Tuesday, December 8, 2020

ಡಿ.೧೦ರಂದು ವಿಶ್ವ ಮಾನವ ಹಕ್ಕುಗಳ ದಿನ


ಭದ್ರಾವತಿ, ಡಿ. ೯: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಡಿ.೧೦ರಂದು ಸಂಜೆ ೬ ಗಂಟೆಗೆ ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಮಾಜಿ ಶಾಸಕ ವೈ.ಎಸ್.ವಿ ದತ್ತಾ ಉದ್ಘಾಟಿಸಲಿದ್ದು, ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಉಪನ್ಯಾಸ ನೀಡಲಿದ್ದಾರೆ. ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ಶಾರದಾ ಅಪ್ಪಾಜಿ, ಸರೋಜಮ್ಮ ಬಿ. ಶಂಕರಪ್ಪ ಮತ್ತು ನಿತಿಲ್ ಎಂ. ಶ್ರೀನಿವಾಸನ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಮಾಜಿ ಸದಸ್ಯ ಕೆ. ಕರಿಯಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.


ಗ್ರಾಮ ಪಂಚಾಯಿತಿ ಚುನಾವಣೆ : ಜೆಡಿಎಸ್ ಪಕ್ಷದ ಮೇಲ್ವಿಚಾರಕರಾಗಿ ಶಾರದ ಪೂರ‍್ಯಾನಾಯ್ಕ

ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ

ಭದ್ರಾವತಿ, ಡಿ. ೮: ತಾಲ್ಲೂಕಿನಲ್ಲಿ ಡಿ.೨೨ ರಂದು ಮೊದಲ ಹಂತದಲ್ಲಿ ೩೫ ಗ್ರಾಮ ಪಂಚಾಯಿತಿಗಳಿಗೆ ನಡೆಯುತ್ತಿರುವ ಚುನಾವಣೆಗೆ ಜಾತ್ಯತೀತ ಜನತಾದಳ ಮೇಲ್ವಿಚಾರಕರಾಗಿ ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ರವರನ್ನು ನೇಮಕಗೊಳಿಸಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. 
     ಮಾಜಿ ಶಾಸಕ ಎಂ ಜೆ ಅಪ್ಪಾಜಿ ನಿಧನ ಹೊಂದಿದ ನಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂ.ಜೆ ಅಪ್ಪಾಜಿ ಹೆಚ್ಚಿನ ಹಿಡಿತ ಹೊಂದಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಎರಡರಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕ್ಷೇತ್ರದಲ್ಲಿ ಇದುವರೆಗೂ ಅಪ್ಪಾಜಿಗೆ ಪರ್ಯಾಯ ನಾಯಕನನ್ನು ಹುಡುಕಲು ಸಾಧ್ಯವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಶಾರದಾ ಪೂರ‍್ಯಾನಾಯ್ಕ್ ರವರಿಗೆ ಜವಾಬ್ದಾರಿ ನೀಡಲಾಗಿದೆ. ಇವರು ಶಿವಮೊಗ್ಗ ಗ್ರಾಮಾಂತರದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ತಕ್ಷಣ ತಾಲೂಕು ಪಂಚಾಯಿತಿ ಚುನಾವಣೆ ಸಹ ಎದುರಾಗಿದೆ.



ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ : ಗ್ರಾ. ಪಂ. ಚುನಾವಣೆ ನಂತರ ಕ್ರಮ ಕೈಗೊಳ್ಳುವ ಭರವಸೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಸೈನ್ಯ ಹಾಗು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಡಿ. ೮: ನಗರಸಭೆ ವ್ಯಾಪ್ತಿಯ ಜನ್ನಾಪುರ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಸೈನ್ಯ ಹಾಗು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ಈ ಮದ್ಯದಂಗಡಿಯಿಂದ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ, ಮಹಿಳೆಯರಿಗೆ, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಮೀಪದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಈ ಸಂಬಂಧ ತಾಲೂಕು ಆಡಳಿತ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಮತ್ತು ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸುವ ಮೂಲಕ ತಕ್ಷಣ ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಯಿತು.
     ಸ್ಥಳಕ್ಕೆ ಆಗಮಿಸಿದ ಅಬಕಾರಿ ನಿರೀಕ್ಷಕ ಸುನಿಲ್ ಕಲ್ಲೂರು ಪ್ರತಿಭಟನಾಕಾರರ ದೂರುಗಳನ್ನು ಆಲಿಸಿ ಮದ್ಯದಂಗಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ವರದಿಸಲ್ಲಿಸುವುದಾಗಿ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಗಿಪಟ್ಟು ಹಿಡಿದರು. ಕೊನೆಯಲ್ಲಿ ತಹಸೀಲ್ದಾರ್‌ರವರನ್ನು ಪ್ರತಿಭಟನಾಕಾರರು ಮೊಬೈಲ್ ಮೂಲಕ ಸಂಪರ್ಕಿಸಿದ್ದು, ಗ್ರಾ.ಪಂ. ಚುನಾವಣೆ ಮುಕ್ತಾಯಗೊಂಡ ನಂತರ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    ನಗರಸಭೆ ಸದಸ್ಯ ಎಂ.ಎ ಅಜಿತ್ ನೇತೃತ್ವ ವಹಿಸಿದ್ದರು. ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಅನಂತರಾಮು, ಅನಿಲ್, ಸಂತೋಷ್, ಶ್ರೀನಿವಾಸ್, ಪರಮೇಶ್, ದೀಪು, ದೀಕ್ಷಿತ್, ಪ್ರಶಾಂತ್, ಹರೀಶ್, ಜನ ಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ಅನುರಾಧ, ವಿನೂತ, ಸ್ವಾತಿ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಅನಿತಾ, ಶಾರದ, ಮಹೇಶ್ವರಿ, ಪದ್ಮಮ್ಮ, ಸುಮಿತ್ರಾ, ಹೇಮಾ, ಸೌಮ್ಯ, ಶಾರದಕುಮಾರಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭಾ ಸದಸ್ಯರಾದ ಬದರಿನಾರಾಯಣ, ಗುಣಶೇಖರ್, ಮಾಜಿ ಸದಸ್ಯ ಮೈಲಾರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಾರತ್ ಬಂದ್ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಾಥಾ

ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹ  

ಭದ್ರಾವತಿ ಹುತ್ತಾ ಬಸ್ ನಿಲ್ದಾಣದ ಮುಂಭಾಗ ಜಾಥಾಕ್ಕೆ ಒಕ್ಕೂಟದ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ ಸಿ ಮಾಯಣ್ಣ ಚಾಲನೆ ನೀಡಿದರು
ಭದ್ರಾವತಿ, ಡಿ. ೮: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಭಾರತ್ ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಾಥಾ ನಡೆಸಲಾಯಿತು.
    ಹುತ್ತಾಕಾಲೋನಿ ಬಸ್ ನಿಲ್ದಾಣದ ಮುಂಭಾಗ ಜಾಥಾಕ್ಕೆ ಒಕ್ಕೂಟದ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ ಸಿ ಮಾಯಣ್ಣ ಚಾಲನೆ ನೀಡಿದರು. ರೈತರು ಮುಖಂಡರು ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ಹಾಗು ದಲಿತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಜಾಥಾ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. ತಹಸೀಲ್ದಾರ್ ಮೂಲಕ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಲಾಯಿತು.
    ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲೂಕು ಘಟಕ ಹಾಗು ಜಿಲ್ಲಾ ಮಹಿಳಾ ಘಟಕ, ದಲಿತ ಸಂಘರ್ಷ ಸಮಿತಿ, ಬಿಸಿಯೂಟ ನೌಕರರ ಸಂಘ, ಬ್ಲಾಕ್ ಕಾಂಗ್ರೆಸ್ ಸಮಿತಿ, ಜ್ಯಾತ್ಯತೀತ ಜನಾತದಳ, ಆಮ್ ಆದ್ಮಿ ಪಾರ್ಟಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಜನಶಕ್ತಿ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದವು.
    

