Monday, July 7, 2025

ಜು.೮ರಂದು `ಭಾರತಾಂಬೆಗೆ ಗೀತ ನಮನ'


   
ಭದ್ರಾವತಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಪ್ರಕೃತಿ ವಿಕೋಪಗಳು, ಸಾವು-ನೋವುಗಳು, ಮಿತಿ ಮೀರುತ್ತಿರುವ ದೇಶದ್ರೋಹಿ ಉಗ್ರಗಾಮಿ ಚಟುವಟಿಕೆಗಳಿಗೆ ಅಂತ್ಯ ಹಾಡಲು, ದೇಶವಾಸಿಗಳು ಶಾಂತಿ, ನೆಮ್ಮದಿಯಿಂದ ಜೀವಿಸಲು, ಭಾರತಾಂಬೆಗೆ ಪ್ರಾರ್ಥಿಸುವ ಹಾಗು ದೇಶದ ರಕ್ಷಣೆಯಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಯೋಧರ ಯೋಗಕ್ಷೇಮಕ್ಕಾಗಿ ದೇಶ ಭಕ್ತಿಗೀತೆಗಳ ವಿಶೇಷ ಕಾರ್ಯಕ್ರಮ ನಗರದ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ವತಿಯಿಂದ ಪ್ರಪ್ರಥಮ ಬಾರಿಗೆ `ಭಾರತಾಂಬೆಗೆ ಗೀತ ನಮನ' ಎಂಬ ಹೆಸರಿನಲ್ಲಿ ಜು.೮ರ ಮಂಗಳವಾರ ಸಂಜೆ ೫ ಗಂಟೆಗೆ ಮಹಾತ್ಮ ಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
    ದೇಶದ ಸಮಗ್ರತೆ, ಅಖಂಡತೆ, ಐಕ್ಯತೆಗಾಗಿ ಏರ್ಪಡಿಸಲಾಗಿರುವ ಈ ವಿಶೇಷ ಕಾರ್ಯಕ್ರಮಕ್ಕೆ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಉಮೇಶ್ ಗುಜ್ಜಾರ್ ಹಾಗು ವಿಶ್ವ ಹಿಂದೂ ಪರಿಷತ್, ಮಾತೃ ಮಂಡಳಿ ಅಧ್ಯಕ್ಷೆ ಸ್ವಪ್ನ ಕುಮಾರ್ ತೇಲ್ಕರ್ ಮನವಿ ಮಾಡಿದ್ದಾರೆ.

ವೀರಶೈವ-ಲಿಂಗಾಯಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕೆ.ಎಸ್ ವಿಜಯಕುಮಾರ್ 
  ಭದ್ರಾವತಿ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ 2024-25ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಶೇ.85ಕ್ಕೂ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ತಾಲೂಕಿನ ವೀರಶೈವ-ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ ಕುಮಾರ್ ತಿಳಿಸಿದ್ದಾರೆ. 
     ಸಮಾಜದ ಪ್ರತಿಭಾವಂತ ಆಸಕ್ತ ವಿದ್ಯಾರ್ಥಿಗಳು ಜು. 18ರೊಳಗೆ ಅಂಕ ಪಟ್ಟಿ ಹಾಗು ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. 
     ಹೆಚ್ಚಿನ ಮಾಹಿತಿಗೆ ಮಹಾಸಭಾ ಉಪಾಧ್ಯಕ್ಷೆ, ವಕೀಲರಾದ ಆರ್.ಎಸ್ ಶೋಭಾ, ಮೊ: 9902008155, ನಿರ್ದೇಶಕರಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಮೊ: 9480138972, ಸಾಗರ್, ಮೊ: 8618479341 ಮತ್ತು ರಮೇಶ್, ಮೊ: 8073148673 ಸಂಖ್ಯೆಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ. 

