ನಿರ್ಧಾರ ಕೈಗೊಳ್ಳುವ ಮೊದಲೇ ಹೋರಾಟ ಎಚ್ಚರಿಕೆ
ಭದ್ರಾವತಿ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ.
* ಅನಂತಕುಮಾರ್
ಭದ್ರಾವತಿ : ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡ ತೊಡಗಿದೆ. ಈ ನಡುವೆ ಸ್ಥಳಾಂತರಕ್ಕೆ ಅವಕಾಶ ನೀಡದಂತೆ ಜಾಗೃತಿ ಮೂಡಿಸುವ ಕಾರ್ಯ ಸಹ ನಡೆದಿದೆ.
'ಭದ್ರಾವತಿ ಭಾನುವಾರ ಸಂತೆ' ನಾಡಿನಾದ್ಯಂತ ತನ್ನದೇ ಆದ ಪ್ರಸಿದ್ದಿ ಪಡೆದುಕೊಂಡಿದ್ದು, ಒಂದು ಕಾಲದಲ್ಲಿ ಸಂತೆಗೆ ಹೋಗುವುದೇ ಒಂದು ರೀತಿಯ ಹಬ್ಬದ ಸಂಭ್ರಮವಾಗಿತ್ತು. ನಗರಸಭೆ ಅಸ್ತಿತ್ವಕ್ಕೆ ಬರುವ ಮೊದಲೇ ಪುರಸಭೆ ಅಧೀನದಲ್ಲಿ ಈ ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ತಾಲೂಕಿನ ವಿವಿಧೆಡೆಗಳಿಂದ ರೈತರು, ನಗರ ಪ್ರದೇಶದ ವರ್ತಕರು, ಬೀದಿಬದಿ ವ್ಯಾಪಾರಿಗಳು ನಿರಾಂತಕವಾಗಿ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮ ಮತ್ತು ನಗರ ಪ್ರದೇಶದ ಸಾವಿರಾರು ಜನ ಸಂತೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಕೆಲವು ಕಠಿಣ ಸಂದರ್ಭದ ಸಮಯದಲ್ಲಿ ಮಾತ್ರ ಸಂತೆ ಸ್ಥಗಿತಗೊಂಡಿರುವುದು ಬಿಟ್ಟರೇ ಉಳಿದಂತೆ ಯಾವುದೇ ಕಾರಣಕ್ಕೂ ಸಂತೆ ಸ್ಥಗಿತಗೊಂಡಿರುವ ಉದಾಹರಣೆಗಳಿಲ್ಲ. ದವಸ ಧಾನ್ಯ, ತರಕಾರಿ, ತಿಂಡಿತಿನಿಸುಗಳು, ಕುರಿ, ಕೋಳಿ, ಕೃಷಿ ಪರಿಕರಗಳು, ಗೃಹಪಯೋಗಿ ಬಳಕೆ ವಸ್ತುಗಳ ವ್ಯಾಪಾರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಜನರು ೧ ವಾರಕ್ಕೆ ಅಗತ್ಯವಿರುವಷ್ಟನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ನಗರದ ವಿಐಎಸ್ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕ ಕುಟುಂಬ ವರ್ಗದವರು ಈ ಸಂತೆಯನ್ನು ಅವಲಂಬಿಸಿದ್ದರು.
ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿಯುತ್ತಿದ್ದಂತೆ ಸಂತೆ ಸಹ ತನ್ನ ವೈಭವ ಕಳೆದುಕೊಂಡಿದೆ. ಈ ನಡುವೆ ಈ ಜಾಗದಲ್ಲಿ ಹಂತ ಹಂತವಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ವಿಶಾಲವಾದ ಜಾಗ ಕಿರಿದಾಗ ತೊಡಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು ೨೭ ಲಕ್ಷ ರು. ವೆಚ್ಚದಲ್ಲಿ ರೈತರ ಸಂತೆ ಕಟ್ಟಡ ನಿರ್ಮಿಸಿದ್ದು, ಪ್ರಸ್ತುತ ಅಂಗನವಾಡಿವಾಗಿ ಮಾರ್ಪಾಡಾಗಿದೆ. ಸುಮಾರು ೧೫ ವರ್ಷಗಳ ಹಿಂದೆ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ. ಈ ಕಟ್ಟಡದಿಂದ ನಗರಸಭೆಗೆ ಯಾವುದೇ ಆದಾಯ ಬರುತ್ತಿಲ್ಲ. ಈ ಕಟ್ಟಡದ ಸಮೀಪದಲ್ಲಿಯೇ ಕೆಲವು ವರ್ಷಗಳ ಹಿಂದೆ ನಗರಸಭೆ ಪಂಪ್ಹೌಸ್ ನಿರ್ಮಿಸಲಾಗಿದೆ. ಮತ್ತೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಇನ್ನೊಂದು ಕಡೆ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ಈ ನಡುವೆ ಬೃಹತ್ ನೀರಿನ ಟ್ಯಾಂಕ್ ಸಹ ನಿರ್ಮಾಣಗೊಂಡಿದೆ. ಈ ಹಿಂದೆ ಈ ಜಾಗದಲ್ಲಿಯೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಪ್ರಸ್ತಾಪ ಸಹ ಮಾಡಲಾಗಿತ್ತು. ಅಲ್ಲದೆ ಅಂಬೇಡ್ಕರ್ ಭವನ ನಿರ್ಮಿಸುವ ಸಂಬಂಧ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇವು ಕಾರ್ಯಗತಗೊಳ್ಳಲಿಲ್ಲ. ಇದೀಗ ನಗರಸಭೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡ ತೊಡಗಿದೆ.
