Wednesday, February 1, 2023

ಫೆ.೫ರಂದು ಬೌದ್ಧ ವಿಹಾರ ಲೋಕಾರ್ಪಣೆ ಸಮಾರಂಭ

ಭದ್ರಾವತಿಯಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಭದ್ರಾವತಿ, ಫೆ. ೧:  ಭಗವಾನ್ ಬುದ್ಧ ಏಷ್ಯಾ ಖಂಡದ ಬೆಳಕು ಮಾತ್ರವಲ್ಲ ಜಗತ್ತಿನ ಬೆಳಕು, ಶಾಂತಿಯ ದೂತ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿ, ಇವರ ಬೋಧನೆಗಳಾದ ಪ್ರೀತಿ, ಕರುಣೆ, ಮೈತ್ರಿ, ಸಹೋದರತ್ವ ಹಾಗೂ ಸತ್ಯ, ಅಹಿಂಸೆ, ಸಮಾನತೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಮಾನವನ ನೆಮ್ಮದಿಗೆ ತಿಸರಣ, ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳನ್ನು ಸಮಾಜಕ್ಕೆ ಪ್ರಚುರಪಡಿಸಬೇಕಾಗಿದೆ. ಈ ಉದ್ದೇಶವನ್ನಿಟ್ಟುಕೊಂಡು ನಗರದಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
  ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್‌ರವರು ಹೊಸನಂಜಾಪುರದಲ್ಲಿ ತಮ್ಮ ಸ್ವಂತ ೨ ಎಕರೆ ಜಮೀನು ಬೌದ್ಧ ವಿಹಾರಕ್ಕೆ ದಾನವಾಗಿ ನೀಡಿದ್ದಾರೆ. ಈ ಜಮೀನಿನಲ್ಲಿ ಸರ್ಕಾರ ಹಾಗು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸದೆ ಟ್ರಸ್ಟ್ ವತಿಯಿಂದ ೧೫ ಲಕ್ಷ ರು. ವೆಚ್ಚದಲ್ಲಿ ಬೌದ್ಧ ವಿಹಾರ ನಿರ್ಮಿಸಲಾಗಿದೆ. ೩ ಅಡಿ ಎತ್ತರದ ಭಗವಾನ್ ಬುದ್ಧ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಈ ವಿಹಾರ ಧ್ಯಾನ, ಪ್ರಾರ್ಥನೆ ಸೇರಿದಂತೆ ಜ್ಞಾನಾರ್ಜನೆಗೆ ಪೂರಕವಾದ ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆಯಾಗಬೇಕೆಂಬುದು ಟ್ರಸ್ಟ್ ಉದ್ದೇಶವಾಗಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಬಿ.ಕೆ  ಸಂಗಮೇಶ್ವರ್ ವಿಹಾರ ಲೋಕಾರ್ಪಣೆಗೊಳಿಸಲಿದ್ದು, ಚೇತವನ ಬುದ್ಧವಿಹಾರ, ಕೊಳ್ಳೇಗಾಲದ ಭಂತೆ ಸುಗತ ಪಾಲರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿವೆ.   ಈ ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.  ಬೌದ್ದ ದಮ್ಮದಲ್ಲಿ ಅಸಕ್ತಿಯಿರುವವರೆಲ್ಲರೂ ಭಾಗವಹಿಸುವಂತೆ ಕೋರಿದರು.
    ಟ್ರಸ್ಟ್ ಕಾರ್ಯಕಾರಿ ಮಂಡಳಿ ಪ್ರಮುಖರಾದ ಲಕ್ಷ್ಮಣ್, ಸುರೇಶ್, ಡಿ. ನರಸಿಂಹಮೂರ್ತಿ, ಎ. ತಿಪ್ಪೇಸ್ವಾಮಿ, ಕೃಷ್ಣ ಛಲವಾದಿ ಮತ್ತು ಧರ್ಮರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment