Sunday, August 13, 2023

ಧರ್ಮಸ್ಥಳ, ಧರ್ಮಾಧಿಕಾರಿ ಕುರಿತು ಅವಹೇಳನ

ಜಿಲ್ಲಾ ಜನಜಾಗೃತಿ ವೇದಿಕೆ ಹೋರಾಟದ ಎಚ್ಚರಿಕೆ

    ಭದ್ರಾವತಿ, ಆ. ೧೩: ವಿದ್ಯಾರ್ಥಿನಿ ಸೌಜನ್ಯ ಅಸಹಜ ಸಾವಿನ ಪ್ರಕರಣವನ್ನು ಕೆಲವರು ದಾಳವಾಗಿಟ್ಟುಕೊಂಡು ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮವೇ ಬದುಕೆಂದು ಜೀವನ ಸಾಗಿಸುತ್ತಿರುವ ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಜನಜಾಗೃತಿ ವೇದಿಕೆ ಖಂಡಿಸುತ್ತದೆ. ಅಲ್ಲದೆ ಇದೆ ರೀತಿ ಮುಂದುವರೆದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಸದಸ್ಯರು ಎಚ್ಚರಿಸಿದ್ದಾರೆ.
    ಶ್ರೀ ಕ್ಷೇತ್ರ ಧರ್ಮಸ್ಥಳ ಎಂದಾಗ ಭಕ್ತರ ಮನೋಮಂದಿರದಲ್ಲಿ ಶ್ರೀ ಮಂಜುನಾಥಸ್ವಾಮಿ ಪ್ರತ್ಯಕ್ಷನಾಗುತ್ತಾನೆ. ಅಂತಹ ಸ್ವಾಮಿಯ ಸನ್ನಿಧಿಯಲ್ಲಿ ಇರುವ ಧರ್ಮಾಧಿಕಾರಿಗಳು ಅಭಯ, ಅನ್ನ, ಅಕ್ಷರ, ಆರೋಗ್ಯ ಎಂಬ ಚರ್ತುದಾನಗಳಿಂದ ಜನರನ್ನು ಹಾರೈಸಿದ್ದಾರೆ. ಪ್ರಾಚೀನ ಪರಂಪರೆಯಿಂದಲೂ ಪುಣ್ಯಕಾರ್ಯಗಳೊಂದಿಗೆ ನೊಂದ ಭಕ್ತರ ಮನಸ್ಸುಗಳ ಕಣ್ಣೀರು ಒರೆಸುವ ಅವರ ಕಾಯಕ ನಿಜವಾಗಿಯೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.
  ಪುಣ್ಯ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಕೈಗೊಳ್ಳುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ದುಷ್ಟಶಕ್ತಿಗಳು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆ ಸದಸ್ಯರಾದ ಜಿ.ಆನಂದ್ ಕುಮಾರ್, ಆರ್. ಕರುಣಾಮೂರ್ತಿ, ಜಯರಾಮ್ ಗೋಂದಿ ಮತ್ತು ಪಾರ್ವತಮ್ಮ, ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.

ಅರಳಿಕೊಪ್ಪ ಗ್ರಾಮ ಪಂಚಾಯಿತಿ : ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೂರ್ಯನಾಯ್ಕ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷರಾಗಿ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೧೩: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷರಾಗಿ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ(ಎ) ಮಹಿಳೆ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಹಾಗು ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಸೂರ್ಯನಾಯ್ಕ ಆಯ್ಕೆಯಾಗಿದ್ದಾರೆ.
    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಗೋಕುಲ್ ಕೃಷ್ಣ, ನಕುಲ್ ಹಾಗು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

ಇಸ್ಪೀಟ್‌ ಜೂಜಾಟ : ದಾಳಿ

    ಭದ್ರಾವತಿ, ಆ. ೧೩ :  ತಾಲೂಕಿನ ಬೆಳ್ಳಿಗೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ಪಾಪಣ್ಣ ಸೇರಿದಂತೆ ೪-೫ ಜನರ ಅಡ್ಡೆಯೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Saturday, August 12, 2023

ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು ‘ತೆರೆದ ಮನೆ’ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಸಂಚಾರಿ ಪೊಲೀಸರು

