![](https://blogger.googleusercontent.com/img/a/AVvXsEg4fZE-uSnaWOpy9-Ejl_O5saSEwpWOHFftOtEnNsRopncle0S8u0gtMlXZmpLmrJU-xKb-RUKWAD2xZN1sih_XcrT2iQUuukwRWIlgjxp7UiTpPL9M1a6KDFjAsJBev0Hkb-_zxLfn70v8F7JgJEwTUohg2L6-tyzxE88D1iAUerDjHYyV0v3LkVuiEBGF=w400-h205-rw)
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ ನಿಯಮಿತ ಹಾಗು ಸಹಕಾರ ಇಲಾಖೆ ವತಿಯಿಂದ ಭದ್ರಾವತಿ ನಗರದ ತರೀಕೆರೆ ರಸ್ತೆಯ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎನ್ ವಿದ್ಯಾಧರ ಉದ್ಘಾಟಿಸಿದರು.
ಭದ್ರಾವತಿ: ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಹಾಗು ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಹಕಾರಿಗಳಾಗಿವೆ. ಈ ಹಿನ್ನಲೆಯಲ್ಲಿ ಈ ಎರಡೂ ಸಹಕಾರಗಳನ್ನು ಹೆಚ್ಚು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎನ್ ವಿದ್ಯಾಧರ ಹೇಳಿದರು.
ಅವರು ಬುಧವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ ನಿಯಮಿತ ಹಾಗು ಸಹಕಾರ ಇಲಾಖೆ ವತಿಯಿಂದ ನಗರದ ತರೀಕೆರೆ ರಸ್ತೆಯ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಹಕಾರ ಸಂಘಗಳ ಕೊಡುಗೆ ಹೆಚ್ಚಿನದ್ದಾಗಿದೆ. ಅದರಲ್ಲೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಹಾಗು ಹೈನುಗಾರಿಕೆಗೆ ಸಹಕಾರಿಯಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ನೆರವಾಗುತ್ತಿವೆ. ಅಲ್ಲದೆ ಉಳಿದಂತೆ ಎಲ್ಲಾ ರೀತಿಯ ಸಹಕಾರ ಸಂಘಗಳಿಂದ ಹಲವಾರು ರೀತಿಯ ಪ್ರಯೋಜನಗಳಾಗುತ್ತಿವೆ ಎಂದರು.
ಸಹಕಾರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಮರ್ಥ ನಾಯಕತ್ವದ ಅಗತ್ಯವಿದೆ. ಪ್ರತಿಯೊಬ್ಬರು ಸಂಘದ ಏಳಿಗೆಗಾಗಿ ಶ್ರಮಿಸಬೇಕಾಗುತ್ತದೆ. ಅದರಲ್ಲೂ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹೊಂದಿರಬೇಕು. ಇವೆಲ್ಲವನ್ನೂ ಸಹ ಸಮಾಜದಲ್ಲಿರುವವರು ಗಮನಿಸುತ್ತಿರುತ್ತಾರೆ. ಅಲ್ಲದೆ ಸಂಘದ ಮೇಲೆ ವಿಶ್ವಾಸ ಹೊಂದುವ ಜೊತೆಗೆ ಅದರಲ್ಲಿ ಭಾಗಿಯಾಗುತ್ತಾರೆ ಎಂದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ ಮರಿಯಪ್ಪ, ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಡಿ. ಆನಂದ್, ಎಸ್. ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ. ಹನುಮಂತು, ಬಿ.ಆರ್ ದಶರಥಗಿರಿ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕರಾದ ಟಿ.ಎಸ್ ದುಗ್ಗೇಶ್, ಗೊಂದಿ ಜಯರಾಂ, ರಾಜ್ಯ ಸಹಕಾರ ಅಡಕೆ ಮಾರಾಟ ಮಹಾಮಂಡಳ ನಿರ್ದೇಶಕ ಎಚ್.ಎನ್ ನಾಗರಾಜ್, ಪಿಎಲ್ಡಿ ಅಧ್ಯಕ್ಷ ವಿರುಪಾಕ್ಷಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಟಿ ನಾಗರಾಜ್, ರಾಮ್ಕೋಸ್ ಅಧ್ಯಕ್ಷ ಬಿ.ಜಿ ಜಗದೀಶ್ ಗೌಡ, ಭದ್ರಾ ಕುರಿ ಮೇಕೆ ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್ ವಸಂತ್, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಸಿ. ಕಲ್ಮನೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ತೇಜೋಮೂರ್ತಿ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಟಿ.ಆರ್ ಸಂಗಯ್ಯ ಹಾಗು ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ಎ ಶ್ರೀನಿವಾಸ್, ಮೋಹನ್, ಗಿರಿಯಪ್ಪ, ಕಾಂತರಾಜ್, ದೇವಿಕುಮಾರ್, ವೀರಮ್ಮ, ಕುಬೇಂದ್ರಪ್ಪ, ಈಶ್ವರಪ್ಪ, ಮುರಳಿಧರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಎಸ್ ಸಂಜೀವಕುಮಾರ್ ಸ್ವಾಗತಿಸಿದರು. ಗೀತಾ ತಂಡದವರು ಪ್ರಾರ್ಥಿಸಿ, ನಿರ್ದೇಶಕ ಅರಕೆರೆ ಎಚ್.ಎಲ್ ಷಡಾಕ್ಷರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು.