Friday, July 23, 2021

ತಾಲೂಕಿನಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆ : ಕೆರೆಕಟ್ಟೆ, ಹಳ್ಳಕೊಳ್ಳ ಭರ್ತಿ


    ಭದ್ರಾವತಿ ನಗರದಲ್ಲಿ ಕಳೆದ ೫-೬ ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತಗೊಂಡಿದೆ.
    ಭದ್ರಾವತಿ, ಜು. ೨೩: ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ಬೆಳೆ ಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಮುಂದಿನ ೨-೩ ದಿನ ಇದೆ ರೀತಿ ಮಳೆಯಾದಲ್ಲಿ ಜಮೀನುಗಳಲ್ಲಿ ನೀರು ನಿಂತುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಇದರಿಂದ ಬೆಲೆ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
    ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ೩ ದಿನಗಳಿಂದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ ಚರಂಡಿಗಳಲ್ಲಿ ಕಸಕಡ್ಡಿಕಟ್ಟಿಕೊಂಡು ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಇದರಿಂದಾಗಿ ವಾಹನ ಸವಾರು ಹಾಗು ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಇದುವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೌರಾಯುಕ್ತ ಕೆ. ಪರಮೇಶ್ ತಿಳಿಸಿದ್ದಾರೆ.
      ಸಹಾಯವಾಣಿ ಕೇಂದ್ರ:
     ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮುನ್ನಚ್ಚರಿಕೆ ಕ್ರಮವಾಗಿ ಹೆಲ್ಪ್ ಡೆಸ್ಕ್ ಸಹಾಯವಾಣಿ ಕೇಂದ್ರ ಆರಂಭಿಸಿದ್ದು, ದೂರವಾಣಿ ಸಂಖ್ಯೆ ೦೮೨೮೨-೨೬೩೪೬೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
    ತುರ್ತು ಸಂದರ್ಭಗಳಲ್ಲಿ ಸಮೀಪದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ತಹಸೀಲ್ದಾರ್ ಮೊ: ೯೯೧೬೨೦೧೧೩೫, ತಹಸೀಲ್ದಾರ್ ಗ್ರೇಡ್-೨ ಮೊ: ೯೬೬೩೭೫೪೧೮೧, ಶಿರಸ್ತೇದಾರ್ ಮೊ: ೭೮೯೨೫೯೫೪೬೫, ಉಪ ತಹಸೀಲ್ದಾರ್ ಕೂಡ್ಲಿಗೆರೆ ಮೊ: ೯೯೦೦೮೦೦೬೪೮, ಉಪ ತಹಸೀಲ್ದಾರ್ ಆನವೇರಿ ಮೊ: ೯೧೧೦೬೪೨೧೪೬, ಉಪ ತಹಸೀಲ್ದಾರ್ ಕಲ್ಲಿಹಾಳ್ ಮತ್ತು ಹೊಳೆಹೊನ್ನೂರು ಮೊ: ೯೪೪೯೬೮೬೪೭೪, ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ ಮೊ: ೯೯೮೦೫೫೧೧೪೯, ರಾಜಸ್ವ ನಿರೀಕ್ಷಕರು ಕೂಡ್ಲಿಗೆರೆ ಹೋಬಳಿ ಮೊ: ೭೮೧೩೦೪೩೨೪೧, ರಾಜಸ್ವ ನಿರೀಕ್ಷಕರು ಹೊಳೆಹೊನ್ನೂರು ಹೋಬಳಿ ಮೊ: ೯೯೪೫೫೭೫೩೩೦ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಕಾವೇರಿಯಂತೆ ವಿಸ್ತಾರಗೊಳ್ಳುತ್ತಿದ್ದಾಳೆ ಭದ್ರೆ : ಶೀಘದಲ್ಲಿಯೇ ಭರ್ತಿಯಾಗುವ ಮುನ್ಸೂಚನೆ

