Tuesday, January 28, 2025

ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಎಲ್ಲಾ ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಸಲು ಸಾಧ್ಯವಿಲ್ಲ : ಎಚ್.ಎಸ್ ಸುರೇಶ್

ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕಾಲಾವಕಾಶ ಅಗತ್ಯವಿದೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಿತು. 
    ಭದ್ರಾವತಿ : ಲೋಕಾಯುಕ್ತ ವತಿಯಿಂದ ಆಯೋಜಿಸಲಾಗುವ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಈ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕೈಗೊಂಡ ಕ್ರಮಗಳನ್ನು ತಿಳಿಸಲಾಗುವುದು. ಹೊಸದಾಗಿ ಸಲ್ಲಿಕೆಯಾದ ಎಲ್ಲಾ ಅಹವಾಲುಗಳನ್ನು ತಕ್ಷಣ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಶಿವಮೊಗ್ಗ-೧ರ ಪೊಲೀಸ್ ನಿರೀಕ್ಷಕ ಎಚ್.ಎಸ್ ಸುರೇಶ್ ಹೇಳಿದರು. 
    ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಕೆಲವೊಂದು ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹರಿಸಬಹುದು. ಆದರೆ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿದ ತಕ್ಷಣ ಬಗೆಹರಿಸುವುದು ಅಸಾಧ್ಯವಾಗಿದ್ದು, ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕಾಲಾವಕಾಶ ಅಗತ್ಯವಿದೆ. ಒಟ್ಟಾರೆ ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. 
    ಈ ಹಿಂದಿನ ಸಭೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಒಟ್ಟು ೧೧ ಅಹವಾಲುಗಳು ಹಾಗು ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. 
    ಹೊಸದಾಗಿ ಸಲ್ಲಿಕೆಯಾದ ಅಹವಾಲುಗಳಲ್ಲಿ ಪ್ರಮುಖವಾಗಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡರವರು ಜನ್ನಾಪುರ ಫಿಲ್ಟರ್ ಶೆಡ್ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಸುಮಾರು ೧ ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುವ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ  ಹಲವಾರು ಬಾರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
    ನಗರಸಭೆ ಅಧಿಕಾರಿಗಳು ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಉತ್ತರಿಸಿದರು. ಈ ನಡುವೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವಂತೆ ಶಶಿಕುಮಾರ್ ಗೌಡರವರಿಗೆ ಸೂಚಿಸಲಾಗಿದೆ. ಒಂದು ವೇಳೆ ಕಾಲ ಮಿತಿಯೊಳಗೆ ಯಾವುದೇ ಪ್ರಕ್ರಿಯೆ ನಡೆಯದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಿರೀಕ್ಷಕ ಸುರೇಶ್ ಭರವಸೆ ನೀಡಿದರು. 
    ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ, ಸಮಾಜಿಕ ಹೋರಾಟಗಾರ ತೀರ್ಥೇಶರವರು ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ. ಈ ಕುರಿತು ಹಲವಾರು ಬಾರಿ ಮಾಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈ ಹಿನ್ನಲೆಯಲ್ಲಿ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಇದೆ. ಈ ಹಿನ್ನಲೆಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಕ್ರಮ ಕೈಗೊಳ್ಳುವಂತೆ ನಿರೀಕ್ಷಕ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ನಗರದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ನಿರ್ಲಕ್ಷ್ಯ ಕುರಿತು, ಒಬ್ಬರಿಗೆ ಪಿಟಿಸಿಎಲ್ ಕಾಯ್ದೆಯಡಿ ಜಮೀನು ನೀಡಲಾಗಿದ್ದು, ಮತ್ತೊಬ್ಬರಿಗೆ ಪಿಟಿಸಿಎಲ್ ಕಾಯ್ದೆಯಡಿ ಜಮೀನು ನೀಡಿಲ್ಲ. ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ನಿವಾಸಿಯೊಬ್ಬರ ವಂಶವೃಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೭ ಅಹವಾಲುಗಳನ್ನು ಸಲ್ಲಿಸಲಾಯಿತು. 
    ಸಭೆಯನ್ನು ಸುಮಾರು ೧ ತಾಸು ಹೆಚ್ಚಿನ ಅವಧಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ, ಪೇಪರ್‌ಟೌನ್ ಠಾಣೆ ನಿರೀಕ್ಷಕಿ ನಾಗಮ್ಮ ಉಪಸ್ಥಿತರಿದ್ದರು. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. 
 

