ಶುಕ್ರವಾರ, ಸೆಪ್ಟೆಂಬರ್ 26, 2025

ಪ್ರಧಾನಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರಂದು ಪ್ರಬುದ್ದರ ಗೋಷ್ಠಿ

ಪ್ರಧಾನಿ ನರೇಂದ್ರ ಮೋದಿ

    ಭದ್ರಾವತಿ : ಬಿಜೆಪಿ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರ ಶನಿವಾರ ಸಂಜೆ ೫.೪೫ಕ್ಕೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಪ್ರಬುದ್ದರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. 
    ನವ ಭಾರತದ ಆರ್ಥಿಕ ಸುಧಾರಣೆಗಳು ಕುರಿತು ಚರ್ಚೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮತ್ತು ಡಿ.ಎಸ್ ಅರುಣ್ ಆಗಮಿಸಲಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಅಧ್ಯಕ್ಷತೆವಹಿಸಲಿದ್ದಾರೆ. ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಕೆ.ಎನ್ ಶ್ರೀಹರ್ಷ, ಸಾಗರ್ ಮತ್ತು ಭರತ್ ಆಗಮಿಸಲಿದ್ದಾರೆ. 

ಸೆ.೨೭ರಂದು ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್



    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರರ ಜನ್ಮದಿನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನ -೨೦೨೫ ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್(ಸ) ಕಾರ್ಯಕ್ರಮ ಸೆ.೨೭ರ ಶನಿವಾರ ನಗರದ ಬಿ.ಎಚ್ ರಸ್ತೆ, ತಿಮ್ಮಯ್ಯ ಮಾರುಕಟ್ಟೆ ಸಮೀಪದ ಆಯಿಷಾ ಮಸೀದಿಯಲ್ಲಿ ಏರ್ಪಡಿಸಲಾಗಿದೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ಜನಾಬ್ ರಿಯಾಜ್ ಅಹಮದ್ ರೋಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಹಳೇನಗರ ಪೊಲೀಸ್ ಠಾಣಾ ನಿರೀಕ್ಷಕ ಸುನೀಲ್ ಬಿ. ತೇಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆ ಅಧ್ಯಕ್ಷ ಜನಾಬ್ ಮೌಲಾನಾ ಸುಲ್ತಾನ್ ಬೇಗ್ ಮತ್ತು ಜಿಲ್ಲಾ ಸಂಚಾಲಕ ಜನಾಬ್ ಸಲೀಮ್ ಉಮ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿರಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

೪ ಲಕ್ಷ ರು. ಅನುದಾನ ಬಿಡುಗಡೆ : ಶಾಸಕ ಸಂಗಮೇಶ್ವರ್‌ಗೆ ಗೌರವಿಸಿ ಕೃತಜ್ಞತೆ

ಭದ್ರಾವತಿ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಹಾಗು ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ೪ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. 
    ಭದ್ರಾವತಿ: ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಹಾಗು ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ೪ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ.  
    ನಿಗಮದಿಂದ ಅನುದಾನ ಬಿಡುಗಡೆಗೊಳಿಸಿದ್ದು, ೪ ಲಕ್ಷ ರು. ಚೆಕ್ ಶ್ರೀ ಗುರುರಾಜ ಸೇವಾ ಸಮಿತಿಗೆ ನೀಡಿದರು. ಸಂಗಮೇಶ್ವರ್‌ರವರನ್ನು ಸೇವಾ ಸಮಿತಿಯಿಂದ ಸನ್ಮಾನಿಸಿ  ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. 
    ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ಶುಭ ಗುರುರಾಜ್ ವಿ.ಬ್ರಾ ಶ್ರೀ ಗೋಪಾಲಕೃಷ್ಣ ಆಚಾರ್ ಮತ್ತು ಸಮೀರಾಚಾರ್ ಹಾಗು ಮದ್ವ ಮಂಡಳಿ ಅಧ್ಯಕ್ಷ ಜಯತೀರ್ಥ, ಸುಧೀಂದ್ರ, ವಿದ್ಯಾನಂದನಾಯಕ್, ಶೇಷಗಿರಿ, ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿವಾಹ : ೧೯ ವರ್ಷ ಯುವಕನಿಗೆ ೨೦ ವರ್ಷ ಶಿಕ್ಷೆ