ಭದ್ರಾ ಜಲಾಶಯ

* ಅನಂತಕುಮಾರ್
     ಭದ್ರಾವತಿ, ಜು. ೨೩: ನಾಡಿನ ಜೀವನದಿ ಕಾವೇರಿಯಂತೆ ಭದ್ರೆ ಸಹ ಬೃಹದಾಗಿ ವಿಸ್ತಾರಗೊಳ್ಳುತ್ತಿದ್ದು, ಇದೀಗ ಮಧ್ಯ ಕರ್ನಾಟಕ ಭಾಗದ  ಜೀವನಾಡಿಯಾಗಿ ಮೈತಳೆದು ನಿಂತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿದ್ದು, ಇದರಿಂದಾಗಿ ಈ ವ್ಯಾಪ್ತಿಯ ರೈತರು ನೆಮ್ಮದಿ ಕಾಣುವಂತಾಗಿದೆ.  
      ಭದ್ರಾ ಜಲಾಶಯ:
  ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಬೆಟ್ಟಗುಡ್ಡಗಳ ನಡುವೆ ಹರಿಯುವ ಭದ್ರೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಕೂಡಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ಮುಂದೆ ಹರಿದು ತುಂಗಾಭದ್ರಾ ಜಲಾಶಯ ಸೇರುತ್ತದೆ. ಈ ನದಿಗೆ ೧೯೬೫ರಲ್ಲಿ ಸುಮಾರು ೪೩ ಕೋಟಿ ರು. ವೆಚ್ಚದಲ್ಲಿ ಪ್ರಸ್ತುತ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ನಿರ್ಮಾಣಗೊಂಡ ಜಲಾಶಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ವರದಾನವಾಗಿದೆ. ಒಟ್ಟು ೧,೬೨,೮೧೮ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
     ಭದ್ರಾ ಜಲಾಶಯ ೧೮೬ ಅಡಿ ಎತ್ತರವಿದ್ದು, ಸುಮಾರು ೭೧ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಸ್ವಯಂ ಚಾಲಿತ ೪ ಕ್ರೆಸ್ಟ್‌ಗೇಟ್‌ಗಳನ್ನು ಒಳಗೊಂಡಿದೆ.  ಮೇಲ್ಭಾಗದಲ್ಲಿ ಎರಡು ಕಾರುಗಳು ಒಟ್ಟಿಗೆ ಚಲಿಸುವಷ್ಟು ವಿಶಾಲವಾದ ಸ್ಥಳಾವಕಾಶವಿದೆ. ಎಡ-ಬಲ ಎರಡು ಬೃಹತ್ ನಾಲೆಗಳನ್ನು ಒಳಗೊಂಡಿದೆ. ಎಡದಂಡೆ ನಾಲೆ ಮೂಲಕ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕಿನ ಸುಮಾರು ೮,೩೦೦ ಹೆಕ್ಟೇರು ಪ್ರದೇಶಕ್ಕೆ  ಹಾಗೂ ಬಲದಂಡೆ ನಾಲೆ ಮೂಲಕ ತರೀಕೆರೆ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಲಾಶಯದ ನೀರನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಕುಡಿಯುವ ನೀರು, ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿದೆ. ಸುಮಾರು ೩೯ ಮೆಗವ್ಯಾಟ್ ವಿದ್ಯುತ್  ಉತ್ಪಾದಿಸಲಾಗುತ್ತಿದೆ. ಕಳೆದ ಹಲವಾರುಗಳಿಂದ ವರ್ಷಗಳಿಂದ ಬಯಲುಸೀಮೆ ಹಾಗೂ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ಭದ್ರಾ ಮೇಲ್ಡಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ.
     ೨೯ ಬಾರಿ ಪೂರ್ಣ ಪ್ರಮಾಣದಲ್ಲಿ ಭರ್ತಿ:  
  ಇದುವರೆಗೂ ಜಲಾಶಯ ಒಟ್ಟು ೨೯ ಬಾರಿ  ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ೧೯೬೯ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣ ತಲುಪಿತ್ತು. ನಂತರ ೧೯೯೦ ರಿಂದ ೯೪ರ ವರೆಗೆ ೫ ಬಾರಿ, ೨೦೦೫ ರಿಂದ ೨೦೧೧ರ ವರೆಗೆ ೬ ಬಾರಿ, ೨೦೧೩ ಮತ್ತು ೨೦೧೪ರಲ್ಲಿ ಹಾಗೂ ೨೦೧೮ ಮತ್ತು ೨೦೧೯ ಹಾಗು ೨೦೨೦ರಲ್ಲಿ ಜಲಾಶಯ ಭರ್ತಿಯಾಗಿದ್ದು, ಹಲವು ಬಾರಿ ೧೭೦ ಅಡಿಗೂ ಅಧಿಕ ನೀರು ಸಂಗ್ರಹವಾದರೂ ಸಹ ಭರ್ತಿಯಾಗಿಲ್ಲ.