Monday, January 27, 2025

ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ಕಾರ್ಯಕರ್ತರಿಂದ ದಿನಸಿ ಸಾಮಗ್ರಿ

ಶಿವಮೊಗ್ಗದಲ್ಲಿ ಜ.೩೧ ರಿಂದ ಫೆ.೨ರ ತನಕ ನಡೆಯುವ ೪೪ನೇ ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ಭದ್ರಾವತಿ ನಗರದ ಕಾರ್ಯಕರ್ತರು ಸಮ್ಮೇಳನಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ. 
    ಭದ್ರಾವತಿ: ಶಿವಮೊಗ್ಗದಲ್ಲಿ ಜ.೩೧ ರಿಂದ ಫೆ.೨ರ ತನಕ ನಡೆಯುವ ೪೪ನೇ ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ನಗರದ ಕಾರ್ಯಕರ್ತರು ಸಮ್ಮೇಳನಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ. 
    ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾದ ಬಿ. ದಿವಾಕರಶೆಟ್ಟಿಯವರ ಮೂಲಕ ರಾಜ್ಯ ಸಮ್ಮೇಳನಕ್ಕೆ ದಿನಸಿ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಯಿತು.  ದಿವಾಕರಶೆಟ್ಟಿಯವರು ಮಾತನಾಡಿ, ಜಗತ್ತಿನ ಅತಿ ದೊಡ್ಡ ಪ್ರಭಾವಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಸಮ್ಮೇಳನ ಯಶಸ್ವಿಯಾಗಲು ಜಿಲ್ಲೆಯ ಎಲ್ಲಾ ನಾಗರೀಕರು  ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
    ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್‌ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವುದರ ಜೊತೆಗೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಧ್ಯೇಯ ಹೊಂದಿರುವ ಎಬಿವಿಪಿಗೆ ಸಮಾಜದ ಎಲ್ಲರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.  ಎಬಿವಿಪಿ ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. 

ಇಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷವೇ ಬೇರೆ : ಸಂಸದ ಬಿ.ವೈ ರಾಘವೇಂದ್ರ.

