ಭಾನುವಾರ, ಮಾರ್ಚ್ 23, 2025

ಮ್ಯಾಮ್ಕೋಸ್‌ಗೆ ೧೯ ನಿರ್ದೇಶಕರ ಆಯ್ಕೆ : ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು

ಬಿಜೆಪಿ ತಾಲೂಕು ಮಂಡಲ ಅಭಿನಂದನಾ ಕಾರ್ಯಕ್ರಮದಲ್ಲಿ  ಜಿ. ಧರ್ಮಪ್ರಸಾದ್ 

ಭದ್ರಾವತಿ ಬಿಜೆಪಿ ಮಂಡಲದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮ್ಯಾಮ್ಕೋಸ್‌ಗೆ ನೂತನವಾಗಿ ಆಯ್ಕೆಯಾದ ೧೯ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
    ಭದ್ರಾವತಿ : ಜಿಲ್ಲೆಯಲ್ಲಿ ನಡೆದ ಮ್ಯಾಮ್ಕೋಸ್ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿದ ಹಿನ್ನಲೆಯಲ್ಲಿ ೧೯ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇದು ಸಂಘಟಿತವಾಗಿ ಕಾರ್ಯನಿರ್ವಹಿಸಿದ ಫಲ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು. 
    ಅವರು ಭಾನುವಾರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾಮ್ಕೋಸ್‌ಗೆ ನೂತನವಾಗಿ ಆಯ್ಕೆಯಾದ ೧೯ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
    ಪಕ್ಷದ ಪರವಾಗಿ ೧೯ ಅಭ್ಯರ್ಥಿಗಳನ್ನು ಬೆಂಬಲಿಸಿ ಅವರ ಗೆಲುವಿಗೆ ಶಕ್ತಿಮೀರಿ ಶ್ರಮಿಸಲಾಗಿದ್ದು, ಬೆಂಬಲಿಸಿದ ಎಲ್ಲಾ ೧೯ ನಿರ್ದೇಶಕರು ಸಹ ಗೆಲುವು ಸಾಧಿಸಿರುವುದು ಸಂತೋಷದ ಸಂಗತಿಯಾಗಿದೆ. ಇದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ ಎಂದರು. 
    ಮ್ಯಾಮ್ಕೋಸ್ ಜಿಲ್ಲಾಧ್ಯಕ್ಷ ಮಹೇಶ್ ಉಲ್ಕುಳಿ ಮಾತನಾಡಿ, ಸಹಕಾರ ಭಾರತಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಂತಹ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದೆ. ೧೯ ಅಭ್ಯರ್ಥಿಗಳ ಗೆಲುವಿಗೆ ಕಾರಣಕರ್ತರಾದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಖಂಡರು, ಕಾರ್ಯಕರ್ತರ ಶ್ರಮ ಹೆಚ್ಚಿನದ್ದಾಗಿದೆ ಎಂದರು.  
    ಪಕ್ಷದ  ಜಿಲ್ಲಾ ಉಪಾಧ್ಯಕ್ಷ ಜಿ. ಅನಂದ್ ಕುಮಾರ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ವಿಶೇಷ ಆಹ್ವಾನಿತ ಎಚ್. ತೀರ್ಥಯ್ಯ, ಸಹಕಾರ ಭಾರತಿ ಜಿಲ್ಲಾ ನಿರ್ದೇಶಕರಾದ ಕುಪೇಂದ್ರಪ್ಪ, ಕೀರ್ತಿರಾಜ್, ಮಹೇಶ್, ಭೀಮಣ್ಣ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್, ಸಂಘದ ಪ್ರಮುಖರಾದ ಡಾ. ದತ್ತಾತ್ರೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪ್ರಸ್ತುತ ಬಗರ್‌ಹುಕುಂ ಸಾಗುವಳಿದಾರರಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ : ಸಚಿವ ಮಧು ಬಂಗಾರಪ್ಪ

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಿದರು. 
    ಭದ್ರಾವತಿ: ರಾಜ್ಯ ಸರ್ಕಾರ ಎಂದಿಗೂ ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪ್ರಸ್ತುತ ಬಗರ್‌ಹುಕುಂ ಸಾಗುವಳಿದಾರರಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 
    ಅವರು ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. 
    ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ನಿಂದ ಯಾರು ಸಹ ಭಯಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಎದುರಾಗಿರುವ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು. 
    ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವ ಸಂಬಂಧ ಶಾಸಕರು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. ಅವರೊಂದಿಗೆ ನಾನು ಸಹ ಕೈಜೋಡಿಸುತ್ತೇನೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಒಂದು ವೇಳೆ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವ ಅಗತ್ಯವಿದ್ದಲ್ಲಿ ಇದ್ದಕ್ಕೂ ಸಹ ಸಿದ್ದವಿದ್ದೇನೆ ಎಂದರು. 


ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಪಕ್ಷದ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಆದೇಶದಂತೆ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ತಾಲೂಕು ಹಾಗು ಜಿಲ್ಲೆಗಳಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗುತ್ತಿದೆ. ಕ್ಷೇತ್ರದಲ್ಲಿ ಈಗಾಗಲೇ ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿದ್ದು, ಶಾಸಕರ ನೇತೃತ್ವದಲ್ಲಿ ಪಕ್ಷ ಹೆಚ್ಚು ಕ್ರಿಯಾಶೀಲವಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. ಪಕ್ಷ ಯಾರನ್ನು ಆಯ್ಕೆ ಮಾಡುತ್ತವೆಯೋ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸಬೇಕು. ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಅವುಗಳನ್ನು ತಿಳಿಸುವ ಮೂಲಕ ಅಭಿವೃದ್ಧಿ ಕುರಿತು ಮನವರಿಕೆ ಮಾಡಿಕೊಡಬೇಕೆಂದರು. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಪ್ರಮುಖರಾದ ಚಂದ್ರಭೂಪಾಲ, ವೈ. ರೇಣುಕಮ್ಮ, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಸಿ.ಎಂ ಖಾದರ್, ಎಸ್. ಮಣಿಶೇಖರ್, ಬಿ.ಎಸ್ ಗಣೇಶ್, ಸುಕನ್ಯ ದಶರಥಗಿರಿ, ಎಚ್. ರವಿಕುಮಾರ್, ನಗರಸಭೆ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ, ಬಿ.ಟಿ ನಾಗರಾಜ್, ಅಮೀರ್ ಜಾನ್, ಗಂಗಾಧರ್, ಎಂ. ಶಿವಕುಮಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಶನಿವಾರ, ಮಾರ್ಚ್ 22, 2025

ಮಾ.೨೩ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ :  ಮೆಸ್ಕಾಂ ನಗರ /ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಯಲ್ಲಿ ಮಾ.೨೩ರ ಭಾನುವಾರ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಕಾಗದನಗರ, ಉಜ್ಜನೀಪುರ, ದೊಡ್ಡಗೊಪ್ಪೇನಹಳ್ಳಿ, ಹುಡ್ಕೋಕಾಲೋನಿ, ವಿದ್ಯಾಮಂದಿರ, ನ್ಯೂಕಾಲೋನಿ, ಜೆ.ಪಿ.ಎಸ್ ಕಾಲೋನಿ, ಜನ್ನಾಪುರ, ಆನೆಕೊಪ್ಪ ಕುಡಿಯುವ ನೀರಿನ ಸ್ಥಾವರ, ಹೊಸ ಸಿದ್ದಾಪುರ ಕುಡಿಯುವ ನೀರಿನ ಸ್ಥಾವರ, ಬೊಮ್ಮನಕಟ್ಟೆ ಕುಡಿಯುವ ನೀರಿನ ಸ್ಥಾವರ, ಬಾರಂದೂರು, ಭದ್ರಾ ಪ್ಯಾಕೇಟ್ಸ್ ಮಾರ್ಗ, ಮೊಸರಹಳ್ಳಿ, ಕಾರೇಹಳ್ಳಿ, ಬೊಮ್ಮೇನಹಳ್ಳಿ, ಕಾಳಿಂಗನಹಳ್ಳಿ, ಹಡ್ಲಘಟ್ಟ, ಶಿವಪುರ, ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಅಂತರಗಂಗೆ, ಭೋವಿ ಕಾಲೋನಿ, ಗಂಗೂರು, ದೊಡ್ಡೇರಿ, ಉಕ್ಕುಂದ, ದೇವರ ನರಸೀಪುರ, ಕೆಂಚಮ್ಮನ ಹಳ್ಳಿ, ಲಕ್ಷ್ಮೀಪುರ, ದೊಣಬಘಟ್ಟ, ಪದ್ಮೇನಹಳ್ಳಿ, ತಡಸ ಹಿರಿಯೂರು, ಕಾಳನಕಟ್ಟೆ, ಕಂಬದಾಳು ಹೊಸೂರು, ಹೊನ್ನಹಟ್ಟಿ ಹೊಸೂರು, ಅರಳಿಕೊಪ್ಪ, ಕಾಚಗೊಂಡನ ಹಳ್ಳಿ, ಗೊಂದಿ, ಗೊಂದಿ ಕುಡಿಯುವ ನೀರಿನ ಸ್ಥಾವರ, ಶ್ರೀನಿವಾಸಪುರ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಮಾ.೨೩ರಂದು ಸಂಗೀತದಲ್ಲಿ ಸ್ತ್ರೀ ಸಂವೇಧನೆ ವಿನೂತನ ಕಾರ್ಯಕ್ರಮ