Sunday, July 6, 2025

ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಪಾದಚಾರಿ ರಸ್ತೆ ಕಾರ್ಯಾಚರಣೆ

ಪೊಲೀಸರೊಂದಿಗೆ ನಗರಸಭೆ ಅಧಿಕಾರಿಗಳಿಂದ ಅಂಗಡಿ, ಮುಂಗಟ್ಟುಗಳ ತೆರವು 

ಭದ್ರಾವತಿ ನಗರಸಭೆ ಮುಂಭಾಗದಲ್ಲಿ ವಾಹನಗಳ ನಿಲುಗಡೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ ಅಧಿಕಾರಿಗಳು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಿರುವ ನಗರಸಭೆ ಆಡಳಿತ ಸಂಚಾರಿ ಪೊಲೀಸರೊಂದಿಗೆ ಕಾರ್ಯಾಚರಣೆ ಕೈಗೊಂಡು ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುತ್ತಿದೆ. 
    ಶನಿವಾರ ನಗರಸಭೆ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು.  ನಂತರ ನಗರಸಭೆ ಕಚೇರಿ ಅಕ್ಕಪಕ್ಕದಲ್ಲಿ ಅಂಗಡಿ ಮುಂಗಟ್ಟುಗಳು ಪಾದಚಾರಿ ರಸ್ತೆ ಅಕ್ರಮಿಸಿಕೊಂಡಿರುವುದ್ದನ್ನು ತೆರವುಗೊಳಿಸಿದರು. 
  ಈ ಕುರಿತು ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾಹಿತಿ ನೀಡಿ, ಕಳೆದ ತಿಂಗಳು ಜೂ. ೨೦ರಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟು ಅವ್ಯವಸ್ಥೆಯಿಂದ ಕೂಡಿರುವ ಸಂಬಂಧ ಸಾಕಷ್ಟು ಚರ್ಚೆಗಳು ನಡೆದವು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.   
    ಜು. ೭ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಸಿ.ಎನ್ ರಸ್ತೆ), ೮ ರಂದು ಬೆಳಗ್ಗೆ ೮ ಗಂಟೆಗೆ ತಾಲೂಕು ಕಚೇರಿ ರಸ್ತೆ, ೯ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಬಿ.ಎಚ್.ರಸ್ತೆ), ಜು. ೧೧ ರಂದು ಬೆಳಗ್ಗೆ ೮ ಗಂಟೆಗೆ ಹೊಸಸೇತುವೆ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದರು. 
      ಕಾರ್ಯಾಚರಣೆಯಲ್ಲಿ ನಗರಸಭೆ ಅಧಿಕಾರಿಗಳಾದ ಶಿವಪ್ರಸಾದ್, ಪ್ರಭಾಕರ್, ಪ್ರಸಾದ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲು ಸಾಧ್ಯವಾಗದೇ ಕೈಚೆಲ್ಲಿ ಕುಳಿದ ಪಿಎಲ್‌ಡಿ ಬ್ಯಾಂಕ್

