೨೫ ಜೂನ್, ಅಂತರರಾಷ್ಟ್ರೀಯ ಶಸ್ತ್ರಚಿಕಿತ್ಸಾ ತಜ್ಞರ ದಿನ. ಇದು ಶಸ್ತ್ರಚಿಕಿತ್ಸಾ ತಜ್ಞರು ಸಂಭ್ರಮಿಸುವ ದಿನವಾದರೂ ಸಮಾಜಕ್ಕೆ ಇವರ ಕುರಿತ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ. ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೋ ಅವರೆಲ್ಲ ಶಸ್ತ್ರಚಿಕಿತ್ಸಕರೆಂದು ಕರೆಸಿಕೊಳ್ಳುತ್ತಾರೆ. ಸುಶ್ರುತರು ದೇಶದ ಮೊದಲ ಶಸ್ತ್ರಚಿಕಿತ್ಸಕ(ಸರ್ಜನ್), ಕ್ರಿ.ಪೂ ೮೦೦ರಲ್ಲಿ ಅವರು ಬರೆದಿರುವ ಸುಶ್ರುತ ಸಂಹಿತೆ ಇಂದಿಗೂ ಉಪಯುಕ್ತವಾಗಿದೆ.
ಶಸ್ತ್ರಚಿಕಿತ್ಸಕ ಎಂದರೆ ಸಾಮಾನ್ಯ ಶಸ್ತ್ರಚಿಕಿತ್ಸಕರು, ಹೆರಿಗೆ, ಮೂಳೆ, ಕಿವಿ-ಮೂಗು-ಗಂಟಲು, ನೇತ್ರ ತಜ್ಞರು, ಕ್ಯಾನ್ಸರ್, ಕಿಡ್ನಿ ಹಾಗೂ ಮೂತ್ರ ರೋಗದ ತಜ್ಞರು, ನರ, ಹೃದಯ, ಜಠರ ಹಾಗೂ ಕರಳಿನ ತಜ್ಞರು, ದಂತ ತಜ್ಞರು ಹೀಗೆ ನಾನಾ ವಿಶೇಷತೆಯುಳ್ಳ ತಜ್ಞರುಗಳೆಲ್ಲ ಪಟ್ಟಿಯಲ್ಲಿ ಬರುತ್ತಾರೆ. ಈ ಎಲ್ಲಾ ತಜ್ಞರುಗಳಿಗೂ ಅರವಳಿಕೆ ತಜ್ಞರ ಸಹಾಯ ಹಾಗೂ ಸಹಕಾರ ಬಹಳ ಮುಖ್ಯ. ಎಂತಹ ಶಸ್ತ್ರಚಿಕಿತ್ಸೆ ಮಾಡಿ ಹೆಸರು ಮಾಡಿದರೂ ಅದರ ಹಿಂದೆ ಅರಿವಳಿಕೆ ತಜ್ಞರು ಬೆನ್ನೆಲುಬಾಗಿ ಇದ್ದೇ ಇರುತ್ತಾರೆ. ಹಾಗೇಯೇ, ಶಸ್ತ್ರಚಿಕಿತ್ಸಕರು ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಇನ್ನಿತರ ವಿಶೇಷ ಪರಿಣಿತರ ಸಹಕಾರ ಬಹಳ ಮುಖ್ಯ. ಫಿಸಿಷಿಯನ್, ಹೃದಯ, ಮಕ್ಕಳ ತಜ್ಞರು ಹಾಗೂ ಇನ್ನಿತರರ ಸಹಾಯ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ತಯಾರು ಮಾಡಲು ಇವರೆಲ್ಲರ ಸಹಕಾರ ಬಹಳ ಮುಖ್ಯ.
