ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹ
ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ: ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದರು.
ವಿಶ್ವ ರೈತ ಚೇತನ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರ ೨೧ನೇ ಸಂಸ್ಮರಣೆ ಅಂಗವಾಗಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ರೈತರು ಹಾಗೂ ಬಡವರು ಸುಮಾರು ೫೦ ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಸಾಗುವಳಿ ಭೂಮಿಯಿಂದ ಅವರ ಕುಟುಂಬಕ್ಕೆ ಆಹಾರ, ದುಡಿಯುವ ಕೈಗಳಿಗೆ ಕೆಲಸ ಮಾತ್ರವಲ್ಲದೇ ದೇಶದ ಆಹಾರ ಭದ್ರತೆಗೂ ಕೊಡುಗೆ ನೀಡಿರುತ್ತಾರೆ. ಈ ರೀತಿ ಸಾಗುವಳಿ ಮಾಡಿಕೊಂಡು ಬಂದ ಭೂಮಿಯ ಹಕ್ಕನ್ನು ರೈತರಿಗೆ ಮಾನ್ಯ ಮಾಡುವ ಸಲುವಾಗಿ ಸರ್ಕಾರಗಳು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರೈತರು ಭೂಮಿಯ ಹಕ್ಕು ಮಂಜೂರು ಮಾಡುವಂತೆ ನಮೂನೆ ೫೦, ನಮೂನೆ ೫೩ ಹಾಗೂ ನಮೂನೆ ೫೭ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ನೀಡಬೇಕಾದ ಸರ್ಕಾರಗಳು ಇಂದಿಗೂ ರೈತರಿಗೆ ಭೂಮಿಯ ಹಕ್ಕನ್ನು ನೀಡದೇ, ರೈತರನ್ನು ಹೈರಾಣಗೊಳಿಸಿವೆ ಎಂದು ಆಕ್ರೋಶ ವ್ಯಕ್ತಪಡಿದರು.
ಭೂಮಿಯ ಹಕ್ಕು ಪಡೆಯಲು ರೈತರು ದಿನನಿತ್ಯವು ತಾಲೂಕು ಕಛೇರಿಗೆ ಅಲೆದಾಡುತ್ತಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳು ಕ್ರಮಬದ್ಧವಾಗಿ ಕೆಲಸ ಮಾಡದೇ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸರ್ಕಾರದ ಕಂದಾಯ ಮಂತ್ರಿಗಳೇ ಹಲವು ಬಾರಿ ತಾಕೀತು ಮಾಡಿದರೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಇದರ ದುರ್ಲಾಭ ಪಡೆದ ಅರಣ್ಯ ಇಲಾಖೆ ರೈತರು ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಾನೂನು ಬಾಹಿರವಾಗಿ ಕಿತ್ತುಕೊಳ್ಳಲು ಯತ್ನಿಸುತ್ತಿದ್ದು, ರೈತರು ಮತ್ತು ಅರಣ್ಯ ಇಲಾಖೆಯ ಮಧ್ಯೆ ಪ್ರತಿದಿನವೂ ಸಂಘರ್ಷಕ್ಕೆ ದಾರಿಯಾಗಿದೆ. ಅರಣ್ಯ ಇಲಾಖೆಯು ಯಾವುದೇ ಜಂಟಿ ಸರ್ವೇ ಕಾರ್ಯ ಕೈಗೊಳ್ಳದೇ ತಹಸೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರ ವಿರುದ್ಧ ದಾವೆಗಳನ್ನು ಹೂಡಿ ರೈತರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ತಹಸೀಲ್ದಾರರ ನ್ಯಾಯಾಲಯ ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆಗಳು ವಿಚಾರಣೆಯಲ್ಲಿರುವಾಗಲೇ ರೈತರ ಸಾಗುವಳಿ ಜಮೀನುಗಳಿಗೆ ಅಕ್ರಮವಾಗಿ ನುಗ್ಗಿ ರೈತರ ಬೆಳೆದ ಬೆಳೆಗಳನ್ನು ನಾಶಪಡಿಸುವ ಜೊತೆಗೆ ರೈತರನ್ನು ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸುವಕಾರ್ಯ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಇದನ್ನೆಲ್ಲ ನೋಡಿಕೊಂಡು ರೈತರ ಹಿತರಕ್ಷಣೆಗೆ ಬಾರದೇ ಕಣ್ಣು ಮುಚ್ಚಿಕೊಂಡು ಕುಳಿತಿರುತ್ತದೆ. ತಾಲೂಕು ಆಡಳಿತದ ಈ ಬೇಜವಾಬ್ದಾರಿ ನಡೆಯನ್ನು ರೈತಸಂಘ ಖಂಡಿಸುವ ಜೊತೆಗೆ ಕೂಡಲೇ ರೈತರಿಗೆ ಬಗರ್ ಹುಕುಂ ಭೂಮಿಯ ಹಕ್ಕನ್ನು ನೀಡುವಂತೆ ಒತ್ತಾಯಿಸುತ್ತದೆ ಎಂದರು.
ರೈತರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶವಾಸಿಗಳು ವ್ಯವಸಾಯ ಹಾಗೂ ವ್ಯವಸಾಯೇತರ ಕಾರಣಕ್ಕಾಗಿ ಖಾಸಗಿ ಫೈನಾನ್ಸ್ಗಳಿಂದ ಸಾಲ ಪಡೆದಿರುತ್ತಾರೆ. ಈ ಸಾಲದ ಕಂತುಗಳ ವಸೂಲಿಗಾಗಿ ಖಾಸಗಿ ಫೈನಾನ್ಸ್ಗಳು ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಬಾಹಿರವಾಗಿ ಇನ್ನಿಲ್ಲದ ಕಿರುಕುಳ ನೀಡುತ್ತಿವೆ ಎಂದು ದೂರಿದರು.
ಹಲವೆಡೆ ರೈತರ ಕೃಷಿ ಉಪಕರಣಗಳ ಜಪ್ತಿ, ಮೋಟಾರ್ ಸೈಕಲ್ಗಳ ಜಿಪ್ತಿ, ರೈತರ ಮನೆ ಜಪ್ತಿ ಸೇರಿದಂತೆ ರೈತರ ಮನೆಯ ಬಾಗಿಲಿಗೆ ಸಾಲಗಾರರು ಎಂದು ಫಲಕ ತೂಗು ಹಾಕುವುದು, ಮನೆಯ ಬಾಗಿಲು ಹಾಗೂ ಗೋಡೆ ಮೇಲೆ ಸಾಲಗಾರರು ಎಂದು ಬರೆದು ಸಾಮಾಜಿಕವಾಗಿ ಗ್ರಾಮೀಣ ಜನರ ಮರ್ಯಾದೆಯನ್ನು ಹರಾಜು ಮಾಡುವುದರ ಜೊತೆಗೆ ಕಾನೂನಬಾಹಿರವಾಗಿ ಸಾಲ ವಸೂಲಿ ಕ್ರಮಗಳನ್ನು ಅನುಸರಿಸಿ ಗೂಂಡಾಗಿರಿ ನಡೆಸುತ್ತಿರುವುದನ್ನು ರೈತಸಂಘ ಖಂಡಿಸುತ್ತದೆ. ತಕ್ಷಣ ತಾಲೂಕು ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ಖಾಸಗಿ ಫೈನಾನ್ಸ್ಗಳು ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿದರು.
ರೈತರು ವ್ಯವಸಾಯ ಭೂಮಿಗೆ ನೀರಾವರಿ ಸೌಲಭ್ಯ ಹೊಂದಲು ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕ ಪಡೆಯಲು ಅಕ್ರಮ-ಸಕ್ರಮದ ಅಡಿಯಲ್ಲಿ ಹಣ ಪಾವತಿಸಿ ವರ್ಷಗಳೇ ಕಳೆದರೂ ಇದುವರೆವಿಗೂ ಸರ್ಕಾರ ಸಕ್ರಮ ಮಾಡಿರುವುದಿಲ್ಲ. ಅಲ್ಲದೇ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಸಂಪೂರ್ಣ ವೆಚ್ಚವನ್ನು ಭರಿಸಬೇಕೆಂಬ ಅವೈಜ್ಞಾನಿಕ ನಿಯಮವನ್ನು ರೂಪಿಸಿದ್ದು, ರೈತರು ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂಪಾಯಿ ಸಾಲ-ಸೂಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಸರ್ಕಾರ ಈ ಹಿಂದಿನಂತೆ ನಿಯಮ ರೂಪಿಸಿ ರೈತರಿಗೆ ವಿದ್ಯುತ್ ಸಂಪರ್ಕ ನೀಡಬೇಕು ಹಾಗೂ ಅಕ್ರಮ-ಸಕ್ರಮ ಅರ್ಜಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಲೇಶಪ್ಪಗೌಡ್ರು, ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ತಾಲೂಕು ಅಧ್ಯಕ್ಷ ಹಿರಣಯ್ಯ, ಯುವ ರೈತ ಮುಖಂಡ ಡಿ.ವಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಂಜುನಾಥೇಶ್ವರ ಮತ್ತು ಮೋಹನ್ ಕೂಡ್ಲಿಗೆರೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರ ಪ್ರಮುಖರು, ರೈತರು ಪಾಲ್ಗೊಂಡಿದ್ದರು.
ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹಕ್ಕೂ ಮೊದಲು ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
No comments:
Post a Comment