ಭದ್ರಾವತಿ ನಗರಸಭೆ ಅಧ್ಯಕ್ಷೆಯಾಗಿ ಶೃತಿ ವಸಂತಕುಮಾರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ, ಜು. ೩: ನಗರಸಭೆ ಅಧ್ಯಕ್ಷೆಯಾಗಿ ಶೃತಿ ವಸಂತಕುಮಾರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಶೃತಿ ವಸಂತಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ಕುಮಾರ್, ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.
ನಗರಸಭೆ ಬಹುತೇಕ ಸದಸ್ಯರು ಹಾಜರಿದ್ದು, ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಶೃತಿ ವಸಂತಕುಮಾರ್ರವರನ್ನು ಅಭಿನಂದಿಸಿದರು. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡು ಅವಿರೋಧ ಆಯ್ಕೆ ಘೋಷಿಸಿದ ತಕ್ಷಣ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಧಿಕಾರ ಹಂಚಿಕೆ :
೩೫ ಸದಸ್ಯ ಬಲ ಹೊಂದಿರುವ ನಗರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಕ್ಷ ಹಿಡಿದಿದ್ದು, ೩೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ೩೦ ತಿಂಗಳ ಅವಧಿಯಲ್ಲಿ ಮೀಸಲಾತಿ ಹೊಂದಿರುವ ಎಲ್ಲಾ ಸದಸ್ಯರಿಗೆ ಅಧಿಕಾರ ಲಭಿಸಬೇಕೆಂಬ ಉದ್ದೇಶದೊಂದಿಗೆ ಒಪ್ಪಂದ ಪ್ರಕಾರ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಗೀತಾ ರಾಜ್ಕುಮಾರ್ ಮತ್ತು ಅನುಸುಧಾ ಮೋಹನ್ ಪಳನಿ ಅಧ್ಯಕ್ಷರಾಗಿ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಅಧಿಕಾರ ಅನುಭವಿಸಿದ್ದು, ಪ್ರಸ್ತುತ ಸರ್ವಮಂಗಳ ಭೈರಪ್ಪ ಉಪಾಧ್ಯಕ್ಷರಾಗಿ ಹಾಗು ಶೃತಿ ವಸಂತಕುಮಾರ್ ಅಧ್ಯಕ್ಷರಾಗಿದ್ದಾರೆ.
ಶೃತಿ ವಸಂತಕುಮಾರ್ ಪರಿಚಯ:
ನಗರಸಭೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೃತಿ ವಸಂತಕುಮಾರ್ ನಗರಸಭೆ ೩೫ನೇ ವಾರ್ಡ್ ಕಾಂಗ್ರೆಸ್ ಸದಸ್ಯೆಯಾಗಿದ್ದು, ಬಿ.ಎ ಪದವಿಧರೆಯಾಗಿದ್ದಾರೆ. ಮಾಜಿ ನಗರಸಭಾ ಸದಸ್ಯ ಗಂಗಾಧರ್ರವರ ಸೊಸೆಯಾಗಿದ್ದು, ಮೊದಲ ಬಾರಿಗೆ ನಗರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಇವರು ಪತಿ ವಸಂತಕುಮಾರ್ ಹಾಗು ಇಬ್ಬರು ಗಂಡು ಮಕ್ಕಳ ಕುಟುಂಬ ಹೊಂದಿದ್ದಾರೆ.
No comments:
Post a Comment