ಭದ್ರಾವತಿ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು 'ತೆರೆದ ಮನೆ' ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಭದ್ರಾವತಿ, ಆ. ೧೨: ಸಮಾಜದಲ್ಲಿ ಪೊಲೀಸ್ ಠಾಣೆ ಎಂದರೆ ಈಗಲೂ ಬಹುತೇಕ ಮಂದಿಗೆ ಭಯ. ಅದರಲ್ಲೂ ಕೆಲವರು ಸಮಸ್ಯೆಗಳು ಎದುರಾದರೂ ಸಹ ಠಾಣೆ ಬಳಿ ಮಾತ್ರ ಸುಳಿಯುವುದಿಲ್ಲ. ಇನ್ನೂ ಮಕ್ಕಳಿಗೆ ಪೊಲೀಸರು ಕಂಡರೇ ಭಯ. ಇಂತಹ ವಾತಾವರಣ ದೂರವಾಗಿಸಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ.
    ತೆರೆದ ಮನೆ ಎಂಬ ಕಾರ್ಯಕ್ರಮದ ಮೂಲಕ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಸಲು ಇಲಾಖೆ ಪ್ರಯತ್ನಿಸುತ್ತಿದೆ. ಪೊಲೀಸ್ ಠಾಣೆಗಳ ಬಗ್ಗೆ ಹೊಂದಿರುವ ಮನೋಭಾವನೆ ದೂರವಾಗಿಸಿ ಅಪರಾಧಗಳ ಕುರಿತು ಹಾಗು ಠಾಣೆಗಳ ಕಾರ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
    ಈ ಹಿಂದೆ ಆರಂಭಗೊಂಡಿದ್ದ ತೆರೆದ ಮನೆ ಕಾರ್ಯಕ್ರಮ ಇದೀಗ ಪುನಃ ಆರಂಭಿಸಲಾಗಿದ್ದು, ನಗರದ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಠಾಣಾ ನಿರೀಕ್ಷಕಿ ಶಾಂತಲ ಹಾಗು ಸಿಬ್ಬಂದಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಕಾಲೇಜಿನ ಪ್ರೌಢಶಾಲೆ ವಿಭಾಗದ ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂವರ ಸೆರೆ : ೧ ಕೆ.ಜಿ ೪೦೮ ಗ್ರಾಂ. ಗಾಂಜಾ ವಶ

    ಭದ್ರಾವತಿ, ಆ. ೧೨: ಇಲ್ಲಿನ ಹಳೇನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ನಗರದ ತರೀಕೆರೆ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗೆ ಮುಬಾರಕ್ ಅಲಿಯಾಸ್ ಡಿಚ್ಚಿ (೨೭), ಬಾಬು (೨೦) ಮತ್ತು ಪರ್ವಿಜ್ (೨೫) ಗಾಂಜಾ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿ ಒಟ್ಟು ೫೦ ಸಾವಿರ ರು. ಮೌಲ್ಯದ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಒಣ ಗಾಂಜಾ ಹಾಗು ೩೦೦ ರು. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
    ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಿರಣ್‌ಕುಮಾರ್, ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆ

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೮ : ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕಿರಣ್‌ಕುಮಾರ್ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಆಯ್ಕೆಯಾದರು.
    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಗೋಕುಲ್ ಕೃಷ್ಣ ಹಾಗು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

ಕೂಡ್ಲಿಗೆರೆ ಗ್ರಾ.ಪಂ ಅಧ್ಯಕ್ಷರಾಗಿ ಎಂ. ಜಯಣ್ಣ, ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧ ಆಯ್ಕೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೧೨: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಪಂಚಾಯಿತಿಯಲ್ಲಿ ನಡೆದ ೨ನೇ ಅವಧಿಗೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಎಂ. ಜಯಣ್ಣ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಮ್ಮ ಆಯ್ಕೆಯಾದರು.
    ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಂಗಣ್ಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಲಕ್ಷ್ಮೀಕಾಂತ್‌, ಕಾರ್ಯದರ್ಶಿ ಸತೀಶ್‌ ಗೌಡ ಉಪಸ್ಥಿತರಿದ್ದರು.
    ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್‌ ಹಾಗು ಕಾಂಗ್ರೆಸ್‌ ಪಕ್ಷದ ಮುಖಂಡರು, ಸ್ಥಳೀಯರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.