ ಎಕ್ಸಿಕ್ಯುಟಿವ್ ಇಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ  ಇಂಜಿನಿಯರ್‌ ಬುಧವಾರದೊಳಗೆ ಸೂಕ್ತ ನಿರ್ಧಾರ  ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು ಅಂತಿಮವಾಗಿ ಬುಧವಾರ ಬೆಳಿಗ್ಗೆವರೆಗೂ ಕಾದು ನೋಡಲಾಗುವುದು. ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಮುಂದಿನ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌, ಪ್ರಮುಖರಾದ ಎಸ್‌. ಕುಮಾರ್‌, ಎಚ್.ಎಲ್‌ ಷಡಾಕ್ಷರಿ, ಬಾಲಕೃಷ್ಣ, ಎಸ್.‌ ಮಣಿಶೇಖರ್‌, ಹನುಮಂತು, ಟಿ.ಡಿ ಶಶಿಕುಮಾರ್‌, ಎಚ್.‌ ರವಿಕುಮಾರ್‌, ರೈತ ಮುಖಂಡರಾದ ಎಸ್.‌ ಶಿವಮೂರ್ತಿ, ಜಿ.ಎನ್‌ ಪಂಚಾಕ್ಷರಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Monday, September 18, 2023

ಸಂಕ್ಲೀಪುರದಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ

 


   ಭದ್ರಾವತಿ:  ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮಹಿಳೆಯೋರ್ವಳು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಜೊತೆಗಿದ್ದವನೆ ಕುತ್ತಿಗೆ ಹಿಸುಕಿ ಹಾಗೂ ಹೊಟ್ಟೆಗೆ ಬಲವಾಗಿ ಒದ್ದು  ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. .

  ತಾಲೂಕಿನ ಸಂಕ್ಲೀಪುರ ಗ್ರಾಮದಲ್ಲಿ ಎಂಪಿಎಂ ನೀಲಗಿರಿ ಮರ ಕಟಾವು ಕೆಲಸ ಮಾಡುತ್ತಿದ್ದ ರೂಪ(30) ಎಂಬಾಕೆ ಕೊಲೆಯಾಗಿರುವ ಮಹಿಳೆ

    ಈಕೆ ಸಿಂಗಾರಿ(35) ಎಂಬಾತನ ಜತೆ ಕಳೆದ ಎರಡು ವರ್ಷದಿಂದ ಜೊತೆಯಲ್ಲಿ ವಾಸವಾಗಿದ್ದು, ಈ ಇಬ್ವರು ನೀಲಿಗಿರಿ ಕಟಾವು ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಸಂಜೆ ಮೇಸ್ತ್ರಿಯಿಂದ ಸಂಬಳವಾಗಿದ್ದು, ಇಬ್ಬರು ಮದ್ಯ ಸೇವಿಸಿ ಪರಸ್ಪರ ಗಲಾಟೆಗೆ ಬಿದ್ದಿದ್ದಾರೆ. ಗಲಾಟೆಯಿಂದಾಗಿ ಸಿಂಗಾರಿ ರೂಪಳ ಕುತ್ತಿಗೆ ಹಿಸುಕಿ ಹಾಗೂ ಕಾಲಿನಲ್ಲಿ ಒದ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ರೂಪ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಿಂಗಾರಿಯನ್ನ ಬಂಧಿಸಲಾಗಿದೆ.


ಭದ್ರಾ ಜಲಾಶಯದಲ್ಲಿ ನೀರು ನಿಲ್ಲಿಸುವಂತೆ ಆಗ್ರಹಿಸಿ ಸೆ.19ರಂದು ಹೋರಾಟ 

 


ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಸೆ.19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

   ಭದ್ರಾ ಕಾಡಾ ಸಭೆಯಲ್ಲಿ ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಪ್ರಕಾರ ಸೆ. 16ರಂದು  ನೀರು ನಿಲ್ಲಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ಈಗ ನೀರು ನಿಲ್ಲಿಸದ್ದಿದ್ದಲ್ಲಿ ಬೇಸಿಗೆಯಲ್ಲಿ ಅಡಕೆ ತೋಟಗಳು ಒಣಗಿಹೋಗುತ್ತವೆ. ಈ ಹಿನ್ನೆಲೆಯಿಂದ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಬೆಳ್ಳಿಗ್ಗೆ 11-30ಕ್ಕೆ  ಮಿಲ್ಟ್ರಿಕ್ಯಾಂಪ್ ನೀರಾವರಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಶಾಂತಿ ಸಾಮಿಲ್ ಮಾಲೀಕ ರಾಮಣ್ಣ ನಿಧನ

 


ರಾಮಣ್ಣ

   ಭದ್ರಾವತಿ: ನಗರದ ಹೊಳೆಹೊನ್ನೂರು ರಸ್ತೆಯ ಶಾಂತಿ ಸಾಮಿಲ್ ಮಾಲೀಕರಾದ ಜಿ.ರಾಮಣ್ಣ(69) ಸೋಮವಾರ ನಿಧನ ಹೊಂದಿದರು.

   ಪತ್ನಿ, ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

   ಇವರ ಅಂತ್ಯಸಂಸ್ಕಾರ ಮಂಗಳವಾರ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

  ಇವರ ನಿಧನಕ್ಕೆ ತಮಿಳು ಸಮಾಜದ ಮುಖಂಡರು, ಗಣ್ಯರು, ಸಂತಾಪ ಸೂಚಿಸಿದ್ದಾರೆ.