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಭಾರತ್ ಬಂದ್ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಾಥಾ ನಡೆಸಲಾಯಿತು.
      ರೈತ ಮುಖಂಡರಾದ ಕೆ.ಟಿ ಗಂಗಾಧರ್, ಎಚ್ ಆರ್ ಬಸವರಾಜಪ್ಪ, ಯಶವಂತರಾವ್ ಘೋರ್ಪಡೆ, ಡಿ.ವಿ ವೀರೇಶ್, ರಾಮಚಂದ್ರರಾವ್, ಹಿರಿಯಣ್ಣಯ್ಯ, ಶರತ್ಚಂದ್ರ, ಮೋಹನ್, ವಸಂತ್, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್ ಅಶೋಕ್, ರಾಜೇಂದ್ರ, ಪ್ರೊ. ಎಂ. ಚಂದ್ರಶೇಖರಯ್ಯ, ಪೇಪರ್ ಸುರೇಶ್, ಜಿ. ರಾಜು, ಕರ್ನಾಟಕ ಜನಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಅನಿತಾ, ಶಾರದ, ಮಹೇಶ್ವರಿ, ಪದ್ಮಮ್ಮ, ಸುಮಿತ್ರಾ, ಹೇಮಾ, ಸೌಮ್ಯ, ಶಾರದಕುಮಾರಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ರವಿಕುಮಾರ್, ಉಮೇಶ್, ದಿಲೀಪ್, ತರುಣ್, ಲೋಕೇಶ್, ಕುಮಾರ್, ರಾಮಕೃಷ್ಣ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಸತ್ಯ, ಚಿನ್ನಯ್ಯ, ಕಾಣಿಕ್‌ರಾಜ್, ರಂಗನಾಥ್, ಹಾಲೇಶಪ್ಪ, ಪಳನಿ, ಕುಬೇಂದ್ರಪ್ಪ, ಆಮ್‌ಆದ್ಮಿ ಪಾರ್ಟಿ ಪ್ರಮುಖರಾದ ಜೋಸೆಫ್, ಮುಳ್ಕೆರೆ ಲೋಕೇಶ್, ಪರಮೇಶ್ವರಚಾರ್, ಎಚ್. ರವಿಕುಮಾರ್, ವಿನೋದ್, ಪರಮೇಶ್‌ನಾಯ್ಕ್, ಜೋಸೆಫ್, ಇಬ್ರಾಹಿಂ ಖಾನ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಈರಣ್ಣ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Monday, December 7, 2020

ಭಾರತ್ ಬಂದ್‌ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ

ಸೋಮವಾರ ಸಂಜೆ ಭದ್ರಾವತಿ ಮಿಲಿಟರಿ ಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಭೆ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ ಸಿ ಮಾಯಣ್ಣ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಡಿ. ೭: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮಂಗಳವಾರ ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
    ಸೋಮವಾರ ಸಂಜೆ ಮಿಲಿಟರಿ ಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಹಿರಿಯ ಕಾರ್ಮಿಕ ಮುಖಂಡ ಡಿ ಸಿ ಮಾಯಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರಾವತಿಯಲ್ಲೂ ಸಂಪೂರ್ಣ ಬಂದ್ ನಡೆಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಬೆಳಿಗ್ಗೆ ೧೦ ಗಂಟೆಗೆ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ, ನಂತರ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
    ಸಭೆಯಲ್ಲಿ ರೈತ ಮುಖಂಡರಾದ ಎಚ್ ಆರ್ ಬಸವರಾಜಪ್ಪ, ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ರಾಮಚಂದ್ರ, ಡಿ ವಿ ವೀರೇಶ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ಪೇಪರ್ ಸುರೇಶ್, ಎಎಪಿ ಪಕ್ಷದ ಎಚ್ ರವಿಕುಮಾರ್, ಇಬ್ರಾಹಿಂ ಖಾನ್, ಭಾಸ್ಕರ್,  ಕರವೇ ಅಧ್ಯಕ್ಷ ಎಂ ಪರಮೇಶ್, ರಾಜೇಂದ್ರ, ಜನಶಕ್ತಿ ಜಿ ರಾಜು, ಪೀರ್ ಶರೀಫ್, ಬಸವರಾಜ ಬಿ ಆನೇಕೊಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಕ್ಕಲಿಗರ ನಿಗಮ ಮಂಡಳಿ ಸ್ಥಾಪಿಸಲು ಆಗ್ರಹಿಸಿ ಮನವಿ

