Thursday, March 17, 2022

ಜೇಮ್ಸ್ ಚಿತ್ರ ಬಿಡುಗಡೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ : ಎರಡೂ ಚಿತ್ರಮಂದಿರಗಳಲ್ಲೂ ಎಲ್ಲಾ ಪ್ರದರ್ಶನಗಳು ಭರ್ತಿ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಗುರುವಾರ ಪುನೀತ್‌ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿಲನಚಿತ್ರ ವೀಕ್ಷಣೆಗೆ ಕಾದು ನಿಂತಿರುವ ಅಭಿಮಾನಿಗಳು.
    ಭದ್ರಾವತಿ, ಮಾ. ೧೭: ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಲನಚಿತ್ರ ಬಿಡುಗಡೆಗೆ ಗುರುವಾರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಬೆಳಿಗ್ಗೆ ಬಿ.ಎಚ್ ರಸ್ತೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ೫೦ ಅಡಿ ಎತ್ತರ ಕಟೌಟ್‌ಗೆ ಹೂವಿನ ಅಲಂಕಾರ ಹಾಗು ಹಾಲಿನ ಅಭಿಷೇಕ ನಡೆಯಿತು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಯಿತು.
    ಎರಡೂ ಚಿತ್ರ ಮಂದಿರಗಳಲ್ಲಿ ಎಲ್ಲಾ ಪ್ರದರ್ಶನಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದವು. ಚಲನಚಿತ್ರ ವೀಕ್ಷಣೆಗೆ ಅಭಿಮಾನಿಗಳು ಗಂಟೆಗಟ್ಟಲೆ ಚಿತ್ರಮಂದಿರ ಮುಂದೆ ಕಾದು ಕುಳಿತುವಿರುವುದು ಕಂಡು ಬಂದಿತು. ಚಿತ್ರ ವೀಕ್ಷಿಸಿದ ಅಭಿಮಾನಿಗಳು ಉತ್ತಮ ಪ್ರಶಂಸೆ ವ್ಯಕ್ತಪಡಿಸಿದರು.
    ಚಿತ್ರ ಮಂದಿರದ ಬಳಿ ಜಾತ್ರಾ ಮಹೋತ್ಸವದ ಸಂಭ್ರಮದಂತೆ ಕಂಡು ಬಂದಿತು. ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.

ಆಟೋ ಚಾಲಕರಿಂದ ಪುನೀತ್ ರಾಜ್‌ಕುಮಾರ್ ಪತ್ರಿಮೆ ಅನಾವರಣ

ಭದ್ರಾವತಿ ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಗುರುವಾರ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
    ಭದ್ರಾವತಿ, ಮಾ. ೧೭: ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಗುರುವಾರ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು.
    ೩ ಅಡಿ ಎತ್ತರದ ಸಿಮೆಂಟ್‌ನಿಂದ ತಯಾರಿಸಲಾದ ಪುನೀತ್‌ರಾಜ್‌ಕುಮಾರ್‌ರವರ ಪತ್ರಿಮೆಯನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಅನಾವರಣಗೊಳಿಸಿದರು. ಅಭಿಮಾನಿಗಳು, ಆಟೋ ಚಾಲಕರು, ಸ್ಥಳೀಯರು ಸ್ವರ ಸಂಗೀತ ಕಾರ್ಯಕ್ರಮದೊಂದಿಗೆ ಸಂಭ್ರಮಿಸಿದರು.
    ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆಟೋ ಚಾಲಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸೇವಾ ಕಾರ್ಯಗಳಿಂದಾಗಿ ಪುನೀತ್‌ರಾeಕುಮಾರ್ ನೆನಪು : ಲಕ್ಷಾಂತರ ಅಭಿಮಾನಿಗಳಿಗೆ ಪ್ರೇರಣೆ

ಸರ್ಕಾರವೇ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸುವಂತಾಗಲಿ : ಬಿ.ಕೆ ಮೋಹನ್


ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ಮಾ. ೧೭: ಪುನೀತ್‌ರಾಜ್‌ಕುಮಾರ್‌ರವರು ನಮ್ಮೆಲ್ಲರ ಮುಂದೆ ಇಂದು ಉಳಿದುಕೊಂಡಿರುವುದು ಅವರ ಸೇವಾ ಕಾರ್ಯದಿಂದಾಗಿ ಎಂಬುದನ್ನು ಯಾರು ಮರೆಯುವಂತಿಲ್ಲ. ಇಂತಹ ವ್ಯಕ್ತಿಯ ಜನ್ಮದಿನವನ್ನು ಸರ್ಕಾರದಿಂದ ಆಚರಿಸುವಂತಾಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಗುರುವಾರ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
    ಪುನೀತ್‌ರಾಜ್‌ಕುಮಾರ್‌ರವರು ಕೇವಲ ನಟರಾಗಿ ಉಳಿದುಕೊಳ್ಳದೆ ಬಡ ಮಕ್ಕಳ ಶಿಕ್ಷಣಕ್ಕೆ, ಗೋ ಶಾಲೆಗಳ ನಿರ್ಮಾಣಕ್ಕೆ ಹಾಗು ಅನಾಥಾಶ್ರಮಗಳಿಗೆ ನೆರವಾಗುವ ಜೊತೆಗೆ ಇನ್ನಿತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಿಧನದ ನಂತರ ಅವರ ವಾಸ್ತವ ಬದುಕು ನಮ್ಮೆಲ್ಲರಿಗೂ ತಿಳಿಯುತ್ತಿದೆ. ಆ ಮೂಲಕ ಅವರು ಇಂದು ನಮ್ಮೆಲ್ಲರ ಮುಂದೆ ಉಳಿದುಕೊಂಡಿದ್ದಾರೆ. ಇವರ ಸೇವಾ ಕಾರ್ಯಗಳು ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಬದಲಿಸಿದೆ. ಈ ಮೂಲಕ ನಾವು ಸಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪುನೀತ್‌ರಾಜ್‌ಕುಮಾರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಜನ್ಮದಿನ ಕೇವಲ ಸಂಘ-ಸಂಸ್ಥೆಗಳಿಂದ, ಅಭಿಮಾನಿಗಳಿಂದ ಆಚರಣೆ ಮಾಡಿದರೆ ಸಾಲದು ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನಗಳಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಟ್ರಸ್ಟ್ ಪ್ರಾಮಾಣಿಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯದೆ ಮುನ್ನಡೆಯುವ ಮೂಲಕ ಇತರರಿಗೆ ಟ್ರಸ್ಟ್ ಮಾದರಿಯಾಗಬೇಕೆಂದರು.
    ಸಂಘದ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಆರ್. ಪ್ರದೀಪ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಸುರಜಿತ್‌ಮಿಶ್ರಾ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಕರ್, ಆರ್. ಮೋಹನ್‌ಕುಮಾರ್, ಸರ್ವಮಂಗಳ ಭೈರಪ್ಪ, ಸೈಯದ್ ರಿಯಾಜ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಮಾಜ ಸೇವಕ ಬಾಲಕೃಷ್ಣ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಟ್ರಸ್ಟ್ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎನ್.ಆರ್ ಜಯರಾಜ್, ಉಪಾಧ್ಯಕ್ಷರಾದ ರಾಮಪ್ಪ, ವಿ. ಮುನೇನಕೊಪ್ಪ, ಸಹಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಕೋಶಾಧ್ಯಕ್ಷ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ್, ಆರ್. ಕಾಮಾಕ್ಷಿ, ಎನ್. ರೂಪ, ವಿಲ್ಸನ್‌ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭಾ ಸದಸ್ಯ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಸ್ವಾಗತಿಸಿದರು. ಸಿದ್ದಾರ್ಥ ಅಂಧರ ಕೇಂದ್ರ ಕಲಾವಿದರು ಪ್ರಾರ್ಥಿಸಿ ಪುನೀತ್‌ರಾಜ್‌ಕುಮಾರ್‌ರವರ ಗೀತಾ ಗಾಯನ ನಡೆಸಿಕೊಟ್ಟರು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಕ್ತದಾನ, ನೇತ್ರದಾನ ಸಹ ನಡೆಯಿತು.


ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಹೋಳಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ : ರತಿ ಮನ್ಮಥರ ಪ್ರತಿಷ್ಠಾಪನೆ

ಭದ್ರಾವತಿ, ಮಾ. ೧೭: ಹಳೇನಗರದ ವಿವಿಧೆಡೆ ಹೋಳಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಕಂಡು ಬರುತ್ತಿದ್ದು, ಶನಿವಾರ ಹೋಳಿ ಆಚರಣೆ ಹಾಗು ರತಿ ಮನ್ಮಥರ ದಹನದೊಂದಿಗೆ ಹಬ್ಬ ಕೊನೆಗೊಳ್ಳಲಿದೆ.
ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಮುಂಭಾಗ ಹಾಗು ಹಳೇನಗರದ ಕುಂಬಾರರ ಬೀದಿ ಮತ್ತು ಬ್ರಾಹ್ಮಣರ ಬೀದಿ ಸೇರಿದಂತೆ ವಿವಿಧೆಡೆ ರತಿ ಮನ್ಮಥರ ಪ್ರತಿಷ್ಠಾಪನೆಯೊಂದಿಗೆ ಕಳೆದ ೬ ದಿನಗಳಿಂದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.
ಹೋಳಿ ಆಚರಣೆ ಪ್ರಮುಖ ಆಕರ್ಷಣೆಯಾಗಿದ್ದು, ವಯಸ್ಸಿನ ಮಿತಿ ಇಲ್ಲದೆ ಮಕ್ಕಳು, ಮಹಿಳೆಯರು, ಪುರುಷರು ಒಂದೆಡೆ ಸೇರಿ ಸಂಭ್ರಮಿಸುವುದು ವಿಶೇಷವಾಗಿದೆ.


ಭದ್ರಾವತಿ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಮುಂಭಾಗ ಹಾಗು ಹಳೇನಗರದ ಕುಂಬಾರರ ಬೀದಿ ಮತ್ತು ಬ್ರಾಹ್ಮಣರ ಬೀದಿ ಸೇರಿದಂತೆ ವಿವಿಧೆಡೆ ಹೋಳಿ ಹಬ್ಬದ ಹಿನ್ನಲೆಯಲ್ಲಿ ರತಿ ಮನ್ಮಥರನ್ನು ಪ್ರತಿಷ್ಠಾಪಿಸಿರುವುದು.

ಮಾ.೧೮ರಂದು ಸುಣ್ಣದಹಳ್ಳಿ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಕ್ಷೇತ್ರದ ವೀರಾಂಜನೇಯ ಸ್ವಾಮಿ ದೇವಸ್ಥಾನ
    ಭದ್ರಾವತಿ, ಮಾ. ೧೭: ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಕ್ಷೇತ್ರದ ವೀರಾಂಜನೇಯ ಸ್ವಾಮಿ ರಥೋತ್ಸವ ಮಾ.೧೯ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
    ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ, ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ರಕ್ಷೆಘ್ನಹೋಮ, ವಾಸ್ತು ಪೂಜೆ ದಿಗ್ ಬಲಿ ಯಾಗಶಾಲಾ ಪ್ರದೇಶ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ, ಅಂಕುರಾರ್ಪಣೆ, ನವಗ್ರಹ ಹೋಮ, ಗರುಡಹೋಮ, ಛೇರಿತಾಡನ, ಕಂಕಣ ಬಂಧನ, ಧ್ವಜಾರೋಹಣ, ಮಹಾಮಂಗಳಾರತಿ ಹಾಗು ಸಂಜೆ ಅಗ್ನಿ ಜನನ, ರಂಗಪೂಜೆ, ತಂತ್ರಬಲಿ ಮತ್ತು ಮಂಗಳಾರತಿ ಸೇರಿದಂತೆ ಇನ್ನಿತರ ಆಚರಣೆಗಳು ಜರುಗಲಿವೆ.
    ಶನಿವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ, ರಥಶುದ್ಧಿ ಪ್ರಧಾನ ಹೋಮ, ರಥೋತ್ಸವ ನನಂತರ ಅನ್ನ ಸಂಂತಪನೆ ಕಾರ್ಯಕ್ರಮಗಳು ನಡೆಯಲಿವೆ.
    ಉಳಿದಂತೆ ಮಾ.೨೦ ಮತ್ತು ೨೧ರಂದು ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Wednesday, March 16, 2022

ಕ್ಷೇತ್ರದ ರಾಜಕಾರಣದಲ್ಲಿ ಪುನಃ ಇತಿಹಾಸ ಮರುಕಳುಹಿಸುವುದೇ ?