ಭದ್ರಾವತಿ ನಗರದಲ್ಲಿ ಸೋಮವಾರ ಪಕ್ಷದ ಯುವ ಮುಖಂಡ, ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭೀಮ ಸಂಗಮ, ದಲಿತ ಬಂಧುಗಳಿಗೆ ಭೋಜನ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ : ಅಂದು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ. ಇಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷವೇ ಬೇರೆ ಎಂದು  ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ನಗರದಲ್ಲಿ ಸೋಮವಾರ ಪಕ್ಷದ ಯುವ ಮುಖಂಡ, ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭೀಮ ಸಂಗಮ, ದಲಿತ ಬಂಧುಗಳಿಗೆ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅಂದು ಇದ್ದಿದ್ದು ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುವ ಸಲುವಾಗಿ ಜನ್ಮ ತಾಳಿದ ಕಾಂಗ್ರೆಸ್ ಪಕ್ಷ. ಆದರೆ ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿಯವರು ಕಾಂಗ್ರೆಸ್ ಪಕ್ಷ ವಿಸರ್ಜಿಸಿ. ಅದರ ಗುರಿ ಹಾಗು ಉದ್ದೇಶ ಈಡೇರಿದೆ. ಇನ್ನು ಅದನ್ನು ಕೇವಲ ಸಾಂಸ್ಕೃತಿಕ ಸಂಘಟನೆಯಾಗಿರಲಿ ಎಂದು ತಿಳಿಸಿದ್ದರು. ಆದರೆ ಅಂದಿನ ಕಾಂಗ್ರೆಸ್ ಮುಖಂಡರು ಗಾಂಧಿಜಿಯವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷ್ಚವನ್ನು ತಮ್ಮ ರಾಜಕೀಯ ಅಧಿಕಾರದ ಉದ್ದೇಶಕ್ಕಾಗಿ ಜೀವಂತವಾಗಿರಿಸಿಕೊಂಡು ಇಂದಿಗೂ ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆಂದು ಆರೋಪಿಸಿದರು. 
       ಮಹಾತ್ಮಗಾಂಧಿಜೀಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬೆಳಗಾವಿಗೆ ಭೇಟಿ ಅಲ್ಲಿನ ಬಾವಿಯಲ್ಲಿ ನೀರನ್ನು ಸೇದುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ ೧೦೦ ವರ್ಷಗಳ ಸವಿ ನೆನೆಪಿಗೆ `ಜೈ ಭೀಮ್, ಜೈ ಬಾಪು, ಜೈ ಸಂವಿಧಾನ' ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜರುಗಿದ ಕಾರ್ಯಕ್ರಮ ಹಾಸ್ಯಾಸ್ಪದವಾಗಿದೆ ಎಂದರು.       
    ಅಂಬೇಡ್ಕರ್‌ರವರನ್ನು ಕಾಂಗ್ರೆಸ್ ಪಕ್ಷ ಕೇವಲ ಅವರ ಹೆಸರಿನಲ್ಲಿ ಭಾಷಣ ಮಾಡುವುದಕ್ಕೆ, ಸಭೆ ಸಮಾರಂಭಗಳಲ್ಲಿ ಅವರ ಪೋಟೋ ಪೂಜೆ ಮಾಡುವುದಕ್ಕೆ ಸೀಮಿತಿಗೋಳಿಸಿದರೆ,  ಬಿಜೆಪಿ ಪಕ್ಷ ಅವರು ಜನಿಸಿದ, ವಿದ್ಯಾಭ್ಯಾಸ ಮಾಡಿದ, ವಿದೇಶದಲ್ಲಿದ್ದ, ಮರಣಿಸಿದ ಸ್ಥಳಗಳನ್ನು ಪಂಚ ಕಲ್ಯಾಣ ಎಂಬ ಹೆಸರಿನಲ್ಲಿ ಸುಮಾರು ೩೫೦ ಕೋಟಿ ರೂ. ವೆಚ್ಚ ಮಾಡಿ ಐತಿಹಾಸಿಕ ಸ್ಮಾರಕವನ್ನಾಗಿ ಮಾಡಿದೆ ಎಂದರು.
    ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ. ತಿದ್ದುಪಡಿ ಮಾಡುತ್ತದೆ ಎಂದು ಕಾಂಗ್ರೆಸ್ ದೇಶಾದ್ಯಂತ ಅಪಪ್ರಚಾರದಲ್ಲಿ ತೊಡಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇದುವರೆಗೆ ೧೦೬ ಬಾರಿ ಸಂವಿದಾನ ತಿದ್ದುಪಡಿ ಮಾಡಲಾಗಿದ್ದು, ನಿಜ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಸಮಯದಲ್ಲಿ ಸಂವಿಧಾನವನ್ನು ತನಗೆ ಬೇಕಾದಂತೆ ೭೫ ಬಾರಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯನ್ನು ಯಾಕೆ ಮಾಡಿದೆ ಎಂದು ಇದುವರೆಗೂ  ದೇಶದ ಜನರ ಮುಂದೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು.
    ಕಾಂಗ್ರೆಸೇತರ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ೩೧ ಬಾರಿ ತಿದ್ದುಪಡಿ ಮಾಡಿವೆ. ಅದರಲ್ಲಿ ಬಿಜೆಪಿ ಬೆಂಬಲಿತ ಸಮಯದಲ್ಲಿ ವಿ.ಪಿ ಸಿಂಗ್ ರವರ ಆಧಿಕಾರವಧಿಯಲ್ಲಿ ಮತ್ತು ವಾಜಪೇಯಿ ಆಧಿಕಾರದ ಸಮಯದಲ್ಲಿ ೧೪ ಮತ್ತು ನರೇಂದ್ರ ಮೋದಿಯವರ ಅವಧಿಯಲ್ಲಿ ೮ ಬಾರಿ ತಿದ್ದುಪಡಿ ಆಗಿದೆ. ಈ ಎಲ್ಲಾ ತಿದ್ದುಪಡಿಗಳು ದೇಶದ ಜನರ, ಹಿಂದುಳಿದವರ, ಎಸ್‌ಸಿ/ಎಸ್‌ಟಿ ಜನಾಂಗದವರ ಅಭಿವೃಧ್ಧಿ, ಮೀಸಲಾತಿ ಮುಂದುವರೆಯಬೇಕು, ೧೦ನೇ ತೆರಿಗೆ ಅನುಷ್ಠಾನಕ್ಕಾಗಿ, ಬ್ಯಾಕ್‌ಲಾಗ್ ಮೀಸಲಾತಿ ಹುದ್ದೆಗಾಗಿ, ಅರುಣಾಚಲ ಪ್ರದೇಶದಲ್ಲಿ ಹಿಂದುಳಿದವರಿಗೆ ರಾಜಕೀಯ ಅಧಿಕಾರಕ್ಕಾಗಿ ಮತ್ತು ದೇಶದಲ್ಲಿ ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಮಿತಿ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಹೊರೆಯಾಗಬಾರದು ಎಂಬ ಭವಿಷ್ಯದ ವೆಚ್ಚದ ಕಾರಣಕ್ಕಾಗಿ, ಶಾಸಕರ ಮತ್ತು ಸಂಸದರ ಸಂಖ್ಯೆಯ ಆಧಾರದ ಮೇಲೆ ಸಂಪುಟ ರಚನೆ ಮಾಡಬೇಕು ಎಂಬುದು ಬಹು ಮುಖ್ಯವಾದ ಸಂಗತಿಗಳು ಎಂದರು.