    
ಭದ್ರಾವತಿ: ನಗರದ ಭೂಮಿಕಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.೨೩ರಂದು ಸಂಜೆ ೬ ಗಂಟೆಗೆ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಶಿವಮೊಗ್ಗದ ವಿದುಷಿ ಸುರೇಖಾ ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಪುನೀತ್‌ರಾಜ್‌ಕುಮಾರ್ ನಾಡಿನ ಸಾಂಸ್ಕೃತಿಕ ನಾಯಕ : ಕೋಗಲೂರು ತಿಪ್ಪೇಸ್ವಾಮಿ

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಶನಿವಾರ ಭದ್ರಾವತಿ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ: ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್ ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಎರೇಹಳ್ಳಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಬಣ್ಣಿಸಿದರು. 
    ಅವರು ನಗರದ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಶನಿವಾರ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಮಾತನಾಡಿದರು. 
  ಅಂದು ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ಇಡೀ ವಿಶ್ವವೇ ಕಂಬನಿ ಮುಡಿದಿತ್ತು. ಅವರೊಬ್ಬ ಧೀಮಂತ ನಾಯಕರಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಅವರಿಲ್ಲದ ೫೦ನೇ ವರ್ಷದ ಹುಟ್ಟುಹಬ್ಬ ಇಂದು ನಮ್ಮೆಲ್ಲರಿಗೂ ಸಂಕಟದ ದಿನವಾಗಿದೆ. ನಿಜ ಜೀವನದ ಒಬ್ಬ ನಾಯಕನಾಗಿ, ಸೇವಕನಾಗಿ ನಮ್ಮೆಲ್ಲರಿಗೂ ಭೂತಕಾಲ, ವರ್ತಮಾನ ಕಾಲ ಹಾಗು ಭವಿಷ್ಯ ಕಾಲ ೩ ಕಾಲಕ್ಕೂ ಒಪ್ಪುವಂತಹ ಎಂದೆಂದಿಗೂ ಏಕೈಕ ಆದರ್ಶ ವ್ಯಕ್ತಿ ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು. ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕಲಾವಿದರು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.  
    ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನಟರಾಜ್, ಸಂಘದ ಗೌರವ ಸಲಹೆಗಾರ ರಾಜವಿಕ್ರಂ, ಹಿರಿಯ ಕಲಾವಿದ ಜೆ.ಪಿ ನಂಜುಂಡೇಗೌಡ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್  ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  
    ವಿಶೇಷವಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. 
    ಸಂಘದ ಪದಾಧಿಕಾರಿಗಳು, ಕಲಾವಿದರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಲಾವಿದರಿಂದ ಪುನೀತ್‌ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. 

ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ : ಮನವಿ

ಭದ್ರಾವತಿ  ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ  ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
    ಭದ್ರಾವತಿ : ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ  ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಮನವಿ ಮಾಡಿದರು.
  ಅವರು ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ (ಹಳೆಯ ಸರ್ವೆ ನಂಬರ್ ೧೫) ೩ ಎಕರೆ ಜಮೀನನ್ನು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಪ್ರಕಾರ ವೆಂಕಟೇಶ್ ಬಿನ್ ತಿಮ್ಮಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೮/೯೬-೯೭) ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನನ್ನು ನಂಜಮ್ಮ ಬಿನ್ ದೊಡ್ಡಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೫/ ೯೬-೯೭) ಸರ್ಕಾರ ೧೯೯೭ರಲ್ಲಿ ಸಾಗುವಳಿ ಚೀಟಿ ನೀಡಿರುತ್ತದೆ. ವೆಂಕಟೇಶ್ ಹಾಗೂ ನಂಜಮ್ಮ ಅವರ ಹೆಸರಿಗೆ ಜಮೀನಿನ ಖಾತೆ, ಪಹಣಿ ಆಗಿದ್ದು, ಹದ್ದುಬಸ್ತನ್ನೂ ಸಹ ಮಾಡಿಕೊಂಡಿರುತ್ತಾರೆ. ೧೯೯೭ರಿಂದ ವೆಂಕಟೇಶ್ ಹಾಗೂ ನಂಜಮ್ಮ ಅವರ ಕುಟುಂಬದವರೇ ಜಮೀನಿನ ಅನುಭೋಗದಲ್ಲಿದ್ದಾರೆ. ಸರ್ವೆ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನಿನ ಮಾಲೀಕರಾದ ನಂಜಮ್ಮ ಅವರು ಈಚೆಗೆ ವಿಭಾಗ ಪತ್ರದ ಮೂಲಕ ಪುತ್ರಿ ಅನಿತಾ ಹೆಸರಿಗೆ ಜಮೀನಿನ ಖಾತೆ ವರ್ಗಾವಣೆ ಮಾಡಿಕೊಟ್ಟಿರುತ್ತಾರೆ ಎಂದರು.
     ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನನ್ನು ಅಗಸ್ಟ್ ೧೪, ೨೦೨೪ರಂದು ವೆಂಕಟೇಶ್ ಅವರ ಪುತ್ರ ಪ್ರದೀಪ್.ವಿ ಅವರಿಂದ ಪ್ರಸನ್ನ ಕುಮಾರ್ ಕ್ರಯಕ್ಕೆ ಪಡೆದಿರುತ್ತಾರೆ. ಈ ಸಂಬಂಧ  ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಂಆರ್ ಎಚ್೨/೨೦೨೪-೨೫ರಂತೆ ಖಾತೆಯೂ ಆಗಿದೆ. ಇದರ ನಡುವೆ ಫೆಬ್ರುವರಿ ೨೫ರಂದು  ತಾಲೂಕಿನ ಜಿಂಕ್‌ಲೈನ್ ನಿವಾಸಿ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ನಮ್ಮ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಹದ್ದುಬಸ್ತು ಬಾಂದ್ ಕಲ್ಲನ್ನು ಕಿತ್ತುಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ಗೂಂಡಾಗಳನ್ನು ಕರೆತಂದು ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ಜಮೀನಿನೊಳಗೆ ಇಸ್ಪೀಟ್ ಸಹಿತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು. 
    ಈ ಬಗ್ಗೆ ರಕ್ಷಣೆ ಕೋರಿ ಪೊಲೀಸ್ ಇಲಾಖೆಗೂ ದೂರು ನೀಡಲಾಗಿದೆ. ಜಮೀನಿನ ಕ್ರಯ ಪತ್ರ, ನ್ಯಾಯಾಲಯದ ಶಾಶ್ವತ ನಿರ್ಬಂಧಾಜ್ಞೆ ಆದೇಶ ಪ್ರತಿ, ಪಹಣಿ ಸಾಗುವಳಿ ಚೀಟಿ, ಮ್ಯುಟೇಷನ್, ಪೋಡು ನಕ್ಷೆ, ಸರ್ವೆ ಪ್ರತಿ ಸಹಿತ ಅಗತ್ಯ ದಾಖಲೆಗಳೆಲ್ಲವೂ ನಮ್ಮ ಹೆಸರಿನಲ್ಲೇ ಇವೆ. ೨೦೦೪ರಲ್ಲಿ ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಬೋರ್‌ವೆಲ್ ಕೊರೆಸಲಾಗಿದೆ. ಸಣ್ಣ ಹೆಂಚಿನ ಮನೆಯನ್ನೂ ನಿರ್ಮಿಸಲಾಗಿದೆ. ತಹಶೀಲ್ದಾರ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಆದೇಶದಂತೆ ಮಾರ್ಚ್ ೧೮ರಂದು ಭೂಮಾಪಕರು, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಗಡಿ ಗುರುತಿಸಿದ್ದು ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನು ಪ್ರಸನ್ನಕುಮಾರ್ ಬಿನ್ ತಿಮ್ಮಯ್ಯ ಅವರ ಹೆಸರಿನಲ್ಲಿ ಇರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
    ಇಷ್ಟಾದರೂ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಜಮೀನಿಗೆ ನುಗ್ಗಿ ಅನಗತ್ಯ ಕಿರುಕುಳ ನೀಡುತ್ತಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಜಮೀನು ಪ್ರವೇಶ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ  ಸಂಬಂಧಿ ಪಾರ್ವತಮ್ಮ ಉಪಸ್ಥಿತರಿದ್ದರು.