ರಾಜ್ಯದಲ್ಲಿ ಒಕ್ಕಲಿಗರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ನಿಗಮ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಡಿ. ೭: ರಾಜ್ಯದಲ್ಲಿ ಒಕ್ಕಲಿಗರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ನಿಗಮ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ತಾಲೂಕು ಒಕ್ಕಲಿಗರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
     ಒಕ್ಕಲಿಗ ಸಮುದಾಯದಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿದ್ದು, ಎಲ್ಲರನ್ನೂ ಸಮಾನತೆ ತಳಹದಿಯಲ್ಲಿ ನೋಡುವಂತಾಗಬೇಕು. ಈ ಹಿನ್ನಲೆಯಲ್ಲಿ ನಿಗಮ ಮಂಡಳಿ ಸ್ಥಾಪಿಸಿ ಸಮುದಾಯ ಅಭಿವೃದ್ಧಿಗೆ ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
     ಸಂಘದ ಕಾರ್ಯದರ್ಶಿ ಪ್ರಶಾಂತ್, ಪ್ರಮುಖರಾದ ಶಾರದ ಅಪ್ಪಾಜಿ, ಟಿ. ವೆಂಟಕೇಶ್, ಧರ್ಮೇಗೌಡ, ಟಿ. ಚಂದ್ರೇಗೌಡ, ಗೊಂದಿ ಜಯರಾಮ್, ರಾಮಕೃಷ್ಣ, ಕರೀಗೌಡ, ಶಶಿಕುಮಾರ್ ಗೌಡ, ಸತೀಶ್‌ಗೌಡ, ಎಂ.ಎಸ್ ಸುಧಾಮಣಿ, ಅನ್ನಪೂರ್ಣ ಸತೀಶ್, ರಾಧಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹಾಲಿ ಗ್ರಾ.ಪಂ. ಸದಸ್ಯೆ ಹೆಸರೇ ನಾಪತ್ತೆ : ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಜಯಕರ್ನಾಟಕ ಜನಪರ ವೇದಿಕೆ ಮೂಲಕ ತಹಸೀಲ್ದಾರ್‌ಗೆ ಮನವಿ

ಭದ್ರಾವತಿ ತಾಲೂಕಿನ ಕೊರಲಕೊಪ್ಪ ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆಯೊಬ್ಬರ ಹೆಸರನ್ನು ರಾಜಕೀಯ ದುರುದ್ದೇಶದಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಾಲೂಕು ಕಛೇರಿ ಮುಂಭಾಗ ಸೋಮವಾರ ಪತ್ರಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೭: ತಾಲೂಕಿನ ಕೊರಲಕೊಪ್ಪ ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆಯೊಬ್ಬರ ಹೆಸರನ್ನು ರಾಜಕೀಯ ದುರುದ್ದೇಶದಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಾಲೂಕು ಕಛೇರಿ ಮುಂಭಾಗ ಸೋಮವಾರ ಪತ್ರಿಭಟನೆ ನಡೆಸಲಾಯಿತು.
    ಈ ಬಾರಿ ಚುನಾವಣೆಗೆ ಸ್ಪರ್ಧಿಸಬಾರದೆಂಬ ದುರುದ್ದೇಶದಿಂದ ಹಾಲಿ ಸದಸ್ಯೆ ಬಿ.ಆರ್ ಸಿಂಧುರವರ ಹೆಸರನ್ನು ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಟ್ಟು ನಗರ ವ್ಯಾಪ್ತಿಗೆ ಸೇರಿಸಲಾಗಿದೆ. ಕೀಳುಮಟ್ಟದ ಕುತಂತ್ರ ರಾಜಕಾರಣದ ಅಮಿಷಕ್ಕೆ ಬಲಿಯಾಗಿ ಬಿಎಲ್‌ಓ ಹಾಗು ಸಂಬಂಧಪಟ್ಟ ಅಧಿಕಾರಿಗಳು ಈ ಕೃತ್ಯನಡೆಸಿದ್ದಾರೆಂದು ಆರೋಪಿಸಲಾಯಿತು.
ಇಂದೊಂದು ಸಂವಿಧಾನದ ಕಗ್ಗೊಲೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ ತಕ್ಷಣ ನಡೆದಿರುವ ತಪ್ಪನ್ನು ಸರಿಪಡಿಸಿ ಚುನಾವಣೆಗೆ ಸ್ಪಧಿಸಲು ಅವಕಾಶ ಕೊಡಬೇಕೆಂದು ಆಗ್ರಹಿಸಲಾಯಿತು.
   ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ, ಕಾರ್ಯಾಧ್ಯಕ್ಷ ಮಹಮದ್ ಶಫಿ, ಅಬಿದ್, ಸದಸ್ಯೆ ಬಿ.ಅರ್ ಸಿಂಧು ಹಾಗು ಕೊರಲಕೊಪ್ಪ ಗ್ರಾಮಸ್ಥರು ಪಾಲ್ಗೊಂಡಿದ್ದರು.