    ನರೇಂದ್ರ ಮೋದಿಯವರ ಅವಧಿಯಲ್ಲಿ ತಿದ್ದುಪಡಿ ಆಗಿರುವುದು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಮಾನ್ಯತೆ ಮುಂದುವರಿಕೆಗಾಗಿ, ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ೨೦೩ ರವರೆಗೆ ಮಂದುವರೆಸುವುದಕ್ಕಾಗಿ, ೩೭೦ನೇ ವಿಧಿಯನ್ನು ರದ್ದು ಮಾಡುವುದಕ್ಕಾಗಿ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ರಷ್ಟು ಮೀಸಲಾತಿ ಅವಕಾಶ ಕಲ್ಪಿಸುವುದು ಸೇರಿದಂತೆ ಇತರ ಕಾರಣಗಳಿಗಾಗಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದು ಹಿಂದಿನ ಕಾರಣಗಳನ್ನು ಬಹಿರಂಗ ಪಡಿಸಿದರು.
    ಬಿಜೆಪಿ ಮೇಲೆ ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಗಳಿಗೆ ದಲಿತ, ಹಿಂದುಳಿದ ಸಮುದಾಯಗಳು ಇನ್ನಾದರೂ ಕಿವಿಗೊಡದೆ ದೇಶದ ಭದ್ರತೆ, ಆಖಂಡತೆ, ಸುರಕ್ಷತೆ, ಸರ್ವಜನರ ಏಳಿಗೆಗಾಗಿ, ದಲಿತ, ಹಿಂದುಳಿದವರ ಪ್ರಾಮಾಣಿಕ ಅಭಿವೃಧ್ಧಿಗಾಗಿ ದಲಿತರು, ಹಿಂದುಳಿದವರು ಇನ್ನಾದರೂ ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ಬಿಜೆಪಿ  ಬೆಂಬಲಿಸಿ ತಮ್ಮ ಕೊಡುಗೆಗಳನ್ನು ನೀಡಿ ಎಂದು ಮನವಿ ಮಾಡಿದರು.
    ಪ್ರಗತಿಪರ ಹಾಗು ದಲಿತ ಮುಖಂಡ ಸುರೇಶ್ ಮಾತನಾಡಿ, ವಿವಿಧ ರಾಜಕೀಯ ಪಕ್ಷಗಳು ಅಂಬೇಡ್ಕರ್ ವಿಚಾರಗಳನ್ನು ವಿವಿಧ ರೀತಿಯಲ್ಲಿ ನೋಡುತ್ತಾರೆ. ಆದರೆ ಅವರ ಗುರಿ ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಿ ಅನುಷ್ಠಾನಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪರವರು ತಮ್ಮ ಅಧಿಕಾರಾವಧಿ ಸಮಯದಲ್ಲಿ ಜಿಲ್ಲೆಯಲ್ಲಿ ಛಲವಾದಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ದಲಿತರ ಬಗ್ಗೆ ಕಾಳಜಿ ವಹಿಸಿದ್ದಾರೆ. ಇವರು ದಲಿತ ಅಲ್ಪಸಂಖ್ಯಾತ ವಿರೋಧಿ ಎಂಬ ಭಾವನೆ ಇದೆ. ಆದರೆ ಇದು ಕೇವಲ ಆರೋಪ ಮಾತ್ರ. ವಾಸ್ತವವಾಗಿ ಎಲ್ಲಾ ವರ್ಗದವರನ್ನು ಪ್ರೀತಿ ವಿಶ್ವಾಸಗಳಿಂದ ಗೌರವದಿಂದ ಕಾಣುತ್ತಿರುವುದು ನಿಜ ಸಂಗತಿಯಾಗಿದೆ ಎಂದರು. 
    ದಲಿತ ಮುಖಂಡರಾದ ಜಿ. ಆನಂದ ಕುಮಾರ್, ನಿತ್ಯಾನಂದ, ಶಿವಾನಂದ, ಪುರುಷೋತ್ತಮ್, ಮೈಲಾರಪ್ಪ, ಅನ್ನಪೂರ್ಣ, ಸರಸ್ವತಿ, ಕೃಷ್ಣಪ್ಪ, ಬಸವರಾಜ್, ಶಕುಂತಲ, ಶಿವಬಸಪ್ಪ ಸೇರಿದಂತೆ ಇತರರು  ವೇದಿಕೆಯಲ್ಲಿದ್ದರು.
    ವೆಂಕಟೇಶ್ ಪ್ರಾರ್ಥಿಸಿ, ಮಂಗೋಟೆ ರುದ್ರೇಶ್ ಆಶಯ ಭಾಷಣ ನಡೆಸಿಕೊಟ್ಟರು. ಎಸ್. ದತ್ತಾತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಹನುಮಂತ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಭದ್ರಾ ನದಿ ಸೇತುವೆ ಕೆಳಭಾಗದಲ್ಲಿ ಮೃತಪಟ್ಟ ಚಿರತೆ ಪತ್ತೆ

ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಸುಮಾರು ೨ ರಿಂದ ೩ ವರ್ಷದ ಗಂಡು ಚಿರತೆಯ ಮೃತದೇಹವಾಗಿದ್ದು, ಇದು ಭದ್ರಾ ಅಭರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಚಿರತೆ ಎಂಬುದು ತಿಳಿದು ಬಂದಿದೆ. ಈ ಚಿರತೆ ಸೇತುವೆ ಮೇಲಿಂದ ಬಿದ್ದು ಸಾವನ್ನಪ್ಪಿದೆಯೋ ಅಥವಾ ಬೇಟೆಯಾಡಿ ಹತ್ಯೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. 
    ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಬಿ.ಎಚ್ ದುಗ್ಗಪ್ಪ ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿವೆ. ಬೆಳಿಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚಿರತೆ ಇದೆ ದಿನ ಮೃತಪಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಚಿರತೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು. 
    ಘಟನಾ ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ಕಛೇರಿಯ ಸಿಬ್ಬಂದಿಗಳು, ಪೇಪರ್ ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Sunday, January 26, 2025

ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಮೊದಲ ಫುಡ್ ಕೋರ್ಟ್ ಉದ್ಘಾಟನೆ

ಭದ್ರಾವತಿ ನಗರಸಭೆ ವತಿಯಿಂದ ಬಹು ವರ್ಷಗಳ ಬೇಡಿಕೆಯಂತೆ ನಗರದ ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಫುಡ್‌ಕೋರ್ಟ್ ನಿರ್ಮಿಸಲಾಗಿದ್ದು, ಜ.೨೬ ಗಣರಾಜ್ಯೋತ್ಸವದಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ: ನಗರಸಭೆ ವತಿಯಿಂದ ಬಹು ವರ್ಷಗಳ ಬೇಡಿಕೆಯಂತೆ ನಗರದ ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಫುಡ್‌ಕೋರ್ಟ್ ನಿರ್ಮಿಸಲಾಗಿದ್ದು, ಜ.೨೬ ಗಣರಾಜ್ಯೋತ್ಸವದಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ವಾರ್ಡ್ ನಂ. ೧೩, ೧೬ ಮತ್ತು ೧೭ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ನಗರಸಭೆ ಅನುದಾನದಲ್ಲಿ ಒಟ್ಟು ೯ ಲಕ್ಷ ರು. ವೆಚ್ಚದಲ್ಲಿ ಫುಡ್‌ಕೋರ್ಟ್ ನಿರ್ಮಿಸಲಾಗಿದ್ದು, ಪ್ರಸ್ತುತ ಬೇಡಿಕೆಯಂತೆ ಒಟ್ಟು ೨೮ ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಸದ್ಯಕ್ಕೆ ಪ್ಲಾಟ್ ಫಾರಂ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ  ಕಲ್ಪಿಸಲಾಗಿದೆ.  ಮುಂದಿನ ದಿನಗಳಲ್ಲಿ ಶೌಚಾಲಯ ಸಹ ನಿರ್ಮಾಣವಾಗಲಿದೆ.  
    ಇದು ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಮೊದಲ ಫುಡ್‌ಕೋರ್ಟ್ ಆಗಿದ್ದು, ಹಳೇನಗರದ ಬಸವೇಶ್ವರ ವೃತ್ತ ಹಾಗು ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ಫುಡ್‌ಕೋರ್ಟ್‌ಗಳ ನಿರ್ಮಾಣಕ್ಕೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸೂಡಾ ಸದಸ್ಯ ಎಚ್. ರವಿಕುಮಾರ್  ಸೇರಿದಂತೆ ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು. 

ಮೆಸ್ಕಾಂ ಕಛೇರಿಯಲ್ಲಿ ೭೬ನೇ ಗಣರಾಜ್ಯೋತ್ಸವ ದಿನಾಚರಣೆ

ಭದ್ರಾವತಿ ನಗರದ ಜೆಪಿಎಸ್ ಕಾಲೋನಿ, ಮೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ವತಿಯಿಂದ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್ ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.
    ಭದ್ರಾವತಿ: ನಗರದ ಜೆಪಿಎಸ್ ಕಾಲೋನಿ, ಮೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ವತಿಯಿಂದ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್ ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. 
    ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿಜೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು. ಧ್ವಜಾರೋಹಣದ ನಂತರ ಸಿಹಿ ಹಂಚಲಾಯಿತು. 
    ಲೆಕ್ಕಾಧಿಕಾರಿ ಅಶ್ವಿನಿಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ್, ಹಿರಿಯ ಸಹಾಯಕಿ ನಾಗರತ್ನ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದೆ : ಪರುಸಪ್ಪ ಕುರುಬರ