ಮೊದಲೆಲ್ಲ ಸಿಟಿ ಸ್ಕ್ಯಾನ್, ಹೊಟ್ಟೆ ಸ್ಕ್ಯಾನಿಂಗ್, ರಕ್ತ ನಾಳಗಳ ಸ್ಕ್ಯಾನಿಂಗ್, ಪಿಇಟಿ ಸ್ಕ್ಯಾನಿಂಗ್ ಇನ್ನಿತರ ಅತ್ಯಾಧುನಿಕ ಉಪಕರಣಗಳು ಇರದಿದ್ದ ಕಾಲದಲ್ಲಿ ಶಸ್ತ್ರಚಿಕಿತ್ಸಕರಿಗೆ ಬಹಳ ಕಠಿಣವಾದ ದಿನಗಳಿದ್ದವು. ಡಯಾಗ್ನೊಸಿಸ್ ಒಂದಾಗಿದ್ದರೆ ಒಳಗಡೆ ಖಾಯಿಲೆ ಇನ್ನೊಂದು ಆಗಿರುತಿತ್ತು. Chest is a music box and Abdomen is a magic box ಅನ್ನುವ ಮಾತಿತ್ತು. ಇತ್ತೀಚಿನ ದಿನಗಳಲ್ಲಿ ಆಧುನಿಕ ಉಪಕರಣಗಳು ಬಂದ ಮೇಲೆ ರೋಗಿಗಳಿಗೆ ಸರಿಯಾದ ಡಯಾಗ್ನೊಸಿಸ್ ಹಾಗೂ ಚಿಕಿತ್ಸೆ ಕೊಡಲು ಸಾದ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲವೊಮ್ಮೆ ಕ್ಲಿಷ್ಟಕರವಾದ ಸಮಯದಲ್ಲಿ ಶಸ್ತ್ರ ಚಿಕಿತ್ಸಕರು ಹೆಣಗಾಡಬೇಕಾಗುತ್ತೆ.
ಎಷ್ಟೇ ಅನುಭವ ಇರುವ ಶಸ್ತ್ರಚಿಕಿತ್ಸಕ ಆಗಿದ್ದರೂ ಪ್ರತೀ ರೋಗಿಗೂ ಅವನು ಅಷ್ಟೇ ಕಾಳಜಿ ಕೊಡಬೇಕಾಗುತ್ತೆ. ಪ್ರತೀ ರೋಗಿಯಲ್ಲೂ ಏನಾದರೂ ಹೊಸ ಅನುಭವ ಆಗುತ್ತಲೇ ಇರುತ್ತದೆ. ನಾನು ಸಾವಿರಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇನೆಂದು ಅಹಂಕಾರ ಪಡುವ ಹಾಗಿಲ್ಲ ಹಾಗೂ ಪ್ರತೀ ಶಸ್ತ್ರಚಿಕಿತ್ಸೆ ಪ್ರಾರಂಬಿಸುವಾಗ ಶಸ್ತ್ರಚಿಕಿತ್ಸಕರ ಹೃದಯ ಬಡಿತ ಹೆಚ್ಚಾಗುತ್ತೆ. ಆಮೇಲೆ ಸರಿಯಾಗುತ್ತೆ. ಏಕೆಂದರೆ ನಾವು ಕೆಲಸ ಮಾಡುತ್ತಿರುವ ವ್ಯಕ್ತಿಯ ಜೀವ ಬಹುಮುಖ್ಯ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಬವಿಸುವ ಭಯ ನಮ್ಮೊಳಗೆ ಇದ್ದೇ ಇರುತ್ತೆ. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಒಂದೆರಡು ಹನಿ ರೋಗಿಯ ರಕ್ತ ಹೋದರೂ ಶಸ್ತ್ರಚಿಕಿತ್ಸಕರ ದೇಹದಿಂದ ಅಷ್ಟೇ ಬೆವರು ಇಳಿದಿರುತ್ತೆ.