    ಭದ್ರಾವತಿ:  ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ವಿವಾಹವಾಗಿದ್ದ ೧೯ ವರ್ಷದ ಯುವಕನಿಗೆ ಕಲಂ ೬ ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 
    ೨೦೨೨ರಲ್ಲಿ ತಾಲೂಕಿನ ೧೫ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಆಕೆಯನ್ನು ಮದುವೆಯಾಗಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ಅಭಯ ಪ್ರಕಾಶ್ ಸೋಮನಾಳ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
    ಶಿವಮೊಗ್ಗ ಎಫ್‌ಟಿಎಸ್‌ಸಿ-೧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ದೃಡಪಟ್ಟ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್‌ರವರು ಕಲಂ ೬ ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಕಾರಾವಾಸ ಶಿಕ್ಷೆ ಮತ್ತು ರು. ೮೦,೦೦೦ದಂಡ ವಿಧಿಸಿದ್ದು,  ಆರೋಪಿಯಿಂದ ರು. ೮೦,೦೦೦ ದಂಡದ ಮೊತ್ತವನ್ನು ನೊಂದ ಬಾಲಕಿಗೆ ನೀಡುವಂತೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕಿಗೆ ರು. ೪,೦೦,೦೦೦ ಪರಿಹಾರ ನೀಡುವಂತೆ ಆದೇಶಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಆರ್ ಶ್ರೀಧರ್ ವಾದ ಮಂಡಿಸಿದ್ದರು. 

ದೈಹಿಕ ಆರೋಗ್ಯಕ್ಕೆ ಕುಸ್ತಿ ಕ್ರೀಡೆ ಹೆಚ್ಚು ಸಹಕಾರಿ : ಜೆ.ಸಿ ಗೀತಾರಾಜ್‌ಕುಮಾರ್



ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಕುಸ್ತಿ ಅಖಾಡಕ್ಕಿಳಿದ ಬಾಲಕರನ್ನು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್‌ರವರು ಅಭಿನಂದಿಸಿದರು.  
    ಭದ್ರಾವತಿ : ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಅದರಲ್ಲೂ ಕುಸ್ತಿ ಕ್ರೀಡೆ ದೈಹಿಕ ಆರೋಗ್ಯಕ್ಕೆ ಹೆಚ್ಚು ನೆರವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಹೇಳಿದರು. 
    ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾಪಟುಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. 
    ಪಂದ್ಯಾವಳಿಯನ್ನು ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಪೌರಾಯುಕ್ತ ಎನ್.ಕೆ ಹೇಮಂತ್, ಪರಿಸರ ಅಭಿಯಂತರ ಪ್ರಭಾಕರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಕುಸ್ತಿಪಟುಗಳಾದ ಎಚ್.ಆರ್ ಧನಂಜಯ, ಲಚ್ಚಣ್ಣ, ಚನ್ನಬಸಪ್ಪ, ಯಲ್ಲಪ್ಪ, ವಾಜಿದ್, ರಾಜಣ್ಣ, ಕಬ್ಬಳಿಕಟ್ಟೆ ಹನುಮಂತಪ್ಪ, ಶಿವಮೊಗ್ಗ ಗೋವಿಂದಸ್ವಾಮಿ, ಭೈರಪ್ಪ, ಮಾಯಣ್ಣ,ನಂಜುಂಡಪ್ಪ, ಪ್ರಮುಖರಾದ ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಮೊದಲ ಬಾಲಕರ ಪಂದ್ಯಾವಳಿಯಲ್ಲಿ ಹಳೇನಗರದ ರಾಜು ಗೆಲುವು ಸಾಧಿಸಿದ್ದು, ಪೌರಾಯುಕ್ತ ಎನ್.ಕೆ ಹೇಮಂತ್ ಫಲಿತಾಂಶ ಘೋಷಿಸಿದರು.   
 

ಭದ್ರಾತಿ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದ ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಗುರುವಾರ, ಸೆಪ್ಟೆಂಬರ್ 25, 2025

ಚತುಷ್ಪಥ ರಸ್ತೆ ಕಾಮಗಾರಿ ಆರಂಭ : ನೂರಾರು ವರ್ಷಗಳ ಬೃಹತ್ ಮರಗಳ ತೆರವು

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಉಪ ಅರಣ್ಯ ಸಂರಕ್ಷಧಿಕಾರಿಗಳ ಕಛೇರಿ ಸಮೀಪದಿಂದ ಬೈಪಾಸ್ ರಸ್ತೆ ಬಿಳಿಕಿ ವೃತ್ತದವರೆಗೆ ಚತುಷ್ಪಥ ರಸ್ತೆ ಸುಮಾರು ೧೪ ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಸ್ತೆ ಬದಿಯ ನೂರಾರು ವರ್ಷಗಳ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಕಳೆದ ೨ ದಶಕಗಳಿಂದ ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ನಗರದ ಹೃದಯ ಭಾಗದ ರಸ್ತೆಗಳು ಹಾಗು ಬೈಪಾಸ್ ರಸ್ತೆ ಅಗಲೀಕರಣಗೊಳಿಸಲಾಗಿದ್ದು, ನೂರಾರು ವರ್ಷಗಳ ರಸ್ತೆ ಬದಿಯ ಬೃಹತ್ ಮರಗಳನ್ನು ತೆರವುಗೊಳಿಸಲಾಗಿದೆ. ಇದೀಗ ಮತ್ತಷ್ಟು ಮರಗಳನ್ನು ತೆರವುಗೊಳಿಸಲಾಗುತ್ತಿದೆ. 
    ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಮೀಪದ ಕವಲಗುಂದಿ ಸೇತುವೆಯನ್ನು ಸಹ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ರಸ್ತೆ ಅಗಲೀಕರಣದಿಂದ ಭವಿಷ್ಯದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಸುಮಾರು ೨೫ ವರ್ಷಗಳ ಕಾಲದ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಸಿದ್ದಾರೆ

