Monday, October 21, 2024

ಸಮಾಜ ಸೇವಾ ಕಾರ್ಯ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ

ಆರ್‌ಎಸ್‌ಎಸ್ ಮೂಲ ಉದ್ದೇಶ : ಅರಳಿಹಳ್ಳಿ ಪ್ರಕಾಶ್ 


ಭದ್ರಾವತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ವತಿಯಿಂದ ವಿಜಯ ದಶಮಿ ಅಂಗವಾಗಿ ಪಥ ಸಂಚಲನ ನಡೆಯಿತು. 
    ಭದ್ರಾವತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಪ್ರಾರಂಭವಾದ ಅಂದಿನಿಂದ ಇಂದಿನವರೆಗೆ ಅನೇಕ ರೀತಿಯ ಹಲವಾರು ಸವಾಲು, ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿಕೊಂಡು ತನ್ನ ಸೇವಾ ಕಾರ್ಯದ ಮೂಲಕ ನಿರಂತರವಾಗಿ ವಿಸ್ತರಿಸಿ ಬೆಳೆದುಕೊಂಡು ಬಂದಿದೆ ಎಂದು ಸಂಘದ ವಿಭಾಗ ಶಾರೀರಿಕ್ ಪ್ರಮುಖ್ ಅರಳಿಹಳ್ಳಿ ಪ್ರಕಾಶ್ ಹೇಳಿದರು.
    ಅವರು ವಿಜಯ ದಶಮಿ ಅಂಗವಾಗಿ ನಗರದಲ್ಲಿ ಏರ್ಪಡಿಸಲಾಗಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ನಂತರ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಜರುಗಿದ ಸಂಘದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  
    ಸಂಘದ ಮೂಲ ಉದ್ದೆಶ ಸಮಾಜ ಸೇವಾ ಕಾರ್ಯ. ಅದಕ್ಕಾಗಿ ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯವನ್ನು ಮಾಡುತ್ತಿದೆ. ವ್ಯಕ್ತಿ ಉತ್ತಮ ವ್ಯಕ್ತಿಯಾದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಉತ್ತಮ ವ್ಯಕ್ತಿಗಳನ್ನು ಸಮಾಜದಲ್ಲಿ ತಯಾರು ಮಾಡುತ್ತಿದೆ ಎಂದರು.
    ಸಂಘವು ಪ್ರಾರಂಭ ಆದ ಅಂದಿನಿಂದ ಇಂದಿನವರೆಗೆ ಸಮಾಜದ ಯಾವ ಕ್ಷೇತ್ರವನ್ನೂ ಬಿಡದೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸೇವಾ ಚಟುವಟಿಕೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ದೇಶಕ್ಕೆ ಸಂಕಷ್ಟ ಎದುರಾದಾಗ ಸಂಘವು ದೇಶದ ಬೆನ್ನೆಲುಬಾಗಿ ನಿಂತಿದೆ. ಅದು ಯಾವುದೇ ರೀತಿಯದ್ದಾಗಿರಬಹುದು ಪ್ರಕೃತಿವಿಕೋಪ, ನೆರೆಹಾವಳಿ, ಬರ, ಯುದ್ಧ ಸನ್ನಿವೇಶ ಇತ್ಯಾದಿಗಳು. ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಿರುವುದನ್ನು ಸ್ಮರಿಸಿದರು.
    ಸಮಾಜದಲ್ಲಿ ಐದು ಪರಿವರ್ತನೆಗಳನ್ನು ತರಲು ಸಂಘ ಉದ್ದೇಶಿಸಿ ಅದರಂತೆ ಕಾರ್ಯೋನ್ಮುಖವಾಗುತ್ತಿದೆ. ಜಾತಿ ಮನೆಗಳು ಹೋಗಿ ಹಿಂದೂ ಮನೆಗಳಾಗಬೇಕು. ಎಲ್ಲ್ಲರ ಜೊತೆ ಸಮಾಜದಲ್ಲಿ ಸಾಮರಸ್ಯ ನಿರ್ಮಾಣ ಮಾಡಬೇಕು. ಸ್ವದೇಶಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಹಾಗು ಅದನ್ನು ಅನುಷ್ಟಾನಕ್ಕೆ ತರಬೇಕು. ನಾಗರೀಕ ಶಿಷ್ಟಾಚಾರದೊಂದಿಗೆ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕು. ಸಂಘದ ಕಾರ್ಯ ಚಟುವಟಿಕೆಗಳನ್ನು ಹಂತ ಹಂತವಾಗಿ ಹೆಚ್ಚುತ್ತಾ ವಿಸ್ತರಿಸಬೇಕು. ಅದಕ್ಕೆ ತಕ್ಕುದಾಗಿ ಸ್ವಯಂ ಸೇವಕರನ್ನು ತಯಾರು ಮಾಡಿ ಅವರ ಮೂಲಕ ಸಮಾಜದಲ್ಲಿ ನಾವು ಬಯಸಿದ ಬದಲಾವಣೆಯನ್ನು ತರಬೇಕು. ಇದು ಪ್ರತಿಯೊಬ್ಬ ಸ್ವಯಂ ಸೇವಕರ ಜವಾಬ್ದಾರಿ ಕರ್ತವ್ಯವಾಗಿದೆ ಎಂದರು. ನಗರ ಸಂಘ ಚಾಲಕ್ ಬಿ.ಎಚ್ ಶಿವಕುಮಾರ್ ಉಪಸ್ಥಿತಿರಿದ್ದರು.
    ಇದಕ್ಕೂ ಮೊದಲು ಹಳೇನಗರದ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆಕರ್ಷಕ ಗಣವೇಶಧಾರಿ ಸ್ವಯಂ ಸೇವಕರ ಪಥ ಸಂಚಲನ ಆರಂಭಗೊಂಡು ತಾಲೂಕು ಕಚೇರಿ ರಸ್ತೆ, ರಂಗಪ್ಪ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ,  ಮಾಧವಾಚಾರ್ ವೃತ್ತ, ಎನ್‌ಎಸ್‌ಟಿ ರಸ್ತೆ, ವಾಸವಿ ಮಹಲ್ ರಸ್ತೆ, ಬಸವೇಶ್ವರ ವೃತ್ತ, ಕುಂಬಾರರ ಬೀದಿ, ಉಪ್ಪಾರ ಬೀದಿ, ಶ್ರೀ ಹಳದಮ್ಮ ದೇವಿ ಬೀದಿ, ನಂತರ ಹೊಸ ಸೇತುವೆ ರಸ್ತೆಯಲ್ಲಿ ಸಾಗಿ ಕಂಚಿನ ಬಾಗಿಲು ವೃತ್ತದ ಮೂಲಕ ಶ್ರೀ ವೀರಶೈವ ಸಭಾಭವನ ತಲುಪಿತು. 

No comments:

Post a Comment