ಕೋಟ್ಯಾಂತರ ರು. ಸಾಲದ ಬಾಕಿ : ಹೊಸ ಸಾಲ ಎದುರು ನೋಡುತ್ತಿರುವ ರೈತರು  


ಪಿಎಲ್‌ಡಿ ಬ್ಯಾಂಕ್
    * ಅನಂತಕುಮಾರ್ 
    ಭದ್ರಾವತಿ : ಮುಂಗಾರು ಆರಂಭಗೊಂಡು ಸುಮಾರು ಒಂದು ತಿಂಗಳು ಕಳೆದಿದ್ದು, ಈ ನಡುವೆ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಕೈಚೆಲ್ಲಿ ಕುಳಿತ್ತಿದೆ. 
    ಒಂದು ಕಾಲದಲ್ಲಿ ರೈತರ ಜೀವನಾಡಿಯಾಗಿದ್ದ ಪಿಎಲ್‌ಡಿ ಬ್ಯಾಂಕ್ ಪ್ರಸ್ತುತ ಸಾಲದ ಸುಳಿಯಲ್ಲಿದ್ದು, ರೈತರು ಈ ಬ್ಯಾಂಕ್ ನಂಬಿ ಯಾವುದೇ ಚಟುವಟಿಕೆಗಳನ್ನು ಆರಂಭಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿರುವ ಬಹುತೇಕ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಇಲ್ಲಿನ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಬ್ಯಾಂಕ್ ಮೂಲಕ ದೀರ್ಘಾವಧಿ ಸಾಲ ಪಡೆದಿರುವವರು ಸುಮಾರು ೧೫-೨೦ ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಹೊಸದಾಗಿ ಸಾಲ ಪಡೆಯಲು ತೊಡಕಾಗಿದೆ. 
    ನಗರದ ಚನ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಖಾತೆದಾರರಿದ್ದು, ಬ್ಯಾಂಕ್ ಆಡಳಿತ ಮಂಡಳಿಗೆ ತಾಲೂಕಿನ ರೈತರ ವಿವಿಧ ಕ್ಷೇತ್ರಗಳಿಂದ ೧೩ ನಿರ್ದೇಶಕರು ಚುನಾಯಿತರಾಗುತ್ತಿದ್ದಾರೆ. ಓರ್ವ ನಾಮನಿರ್ದೇಶಿತ ಸೇರಿದಂತೆ ಒಟ್ಟು ೧೪ ನಿರ್ದೇಶಕರು ಬ್ಯಾಂಕ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾಂಕ್‌ನಲ್ಲಿ ಯಾವುದೇ ಉಳಿತಾಯ ಖಾತೆ ಹೊಂದಿರುವವರು ಅಥವಾ ಠೇವಣಿ ಖಾತೆ ಹೊಂದಿರುವವರು ಇಲ್ಲ. ಈ ಹಿನ್ನಲೆಯಲ್ಲಿ ಬ್ಯಾಂಕ್ ಸ್ವಂತ ಆದಾಯ ನಿರೀಕ್ಷಿಸುವಂತಿಲ್ಲ. ನಬಾರ್ಡ್ ಮೂಲಕ ನೀಡುವ ಸಾಲ ನಂಬಿ ಮುನ್ನಡೆಯಬೇಕಾಗಿದೆ. ಕೃಷಿ ಧೀರ್ಘಾವಧಿ ಸಾಲ ಶೇ.೮.೫ ರಿಂದ ಶೇ.೯ರ ಬಡ್ಡಿ ನೀಡಲಾಗುತ್ತಿದೆ. ಉಳಿದಂತೆ ಗೃಹ ಸಾಲ ಶೇ.೧೧ ರಿಂದ ಶೇ.೧೨ರ ಬಡ್ಡಿ ದರಲ್ಲಿ ನೀಡಲಾಗುತ್ತಿದೆ. ಆದರೆ ಬ್ಯಾಂಕ್‌ನಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡುತ್ತಿಲ್ಲ. 
    ೨೦೨೨-೨೪ರ ಅವಧಿಯಲ್ಲಿ ಬ್ಯಾಂಕ್ ಸುಮಾರು ೧೩.೫ ಕೋ.ರು. ಸಾಲ ಹೊಂದಿದ್ದು, ಈ ಅವಧಿಯಲ್ಲಿ ಸರ್ಕಾರ ರೈತರ ಸಾಲಕ್ಕೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಿದ ಹಿನ್ನಲೆಯಲ್ಲಿ ಬಹುತೇಕ ರೈತರು ಸಾಲ ಮರುಪಾವತಿ ಮಾಡಿದ್ದು, ಆದರೂ ಪ್ರಸ್ತುತ ಸುಮಾರು ೩.೫ ಕೋ. ರು. ಸಾಲ ಬಾಕಿ ಉಳಿದುಕೊಂಡಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಸಾಲ ಪಡೆಯಲು ಕಸಕತ್ತು ನಡೆಸಬೇಕಾಗಿದೆ. 
    ಸಾಲ ವಸೂಲಾತಿಗೆ ಇದೀಗ ಕಠಿಣ ಕ್ರಮ ಅನುಸರಿಸುವುದು ಅನಿವಾರ್ಯವಾಗಿದ್ದು, ಧೀರ್ಘಾವಧಿ ಸಾಲ ಪಡೆದುಕೊಂಡು ಸುಮಾರು ೧೫-೨೦ ವರ್ಷಗಳಿಂದ ಬಾಕಿ ಉಳಿಸಿಕೊಂಡ ಹಾಗು ಗೃಹ ಸಾಲ ಬಾಕಿ ಉಳಿಸಿಕೊಂಡ ಒಟ್ಟು ೮೯ ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಸೂಲಾತಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಇದು ಯಶಸ್ವಿಯಾದಲ್ಲಿ ಸಾಲ ಮರುಪಾವತಿಯಾಗಲಿದೆ. ನಂತರ ಹೊಸದಾಗಿ ಸಾಲ ಮಂಜೂರಾತಿಯಾಗಲಿದೆ.
    ಪ್ರಸ್ತುತ ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ.  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್ ಬ್ಯಾಂಕ್ ಅಧ್ಯಕ್ಷರಾಗಿ ಹಾಗು ಮೀರಾಬಾಯಿ ಉಪಾಧ್ಯಕ್ಷರಾಗಿ  ಸುಮಾರು ೬ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು,  ರೈತರಿಗೆ ಹೊಸದಾಗಿ ಸಾಲ ನೀಡುವುದು ಸವಾಲಾಗಿ ಪರಿಣಮಿಸಿದೆ. 
    ಕಾನೂನು ಕ್ರಮದ ಮೂಲಕ ಸಾಲ ವಸೂಲಿ ಮಾಡಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಿದೆ. ಪ್ರಸ್ತುತ ತುರ್ತಾಗಿ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕಾದ ಅಗತ್ಯವಿದೆ. ಈ ಹಿನ್ನಲೆಯಲ್ಲಿ  ಸರ್ಕಾರಕ್ಕೆ ಬ್ಯಾಂಕಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟು ನೆರವಿಗೆ ಬರುವಂತೆ ಕೋರಬೇಕಾಗಿದೆ. ಒಟ್ಟಾರೆ ಬ್ಯಾಂಕಿನ ಆಡಳಿತ ಮಂಡಳಿ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ರೈತರ ಭವಿಷ್ಯ ಅಡಗಿದೆ.  
 
