Tuesday, May 17, 2022

ತಾಯಿಯ ನೆನಪಿನಲ್ಲಿ ಟ್ರಸ್ಟ್ ರಚನೆ ಇತರರಿಗೆ ಪ್ರೇರಣೆ : ಸತ್ಯ ಭದ್ರಾವತಿ

ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ.ಇನ್ ಅಂತರ್ಜಾಲ ಸುದ್ದಿ ತಾಣ ಹಾಗು ಸನ್ಮಾನ ಸಮಾರಂಭ ಹಾಗು ಬುದ್ಧ ಪೂರ್ಣಿಮಾ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧೭: ತಾಯಿಯ ನೆನಪಿನಲ್ಲಿ ಟ್ರಸ್ಟ್ ರಚಿಸಿರುವುದು ಇತರರಿಗೆ ಪ್ರೇರಣೆಯಾಗಿದ್ದು, ಇಂತಹ ಕಾರ್ಯಗಳು ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
    ಅವರು ಮಂಗಳವಾರ ನ್ಯೂಟೌನ್ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗು ಪ್ರತಿಕ್ಷಣ.ಇನ್ ಅಂತರ್ಜಾಲ ಸುದ್ದಿ ತಾಣ ಹಾಗು ಸನ್ಮಾನ ಸಮಾರಂಭ ಹಾಗು ಬುದ್ಧ ಪೂರ್ಣಿಮಾ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಕೈಗಾರಿಕಾ ನಗರದಲ್ಲಿ ಈ ರೀತಿಯ ಟ್ರಸ್ಟ್‌ಗಳ ಅವಶ್ಯಕತೆ ಹೆಚ್ಚಿನದ್ದಾಗಿದ್ದು, ಎರಡು ಕೈಗಾರಿಕೆಗಳು ಸ್ಥಗಿತಗೊಂಡು ಉದ್ಯೋಗವಿಲ್ಲದೆ ಸಾಕಷ್ಟು ಜನರು ಹಲವಾರು ತೊಂದರೆಗಳಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರಸ್ಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವಂತಹ ಈ ರೀತಿಯ ಕಾರ್ಯಗಳು ನಿರಂತವಾಗಿ ನಡೆಯಲು ಇತರರು ಸಹ ಸಹಕಾರ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ಮಾದರಿಯಾಗಿವೆ ಎಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಪ್ರಮುಖರಾದ ರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಪತ್ರಿಕಾ ವೃತ್ತಿಯೊಂದಿಗೆ ಸಮಾಜಮುಖಿ ಚಿಂತನೆಗಳೊಂದಿಗೆ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಟ್ರಸ್ಟ್ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಮುನ್ನಡೆಯುವಂತಾಗಲಿ ಎಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಸುಭಾಷ್‌ರಾವ್ ಸಿಂಧ್ಯಾರವರು, ಪತ್ರಕರ್ತ ಅನಂತಕುಮಾರ್ ಕುಟುಂಬದವರೊಂದಿಗೆ ತಾಲೂಕಿನ ಪತ್ರಕರ್ತರೆಲ್ಲರೂ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ಅವರ ತಂದೆ-ತಾಯಿ ಜೊತೆ ಕೆಲವು ದಿನಗಳನ್ನು ಸಂತೋಷದಿಂದ ಕಳೆದಿದ್ದೇವೆ. ಇದೀಗ ತಾಯಿಯವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದರು.
    ಕಾರ್ಯಕ್ರಮದಲ್ಲಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮರಿಯಪ್ಪ, ಪತ್ರಕರ್ತ ಅನಂತಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಭದ್ರಾವತಿ ಪೀಪಲ್ ಲಿಬರೇಷನ್ ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮ್, ಖಜಾಂಚಿ ಮುರುಳಿ ಕೃಷ್ಣ, ಕಾರ್ಯಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷರಾದ ಸಂಪತ್, ಜಿ. ಗೋವಿಂದ, ಕಾರ್ಯದರ್ಶಿಗಳಾದ ಸುನಿಲ್‌ಕುಮಾರ್, ಎನ್. ಲೋಕೇಶ್, ಡಿಎಸ್‌ಎಸ್ ಮುಖಂಡ ದಾಸ್, ಸಹ ಕಾರ್ಯದರ್ಶಿಗಳಾದ ರಾಜು, ಅಜಂತ್‌ಕುಮಾರ್, ರವೀಂದ್ರಪ್ಪ, ಶ್ರೀನಿವಾಸ್, ವೆಂಕಟೇಶ್, ಶ್ರೀಕಾಂತ್, ಸಂತೋಷ್, ಸಂಜೀವರೆಡ್ಡಿ, ಚಂದ್ರಶೇಖರ್, ಹರ್ಷಿತಾ, ರೇಖಾ ಕೆಂಪರಾಜ್, ಮೈತ್ರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  


No comments:

Post a Comment