ಭದ್ರಾವತಿ ಕನಕ ಮಂಟಪ ಮೈದಾನದಲ್ಲಿ ನಡೆದ ೭೬ ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ಎ.ಕೆ ನಾಗೇಂದ್ರಪ್ಪ, ಬಿ. ಸಿದ್ದಬಸಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ; ಭಾರತ ದೇಶದ ಸಂವಿಧಾನ ಸರಳವಾದ ಬೃಹತ್ ಸಂವಿಧಾನವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು. 
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ವಾಚಿಸಿದರು. 
    ನಮ್ಮದು ಸಂಸದೀಯ ಸರ್ಕಾರ ಪದ್ದತಿ, ಗಣತಂತ್ರ ವ್ಯವಸ್ಥೆ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ. ನಮ್ಮ ದೇಶದ ಸಂವಿಧಾನ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಏಳಿಗೆಗೆ ಇರುವ ಸಂವಿಧಾನವಾಗಿದೆ. ಅಸಮಾನತೆ ಹೋಗಲಾಡಿಸಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸುತ್ತದೆ. ಬಿ.ಆರ್ ಅಂಬೇಡ್ಕರ್ ಹೇಳುವಂತೆ ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತ ವಿಧಾನವಲ್ಲ ಅದು ಜೊತೆಯಾಗಿ ಬದುಕುವ, ಮನುಷ್ಯರಿಗೆ ಘನತೆ ಗೌರವ ನೀಡುವ ಕ್ರಮದ ಆಶಯವಾಗಿದೆ ಎಂದರು.
    ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ದೇಶಕ್ಕೆ ಸಂವಿಧಾನವನ್ನು ರೂಪಿಸಿ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದ್ದಾರೆ. ಅವುಗಳಿಗೆ ಗೌರವ ಸಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿ ಜನಾಂಗದ, ಎಲ್ಲಾ ಭಾಷೆಯ ಜನರು ಸಮಾನತೆ ಸಹಬಾಳ್ವೆಯಿಂದ ಬದುಕಬೇಕೆನ್ನುವುದು ಸಂವಿಧಾನದ ಆಶಯವಾಗಿದೆ. ಅದರಂತೆ ನಾವೆಲ್ಲರೂ ಯಾವುದೇ ತಾರತಮ್ಯ ಮಾಡದೆ ಸಮಾನತೆಯಿಂದ ಜೀವಿಸಬೇಕು ಎಂದರು.
    ತಾಲೂಕಿನ ಎಲ್ಲಾ ಸರ್ಕಾರಿ ಅಧಿಕಾರಿಗಳು ಸಂವಿಧಾನದ ಆಶಯದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಪ್ರಜೆಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತಾಲೂಕಿನಲ್ಲಿ ಅಭಿವೃದ್ದಿ ಕಾರ್ಯಗಳು ಸಾಕಷ್ಟು ನಡೆಯುತ್ತಿವೆ. ಮುಂದಿನ ೨ ವರ್ಷದ ಅವಧಿಯಲ್ಲಿ ಶೇ.೮೦ರಷ್ಟು ಪೂರ್ಣಪ್ರಮಾಣದಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.
    ಸಮಾರಂಭದಲ್ಲಿ ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲಾ ಕಾಲೇಜುಗಳ ಎನ್.ಸಿ.ಸಿ, ಸ್ಕೌಟ್ಸ್-ಗೈಡ್ಸ್, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ತಂಡಗಳು  ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿದ್ದವು. ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಪಥಸಂಚನದ ನೇತೃತ್ವದ ವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಅಭಿನಂಧಿಸಲಾಯಿತು.
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು,   ಆರ್‌ಎಫ್ ಕಮಾಂಡೆಂಟ್ ಪ್ರದೀಪ್, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು  ಉಪಸ್ಥಿತರಿದ್ದರು.