     ಹಲವು ವಿಶೇಷತೆಗಳು:
   ದೇಶದಲ್ಲಿ ೨ನೇ ಅತಿ ಎತ್ತರದ ಜಲಾಶಯ ಇದಾಗಿದ್ದು, ೧೮೬ ಅಡಿ ಎತ್ತರ ಹೊಂದಿದೆ. ಜಲಾಶಯದ ನೀರು ಬಿದಿರು ಹಸಿರಿನಿಂದ ಕಂಗೊಳಿಸುವುದು ವಿಶೇಷವಾಗಿದ್ದು, ಜಲಾಶಯದ ವ್ಯಾಪ್ತಿಯನ್ನು ಕಳಲೆ ಔಷಧಿ ಸಸಿಗಳು ಆವರಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಕ್ರಿಮಿಕೀಟಗಳಿಂದ ಮುಕ್ತಿಹೊಂದಿದ ಪರಿಶುದ್ಧ ನೀರು ಇದಾಗಿದೆ. ಭದ್ರಾ ಆಭಯಾರಣ್ಯದಲ್ಲಿ ೧೪೭ ಕಿ.ಮೀ. ವರೆಗೆ, ೫೨ ಕಿ.ಮೀ ಎನ್.ಆರ್ ಪುರದ ವರೆಗೆ, ೭೦ ಕಿ.ಮೀ. ಚಿಕ್ಕಮಗಳೂರುವರೆಗೆ, ೩೨ ಕಿ.ಮೀ. ಮುದ್ದಿನಕೊಪ್ಪದವರೆಗೆ ಜಲಾಶಯದ ನೀರು ವಿಸ್ತರಿಸಿಕೊಂಡಿದೆ. ಭದ್ರಾ ನದಿಗೆ ಯಾವುದೇ ಉಪನದಿಗಳಿಲ್ಲ. ಜಲಾಶಯದಲ್ಲಿ ಅಲ್ಲಲ್ಲಿ ಹಸಿರು ಗುಡ್ಡಗಳಿದ್ದು, ಪ್ರತಿ ವರ್ಷ ಆನೇಕ ಜಾತಿಯ ಪಕ್ಷಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ವಲಸೆ ಬಂದು ಸುಮಾರು ೫-೬ ತಿಂಗಳುಗಳು ಇದ್ದು, ಪುನಃ ಹಿಂದಿರುಗುತ್ತವೆ. ಈ ಪಕ್ಷಿಗಳ ವೀಕ್ಷಣೆಗಾಗಿಯೇ ಗುಡ್ಡಗಳಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಧಾಮಗಳನ್ನು ನಿರ್ಮಿಸಲಾಗಿದ್ದು, ಅಲ್ಲದೆ ಬೋಟಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಜಲಾಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಲಾಗಿದ್ದು, ರಾತ್ರಿ ವೇಳೆ ವೈಭವಯುತವಾಗಿ ಕಂಗೊಳಿಸುತ್ತದೆ. ಒಟ್ಟಾರೆ ಜಲಾಶಯ ಹಲವು ವಿಶೇಷತೆಗಳಿಂದ ಕೂಡಿದೆ.
     ಶೀಘ್ರದಲ್ಲಿಯೇ ಜಲಾಶಯ ಭರ್ತಿ:
   ಕಳೆದ ೫-೬ ದಿನಗಳಿಂದ ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಶುಕ್ರವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ ೧೭೧.೧ ಅಡಿ ತಲುಪಿದ್ದು, ಇದೆ ರೀತಿ ಮಳೆಯಾದಲ್ಲಿ ಜಲಾಶಯ ಶೀಘ್ರದಲ್ಲಿಯೇ ಭರ್ತಿಯಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
    ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದ್ದು, ಕಳೆದ ಬಾರಿ ಇದೆ ಅವಧಿಯಲ್ಲಿ ೧೫೩.೭ ಅಡಿ ತಲುಪಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ೧೮ ಅಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಕಳೆದ ಬಾರಿ ಆಗಸ್ಟ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಮಳೆ ಇದೆ ರೀತಿ ಮುಂದುವರೆದಲ್ಲಿ ಈ ತಿಂಗಳ ಅಂತ್ಯದೊಳಗೆ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

