Wednesday, September 8, 2021

ವಿನಾಯಕ ಮೂರ್ತಿ ತಯಾರಕರ ಬದುಕಿಗೆ ಕತ್ತರಿ : ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ

ಭದ್ರಾವತಿ ಹಳೇನಗರದ ಕುಂಬಾರರ ಬೀದಿ ನಿವಾಸಿ ಬಸವರಾಜ್ ವಿನಾಯಕ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವುದು.
    ಭದ್ರಾವತಿ, ಸೆ. ೮: ಈ ಬಾರಿ ಕೊರೋನಾ ಸಂಕಷ್ಟದ ನಡುವೆಯೂ ಸರ್ಕಾರ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ  ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಸರ್ಕಾರ ವಿಳಂಬವಾಗಿ ಕೈಗೊಂಡ ನಿರ್ಧಾರದಿಂದಾಗಿ ವಿನಾಯಕ ಮೂರ್ತಿ ತಯಾರಕರು ಅತಂತ್ರರಾಗಿದ್ದಾರೆ.
    ವಿನಾಯಕ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಲವಾರು ಷರತ್ತುಗಳನ್ನು ವಿಧಿಸಿರುವುದು ಮೂರ್ತಿ ತಯಾರಕರ ಸಂಕಷ್ಟಕ್ಕೆ ಕಾರಣವಾಗಿದೆ. ಕೇವಲ ೩ ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರ ನಿರ್ಧಾರ ಕೈಗೊಳ್ಳುವ ಮೊದಲೇ ಗ್ರಾಹಕರ ಬೇಡಿಕೆಯಂತೆ ೬ ರಿಂದ ೫ ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ಮೂರ್ತಿಗಳ ಪ್ರತಿಷ್ಠಾಪನೆಗೆ ಸರ್ಕಾರ ಕೈಗೊಂಡಿರುವ ನಿರ್ಧಾರ ಇದೀಗ ಅಡ್ಡಿಯನ್ನುಂಟು ಮಾಡಿದೆ. ಮತ್ತೊಂದೆಡೆ ಸರ್ಕಾರದ ವಿಳಂಬ ನಿರ್ಧಾರದಿಂದಾಗಿ ಮೂರ್ತಿ ತಯಾರಕರಿಗೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ.