ನೂತನ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ಥಿತ್ವಕ್ಕೆ

ಸೆ.೨೮ರಂದು ಕೇಂದ್ರ ಕಾರ್ಯಾಲಯ, ನಾಮಫಲಕ ಉದ್ಘಾಟನೆ 

ಭದ್ರಾವತಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ.ವಿನೋದ್ ಮಾತನಾಡಿದರು.      
    ಭದ್ರಾವತಿ : ಸಮಾನ ಮನಸ್ಕ ಬಹುಜನರನ್ನು ಸೆಳೆದುಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಅಲೆಮಾರಿಗಳು, ಶೋಷಿತರು, ದಮನಿತರನ್ನು ಒಟ್ಟಿಗೆ ಬೆಸೆಯುವಂತೆ ಮಾಡಲು ಹಾಗೂ ಕಳಚಿಹೋದ ಕೊಂಡಿಗಳನ್ನು ಬೆಸೆಯಲು ಮತ್ತು ಅನ್ಯಾಯದ ವಿರುದ್ದ ಸ್ವಾಭಿಮಾನದಿಂದ ಸೆಟೆದು ನಿಲ್ಲಲು ನೂತನವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. 
    ಸೆ.೨೮ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಳುವಳಿಯ ಬೀಡಾದ ನಗರದಲ್ಲಿ ನ್ಯಾಯಯುತ ಹಕ್ಕುಗಳಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್‌ರವರ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಯುವ ಹೋರಾಟಗಾರರು, ಪ್ರಗತಿಪರ ಚಿಂತಕರನ್ನು ಒಗ್ಗೂಡಿಸಿಕೊಂಡು ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಪ್ರಸ್ತುತ ಹೊಸ ಸಂಘಟನೆ ಅಗತ್ಯತೆ ಮನಗಂಡು ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದರು. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯಾದ್ಯಕ್ಷ ವಿ.ವಿನೋದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಆರ್.ಟಿ.ಓ ಇಲಾಖೆ ನೌಕರ ದಲಿತ ಮುಖಂಡ ಎನ್. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ, ಶಿಕ್ಷಕ ಎಂ.ಆರ್ ರೇವಣಪ್ಪರವರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ಪ್ರಧಾನ ಹಾಗು ನೂತನ ಸಮಿತಿ ಕೇಂದ್ರ ಕಾರ್ಯಾಲಯ ಮತ್ತು ನಾಮಫಲಕ ಉದ್ಘಾಟನೆ ಹಾಗು ರಾಜ್ಯ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಶಿಕ್ಷಕಿ ಭಾರತಿ ಗೋವಿಂದಸ್ವಾಮಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಡಿಎಸ್‌ಎಸ್ ಸಂಸ್ಥಾಪಕರಾದ ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ನಾಗತಿಬೆಳಗಲು ತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಎನ್ ನರಸಿಂಹಮೂರ್ತಿ, ಕಾಗದನಗರ ಜಿಯುಎಲ್‌ಪಿಎಸ್ ಶಿಕ್ಷಕ ಸಿ. ಚನ್ನಪ್ಪ, ಶಿಕ್ಷಕಿಯರಾದ ರಾಧಾಬಾಯಿ ಹಾಜ್ಯನಾಯ್ಕ, ಶಾರದ ಪ್ರೇಮ್ ಕುಮಾರ್ ಮತ್ತು ಎಸ್. ಭಾರತಿ ಅವರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ ಎಂದರು. 
    ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಪದಾಧಿಕಾರಿಗಳಾದ ಸುಶೀಲಮ್ಮ, ಜೆ. ಸೆಂದಿಲ್‌ಕುಮಾರ್, ಸುರೇಶ್, ನೇತ್ರಾವತಿ, ಎ. ಮಂಜು, ಗಿರೀಶ್, ಭಾಗ್ಯ, ಮಂಗಳ, ಜಿಲ್ಲಾಧ್ಯಕ್ಷ ಅರುಳ್, ಜಯಶೀಲ, ತಾಲೂಕು ಅಧ್ಯಕ್ಷ ರಾಕೇಶ್, ಗೋವಿಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.