Friday, October 27, 2023

ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಿಂದ ಮೀನಾಕ್ಷಮ್ಮನವರಿಗೆ ಶ್ರದ್ಧಾಂಜಲಿ

ಭದ್ರಾವತಿ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್‌ರವರ ತಾಯಿ ಮೀನಾಕ್ಷಮ್ಮನವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ: ನಗರದ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್‌ರವರ ತಾಯಿ ಮೀನಾಕ್ಷಮ್ಮನವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಮೂಲತಃ ಗಾಂಧಿನಗರದ ನಿವಾಸಿಯಾಗಿದ್ದ ಮೀನಾಕ್ಷಮ್ಮನವರು ದುಬೈನಲ್ಲಿ ನೆಲೆಸಿದ್ದರು. ಅ.೧೭ರಂದು ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ದುಬೈನಲ್ಲಿ ನೆರವೇರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
    ಸಭೆಯಲ್ಲಿ ಮೀನಾಕ್ಷಮ್ಮನವರ ಪುತ್ರ, ಕಾರುಣ್ಯ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ. ಜಿ. ವಿಜಯ್, ಪುತ್ರಿ ಜಿ. ಸುಜಾತ, ಒಳಗೊಂಡಂತೆ ಅಪಾರ ಬಂಧುಗಳು ಹಾಗು ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಂತಾಪ ವ್ಯಕ್ತಪಡಿಸಿದರು.
    ಗಾಂಧಿನಗರದ ಬಲಮುರಿ ಗಣಪತಿ ದೇವಾಲಯದ ಅರ್ಚಕರಾದ ಮುರಳೀಧರ ಶರ್ಮ ಹಾಗು ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪ್ರಮುಖರಾದ ನಾಗವೇಣಿ, ಮುಖಂಡ ಜಯಪಾಲ್ ಸೇರಿದಂತೆ ಇನ್ನಿತರರು ಮೀನಾಕ್ಷಮ್ಮರ ಸೇವಾ ಕಾರ್ಯಗಳನ್ನು ಸ್ಮರಿಸಿದರು.
    ಚಿದಾನಂದ್, ಧನಪಾಲ್ ಸಿಂಗ್ ಹಾಗು ತ್ರಿವೇಣಿ ಮಾತೃಪ್ರೇಮದ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಆರಂಭದಲ್ಲಿ ಮೌನಾಚರಣೆ ನಡೆಸಿ ಪುಷ್ಪನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಗಾಂಧಿನಗರದ ಬಲಮುರಿ ಗಣಪತಿ ದೇವಾಲಯದ ದೇವಸ್ಥಾನ ಸಮಿತಿ ಅಧ್ಯಕ್ಷ ಕುಮಾರಪ್ಪ, ವೈದ್ಯ ನರೇಂದ್ರ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸ್ವಾಗತಿಸಿ, ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.

ವಕೀಲರ ಸಂಘದ ಅಧ್ಯಕ್ಷರಾಗಿ ಉಮೇಶ್

ಭದ್ರಾವತಿ ತಾಲೂಕು ವಕೀಲರ ಸಂಘದ ಚುನಾವಣೆ ಶುಕ್ರವಾರ ನಡೆದಿದ್ದು, ನೂತನ ಅಧ್ಯಕ್ಷರಾಗಿ ಉಮೇಶ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ: ತಾಲೂಕು ವಕೀಲರ ಸಂಘದ ಚುನಾವಣೆ ಶುಕ್ರವಾರ ನಡೆದಿದ್ದು, ನೂತನ ಅಧ್ಯಕ್ಷರಾಗಿ ಉಮೇಶ್ ಆಯ್ಕೆಯಾಗಿದ್ದಾರೆ.
    ಪ್ರತಿ ೨ ವರ್ಷಗಳಿಗೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಅಧ್ಯಕ್ಷರಾಗಿ ಉಮೇಶ್, ಉಪಾಧ್ಯಕ್ಷರಾಗಿ ಬಿ.ಎಸ್ ನಾಗರಾಜ್, ಕಾರ್ಯದರ್ಶಿಯಾಗಿ ರಾಕೇಶ್, ಸಹ ಕಾರ್ಯದರ್ಶಿಯಾಗಿ ಹರೀಶ್ ಬರ್ಗೆ ಮತ್ತು ಖಜಾಂಚಿಯಾಗಿ ಆಶಾ ಆಯ್ಕೆಯಾಗಿದ್ದಾರೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ನ್ಯಾಯವಾದಿ ಕೆ.ಎನ್ ಶ್ರೀಹರ್ಷ ೨ ವರ್ಷಗಳವರೆಗೆ ಅಧ್ಯಕ್ಷರಾಗಿದ್ದರು.
    ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್ ಸೇರಿದಂತೆ ಹಿರಿಯ ನ್ಯಾಯವಾದಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಭಿನಂದಿಸಿದ್ದಾರೆ.

ವಿಐಎಸ್‌ಎಲ್ ಉಳಿವಿಗಾಗಿ ಗಣಹೋಮ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ೧೩ನೇ ವರ್ಷದ ವಿನಾಯಕ ಚತುರ್ಥಿ ಅಂಗವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಶುಕ್ರವಾರ ಗಣಹೋಮ ನಡೆಯಿತು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ೧೩ನೇ ವರ್ಷದ ವಿನಾಯಕ ಚತುರ್ಥಿ ಅಂಗವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಶುಕ್ರವಾರ ಗಣಹೋಮ ನಡೆಯಿತು.  
    ಕಾಗದನಗರ ೭ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಕಿರಿಯ ಅರ್ಚಕರಾದ ಚಿನ್ಮಯಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಗುತ್ತಿಗೆ ಕಾರ್ಮಿಕರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
    ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಈ ಹಿಂದೆ ಶಿವಮೊಗ್ಗದಿಂದ ವಿಐಎಸ್‌ಎಲ್ ಕಾರ್ಖಾನೆವರೆಗೂ ಪಾದಯಾತ್ರೆ ಕೈಗೊಂಡಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ. ನೇತ್ರಾವತಿ, ಮುಖಂಡರಾದ ಮರಿಯಪ್ಪ, ಪ್ರದೀಪ್, ರಾಧಾ, ರಾಮಕೃಷ್ಣ, ನಗರಸಭೆ ಮಾಜಿ ಸದಸ್ಯ ಆಂಜನಪ್ಪ ಸೇರಿದಂತೆ ಇನ್ನಿತರರು ವಿನಾಯಕ ಮೂರ್ತಿ ದರ್ಶನ ಪಡೆದರು. ವಿನಾಯಕ ಸೇವಾ ಸಮಿತಿ ವತಿಯಿಂದ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಎಚ್. ರವಿಕುಮಾರ್, ರಮೇಶ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
    ಗಣಹೋಮ ಪೂರ್ಣಾಹುತಿ ನಂತರ ಅನ್ನಸಂತರ್ಪಣೆ ನೆರವೇರಿತು. ಅ.೨೮ರ ಶನಿವಾರ ಮೂರ್ತಿ ವಿಸರ್ಜನೆ ನಡೆಯಲಿದೆ.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಈ ಹಿಂದೆ ಶಿವಮೊಗ್ಗದಿಂದ ವಿಐಎಸ್‌ಎಲ್ ಕಾರ್ಖಾನೆವರೆಗೂ ಪಾದಯಾತ್ರೆ ಕೈಗೊಂಡಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ. ನೇತ್ರಾವತಿ, ಮುಖಂಡರಾದ ಮರಿಯಪ್ಪ, ಪ್ರದೀಪ್, ರಾಧಾ, ನಗರಸಭೆ ಮಾಜಿ ಸದಸ್ಯ ಆಂಜನಪ್ಪ ಸೇರಿದಂತೆ ಇನ್ನಿತರರು ಎಸ್‌ಎವಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದರು. ವಿನಾಯಕ ಸೇವಾ ಸಮಿತಿ ವತಿಯಿಂದ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Thursday, October 26, 2023