೨೫ ಜೂನ್, ಅಂತರರಾಷ್ಟ್ರೀಯ ಶಸ್ತ್ರಚಿಕಿತ್ಸಾ
ತಜ್ಞರ ದಿನದ ಅಂಗವಾಗಿ ಲೇಖನ
ಶಸ್ತ್ರಚಿಕಿತ್ಸೆ ಅಂದರೆ ಅದಕ್ಕೆ ಬಹಳಷ್ಟು ತಯಾರಿ ಇರಬೇಕು. ಒಳ್ಳೆಯ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ಅರಿವಳಿಕೆ ಯಂತ್ರೋಪಕರಣಗಳು, ಎಲ್ಲಾ ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳು(ಅನಿರೀಕ್ಷಿತವಾಗಿ ಬರುವ ಅಪಾಯಗಳಿಗೂ ಮುಂಜಾಗ್ರತೆ), ಕೆಲವೊಮ್ಮೆ ರಕ್ತದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತೆ. ಒಟ್ಟಿನಲ್ಲಿ ರೋಗಿಯ ಜೀವಕ್ಕೆ ಅಪಾಯವಾಗದ ಹಾಗೆ, ರೋಗಿಗೆ ಸೋಂಕು ಆಗದಂತೆ ಮುನ್ನಚ್ಚರಿಕೆ ಬಹಳ ಮುಖ್ಯ. ಅದಕ್ಕೆ ಓಟಿ ಸಿಬ್ಬಂದಿಗಳು ಬಹಳಷ್ಟು ಎಚ್ಚರಿಕೆಯಿಂದ ರೋಗಿಗೆ ಸೋಂಕು ಆಗದಂತೆ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತೆ. ಒಂದು ಶಸ್ತ್ರಚಿಕಿತ್ಸೆ ಆದಮೇಲೆ ಇನ್ನೊಂದು ಶಸ್ತ್ರಚಿಕಿತ್ಸೆಗೆ ಅಷ್ಟೇ ವೇಗವಾಗಿ ಕೊಠಡಿ ಸಜ್ಜುಗೊಳಿಸಬೇಕು. ಶಸ್ತ್ರಚಿಕಿತ್ಸೆ ಶಸ್ತ್ರಚಿಕಿತ್ಸಕ ಒಬ್ಬನೇ ಮಾಡಲು ಸಾದ್ಯವಿಲ್ಲ, ಅದಕ್ಕೆ ನುರಿತ ಶುಶ್ರೂಷಕ ಅಥವಾ ಶುಶ್ರೂಷಕಿಯರ ಉಪಸ್ಥಿತಿ ಬಹಳ ಮುಖ್ಯ. ಅವರು ಸರಿಯಾಗಿ ಸಹಕಾರ ನೀಡಿದ್ದಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಸರಾಗವಾಗಿ ನೆಡೆಯಬಲ್ಲದು. ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞರು ಬಹಳ ಕಡೆ ಸಿಗುವುದು ಕಷ್ಟ. ಅವರಿದ್ದರೆ ಇನ್ನೂ ಸಹಾಯಕ್ಕೆ ಬರ್ತಾರೆ. ಕೊಠಡಿಯ ಸ್ವಚ್ಚತಾ ಕೆಲಸ ಬಹಳ ಮುಖ್ಯ ಅದಕ್ಕೆಲ್ಲಾ ಕೊಠಡಿ ಶಿಷ್ಟಾಚಾರಗಳು ಇರುತ್ತವೆ. ಶಸ್ತ್ರಚಿಕಿತ್ಸೆಗೂ ಮೊದಲು ಆಕ್ಸಿಜನ್ ಹಾಗೂ ಇನ್ನಿತರ ಅನಿಲಗಳ ಪರಿಶೀಲಿಸಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಬಹಳಷ್ಟು ತಯಾರಿ ಇರಬೇಕು. ಒಮ್ಮೆ ಶಸ್ತ್ರಚಿಕಿತ್ಸೆ ಆರಂಭಗೊಂಡರೆ ಕೊಠಡಿಯಲ್ಲಿ ಎಲ್ಲಾ ವ್ಯವಸ್ಥಿತವಾಗಿರಬೇಕು. ಏಕೆಂದರೆ ರೋಗಿಯ ಜೀವ ಹಾಗೂ ಜೀವನ ಬಹು ಮುಖ್ಯ.