 

ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
ಬ್ಯಾಂಕ್ ಪ್ರಸ್ತುತ ಸಾಲದಲ್ಲಿ ಮುನ್ನಡೆಯುತ್ತಿದ್ದು, ನಬಾರ್ಡ್ ಮೂಲಕ ಬ್ಯಾಂಕ್ ಪಡೆದುಕೊಂಡಿರುವ ಸಾಲ ಬಾಕಿ ಉಳಿದಿದೆ. ಹೊಸದಾಗಿ ಸಾಲ ಪಡೆಯಲು ಬಾಕಿ ಪಾವತಿಸಬೇಕಾಗಿದೆ. ಈ ಹಿನ್ನಲೆಯಲ್ಲಿ  ಅನಿವಾರ್ಯವಾಗಿ  ಸಾಲ ಮರುಪಾವತಿ ಮಾಡದ ರೈತರಿಂದ ಕಠಿಣ ಕ್ರಮದ ಮೂಲಕ ಬಾಕಿ ವಸೂಲಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. 
        - ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
 ------------------------------------------------------------------------


ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ. 

ರಾಜ್ಯದಲ್ಲಿರುವ ಬಹುತೇಕ ಪಿಎಲ್‌ಡಿ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಈ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಸರ್ಕಾರ ಹಲವಾರು ಬಾರಿ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರಿಯಾಯಿತಿಗಳನ್ನು ನೀಡಿದೆ. ಆದರೂ ಸಹ ಬಹಳಷ್ಟು ರೈತರು ಸದ್ಬಳಕೆ ಮಾಡಿಕೊಂಡು ಸಾಲ ಮರುಪಾವತಿ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಬ್ಯಾಂಕ್ ಮುನ್ನಡೆಸುವುದು ಬಹಳ ಕಷ್ಟಕರವಾಗಿದೆ. 
            - ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ 

Saturday, July 5, 2025

ಪರಿಸರ ನಾಶದಿಂದ ದುಷ್ಪರಿಣಾಮ : ಗೀತಾ ರಾಜಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಡಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಶಿವಬಸಪ್ಪ, ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.     
    ಭದ್ರಾವತಿ: ಮನುಷ್ಯರಿಂದಲೇ ಪರಿಸರ ನಾಶವಾಗುತ್ತಿದ್ದು, ಪರಿಸರ ವೈಪರೀತ್ಯದಿಂದಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳಿಂದ ಅನಾಹುತಗಳು, ಸಾವು-ನೋವುಗಳು ಹೆಚ್ಚಾಗುತ್ತಿವೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಕಳವಳ ವ್ಯಕ್ತ ಪಡಿಸಿದರು. 
    ಅವರು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆಗೆ ಬಲಿಯಾಗಿ ಗಿಡಮರಗಳನ್ನು, ಕಾಡನ್ನು ಕಡಿದು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಆದರೆ ತನ್ನ ಮುಂದಿನ ಭವಿಷ್ಯದಲ್ಲಿ, ಮುಂದಿನ ಪೀಳಿಗೆಯನ್ನು ಉಳಿಸಿ ಬೆಳೆಸಿ ರಕ್ಷಣೆ ಮಾಡುವಲ್ಲಿ ವಿಫಲನಾಗಿದ್ದಾನೆ.  ಮುಂದಾದರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾತನಾಡಿ, ನಗರಗಳು ವಿಸ್ತಾರಗೊಂಡದಂತೆ ಅಭಿವೃದ್ದಿ ಹೆಸರಲ್ಲಿ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲದಿರುವುದು ದುರಂತವಾಗಿದೆ. ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.  
    ಭೂತನಗುಡಿ ಎಸ್‌ಎಲ್‌ಎನ್ ಡೇ ಕೇರ್ ವೈದ್ಯ ಡಾ. ಸುಶಿತ್ ಶೆಟ್ಟಿ ಮಾತನಾಡಿ, ಕರೋನಾ ಕಾಲದಲ್ಲಿ ಲಕ್ಷಾಂತರ ಮಂದಿ ಆಮ್ಲಜನಕವಿಲ್ಲದೆ ಅದರ ಕೊರತೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕಂಡ ಅನೇಕ ಘೋರ ಘಟನೆಗಳನ್ನು ಜೀವನದಲ್ಲಿ ಯಾರೂ ಮರೆಯುವಂತಿಲ್ಲ. ಆದ್ದರಿಂದ ಮನುಷ್ಯನಿಗೆ ಅತ್ಯಾವಶ್ಯಕವಾಗಿ ಬೇಕಿರುವ ಆಮ್ಲಜನಕಕ್ಕಾಗಿ ನಮ್ಮ ಸುತ್ತಲೂ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕಾಗಿದೆ ಎಂದರು.
    ಸಿದ್ದಾರ್ಥ ಅಂಧ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರಸಭೆ ಸದಸ್ಯ ಚನ್ನಪ್ಪ, ಕಾಂಚನ ಹೋಟೆಲ್ ಮಾಲೀಕ ವಾಗೀಶ್, ಬಿ.ಎ.ಕಾಟ್ಕೆ, ನಿವೃತ್ತ ಶಿಕ್ಷಕ ಶ್ರೀನಿವಾಸ್, ರಾಜಶೇಖರ್ ಮತ್ತು ಅಡವೀಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಧರ ಕೇಂದ್ರದ ವಿಕಲಚೇತನರಾದ ಆಶಾ ಮತ್ತು ಸಲ್ಮಾ ಪ್ರಾರ್ಥಿಸಿ, ಉಪನ್ಯಾಸಕಿ ಸೃಷ್ಟಿ ಸ್ವಾಗತಿಸಿ, ಪ್ರಾಂಶುಪಾಲ ಹನುಮಂತಪ್ಪ ನಿರೂಪಿಸಿದರು. 