ಕಳೆದ ೩ ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಂತೆ ಸ್ಥಳಾಂತರಿಸುವ ಸಂಬಂಧ ರೈತರು ಮತ್ತು ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಅವಕಾಶ ನೀಡದೆ ಹೋರಾಟ ನಡೆಸುವಂತೆ ಕರೆ ನೀಡಲಾಯಿತು.
ಒಂದು ವೇಳೆ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಂಡಲ್ಲಿ ಅನುಕೂಲಕ್ಕಿಂತ ಅನಾಕೂಲವೇ ಹೆಚ್ಚು. ರೈತರು, ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ. ಈ ನಡುವೆ ನಗರಸಭೆ ಸಾಮಾನ್ಯಸಭೆಯಲ್ಲಿ ಹಳೇ ಸಂತೆಮೈದಾನ ಸ್ಥಳಾಂತರಿಸುವ ವಿಚಾರ ಇದುವರೆಗೂ ಪ್ರಸ್ತಾಪವಾಗಿಲ್ಲ. ಆದರೆ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ತೆರೆಮರೆಯಲ್ಲಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಯಾವುದೇ ಕಾರ್ಯವನ್ನು ಕದ್ದುಮುಚ್ಚಿ ಅಥವಾ ತರಾತುರಿಯಲ್ಲಿ ಕೈಗೊಳ್ಳುವುದಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ. ಪ್ರಸ್ತುತ ಇರುವ ಕಟ್ಟಡವನ್ನು ವಿಸ್ತರಿಸುವುದರಿಂದ ಮುಂದೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಹೊಸ ಜಾಗ ಹುಡುಕಾಟ ನಡೆಸಲಾಗಿದೆ. ಹಳೇಸಂತೆಮೈದಾನ ಜಾಗ ಪ್ರಸ್ತಾಪವಾಗಿದೆ ಹೊರತು ಸ್ಥಳಾಂತರಿಸುವ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
- ಎಚ್.ಎಂ ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
------------------------------------------------------------------------------------------
ಹಳೇ ಸಂತೆಮೈದಾನ ಪುರಸಭೆ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಗ್ರಾಮೀಣ ಹಾಗು ನಗರ ಭಾಗದ ರೈತರು, ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾಗದಲ್ಲಿ ನಗರಸಭೆಗೆ ಆದಾಯವಿಲ್ಲದ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಮತ್ತೊಂದೆಡೆ ವಿಶಾಲವಾದ ಜಾಗ ಕಿರುದಾಗುತ್ತಿದೆ. ಈ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತವಲ್ಲ.
- ಆರ್. ಕರುಣಾಮೂರ್ತಿ, ಮಾಜಿ ಅಧ್ಯಕ್ಷರು, ನಗರಸಭೆ, ಭದ್ರಾವತಿ.
--------------------------------------------------------------------------------------------------
ರೈತರು, ವ್ಯಾಪಾರಸ್ಥರು ಕಂದಾಯ ಪಾವತಿಸಿದರೂ ಸಹ ಈ ಜಾಗದಲ್ಲಿ ನಗರಸಭೆ ವತಿಯಿಂದ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಆದರೂ ಸಹ ಸಂಕಷ್ಟದಲ್ಲಿಯೇ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಈ ಜಾಗವನ್ನು ಸ್ಥಳಾಂತರಿಸುವ ಹುನ್ನಾರ ನಡೆಸಲಾಗುತ್ತಿದೆ. ಎಲ್ಲರೂ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ.
- ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ, ಭದ್ರಾವತಿ.
ಸುಮಾರು ೧೫ ವರ್ಷಗಳ ಹಿಂದೆ ಭದ್ರಾವತಿ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ.
No comments:
Post a Comment