ಮಿತಿಮೀರಿದ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯತನ

ಅ.೩೧ರಂದು ಅಂಬೇಡ್ಕರ್ ಭವನದ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
    ಭದ್ರಾವತಿ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೯೦ನೇ ಜನ್ಮದಿನಾಚರಣೆ ಪ್ರಯುಕ್ತ ಅರ್ಧಕ್ಕೆ ಸ್ಥಗಿತಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಅವ್ಯವಸ್ಥೆ ಹಾಗು ಕ್ಷೇತ್ರದಲ್ಲಿ ಮಿತಿಮೀರಿರುವ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಖಂಡಿಸಿ ಹಾಗು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯತನದ ವಿರುದ್ಧ ಅ.೩೧ರಂದು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಂಬೇಡ್ಕರ್ ಭವನದ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೧೭ರಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದ ಖಾಲಿ ಜಾಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಸಂಬಂಧ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜಜವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ಕ್ಷೇತ್ರದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಅಲ್ಲದೆ ಹಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಈ ಸಂಬಂಧ ಯಾರು ಸಹ ಗಮನ ಹರಿಸುತ್ತಿಲ್ಲ. ಜನಸಾಮಾನ್ಯರ ಅಹವಾಲುಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವರು ಭದ್ರಾವತಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಕೆಡಿಪಿ ಸಭೆಯನ್ನು ನಡೆಸಿದ್ದಾರೆ. ಆದರೆ ಇಲ್ಲಿಗೆ ಮಾತ್ರ ಇದುವರೆಗೂ ಭೇಟಿ ನೀಡಿಲ್ಲ. ಕೆಡಿಪಿ ಸಭೆ ಸಹ ನಡೆಸಿಲ್ಲ. ಸಚಿವರ ಮಲತಾಯಿ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇನ್ನೂ ಹಲವಾರು ಸಮಸ್ಯೆಗಳಿದ್ದು, ಈ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ರಂಗಪ್ಪ, ಶೌಕತ್, ಪ್ರಧಾನ ಸಂಚಾಲಕರಾದ ಶ್ರೀನಿವಾಸ್, ಬಸವರಾಜ್, ಸಂಚಾಲಕರಾದ ಅಜಿತ್, ಅಜಯ್ ಮತ್ತು ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಉಳಿವಿಗಾಗಿ ಅ.೨೭ರಂದು ಗಣ ಹೋಮ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಅ.೨೮ರ ಶನಿವಾರ ನಡೆಯಲಿದೆ.
    ಪ್ರಸ್ತುತ ಕಾರ್ಖಾನೆ ಎದುರಿಸುತ್ತಿರುವ ಸಂಕಷ್ಟ ಪರಿಹರಿಸುವಂತೆ ಇಲ್ಲಿನ ಯುವಕರು ವಿಘ್ನ ನಿವಾರಕನಲ್ಲಿ ಮೊರೆ ಹೋಗುವ ಉದ್ದೇಶದಿಂದ ಈ ಬಾರಿ ೧೩ನೇ ವರ್ಷದ ವಿನಾಯಕ ಚತುರ್ಥಿಯಂದು ವಿಶೇಷವಾಗಿ ಕಾರ್ಖಾನೆಯ ಸಂಪೂರ್ಣ ಚಿತ್ರಣ ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
    ಗುರುವಾರ ಸರ್.ಎಂ.ವಿ ಗಾನವೃಂದ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.
    ಅ.೨೭ರಂದು ಬೆಳಿಗ್ಗೆ ೧೦ ಗಂಟೆಗೆ ವಿಐಎಸ್‌ಎಲ್ ಉಳಿಯಲಿ ಎಂಬ ಸಂಕಲ್ಪದೊಂದಿಗೆ ಗಣಹೋಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನ.೪ ಮತ್ತು ೫ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭ

ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನ ಚಿತ್ರ ನಟ, ನಿವೃತ್ತ ಉದ್ಯೋಗಿ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನ.೪ ಮತ್ತು ೫ರಂದು ಹಮ್ಮಿಕೊಳ್ಳಲಾಗಿರುವ ಶತಮಾನೋತ್ಸವ ಸಮಾರಂಭ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಉದ್ಘಾಟಿಸಲಿದ್ದಾರೆ.
    ಕಾರ್ಖಾನೆ ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಮಾರಂಭ ಆರಂಭಗೊಳ್ಳಲಿದ್ದು, ಮೈಸೂರು ಸುತ್ತೂರು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಹಾಸನ ಹಾರನಹಳ್ಳಿ ಶ್ರೀ ಕ್ಷೇತ ಕೋಡಿಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಜ್ಯೋತಿರಾದಿತ್ಯ ಸಿಂಧ್ಯಾ, ಶೋಭಾ ಕರಂದ್ಲಾಜೆ ಮತ್ತು ಎ. ನಾರಾಯಣಸ್ವಾಮಿ ಹಾಗು ರಾಜ್ಯದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.


ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
    ಸಾಧಕರಾದ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್, ಕೆ.ಇ.ಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಮತ್ತು ವಿಆರ್‌ಎಲ್ ಗ್ರೂಪ್ಸ್ ಛೇರ್‍ಮನ್ ವಿಜಯ ಸಂಕೇಶ್ವರ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಸಂಜೆ ೫ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಎಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
    ಮಾ.೫ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ್, ಡಾ. ಎಚ್.ಸಿ ಮಹಾದೇವಪ್ಪ, ಎನ್. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್, ಜಮೀರ್ ಅಹಮದ್ ಖಾನ್, ಎಸ್.ಎಸ್ ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಈಶ್ವರ್ ಖಂಡ್ರೆ, ಆರ್.ಬಿ ತಿಮ್ಮಾಪುರ, ಭೈರತಿ ಸುರೇಶ್, ಡಿ. ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಸಂಸದ ಡಿ.ಕೆ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ನ.೪ ಮತ್ತು ೫ ರಂದು ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನ.೩ರಂದು ಸಂಜೆ ನಗರದ ಹಳೇಸೇತುವೆ ಬಳಿ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಭದ್ರಾರತಿ ನಡೆಯಲಿದೆ.
    ಎಲ್ಲಾ ಕಾರ್ಯಕ್ರಮಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದಾಗ ಸಂಘಟನೆ ಬಲಗೊಳ್ಳಲು ಸಾಧ್ಯ

ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ

ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ  ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಭದ್ರಾವತಿ: ಯಾವುದೇ ವ್ಯಕ್ತಿಗೆ ಮೊದಲು ತನ್ನ ಸಮುದಾಯ ಮುಖ್ಯವಾಗಿದ್ದು, ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದಾಗ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ, ನ್ಯಾಯವಾದಿ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ ಹೇಳಿದರು.
    ಅವರು ಗುರುವಾರ ನಗರದ ಚನ್ನಗಿರಿ ರಸ್ತೆಯಲ್ಲಿರುವ ಸಂಘದ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸಂಘದ ಬೆಳವಣಿಗೆಯಲ್ಲಿ ಸಮುದಾಯದ ಹಿಂದಿನ ಹಿರಿಯರ ಪಾತ್ರ ಹೆಚ್ಚಿನದ್ದಾಗಿದ್ದು, ಸಂಘ ಮುನ್ನಡೆಸಿಕೊಂಡು ಹೋಗಲು ಪ್ರತಿಯೊಬ್ಬ ಸಹಕಾರ ಮುಖ್ಯವಾಗಿದೆ ಎಂದರು.
    ಸಮುದಾಯ ಮುಖಂಡರಾದ ತಿಪ್ಪೇಶ್‌ರಾವ್, ಯಲ್ಲೋಜಿರಾವ್, ಬಸವಂತರಾವ್ ದಾಳೆ, ಸಿದ್ದೋಜಿರಾವ್, ಪ್ರಕಾಶ್‌ರಾವ್, ಬಿ.ಎಸ್ ರಾಜೇಶ್, ಡಿ.ಟಿ ಶ್ರೀಧರ್, ಟಿ.ಎಸ್ ದುಗ್ಗೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಸಂಘದ ನೂತನ ಪದಾಧಿಕಾರಿಗಳು ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಯಾವುದೇ ಸಂಧರ್ಭದಲ್ಲೂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜದ ಎಲ್ಲಾ ಸಮುದಾಯದಗಳೊಂದಿಗೆ ಸೌಹಾರ್ದತೆ ಕಾಯ್ದುಕೊಂಡು ಮುನ್ನಡೆಯಬೇಕೆಂದರು.
    ನೂತನ ನಿರ್ದೇಶಕರು:
    ಕೃಷ್ಣೋಜಿರಾವ್, ಎಂ.ಆರ್ ರಾಜಾರಾವ್, ಜಗನ್ನಾಥ್‌ರಾವ್ ಗಾಯ್ಕ್‌ವಾಡ್, ವಿ. ರಾಮನಾಥ್ ಬರ್ಗೆ, ಬಿ. ನಾಗಪ್ಪ, ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಆರ್. ನಾಗರಾಜ್‌ರಾವ್, ಬಿ.ಎಲ್ ಶಂಕರ್‌ರಾವ್ ಜಾದವ್, ಮಂಜುನಾಥ್‌ರಾವ್ ಪವಾರ್, ಎಸ್. ಶಾಂತಕುಮಾರ್ ಗಾಯ್ಕ್‌ವಾಡ್, ಮಹೇಶ್‌ರಾವ್ ಹಜಾರೆ, ಇ. ಸುನಿಲ್‌ಗಾರ್ಗೆ, ಎಚ್. ರಂಗನಾಥ್‌ರಾವ್, ಎಸ್. ಸುರೇಶ್‌ರಾವ್ ಮತ್ತು ಎಚ್.ಎಲ್ ರಂಗನಾಥ್‌ರಾವ್ ಚವ್ಹಾಣ್ ಒಟ್ಟು ೧೫ ಮಂದಿ ನಿರ್ದೇಶಕರಿದ್ದಾರೆ.
    ನೂತನ ಪದಾಧಿಕಾರಿಗಳು:
    ಅಧ್ಯಕ್ಷರಾಗಿ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಉಪಾಧ್ಯಕ್ಷರಾಗಿ ಎಚ್.ಎಲ್ ರಂಗನಾಥ್‌ರಾವ್ ಚವ್ಹಾಣ್, ಪ್ರಧಾನ ಕಾರ್ಯದರ್ಶಿಯಾಗಿ ಇ. ಸುನಿಲ್‌ಗಾರ್ಗೆ, ಸಹ ಕಾರ್ಯದರ್ಶಿಯಾಗಿ ಎಚ್. ರಂಗನಾಥ್‌ರಾವ್ ಮತ್ತು ಖಜಾಂಚಿಯಾಗಿ ವಿ. ರಾಮನಾಥ್ ಬರ್ಗೆ ಅಧಿಕಾರ ಸ್ವೀಕರಿಸಿದರು. ವಿವಿಧ ಸಮುದಾಯಗಳ ಅಧ್ಯಕ್ಷರು, ಮುಖಂಡರು ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.