ಆಯುಷ್ಮಾನ್ ಕಾರ್ಡ್ ಯೋಜನೆ ಯಶಸ್ವಿಗೆ ರಾಜ್ಯ ಸರ್ಕಾರ ಆಸಹಕಾರ : ಸಂಸದ ಬಿ.ವೈ ರಾಘವೇಂದ್ರ



ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಸ್ಮಾರ್ಟ್ ಕಾರ್ಡ್ ವಿತರಿಸಿದರು.
    ಭದ್ರಾವತಿ : ಆಯುಷ್ಮಾನ್ ಕಾರ್ಡ್ ೧೬೫೦ಕ್ಕೂ ವಿವಿಧ ತರಹದ ಚಿಕಿತ್ಸೆ, ೯೩೪ ತುರ್ತು ಸಂದರ್ಭದ ಚಿಕಿತ್ಸೆ ಹಾಗು ೧೭ ಅತಿ ತುರ್ತು ಸಂದರ್ಭದ ಚಿಕಿತ್ಸೆಗಳನ್ನು ಒಳಗೊಂಡಿದೆ. ಆದರೆ ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಆರೋಪಿಸಿದರು.
    ಅವರು ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದರು. 
    ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಬಹುದೊಡ್ಡ ಕನಸು ಕಂಡಿದ್ದಾರೆ. ದೇಶದಲ್ಲಿ ಕೋವಿಡ್ ನಂತರ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚಕ್ಕೆ ಕಡಿವಾಣ ಹಾಕಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
    ಕುಟುಂಬದಲ್ಲಿ ಹಿರಿಯರ ಆರೋಗ್ಯ ಮತ್ತು ಯೋಗ ಕ್ಷೇಮ ನೋಡಿಕೊಳ್ಳುವುದು ಕಿರಿಯರ ಜವಾಬ್ದಾರಿಯಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಹಿರಿಯರ ಆರೈಕೆ ಮಾಡುವುದನ್ನು ಕಡೆಗಣಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪ್ರವೃತ್ತಿ ಸಮಾಜದಲ್ಲಿ ತೊಲಗಬೇಕು. ಹಿರಿಯ ಆರೈಕೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.
  ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಯೋಜನೆ ಯಶಸ್ವಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಸಮಾಜದ ಪ್ರತಿಯೊಬ್ಬ ಕಡು ಬಡವನಿಗೂ ಈ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಸದ ರಾಘವೇಂದ್ರರವರು ಈ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.                    
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್ ಮಾತನಾಡಿ, ಸಮಾಜದಲ್ಲಿನ ಮಧ್ಯಮ ವರ್ಗ ಹಾಗು ಶ್ರೀ ಸಾಮನ್ಯರಿಗೆ ಈ ಯೋಜನೆ ವರದಾನವಾಗಿದೆ ಎಂದರು.
    ಯುವ ಮುಖಂಡರಾದ ಜಿ.ಆನಂದ ಕುಮಾರ್, ಟಿ.ಎಸ್ ದುಗ್ಗೇಶ್, ಅಣ್ಣಪ್ಪ, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಮಧುಕರ್ ಕಾನಿಟ್ಕರ್, ದಿನೇಶ್, ಕೆ.ಎಚ್ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಗಜೇಂದ್ರ ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು. ಮಂಗೋಟೆ ರುದ್ರೇಶ್ ಪ್ರಸ್ತಾವಿಕ ನುಡಿಗಳನ್ನಾಡಿ, ಚನ್ನೇಶ್ ಕಾರ್ಯಕ್ರಮ  ನಿರೂಪಿಸಿ, ಆನಂದ್ ವಂದಿಸಿದರು.