Saturday, August 15, 2020

ವಿಐಎಸ್‌ಎಲ್ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕೇಂದ್ರ ಸರ್ಕಾರಿ ಸ್ವಾಮ್ಯದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
ಭದ್ರಾವತಿ, ಆ. ೧೫: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
     ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್  ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾ ಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
       ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಡಳಿ ಮತ್ತು ರಕ್ಷಣಾ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೈಟೆಕ್ ಶೌಚಾಲಯ ಸಾರ್ವಜನಿಕ ಸೇವೆಗೆ ಸಮರ್ಪಣೆ

ಭದ್ರಾವತಿ ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಭದ್ರಾವತಿ, ಆ. ೧೫: ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
      ಶೌಚಾಲಯ ಸಮೀಪದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ಕ್ಯಾಂಟೀನ್, ಪ್ರವಾಸಿ ವಾಹನ ನಿಲ್ದಾಣ, ಆಟೋ ನಿಲ್ದಾಣ ಹಾಗೂ ಅಂಗಡಿ ಮುಂಗಟ್ಟುಗಳಿದ್ದು, ಈ ಶೌಚಾಲಯದಿಂದ ಹೆಚ್ಚು ಪ್ರಯೋಜನವಾಗಲಿದೆ.
   ನಗರಸಭೆ ಪೌರಾಯುಕ್ತ ಮನೋಹರ್, ಗುತ್ತಿಗೆದಾರ ಜಿ. ಹಾಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ವೈರಸ್ ನಿರ್ಮೂಲನೆಯೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಿ : ಎಚ್.ಸಿ ಶಿವಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ  ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ, ಆ. ೧೫: ಎಲ್ಲರೂ ಒಗ್ಗಟ್ಟಾಗಿ ಕೊರೋನಾ ವೈರಸ್ ನಿರ್ಮೂಲನೆಗೆ ಪಣತೊಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ತಿಳಿಸಿದರು.
       ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವ್ಯಾಪಾರಕ್ಕಾಗಿ ದೇಶಕ್ಕೆ ಬಂದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಸುಧೀರ್ಘ ಹೋರಾಟ ನಡೆಸಲಾಗಿದೆ. ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಆಹಿಂಸಾ ಮಾರ್ಗದ ಹೋರಾಟದ ಜೊತೆಗೆ ತ್ಯಾಗ-ಬಲಿದಾನಗಳು ನಡೆದಿವೆ. ದೇಶದ ಸ್ವಾತಂತ್ರ್ಯದ ಮಹತ್ವ ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದರು.
    ಪ್ರಸ್ತುತ ವಿಶ್ವದೆಲ್ಲೆಡೆ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಬೇಕು. ದೇಶದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ, ಶಾಂತಿಯಿಂದ ಒಗ್ಗಟ್ಟಾಗಿ ಬದುಕಬೇಕಾಗಿದೆ. ಮಹಾತ್ಮಗಾಂಧಿ ಅವರ ರಾಮರಾಜ್ಯದ ಕನಸು ನನಸಾಗಬೇಕು. ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಜನರನ್ನು ಭಯಭೀತರನ್ನಾಸುತ್ತಿರುವ, ಸಂಕಷ್ಟಕ್ಕೆ ತಳ್ಳುತ್ತಿರುವ ಕೆಟ್ಟ ಮಹಾಮಾರಿ ಕೊರೋನಾ ವೈರಸ್ ದೇಶದಿಂದ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಇದರ ನಿರ್ಮೂಲನೆ ಮುಂದಾಗಬೇಕೆಂದರು.  
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಬೇಕು. ಪ್ರಸ್ತುತ ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಎಂಪಿಎಂ ಕಾರ್ಖಾನೆ ಪುನರ್ ಆರಂಭಗೊಳ್ಳಬೇಕು. ಆ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು ಎಂದರು.
     ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನಗರಸಭೆ ಪೌರಾಯುಕ್ತ ಮನೋಹರ್, ಜಿಲ್ಲಾಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ, ಎಪಿಎಂಸಿ ಅಧ್ಯಕ್ಷ ಐ.ಈ ಲವೇಶ್‌ಗೌಡ, ವಲಯ ಅರಣ್ಯಾಧಿಕಾರಿ ಮಂಜುನಾಥ್, ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ, ಮುಖಂಡರಾದ ರಮಾಕಾಂತ, ಗಂಗಾಧರ್, ಬಾಷಾ, ಮಂಜುಳರಾಮಚಂದ್ರಪ್ಪ, ರೂಪನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
       ಇದಕ್ಕೂ ಮೊದಲು ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಗರದ ಸಶಸ್ತ್ರ ಮೀಸಲುಪಡೆ ಪೊಲೀಸ್ ಠಾಣಾಧಿಕಾರಿ ರಂಗಸ್ವಾಮಿ ಧ್ವಜವಂದನೆ ಗೌರವ ಸ್ವೀಕರಿಸಿದರು. ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಪಾಲ್ಗೊಂಡಿದ್ದವು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಉಚಿತವಾಗಿ ಮಾಸ್ಕ್, ಹ್ಯಾಂಡ್‌ಗ್ಲೋಸ್‌ಗಳನ್ನು ವಿತರಿಸಲಾಯಿತು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು.

