Thursday, December 24, 2020

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ  ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಡಿ. ೨೪:  ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸರಳವಾಗಿ ನಡೆಯಿತು.
    ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾಸಂಸ್ಥೆಯ ಬಿ.ಇಡಿ ವಿಭಾಗದ ಪ್ರಾಂಶುಪಾಲರು, ಪ್ರಭಾರಿ ಆಡಳಿತಾಧಿಕಾರಿಗಳು,  ಸಹಾಯಕ ಆಡಳಿತಾಧಿಕಾರಿಗಳು, ಹಾಗೂ ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು, ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  
  ಕಾರ್ಯಕ್ರಮದಲ್ಲಿ ರೇಣುಕಪ್ಪ ನಿರೂಪಣೆ, ಆಶಾ ಪ್ರಾರ್ಥನೆ, ರವಿ ಸ್ವಾಗತ ಮತ್ತು ರೇವತಿ ವಂದನಾರ್ಪಣೆ ನೆರವೇರಿಸಿಕೊಟ್ಟರು.

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಕಡೆ ಪ್ರತಿಯೊಬ್ಬರು ಗಮನ ಹರಿಸಿ : ಕೆಎಲ್‌ಎಸ್ ರಾವ್

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಒಂದು ತಿಂಗಳವರೆಗೆ ನಡೆದ ಮಾಸಾಚರಣೆ


ಪರಿಸರ ಮಾಸಾಚರಣೆ ಅಂಗವಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿದರು.
    ಭದ್ರಾವತಿ, ಡಿ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನ.೧೯ ರಿಂದ ಒಂದು ತಿಂಗಳವರೆಗೆ ಪರಿಸರ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
    ಮಾಸಾಚರಣೆ ಅಂಗವಾಗಿ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ, ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು.  ಪ್ರತಿಯೊಂದು ವಿಭಾಗದಲ್ಲಿಯೂ ೩ ಮೊದಲ ಮಂದಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಪ್ರತಿದಿನದ ಚಟುವಟಿಕೆಗಳಲ್ಲಿ, ವಾಸಿಸುವ ಹಾಗು ಕೆಲಸ ಮಾಡುವ ಸ್ಥಳದ ಸುತ್ತಮುತ್ತ, ಪರಿಸರ ಕಾಳಜಿ ವಹಿಸಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯ. ಅಲ್ಲದೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದಾಗಿದೆ ಎಂದರು.  
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮಹಾಪ್ರಬಂಧಕ(ಈ.ಎಮ್.ಡಿ) ಡಿ. ಲೋಕೇಶ್ವರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ಉನ್ನಿಕೃಷ್ಣನ್ ಪ್ರಾಥಿಸಿದರು. ಆರ್. ಸತೀಶ್ ವಂದಿಸಿದರು.

Wednesday, December 23, 2020

ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ : ಡಾ. ಎಂ.ವಿ ಅಶೋಕ್

ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ಭದ್ರಾವತಿ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೨೨: ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ  ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ಕಾರ್ಯದರ್ಶಿ ಎಚ್.ಎನ್ ಯೋಗೇಶ್ ಕುಮಾರ್ ೨೯ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
     ಕಾರ್ಯಕ್ರಮದಲ್ಲಿ ಏರಿಯಾ-೧೦೭ರ ಅಧ್ಯಕ್ಷ ಡಿ.ಬಿ ವಿನಯ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ.ಎಸ್. ದುಗ್ಗೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್, ಮುಖಂಡರಾದ ಡಿ.ಟಿ ಶ್ರೀಧರ್, ಡಾ. ಸಾತ್ವಿಕ್, ಧರಣೇಂದ್ರ ದಿನಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮ ಚುನಾವಣೆ ಭದ್ರಾವತಿಯಲ್ಲಿ ಶೇ.೮೨ರಷ್ಟು ಮತದಾನ

ಕೋವಿಡ್ ನಿಯಮ ಪಾಲಿಸದ ಮತದಾರರು, ಮತದಾರರನ್ನು ಸೆಳೆಯಲು ಹಲವು ಅಮಿಷ, ಈ ಸಹ ಹಾಲಿ-ಮಾಜಿ ಶಾಸಕರ ಅಲೆ

ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
   ಭದ್ರಾವತಿ, ಡಿ. ೨೨: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಮತದಾನ ಕಾರ್ಯ ಬಹುತೇಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ೧೦೭೦ ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸುಮಾರು ಶೇ.೮೨ರಷ್ಟು ಮತದಾನ ನಡೆದಿದೆ.
  ಬೆಳಿಗ್ಗೆ ಮತದಾನ ಬಿರುಸಿನಿಂದ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.೫೦ರಷ್ಟು ಪ್ರಮಾಣಕ್ಕೆ ತಲುಪಿತ್ತು. ನಂತರ ಮಂದಗತಿಯಲ್ಲಿ ಸಾಗಿ ಪುನಃ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಅರಣ್ಯ ವ್ಯಾಪ್ತಿಯ ಅಂತರಗಂಗೆ, ಗುಡ್ಡದ ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಬಿಸಿಲುಮನೆ, ಬೆಳ್ಳಿಗೆರೆ, ಬದನೆಹಾಳು, ಉದಯಪುರ, ದೊಡ್ಡೇರಿ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದು ಗಮನ ಸೆಳೆದಿದೆ.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
   ಎರೇಹಳ್ಳಿ, ಮಾವಿನಕೆರೆ, ಬಾರಂದೂರು, ಕಾರೇಹಳ್ಳಿ, ಹಳ್ಳಿಕೆರೆ, ಹಿರಿಯೂರು, ಅರಳಿಕೊಪ್ಪ, ಕಲ್ಲಹಳ್ಳಿ, ಕಂಬದಾಳು ಹೊಸೂರು, ಸಿಂಗನಮನೆ, ತಾವರಘಟ್ಟ, ಬಿಳಕಿ, ದೊಣಬಘಟ್ಟ, ಗುಡಮಘಟ್ಟ, ತಡಸ, ಕಾಗೆಕೋಡಮಗ್ಗೆ, ಕಲ್ಲಹಳ್ಳಿ, ಕೂಡ್ಲಿಗೆರೆ, ಮಂಗೋಟೆ, ಮಾರಶೆಟ್ಟಿಹಳ್ಳಿ, ಮೈದೊಳಲು, ನಿಂಬೆಗೊಂದಿ, ಸೈದರಕಲ್ಲಹಳ್ಳಿ, ಯಡೇಹಳ್ಳಿ, ಸನ್ಯಾಸಿಕೋಡಮಗ್ಗೆ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮತದಾನ ಯಶಸ್ವಿಯಾಗಿ ನಡೆದಿದೆ.
     ಕೋವಿಡ್ ನಿಯಮ ಪಾಲಿಸದ ಮತದಾರರು:
  ಈ ಶತಮಾನದ ಮಹಾಮಾರಿ ಕೋವಿಡ್-೧೯ ಸೋಂಕು ಕಳೆದ ಸುಮಾರು ೧೦ ತಿಂಗಳಿನಿಂದ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುವ ಮೂಲಕ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಏರಿಕೆಯಾಗುವ ಜೊತೆಗೆ ಇದೀಗ ಹೊಸ ರೂಪಾಂತದಲ್ಲಿ ಪುನಃ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಕೋವಿಡ್-೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಚುನಾವಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಚುನಾವಣೆಯಲ್ಲಿ ನಿಯಮಗಳು ಕೇವಲ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಮೀಸಲಿರುವಂತೆ ಕಂಡು ಬಂದಿತು. ಅಭ್ಯರ್ಥಿಗಳು ಮತ್ತು ಮತದಾರರು ಮಾತ್ರ ಯಾವುದೇ ನಿಯಮ ಪಾಲನೆ ಮಾಡದೆ, ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡದೆ ಗುಂಪು ಸೇರಿರುವುದು ಕಂಡು ಬಂದಿತು. ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದರು.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆಗಳ ಬಳಿ ಕೋವಿಡ್-೧೯ರ ನಿಯಮ ಪಾಲನೆ ಮಾಡದೆ ಗುಂಪು ಸೇರಿರುವ ಮತದಾರರು.
       ಮತದಾರರನ್ನು ಸೆಳೆಯಲು ಹಲವು ಅಮಿಷಗಳು:
     ಗ್ರಾಮ ಪಂಚಾಯಿತಿ ಚುನಾವಣೆ ಸಹ ಯಾವುದೇ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ನಡೆದಿದ್ದು, ಈ ಬಾರಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಕಸರತ್ತು ನಡೆಸಿದ್ದು, ಕಳೆದ ೨ ದಿನಗಳಿಂದ ಮತದಾರರಿಗೆ ವಿವಿಧ ರೀತಿಯ ಅಮಿಷದೊಂದಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ವಿತರಣೆ, ಮತದಾನದಂದು ಮದ್ಯ, ಬಾಡೂಟ ವ್ಯವಸ್ಥೆ ಹಾಗು ಹಣದ ಹೊಳೆ ಹರಿಸಿರುವುದು ತಿಳಿದು ಬಂದಿದೆ.
     ಕೆಲವೆಡೆ ಅನುಕಂಪದ ಅಲೆ, ಕೆಲವೆಡೆ ಪ್ರತಿಷ್ಠೆಯ ಅಲೆ:
    ಮತದಾನ ಮುಕ್ತಾಯದ ನಂತರ ಸಮೀಕ್ಷೆಯಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಸಹ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿರುವುದು ಕಂಡುಬಂದಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೇಲಿನ ಅನುಕಂಪದ ಅಲೆ ಕಂಡು ಬಂದಿದೆ. ಕೆಲವು ಕಡೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆಯ ಅಲೆ ಇರುವುದು ಕಂಡು ಬಂದಿದೆ. ಉಳಿದಂತೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿನ ಸಾಧನೆ ಕಾಯ್ದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚು ಪ್ರಬಲವಾಗಿದ್ದು, ಈ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ೨ ಮತ್ತು ೩ನೇ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾನ ನಡೆಸಿದರು.