ಒಬ್ಬ ವ್ಯಕ್ತಿ ತನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳಬೇಕೆಂದರೆ ಅವನಿಗೆ ವೈದ್ಯನ ಮೇಲೆ ಅಪಾರವಾದ ನಂಬಿಕೆ ಇರಬೇಕು ಮತ್ತು ನಂಬಿಕೆ ಇರುತ್ತೆ ಕೂಡ. ರೋಗಿಯು ನಾಲ್ಕಾರು ಜನರಲ್ಲಿ ವಿಚಾರಿಸಿ ಹಾಗೂ ಇತರೆ ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸಕರ ಹತ್ತಿರ ಬರುವುದು ಸಾಮಾನ್ಯ. ಆಗ ಶಸ್ತ್ರಚಿಕಿತ್ಸಕ ಕೂಡ ತನ್ನೆಲ್ಲಾ ಅನುಭವ ಹಾಗೂ ನಿಪುಣತೆ ಉಪಯೋಗಿಸಿ ಚಿಕಿತ್ಸೆ ಕೊಡಲು ಪ್ರಯತ್ನಿಸುತ್ತಾನೆ. ಒಮ್ಮೊಮ್ಮೆ ಕೆಲವು ಕಣ್ಣಿಗೆ ಕಾಣದ ಅಥವಾ ಅನಿರೀಕ್ಷಿತ ಆಘಾತಕಾರಿ ಘಟನೆಯು ಸಂಭವಿಸಿದಾಗ ವೈದ್ಯರ ಮೇಲೆ ಆರೋಪಿಸೋದು ಸರ್ವೇಸಾಮಾನ್ಯ. ಅವರವರ ವಿಶೇಷತೆಗೆ ತಕ್ಕ ಹಾಗೆ ಕೆಲಸದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ವಿಪರೀತವಾಗಿ ಇರುತ್ತೆ. ಎಷ್ಟೇ ಕಷ್ಟಕರವಾದ ಶಸ್ತ್ರಚಿಕಿತ್ಸೆ ಮಾಡಿದ್ರೂ ಒಮ್ಮೆ ರೋಗಿಯು ಗುಣಮುಖವಾದಲ್ಲಿ ಎಲ್ಲಾ ಕಷ್ಟಗಳು ಮರೆತು ಹೋಗುತ್ತೆ.
ನಮ್ಮ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಅವಿಷ್ಕಾರಗಳಾಗಿದ್ದು, ಇನ್ನೂ ಹೆಚ್ಚಿನ ಅವಿಷ್ಕಾರಗಳಾಗುತ್ತಿವೆ. ಜನರಿಗೆ ಬಹಳ ಸರಳವಾಗಿ ಚಿಕಿತ್ಸೆ ಸಿಗುತ್ತಿದೆ. ಲ್ಯಾಪರೊಸ್ಕೋಪ್, ಎಂಡೋಸ್ಕೋಪ್, ಲೇಸರ್ ಹಾಗೂ ಕಾಟರಿ(ಹಾರ್ಮೋನಿಕ್) ಇನ್ನೂ ಹಲವು ಅತ್ಯಾಧುನಿಕ ಉಪಕರಣಗಳು ಶಸ್ತ್ರಚಿಕಿತ್ಸೆಯಲ್ಲಿ ಬಹಳ ದೊಡ್ಡ ಅವಿಷ್ಕಾರ. ಒಂದು ಸಣ್ಣ ಪೆನ್ಸಿಲ್ ಗಾತ್ರದ ಉಪಕರಣ ಹೊಟ್ಟೆ, ಕೀಲು, ಬೆನ್ನೆಲುಬು ಹಾಗೂ ಎದೆ ಒಳಗೆ ತೂರಿಸಿ ಟಿವಿ ಪರದೆ ಮೇಲೆ ನೋಡಿಕೊಂಡು ಬಹಳಷ್ಟು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಬಹಳ ಸುಲಭವಾಗಿ ಮಾಡಬಹುದಾಗಿದೆ. ಇದಕ್ಕೆ ಬಹಳ ತರಬೇತಿ, ನಿಪುಣತೆ, ಜಾಣ್ಮೆ ಹಾಗೂ ತಾಳ್ಮೆಬೇಕು.