ಭದ್ರಾವತಿ ಹಳೇನಗರದ ಕುಂಬಾರರ ಬೀದಿ ನಿವಾಸಿ ಬಸವರಾಜ್ ಅವರ ಇಬ್ಬರು ಸಹೋದರರು ತಯಾರಿಸಿರುವ ವಿನಾಯಕ ಮೂರ್ತಿಗಳು.
    ಹಳೇನಗರದ ಕುಂಬಾರರ ಬೀದಿಯಲ್ಲಿ ಸುಮಾರು ೬ ಕುಟುಂಬಗಳು ಮೂಲ ಕಸುಬನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದು, ವಿನಾಯಕ ಚತುರ್ಥಿ ಸಂದರ್ಭದಲ್ಲಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಉಳಿದ ಅವಧಿಯಲ್ಲಿ ೬ ಕುಟುಂಬಗಳ ಪೈಕಿ ೩ ಕುಟುಂಬಗಳು ಮಾತ್ರ ಮಡಿಕೆ ತಯಾರಿಕೆಯಲ್ಲಿ ತೊಡಗಿವೆ. ಉಳಿದ ಕುಟುಂಬಗಳು ಮದುವೆ ಕಾರ್ಯಗಳಲ್ಲಿ ಬಳಸುವ ಪೇಟ, ಬೀಸಣಿಗೆ ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ತೊಡಗಿವೆ.
    ಕಳೆದ ಕೆಲವು ವರ್ಷಗಳಿಂದ ಸರ್ಕಾರ ರೂಪಿಸುತ್ತಿರುವ ಹೊಸ ಹೊಸ ಕಾಯ್ದೆಗಳು ಸಹ ಮೂರ್ತಿ ತಯಾರಕರನ್ನು ಅತಂತ್ರರನ್ನಾಗಿಸುತ್ತಿವೆ. ಈ ನಡುವೆ ಕಳೆದ ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಇವರ ವೃತ್ತಿ ಬದುಕು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಈ ನಡುವೆಯೂ ಮೂಲ ವೃತ್ತಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದೊಂದಿಗೆ ಮುನ್ನಡೆಯುತ್ತಿವೆ. ಮೂಲ ವೃತ್ತಿಯನ್ನು ನಂಬಿರುವ ಬಸವರಾಜ್ ಹಾಗು ಇವರ ಇಬ್ಬರು ಸಹೋದರರು ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿಗಳನ್ನು ತಯಾರಿಸಿದ್ದಾರೆ. ಬಸವೇಶ್ವರ ವೃತ್ತದ ಬಳಿ ಇರುವ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ಕಛೇರಿ ಪಕ್ಕದ ಖಾಲಿ ಜಾಗದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಂಡು ಸುಮಾರು ೨-೩ ತಿಂಗಳಿನಿಂದ ಮೂರ್ತಿಗಳ ತಯಾರಿಕೆಯಲ್ಲಿ ಈ ಮೂರು ಸಹೋದರರು ತೊಡಗಿಸಿಕೊಂಡಿದ್ದಾರೆ.
    ಪತ್ರಿಕೆ ಜೊತೆಗೆ ಮಾತನಾಡಿದ ಬಸವರಾಜ್, ಈ ಹಿಂದೆ ಸುಮಾರು ೪೦ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಗ್ರಾಹಕರ ಬೇಡಿಕೆಯಂತೆ ಈ ಬಾರಿ ೫ ರಿಂದ ೬ ಅಡಿ ಎತ್ತರದ ಕೇವಲ ೮ ಮೂರ್ತಿಗಳನ್ನು ಮಾತ್ರ ತಯಾರಿಸಲಾಗಿದೆ. ಇದೀಗ ಈ ಮೂರ್ತಿಗಳ ಪ್ರತಿಷ್ಠಾಪನೆಯೇ ಆಯೋಜಕರಿಗೆ ತಲೆ ನೋವಾಗಿದೆ. ಉಳಿದಂತೆ ಇಬ್ಬರು ಸಹೋದರರು ೩ ಅಡಿ ಎತ್ತರದ ಸುಮಾರು ೩೦ ಮೂರ್ತಿಗಳನ್ನು ಹಾಗು ಉಳಿದಂತೆ ೩ ಅಡಿಗಿಂತ ಕಡಿಮೆ ಎತ್ತರದ ಸುಮಾರು ೩೦೦ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ನಡುವೆ ವರ್ಷದಿಂದ ವರ್ಷಕ್ಕೆ ಮೂರ್ತಿಗಳ ಬೇಡಿಕೆಗಳು ಕಡಿಮೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಬುಧವಾರ ಪೆಂಡಾಲ್ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
       ಪೆಂಡಾಲ್ ನಿರ್ಮಾಣ :
    ಸರ್ಕಾರ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತಿದ್ದಂತೆ ನಗರದ ವಿವಿಧೆಡೆ ವಿವಿಧ ಸಂಘಟನೆಗಳಿಂದ ಪೆಂಡಾಲ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
    ಪ್ರತಿ ವರ್ಷದಂತೆ ಈ ಬಾರಿ ಸಹ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಬುಧವಾರ ಪೆಂಡಾಲ್ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
    ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸಭಾ ಸದಸ್ಯ ವಿ. ಕದಿರೇಶ್, ಸಮಿತಿಯ ಪದಾಧಿಕಾರಿಗಳಾದ ಚನ್ನಪ್ಪ, ಮಣಿ ಎಎನ್‌ಎಸ್, ಕೆ. ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕೇಸರಿಪಡೆ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮಾರುಕಟ್ಟೆಗಳಲ್ಲಿ ಜನ ಸಂದಣಿ:
    ಗುರುವಾರ ಮತ್ತು ಶುಕ್ರವಾರ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ನಗರದ ವಿವಿಧೆದೆ ಮಾರುಕಟ್ಟೆಗಳಲ್ಲಿ ಜನ ಸಂದಣಿ ಹೆಚ್ಚಾಗಿರುವುದು ಕಂಡು ಬಂದಿತು. ವ್ಯಾಪಾರ ವಹಿವಾಟಿ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆ ಅಗತ್ಯಗಳ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿದ್ದಾರೆ.
    ಈ ನಡುವೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಗೌರಿ-ಗಣೇಶ ಹಬ್ಬ ಯಶಸ್ವಿಗಾಗಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.


ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಬಳಿಇರುವ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗಿರುವುದು.

No comments:

Post a Comment