Thursday, July 22, 2021

ಜನರು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಿ : ಮನೋಹರ್

ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೨: ಜನರು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ಆ ಹುದ್ದೆಗೆ ಸಾರ್ಥಕತೆ ಬರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
    ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
     ನಗರಸಭೆ ಪೌರಾಯುಕ್ತರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ತೃಪ್ತಿ ನನಗಿದೆ. ನಗರಸಭೆ ೩೫ ವಾರ್ಡ್‌ಗಳಲ್ಲೂ ಜನರು ನನ್ನನ್ನು ಗುರುತಿಸುತ್ತಾರೆ. ಒಬ್ಬ ಅಧಿಕಾರಿಗೆ ಈ ರೀತಿಯ ಜನರ ಮೆಚ್ಚುಗೆ ಇದ್ದರೆ ಅಷ್ಟೆ ಸಾಕು ಬೇರು ಏನು ಬೇಕಾಗಿಲ್ಲ. ಅಧಿಕಾರಿಗಳಿಗೆ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಹಾಗು ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರಬೇಕು. ಅಲ್ಲದೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಬೇಕೆಂದರು.
     ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ಅಧಿಕಾರಿಗಳು, ಪತ್ರಕರ್ತರು ಮಾತನಾಡಿ, ಮನೋಹರ್ ಅವರು ಕೇವಲ ಒಬ್ಬ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲ. ಬದಲಾಗಿ ಮನೆ ಮಗನಂತೆ ಕರ್ತವ್ಯ ನಿರ್ವಹಿಸಿದರು. ಈ ಹಿನ್ನಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ಅಧಿಕಾರಿಯನ್ನು ನಗರಸಭೆ ಇತಿಹಾಸದಲ್ಲಿ ಯಾರು ಕಂಡಿಲ್ಲ. ನಗರದ ಜನ ಎಂದಿಗೂ ಮರೆಯದಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಗಳು ಲಭಿಸುವ ಜೊತೆಗೆ ಜನರ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಹಾರೈಸಿದರು.
     ನಗರಸಭೆ ಲೆಕ್ಕಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸೈಯದ್ ಮೆಹಬೂಬ್ ಆಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕುಡಿಯುವ ನೀರಿನ ಸಮಸ್ಯೆ : ವಿಐಎಲ್‌ಎಲ್ ನಗರಾಡಳಿತದೊಂದಿಗೆ ವಾಗ್ವಾದ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ಭದ್ರಾವತಿ, ಜು. ೨೨: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ವಿಐಎಸ್‌ಎಲ್ ಕಾರ್ಖಾನೆಯ ನಗರಾಡಳಿತ ವ್ಯಾಪ್ತಿಯ ನ್ಯೂಕಾಲೋನಿ, ನ್ಯೂಟೌನ್, ವಿದ್ಯಾಮಂದಿರ, ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿದೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನಗರಾಡಳಿತ ಇಲಾಖೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿದೆ. ಹಲವು ಬಾರಿ ಈ ಸಂಬಂಧ ನಗರಾಡಳಿತ ಇಲಾಖೆ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಕಾರ್ಖಾನೆಯ ನಗರಾಡಳಿತಾಧಿಕಾರಿ ಹಾಗು ಸಾರ್ವಜನಿಕ ಸಂಪರ್ಕಾಧಿಕಾರಿಗಳು ನೀರು ಪೂರೈಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ತಿಳಿಸುವ ಜೊತೆಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಧ್ಯ ಪ್ರವೇಶಿಸಿ ಸ್ಥಳೀಯವಾಗಿ ಎದುರಾಗಿರುವ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಮರ್ಪಕವಾಗಿ ನೀರು ಪೂರೈಕೆಗೆ ಮುಂದಾಗುವಂತೆ ಸೂಚಿಸಿದರು. ಇದಕ್ಕೆ ಅಧಿಕಾರಿಗಳಿಂದಲೂ ಪೂರಕ ಸ್ಪಂದನೆ ವ್ಯಕ್ತವಾಯಿತು.
     ಈ ಭಾಗದ ವ್ಯಾಪ್ತಿಯ ನಗರಸಭಾ ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್‌ಕುಮಾರ್, ಕಾಂತರಾಜ್, ಮುಖಂಡರಾದ ಎಸ್.ಎಸ್ ಭೈರಪ್ಪ, ಉಮೇಶ್, ದಿಲೀಪ್, ಎನ್. ರಾಮಕೃಷ್ಣ ಹಾಗು ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, July 21, 2021

ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನ ಸಮುದಾಯ ಭವನದ ಬಳಿ ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಜು. ೨೧: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನ ಸಮುದಾಯ ಭವನದ ಬಳಿ ಬಾಕ್ಸ್ ಮಾದರಿ ಚರಂಡಿ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.
    ಊರಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದಲ್ಲಿರುವ ಸಮುದಾಯ ಭವನದ ಪಕ್ಕದಲ್ಲಿ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದ್ದು, ಇದೀಗ ಹೊಸದಾಗಿ ಬಾಕ್ಸ್ ಮಾದರಿ ಚರಂಡಿ ನಿರ್ಮಿಸಲಾಗುತ್ತಿದೆ.
   ನಗರಸಭೆ ಸದಸ್ಯರಾದ ಜಯಶೀಲ, ಕೆ. ಸುದೀಪ್‌ಕುಮಾರ್, ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ರಾಮಕೃಷ್ಣ, ಮುಖಂಡ ಸುರೇಶ್, ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ಸೆರಿದಂತೆ ಇನ್ನಿತರರು ಉಪಸ್ಥಿತರಿದ್ದರು.]

ಸ್ವಾಮೀಜಿಗಳ ನಿಯೋಗದ ತೀರ್ಮಾನಕ್ಕೆ ಬಿಳಿಕಿ ಶ್ರೀ ಬೆಂಬಲ

ಯಡಿಯೂರಪ್ಪ ಬದಲಿಸದಿರಲು ಬಿಜೆಪಿ ಹೈಕಮಾಂಡ್‌ಗೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಭದ್ರಾವತಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ.
   ಭದ್ರಾವತಿ, ಜು. ೨೧: ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ವದಂತಿ ಹಿನ್ನಲೆಯಲ್ಲಿ ಸ್ವಾಮೀಜಿಗಳ ನಿಯೋಗ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ನಿಯೋಗದಲ್ಲಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು.
   ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ಸಂಬಂಧ ಸ್ವಾಮೀಜಿಗಳ ನಿಯೋಗ ಕೈಗೊಂಡ ತೀರ್ಮಾನಕ್ಕೆ ಬಿಳಿಕಿ ಶ್ರೀಗಳು ಬದ್ಧರಾಗಿದ್ದು, ಅಲ್ಲದೆ ಶ್ರೀಗಳು ವೈಯಕ್ತಿಕವಾಗಿ ಸಹ ಬಿ.ಎಸ್ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸದಿರುವಂತೆ ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

ಜೆಡಿಎಸ್ ನೂತನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿ ಶಾರದ ಅಪ್ಪಾಜಿ ಹೆಗಲಿಗೆ

ಭದ್ರಾವತಿ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸರದ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.  
    ಭದ್ರಾವತಿ, ಜು. ೨೧: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಜಾತ್ಯಾತೀತ ಜನತಾದಳ ಕ್ಷೇತ್ರದಲ್ಲಿ ಹೆಚ್ಚು ಸಂಘಟಿತಗೊಳ್ಳುವ ಉದ್ದೇಶದಿಂದ ಹೊಸ ಪದಾಧಿಕಾರಿಗಳ ಆಯ್ಕೆಗೆ ಮುಂದಾಗಿದೆ.
    ಈ ಸಂಬಂಧ ಬುಧವಾರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹೋರಾಟದ ಆದರ್ಶಗಳನ್ನು ಮುಂದಿಟ್ಟುಕೊಂಡು ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಶಾರದ ಅಪ್ಪಾಜಿಯವರನ್ನು ಪ್ರತಿಯೊಬ್ಬರು ಬೆಂಬಲಿಸುವ ಜೊತೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಅವರ ವಿವೇಚನೆಗೆ ನೀಡಬೇಕೆಂಬ ಒಮ್ಮತದ ತೀರ್ಮಾನ ಸಭೆಯಲ್ಲಿ ಕೈಗೊಳ್ಳಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮುಖಂಡರಾದ ಡಿ.ಟಿ ಶ್ರೀಧರ್, ಕರಿಯಪ್ಪ, ಬದರಿನಾರಾಯಣ, ಎಂ.ಎ ಅಜಿತ್, ಮೈಲಾರಪ್ಪ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.