ಎಸ್. ನಾರಾಯಣ್ ಕಾಂಗ್ರೆಸ್ ಸೇರ್ಪಡೆ : ಸಂಗಮೇಶ್ವರ್‌ಗೆ ಟಿಕೇಟ್ ಕೈ ತಪ್ಪುವ ಆತಂಕ

ಶಾಸಕ ಬಿ.ಕೆ ಸಂಗಮೇಶ್ವರ್

* ಅನಂತಕುಮಾರ್
    ಭದ್ರಾವತಿ: ವಿಧಾನಸಭಾ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ಕ್ಷೇತ್ರದ ರಾಜಕಾರಣ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಈ ಹಿಂದಿನ ಇತಿಹಾಸ ಮರುಕಳುಹಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ.
    ಪ್ರಮುಖ ರಾಜಕೀಯ ಪಕ್ಷಗಳು ಈ ಬಾರಿ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಬದಲಾವಣೆ ತರಬೇಕೆಂಬ ಉದ್ದೇಶದೊಂದಿಗೆ ಹಲವು ತಂತ್ರಗಾರಿಕೆಗಳನ್ನು ಈಗಿನಿಂದಲೇ ಆರಂಭಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ಸ್ನೇಹಿತ ಸಿ.ಎಂ ಇಬ್ರಾಹಿಂರವರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಬ್ರಾಹಿಂ ನಿರೀಕ್ಷೆಯಂತೆ ಗೆಲುವು ಸಾಧಿಸದೆ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಸಂಗಮೇಶ್ವರ್ ೨ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ನಂತರದ ಬೆಳವಣಿಗೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಸಂಗಮೇಶ್ವರ್ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಅಂದು ಪಕ್ಷದ ವರಿಷ್ಠರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಪಕ್ಷ ಸಾಕಷ್ಟು ಹಿನ್ನಡೆ ಅನುಭವಿಸುವಂತಾಯಿತು. ಈ ಹಿನ್ನಲೆಯಲ್ಲಿ ನಂತರದ ಚುನಾವಣೆಯಲ್ಲಿ ಪುನಃ ಸಂಗಮೇಶ್ವರ್‌ಗೆ ಕಾಂಗ್ರೆಸ್ ಟಿಕೇಟ್ ನೀಡಲಾಗಿತ್ತು. ಇದೀಗ ಕ್ಷೇತ್ರದವರೇ ಆದ ನಟ, ನಿರ್ಮಾಪಕ ಎಸ್. ನಾರಾಯಣ್ ಏಕಾಏಕಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಈ ಹಿಂದಿನ ಇತಿಹಾಸ ಪುನಃ ಮರುಕಳುಹಿಸುವ ಲಕ್ಷಣಗಳು ಕಂಡು ಬರುತ್ತಿವೆ.
    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್ವರ್‌ಗೆ ಟಿಕೇಟ್ ತಪ್ಪಿಸಿ ನಾರಾಯಣ್‌ರವರಿಗೆ ಟಿಕೇಟ್ ನೀಡುವ ಲೆಕ್ಕಾಚಾರ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಇದೀಗ ಕ್ಷೇತ್ರದಲ್ಲಿ ಹರಿದಾಡುತ್ತಿದ್ದು, ಒಂದು ವೇಳೆ ಇದು ನಿಜವಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ನಡುವಿನ ಪ್ರತಿಷ್ಠೆ ಸಂಗಮೇಶ್ವರ್ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ.