Friday, August 14, 2020

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋಂಕು : ಒಂದೇ ದಿನ ೫೬ ಪ್ರಕರಣ ಪತ್ತೆ


ಭದ್ರಾವತಿ, ಆ. ೧೪: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿದ್ದು, ಶುಕ್ರವಾರ ಒಟ್ಟು ೫೬ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿರುವುದು ನಗರ ಹಾಗು ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
          ವೇಲೂರ್ ಶೆಡ್‌ನಲ್ಲಿ ಓರ್ವ ವ್ಯಕ್ತಿ, ಜನ್ನಾಪುರದಲ್ಲಿ ಓರ್ವ ವ್ಯಕ್ತಿ, ಕೆ.ಸಿ. ಬ್ಲಾಕ್‌ನಲ್ಲಿ ಓರ್ವ ವ್ಯಕ್ತಿ, ಸಂಜಯ್ ಕಾಲೋನಿಯಲ್ಲಿ ಓರ್ವ ವ್ಯಕ್ತಿ, ಹುತ್ತಾಕಾಲೋನಿಯಲ್ಲಿ ಓರ್ವ ವ್ಯಕ್ತಿ, ಮಿಲಿಟರಿ ಕ್ಯಾಂಪಿನಲ್ಲಿ ಓರ್ವ ವ್ಯಕ್ತಿ ಮತ್ತು  ವಾಸವಿ ಕಾಲೋನಿಯಲ್ಲಿ ೩೨ ವರ್ಷದ ಓರ್ವ ಪುರುಷ ಸೋಂಕಿಗೆ ಒಳಗಾಗಿದ್ದಾರೆ.
        ಕನಕನಗರದಲ್ಲಿ ೫೬ ಮತ್ತು ೨೮ ವರ್ಷದ ಮಹಿಳೆಯರು ಸೇರಿದಂತೆ ಮೂವರು ಮಹಿಳೆಯರು, ಸುಣ್ಣದಹಳ್ಳಿಯಲ್ಲಿ ೨೮ ವರ್ಷದ ಮಹಿಳೆ, ಭೋವಿ ಕಾಲೋನಿಯ ೩೮ ವರ್ಷದ ಪುರುಷ, ಸಯ್ಯದ್ ಕಾಲೋನಿಯಲ್ಲಿ ೨೪ ವರ್ಷದ ಮಹಿಳೆ, ಹೊಸಮನೆಯಲ್ಲಿ ೪೬ ಮತ್ತು ೫೪ ವರ್ಷದ ವ್ಯಕ್ತಿಗಳು ಸೇರಿ ೩ ಮಂದಿಯಲ್ಲಿ ಹಾಗೂ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