ಜು.೬ರಿಂದ ಚೆಸ್ ಬೇಸಿಕ್, ಚೆಸ್ ಆಟ


    ಭದ್ರಾವತಿ : ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಜು.೬ರಿಂದ ಪ್ರತಿ ಭಾನುವಾರ ಚೆಸ್ ಬೇಸಿಕ್ ಮತ್ತು ಚೆಸ್ ಆಟ ಏರ್ಪಡಿಸಲಾಗಿದೆ. 
    ಬೆಳಿಗ್ಗೆ ೮ ಗಂಟೆಯಿಂದ ೯ ಗಂಟೆವರೆಗೆ ಪೇಪರ್‌ಟೌನ್ ಇಂಗ್ಲೀಷ್ ಸ್ಕೂಲ್ ಕೊಠಡಿಯಲ್ಲಿ ಹಾಗು ೯.೩೦ ರಿಂದ ೧೦.೩೦ರವರೆಗೆ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಚೆಸ್ ಬೇಸಿಕ್ ಮತ್ತು ಚೆಸ್ ಆಟ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೪೮೨೧೮೭೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಜು.೭ರಂದು ರೋಟರಿ ಪದಗ್ರಹಣ ಸಮಾರಂಭ

    ಭದ್ರಾವತಿ ; ನಗರದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜು.೭ ರಂದು ಸಂಜೆ ೭ ಗಂಟೆಗೆ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ನಡಯಲಿಧೆ. 
     ಸಮಾರಂಭದಲ್ಲಿ ಜಿಲ್ಲಾ ಕ್ಲಬ್ ೩೧೬೦ರ ಪಿಡಿಜಿ ಮತ್ತು ಆರ್.ಸಿ ಚಿತ್ರದುರ್ಗ ಕೆ. ಮಧುಪ್ರಸಾದ್ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಬೋಧಿಸಲಿದ್ದು, ಜಿಲ್ಲಾ ಕ್ಲಬ್ ೩೧೮೨ರ ಎ.ಜಿ ಕೆ.ಪಿ ಶೆಟ್ಟಿ ಹಾಗೂ ಜಿಲ್ಲಾ ಕ್ಲಬ್ ೩೧೮೨ರ ಝಡ್.ಎಲ್ ಜಗದೀಶ್ ಸರ್ಜಾ ಉಪಸ್ಥಿತರಿರುವರು. 
    ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಮತ್ತು ಕಾರ್ಯದರ್ಶಿ ಎಚ್. ಆರ್ ಕೇಶವಮೂರ್ತಿ ಹಾಗು ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸವಿತ ಕಾಜೇಂದ್ರಕುಮಾರ್ ಲೋಧ ಮತ್ತು ಕಾರ್ಯದರ್ಶಿ ಸವಿತ ಶಾಂತಕುಮಾರ್ ತಂಡದವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭ ಯಶಸ್ವಿಗೊಳಿಸುವಂತೆ ಕ್ಲಬ್ ಕೋರಿದೆ.