ನಟ, ನಿರ್ಮಾಪಕ ಎಸ್. ನಾರಾಯಣ್
    ನಾರಾಯಣ್‌ರವರು ಇಲ್ಲಿಯೇ ಹುಟ್ಟಿ ಬೆಳೆದಿದ್ದರೂ ಸಹ ಕಳೆದ ಸುಮಾರು ೩ ದಶಕದಿಂದ ಕ್ಷೇತ್ರದಿಂದ ದೂರ ಉಳಿದಿದ್ದು, ಇದೀಗ ನಟ, ನಿರ್ಮಾಪಕರಾಗಿ ಮಾತ್ರ ಕ್ಷೇತ್ರದ ಜನತೆಗೆ ಪರಿಚಿತರಾಗಿದ್ದಾರೆ. ಕಳೆದ ಸುಮಾರು ೫-೬ ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಪುತ್ರ ಪಂಕಜ್ ಅಭಿನಯದ ಚಲನಚಿತ್ರ ದುಷ್ಟ ನಿರ್ಮಾಣ ಚಿತ್ರೀಕರಣಕ್ಕಾಗಿ ನಗರಕ್ಕೆ ಬಂದಿದ್ದು ಬಿಟ್ಟರೇ ಉಳಿದಂತೆ ಕ್ಷೇತ್ರದ ಕಡೆ ತಿರುಗಿಯೂ ನೋಡಿಲ್ಲ. ಇಂದಿನ ತಲೆಮಾರಿನ ಬಹುತೇಕ ಮಂದಿಗೆ ನಾರಾಯಣ್ ಭದ್ರಾವತಿಯವರು ಎಂಬುದೇ ತಿಳಿದಿಲ್ಲ.  ಈ ನಡುವೆ ಏಕಾಏಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಾರಾಯಣ್‌ರವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಇವರ ವರ್ಚಸ್ಸನ್ನು ಕಾಂಗ್ರೆಸ್ ರಾಜ್ಯದೆಲ್ಲೆಡೆ ಪಕ್ಷ ಸಂಘಟನೆಗಾಗಿ ಬಳಸಿಕೊಳ್ಳುತ್ತದೆಯೋ ಅಥವಾ ಕೇವಲ ಭದ್ರಾವತಿ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
    ಈ ನಡುವೆ ಬಿಜೆಪಿ ಈ ಬಾರಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಎರಡು ಪಕ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಮೂಲಕ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರತಿ ಬಾರಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗುತ್ತಿದ್ದು, ಅದರಲ್ಲೂ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ದೂರವಿಟ್ಟು ಹೊರಗಿನವರಿಗೆ ಟಿಕೇಟ್ ನೀಡುತ್ತಿದೆ. ಮುಂಬರುವ ಚುನಾವಣೆಗೂ ಇದೆ ಮಾದರಿ ಅನುಸರಿಸುವ ಲಕ್ಷಣಗಳು ಕಂಡು ಬರುತ್ತಿದೆ.  
    ಇದೀಗ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಆತಂಕದ ಬೆಳವಣಿಗೆಗಳು ಕಂಡು ಬರುತ್ತಿದ್ದು, ಈಗಾಗಲೇ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿಯನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದ್ದರೂ ಸಹ ಪಕ್ಷದ ವರಿಷ್ಠರು ಕೆಲವು ಬಾರಿ ಕೈಗೊಳ್ಳುವ ನಿರ್ಧಾರಗಳು ಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಶಾರದ ಅಪ್ಪಾಜಿ ಸಹ ಪಕ್ಷದ ವರಿಷ್ಠರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು,  ಶಾರದ ಅಪ್ಪಾಜಿ ಸಹ ಬದಲಾದ ಸಂದರ್ಭಗಳಿಗೆ ತಕ್ಕಂತೆ ಬದಲಾಗುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.

ನೂತನ ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು ನಾಮಕರಣಗೊಳಿಸಿ

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ನಾಮಕರಣಗೊಳಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಗ್ರೇಡ್-೨ ತಹಶೀಲ್ದಾರ್ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೧೬: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ನಾಮಕರಣಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಗ್ರೇಡ್-೨ ತಹಶೀಲ್ದಾರ್ ರಂಗಮ್ಮ ಮೂಲಕ ಬುಧವಾರ ಮನವಿ ಸಲ್ಲಿಸಲಾಯಿತು. 
      ಮಹಾಸಭಾ ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಹಾಸಭಾದ ಪ್ರಮುಖರಾದ ಬಿ.ಎಸ್ ಮಹೇಶ್ ಕುಮಾರ್, ಬಾರಂದೂರು ಮಂಜುನಾಥ್, ರವಿ, ವಾಗೀಶ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್,  ಬಿ.ಎಸ್.ಕಲ್ಪನ, ಶೋಭಾ ಪಾಟೀಲ್, ಆರ್.ಎಸ್.ಶೋಭಾ, ಕವಿತಾ ಸುರೇಶ್, ಸೌಭಾಗ್ಯ, ಉಷಾ ವೀರಶೇಖರ್, ಜಗದೀಶ್ ಕೂಡ್ಲಿಗೆರೆ,  ಆರ್.ಮಹೇಶ್ ಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.