      ಅಂಬೇಡ್ಕರ್ ಕಾಲೋನಿಯಲ್ಲಿ ೪೫ ವರ್ಷದ ವ್ಯಕ್ತಿ, ನಿರ್ಮಲಾ ಆಸ್ಪತ್ರೆಯಲ್ಲಿ ೨೮ ವರ್ಷದ ಸಿಸ್ಟರ್ ಹಾಗೂ ೨೪ ವರ್ಷದ ಯುವಕ, ಸಿದ್ಧಾರೂಢನಗರದ ೩೨ ವರ್ಷ ಓರ್ವ ವ್ಯಕ್ತಿ, ಓರ್ವ ಮಹಿಳೆ, ಕಾಗದನಗರದ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ ಓರ್ವ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
       ವಿದ್ಯಾಮಂದಿರದಲ್ಲಿ ೬೬ ವರ್ಷದ ವ್ಯಕ್ತಿ, ಜಿಂಕ್‌ಲೈನ್‌ನಲ್ಲಿ ೪೦ ವರ್ಷದ ವ್ಯಕ್ತಿ ಮತ್ತು ೩೬ ವರ್ಷದ ಮಹಿಳೆ, ಜನ್ನಾಪುರದಲ್ಲಿ ೫೭ ವರ್ಷದ ಮಹಿಳೆ, ಜೇಡಿಕಟ್ಟೆಯ ೨೬ ವರ್ಷದ ಇಬ್ಬರು ಯುವಕರು, ಕುವೆಂಪು ನಗರದಲ್ಲಿ ಓರ್ವ ಮಹಿಳೆ, ಕಡದಕಟ್ಟೆಯಲ್ಲಿ ೬೦ ವರ್ಷದ ವ್ಯಕ್ತಿ, ಅಪ್ಪರ್ ಹುತ್ತಾದಲ್ಲಿ ಓರ್ವ ವ್ಯಕ್ತಿ, ಭೋವಿಕಾಲೋನಿಯಲ್ಲಿ ಓರ್ವ ವ್ಯಕ್ತಿ, ಕೋಡಿಹಳ್ಳಿಯಲ್ಲಿ  ೬೨ ವರ್ಷದ ವ್ಯಕ್ತಿ, ೫೨ ವರ್ಷದ ಮಹಿಳೆ, ಅಮೀರ್‌ಜಾನ್ ಕಾಲೋನಿಯಲ್ಲಿ ೬೫ ವರ್ಷದ ಮಹಿಳೆ, ಹೊಳೆಹೊನ್ನೂರು ರಸ್ತೆಯಲ್ಲಿ ೪೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
       ಹೊಳೆಹೊನ್ನೂರಿನಲ್ಲಿ ೩೭, ೪೭, ೨೪ ವರ್ಷದ ಮೂವರು ವ್ಯಕ್ತಿಗಳು ಹಾಗೂ ೫೫ ವರ್ಷದ ಮಹಿಳೆ, ಮಾರಶೆಟ್ಟಿಹಳ್ಳಿಯಲ್ಲಿ ೯ ವರ್ಷದ ಬಾಲಕಿ, ೨೨, ೪೫, ೩೮ ವರ್ಷದ ಮೂವರು ಮಹಿಳೆಯರು, ೩೫ ವರ್ಷದ ವ್ಯಕ್ತಿ,  ಅರಬಿಳಚಿಯಲ್ಲಿ ೪೬ ವರ್ಷದ ವ್ಯಕ್ತಿ ಕೂಡ್ಲಿಗೆರೆಯಲ್ಲಿ ೧೮ ವರ್ಷದ ಯುವತಿ ಸೇರಿದಂತೆ ಒಟ್ಟು ೫೬ ಮಂದಿ ಸೊಂಕಿಗೆ ಒಳಗಾಗಿದ್ದಾರೆ.