ಇದೆಲ್ಲದರ ಮಧ್ಯೆ ಶಸ್ತ್ರಚಿಕಿತ್ಸಕರಿಗೆ ವಿಶೇಷವಾದ ಸಮಸ್ಯೆಗಳಿವೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಆರಂಭವಾದಾಗ ಅನಿರೀಕ್ಷಿತವಾಗಿ ಸಮಯ ಮಿತಿಮೀರಬಹುದು. ಊಟ ತಿಂಡಿ ಸಮಯಕ್ಕೆ ಸರಿಯಾಗಿ ಮಾಡಲು ಆಗದೆ ಇರಬಹುದು. ಇದರಿಂದ ಆರೋಗ್ಯ ಕೆಡಬಹುದು. ಕೆಲವೊಮ್ಮೆ ರೋಗಿಯಿಂದ ಶಸ್ತ್ರಚಿಕಿತ್ಸಕರಿಗೆ ವೈರಸ್ ರೋಗ ಹರಡಬಹುದು (ಬಹಳಷ್ಟು ಉದಾಹರಣೆಗಳಿವೆ). ಶಸ್ತ್ರ ಚಿಕಿತ್ಸಕರು ಬಹಳಷ್ಟು ಹೊತ್ತು ನಿಲ್ಲಬೇಕಾದ್ದರಿಂದ ಕೆಲವೊಮ್ಮೆ ವೆರಿಕೋಸ್ ಖಾಯಿಲೆಯಿಂದ ಬಳಲಬೇಕಾಗುತ್ತದೆ. ಶಸ್ತ್ರಚಿಕಿತ್ಸಕರಿಗೆ ಬೇರೆ ವೈದ್ಯರ ಹೋಲಿಕೆ ಮಾಡಿದ್ದಲ್ಲಿ ವಿಪರೀತವಾದ ಒತ್ತಡ ಇರುತ್ತದೆ. ಇದರಿಂದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗಳಿಗೆ ತುತ್ತಾಗಬಹುದು. ಹಗಲು ರಾತ್ತಿ ಎನ್ನದೆ ಯಾವಾಗ ಬೇಕಾದರೂ ತುರ್ತು ಕರೆ ಬರಬಹುದು. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿರೀಕ್ಷಿತವಾಗಿ ಆಘಾತಕಾರಿ ಘಟ್ಟಕ್ಕೆ ತಲುಪಬಹುದು. ಇದರಿಂದ ವೈಯಕ್ತಿಕ ಬದುಕು ಕೂಡ ಹಾಳಾಗಬಹುದು. ಇದಕ್ಕೆಲ್ಲ ಕುಟುಂಬದ ಸಹಕಾರ ಬಹಳ ಮುಖ್ಯ. ಕೆಲವೊಮ್ಮೆ ರೋಗಿಯು ಶಸ್ತ್ರಚಿಕಿತ್ಸೆ ಮುಗಿದ ನಂತರ ಯಾವುದೋ ಇತರ ರೋಗದಿಂದ ಅಕಸ್ಮಾತ್ ಮರಣ ಹೊಂದಿದರೆ ವೈದ್ಯ ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಇದರಿಂದ ಸಂಪೂರ್ಣ ಹೊರಬರಲು ಬಹಳಷ್ಟು ಸಮಯ ಬೇಕಾಗಬಹುದು. ಕೆಲವೊಮ್ಮೆ ಕೆಲವರು ಶಸ್ತ್ರಚಿಕಿತ್ಸಕ ವೃತ್ತಿಯನ್ನೇ ಬಿಟ್ಟಿರುವ ಉದಾಹರಣೆ ಇವೆ.
ಶಸ್ತ್ರಚಿಕಿತ್ಸಕ ಆಗ ಬೇಕಾದರೆ LADIES FINGER ,EAGLE'S EYE AND LIONS HEART ಇರಬೇಕು ಅನ್ನೋ ಮಾತಿದೆ. ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ತೆಗೆದು ಗಾಯ ಒಣಗಿದ ಮೇಲೆ ಎಲ್ಲಾವೂ ಮುಗಿಯುವುದಿಲ್ಲ. ರೋಗಿಯು ತನ್ನ ಮುಂದಿನ ಆಗು ಹೋಗು ಗಳಿಗೂ ಶಸ್ತ್ರಚಕಿತ್ಸಕ ಕಾರಣ ಅನ್ನೋ ಅಭಿಪ್ರಾಯಕ್ಕೆ ಬರಬಹುದು. ಎಷ್ಟೋ ಕಷ್ಟಕರವಾದ ಶಸ್ತ್ರಚಿಕಿತ್ಸೆ ಮುಗಿದ ನಂತರ ಕೊಠಡಿಯಿಂದ ಶಸ್ತ್ರಚಿಕಿತ್ಸಕ ಹೊರಬಂದ ಮೇಲೆ ರೋಗಿಯ ಕಡೆಯವರಿಗೆ ಮನಸ್ಸಿನಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ ಎಷ್ಟು ಹೊಲಿಗೆ ಹಾಕಿರಬಹುದು? ಕೆಲವೊಮ್ಮೆ ಅತೀ ಬುದ್ದಿವಂತರು ಎಲ್ಲಾ ಸರ್ಜರಿಯನ್ನು ಲ್ಯಾಪರೊಸ್ಕೋಪಿಕ್ನಲ್ಲಿ ಬಯಸುತ್ತಾರೆ.
