ಧರ್ಮೋಪದೇಶ ತರಗತಿಯ ಸಮಾರೋಪ ಸಮಾರಂಭ
ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸುವುದು ಅತಿ ಅವಶ್ಯಕ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಧರ್ಮಗುರು ಸ್ಟೀವನ್ ಡೇಸಾ ಹೇಳಿದರು.
ಅವರು ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು. ಮಕ್ಕಳು ಏನೇ ಕಲಿತರು ದಯೆ, ಕರುಣೆ, ಮಮಕಾರ, ಪ್ರೀತಿ, ತಾಳ್ಮೆ, ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವುದು ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳು ಧರ್ಮೋಪದೇಶ ತರಗತಿಯಲ್ಲಿ ಮಕ್ಕಳು ಪಡೆಯುತ್ತಾರೆ ಎಂದರು.
ಧರ್ಮೋಪದೇಶ ಹೇಳಿಕೊಡುವ ಧರ್ಮ ಕೇಂದ್ರದ ಶಿಕ್ಷಕಿಯರು ಯಾವುದೇ ಸಂಭಾವನೆ ಇಲ್ಲದೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಧರ್ಮ ಕೇಂದ್ರದ ಮಕ್ಕಳಿಗೆ ಧರ್ಮೋಪದೇಶ ಬೋಧಿಸುವುದರೊಂದಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಧರ್ಮ ಕೇಂದ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ ಮತ್ತು ಮೆಚ್ಚುವಂಥದ್ದು ಎಂದು ತಿಳಿಸಿದರು.
ಪ್ರಸ್ತುತ ಮುಂಬೈನ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್, ನಿರ್ಮಲ ಆಸ್ಪತ್ರೆಯ ಸುಪಿರಿಯರ್ ಸಿಸ್ಟರ್ ವಿಲ್ಮಾ, ಧರ್ಮೋಪದೇಶ ತರಗತಿಗಳ ನಿರ್ದೇಶಕಿ ಸಿಸ್ಟರ್ ತೆರೇಸಾ, ಸಿಸ್ಟರ್ ಶೋಭಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ನಂತರ ೨೦೨೪-೨೫ನೇ ಸಾಲಿನಲ್ಲಿ ವಾರಕ್ಕೊಮ್ಮೆ ನಡೆದ ಧರ್ಮೋಪದೇಶ ತರಗತಿಯಲ್ಲಿ ಶೇ. ೭೫ ರಷ್ಟು ಹಾಜರಿ ಪಡೆದ ಮಕ್ಕಳಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ವಿತರಿಸಲಾಯಿತು. ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು. ಪ್ರಿಯ ನಿರೂಪಿಸಿ ಜೋಶುವ ಥಾಮಸ್ ಸ್ವಾಗತಿಸಿದರು. ಕುಮಾರ್ ಜೆಸ್ಟಿನ್ ವಂದಿಸಿದರು.
No comments:
Post a Comment