ವಿಇಎಸ್ ವಿದ್ಯಾಸಂಸ್ಥೆ ಛೇರ‍್ಮನ್ ಎನ್. ಕೃಷ್ಣಪ್ಪ ಹುಟ್ಟುಹಬ್ಬ ಆಚರಣೆ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಆ. ೧೪: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
          ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ತಾಲೂಕು ಶಾಖೆ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಸರ್ಕಾರದ ಜಂಟಿ ಸಮಾಲೋಚನಾ ಸಮಿತಿ ಸದಸ್ಯರಾದ ಎನ್. ಕೃಷ್ಣನಪ್ಪರವರು ವಿದ್ಯಾಸಂಸ್ಥೆಯ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದು, ಇವರ ಸೇವೆ ಇನ್ನಷ್ಟು ಲಭಿಸುವಂತಾಗಲಿ ಎಂದು ಅಭಿನಂದಿಸಲಾಯಿತು.
         ಆಡಳಿತ ಮಂಡಳಿಯ ಪ್ರಮುಖರಾದ ರಂಗಸ್ವಾಮಿ, ಎ.ಕೆ ಚಂದ್ರಪ್ಪ, ಸಿ. ಜಯಪ್ಪ, ರಂಗನಾಥಪ್ರಸಾದ್, ಎಂ.ಎಸ್ ಬಸವರಾಜ್, ಶಿವಲಿಂಗೇಗೌಡ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಂಕರರಾಚಾರ್ಯರ ವಿಗ್ರಹ ಅಪವಿತ್ರ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ವಿಗ್ರಹವನ್ನು ಅಪವಿತ್ರಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ಮಾಧ್ವ ಮಹಾಮಂಡಳಿ ವತಿಯಿಂದ ತಾಲೂಕು ಆಡಳಿತಕ್ಕೆ ಶಿರಸ್ತೇದಾರ್ ಮಂಜಾನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಆ. ೧೪: ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ವಿಗ್ರಹವನ್ನು ಅಪವಿತ್ರಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ಮಾಧ್ವ ಮಹಾಮಂಡಳಿ ವತಿಯಿಂದ ತಾಲೂಕು ಆಡಳಿತಕ್ಕೆ ಶಿರಸ್ತೇದಾರ್ ಮಂಜಾನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು.
       ಶೃಂಗೇರಿ ಶ್ರೀ ಕ್ಷೇತ್ರ ಸಕಲ ಬ್ರಾಹ್ಮಣ ಸಮಾಜದವರಿಗೆ ಹಾಗು ಆಸ್ತಿಕರಿಗೆ ಧಾರ್ಮಿಕ ಸ್ಥಳವಾಗಿದ್ದು, ಇತ್ತೀಚೆಗೆ ಕೆಲವು ಕಿಡಿಗೇಡಿಗಳು ವಿಗ್ರಹ ಅಪವಿತ್ರಗೊಳಿಸಿರುತ್ತಾರೆ. ಈ ಘಟನೆಯನ್ನು ಮಹಾಮಂಡಳಿ ಉಗ್ರವಾಗಿ ಖಂಡಿಸುತ್ತದೆ. ಶೀಘ್ರವಾಗಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
     ಪ್ರಮುಖರಾದ ಜಯತೀರ್ಥ, ನರಸಿಂಹಚಾರ್, ರಮಾಕಾಂತ, ಕೇಶವಮೂರ್ತಿ, ರಾಘವೇಂದ್ರ, ಪವನ್ ಉಡುಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘದ ಕಾಯದರ್ಶಿ ಲಿಂಗರಾಜು ನಿವೃತ್ತಿ : ಅಭಿನಂದನೆ

ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಿಂಗರಾಜುರವರನ್ನು ಶುಕ್ರವಾರ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಆ. ೧೪: ತಾಲೂಕಿನ ಶ್ರೀ ರಾಮನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಿಂಗರಾಜುರವರನ್ನು ಶುಕ್ರವಾರ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಲಿಂಗರಾಜುರವರು ತಮ್ಮ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಸಹಕಾರ ಸಂಘಕ್ಕೆ ಹಲವಾರು ಪ್ರಶಸ್ತಿಗಳನ್ನು ತಂದುಕೊಡುವ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂಬ ಹೆಗ್ಗಳಿಕೆಗೆ ಕಾರಣಕರ್ತರಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್‌ರವರು ೧ ಲಕ್ಷ ರು. ಚೆಕ್ ವಿತರಿಸುವ ಜೊತೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ರಾಮನಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.