ಗ್ರಾಮಾಂತರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ಕೆಲಸ ಮಾಡುವ ಶಸ್ತ್ರಚಿಕಿತ್ಸಕರುಗಳಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ತುರ್ತು ಸಮಯದಲ್ಲಿ ಇನ್ನೊಬ್ಬ ಶಸ್ತ್ರಚಿಕಿತ್ಸಕ ಸಹಾಯಕ್ಕೆ ಬೇಕಾದಾಗ ಬಹಳ ಕಷ್ಟವಾಗುತ್ತೆ. ದೊಡ್ಡ ಪಟ್ಟಣಗಳಲ್ಲಿ ಇರುವ ಉಪಕರಣಗಳು ಹಾಗೂ ವ್ಯವಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಸಿಗುವುದು ಕಷ್ಟ.ನಮ್ಮಲ್ಲಿ ಎಷ್ಟೋ ಬಾರಿ ಇರುವ ವ್ಯವಸ್ಥೆಯಲ್ಲೇ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿರುವ ಉದಾಹರಣೆಗಳಿವೆ.
ನಾನೊಬ್ಬ ಶಸ್ತ್ರಚಿಕಿತ್ಸಕ ಎನ್ನಲು ಹೆಮ್ಮೆ ಇದೆ. ಪ್ರತಿಯೊಬ್ಬ ಶಸ್ತ್ರಚಿಕಿತ್ಸಕನಿಗೂ ಕೆಲವೊಂದು ಸನ್ನಿವೇಶದಲ್ಲಿ ಏಕಾದರೂ ನಾನು ಶಸ್ತ್ರಚಿಕಿತ್ಸಕ ಆದೆನೋ ಅನ್ನೋ ಮನೋಭಾವ ಮನಸ್ಸಲ್ಲಿ ಬಂದು ಹೋಗಿರುತ್ತೆ. ರೋಗಿಯು ಗುಣವಾದ ಮೇಲೆ ನಗು ಮುಖ ನೋಡಿದಾಗ ಎಲ್ಲಾ ಮರೆತು ಹೋಗುತ್ತೆ. ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ತರಹ ಓಟಿ ವೈರಾಗ್ಯ ಕೂಡ ಕ್ಷಣಿಕ.
ನಮ್ಮ ಶಸ್ತ್ರಚಿಕಿತ್ಸಕರ ಸಂಘ (ASI) ರಾಷ್ಟ್ರ ಮಟ್ಟದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಯುವ ಶಸ್ತ್ರಚಿಕಿತ್ಸಕರಿಗೆ ನಿರಂತರ ಕಾರ್ಯಾಗಾರಗಳ ಮೂಲಕ ತರಬೇತಿ ನೀಡುತ್ತಿದ್ದು, ಸಮಾಜಕ್ಕೆ ಬಹಳಷ್ಟು ಉಪಯೋಗವಾಗಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದಲ್ಲಿ ನಮ್ಮ ಸಂಘ ( KSC ASI) ಉತ್ತಮರ ಸಾರಥ್ಯದಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿದಾನಗಳನ್ನ ಕಾಲಕಾಲಕ್ಕೆ ಉಣಬಡಿಸುತ್ತಿದೆ. ಜೂನ್ ೨೫ರ ಶಸ್ತ್ರಚಿಕಿತ್ಸಕರ ದಿನಾಚರಣೆ ಪರವಾಗಿ ಎಲ್ಲಾ ಶಸ್ತ್ರಚಿಕಿತ್ಸಕರಿಗೂ ಶುಭಾಶಯಗಳು.
- ಡಾ. ಡಿ.ಎಸ್ ಶಿವಪ್ರಕಾಶ್,
ಶಸ್ತ್ರಚಿಕಿತ್ಸಾ ತಜ್ಞರು, ಭದ್ರಾವತಿ
No comments:
Post a Comment