Monday, December 21, 2020

ನಗರ ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರಿಗೆ ಪೌರಾಯುಕ್ತ ಮನೋಹರ್ ಅಭಿನಂದನೆ

ಭದ್ರಾವತಿ ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
  ಭದ್ರಾವತಿ, ಡಿ. ೨೧: ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
   ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಹಿಂದುಳಿದ ವರ್ಗದಿಂದ ಹುತ್ತಾ ಕಾಲೋನಿ ನಿವಾಸಿ ಸತೀಶ್‌ಕುಮಾರ್, ಅಲ್ಪ ಸಂಖ್ಯಾತರ ವರ್ಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್‌ರಾಜ್ ಬಾಂಟಿಯಾ ಮತ್ತು ಪರಿಶಿಷ್ಟ ಜಾತಿ ವರ್ಗದಿಂದ ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದ ನಿವಾಸಿ ಗೌರಮ್ಮರವರು ನಾಮನಿರ್ದೇಶನಗೊಂಡಿದ್ದಾರೆ. ಈ ೪ ಸದಸ್ಯರನ್ನು ಪೌರಾಯುಕ್ತರು ಅಭಿನಂದಿಸುವ ಮೂಲಕ ಸಮಿತಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಜೊತೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
   ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಕೆ. ಮಂಜಪ್ಪ, ರಾಜು, ಸುನಿತಾ, ಸರಸ್ವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿ ವಿದ್ಯುತ್ ಕಂಬದಲ್ಲೇ ಸಾವು

ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಭದ್ರಾವತಿ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ, ಡಿ. ೨೧: ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
    ಸುರೇಶ್(೨೧) ಎಂಬಾತ ಮೃತಪಟ್ಟಿದ್ದು, ಗ್ರಾಮದ ಸರ್ವೆ ನಂ.೬ರ ಅಣ್ಣಯ್ಯ ಎಂಬುವರ ಜಮೀನಿನ ಬೋರ್ವೆಲ್‌ಗೆ ಸಂಪರ್ಕಗೊಂಡಿದ್ದ ವಿದ್ಯುತ್ ಕಡಿತಗೊಂಡಿದ್ದು, ಈ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳು ಮತದಾನದ ಬಗ್ಗೆ ಅರಿವು ಹೊಂದಲಿ : ಟಿ.ಎನ್ ಸೋಮಶೇಖರಯ್ಯ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚಾಲನೆ ನೀಡಿದರು.
ಭದ್ರಾವತಿ, ಡಿ. ೨೧: ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಮತದಾನದ ಬಗ್ಗೆ ಅರಿವು ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ  ನೀಡಿದರು.
ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
     ೧೮ ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಹೊಂದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ಕರೆ ನೀಡಿದರು.
   ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು. ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ ಮೂಲಕ, ಸಿ.ಎನ್ ರಸ್ತೆ, ನಂತರ ಕನಕಮಂಟಪ ಮೈದಾನದವರೆಗೂ ಜಾಥಾ ಸಾಗಿತು.  
    'ಮತದಾರರು ತಮ್ಮ ಪವಿತ್ರ ಮತಗಳನ್ನು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳಬೇಡಿ', 'ಕಡ್ಡಾಯವಾಗಿ ಮತದಾನ ಮಾಡಿ' ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.  


ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭದ್ರಾವತಿಯಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು.
    ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಕ್ಷೇತ್ರ ಸಮನ್ವಯಾಧಿಕಾರಿ ವೈ. ಗಣೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪಂಚಾಲ್, ಕನಕ ವಿದ್ಯಾಸಂಸ್ಥೆ ಮಂಜುನಾಥ್, ಸಹ್ಯಾದ್ರಿ ಪ್ರೌಢಶಾಲೆ ಸಂಪನ್ಮೂಲ ಶಿಕ್ಷಕ ಬಿ. ಮಂಜಪ್ಪ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರುಗಳು, ಶಾಲಾ ಹಂತದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ೩೦೦ ವಿದ್ಯಾರ್ಥಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ) ತಾಲೂಕು ನೋಡಲ್ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಆಹ್ಮದ್ ಪರ್ವೀಜ್ ಸ್ವಾಗತಿಸಿದರು. ಇಸಿಓ ಶ್ಯಾಮಲಾ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಎಂ.ಜಿ ನವೀನ್ ವಂದಿಸಿದರು.
     ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನ ವ್ಯವಸ್ಥೆ ಮತ್ತು ಮತದಾರರು ಪರಿಕಲ್ಪನೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಫರ್ಧೆ, ಭಿತ್ತಿಚಿತ್ರ ಮತ್ತು  ಕೊಲೇಜ್ ಮೇಕಿಂಗ್ ಹಾಗೂ ರಸಪ್ರಶ್ನೆ ಒಟ್ಟು ೪ ರೀತಿಯ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
    ಪ್ರಬಂಧ ಸ್ಪರ್ಧೆ(ಕನ್ನಡ ಭಾಷೆ)ಯಲ್ಲಿ ಅನುಷ ಎಸ್. (ನ್ಯಾಷನಲ್ ಪ್ರೌಢಶಾಲೆ, ಬಿ.ಆರ್.ಪ್ರಾಜೆಕ್ಟ್), ಅಕ್ಷತ ಎಂ ಶೇಟ್ (ಸೇಂಟ್ ಮೇರಿಸ್ ಶಾಲೆ, ಹೊಳೆಹೊನ್ನೂರು) ಪ್ರಿಯಾಂಕ ವಿ. ಕರ್ನಾಟಕ ಪಬ್ಲಿಕ್ ಶಾಲೆ, ಅಂತರಗಂಗೆ ಮತ್ತು  ಭಿತ್ತಿ ಪತ್ರ ಹಾಗು ಕೊಲೇಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿನಾಯಕ ಎಂ.ಎಸ್. (ಸೇಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆ, ನ್ಯೂಟೌನ್), ಹರ್ಷಿತ ಎಸ್ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಇಂಪನ ಜಿ.ಎಂ. (ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನ್ಯೂಟೌನ್) ಹಾಗು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಚಂದ್ರ & ತನುಶ್ರೀ ಎ (ಸಹ್ಯಾದ್ರಿ ಇಂಗ್ಲಿಷ್ ಪ್ರೌಢಶಾಲೆ, ಹುತ್ತಾ ಕಾಲೋನಿ), ಮೇಘನ ಆರ್. & ಭೂಮಿಕ ಐ. (ಸರ್ಕಾರಿ ಪ್ರೌಢಶಾಲೆ, ಬಾಳೆಮಾರನಹಳ್ಳಿ), ತುಳಸಿ ಬಿ ಕೆ. & ನಚಿಕೇತನ್ ಎಂ (ಶ್ರೀ ಆದಿಚುಂಚನಗಿರಿ ಆಂಗ್ಲಪ್ರೌಢಶಾಲೆ, ಕಾರೆಹಳ್ಳಿ) ಮತ್ತು ಪ್ರಬಂಧ ಸ್ಪರ್ಧೆ(ಆಂಗ್ಲ ಭಾಷೆ)ಯಲ್ಲಿ ನಿಫಾ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಭೂಮಿಕ ಜಿ (ಪೇಪರ್ ಟೌನ್ ಆಂಗ್ಲ ಪ್ರೌಢಶಾಲೆ) ಹಾಗು ಹಿತೇಶ ಎಲ್. (ಸರ್ಕಾರಿ ಪ್ರೌಢಶಾಲೆ, ಹೊಸ ಸಿದ್ಧಾಪುರ).