Saturday, May 2, 2020

ಕೊರೋನಾ ಹೋರಾಟಗಾರರಿಗೆ ನೈತಿಕ ಬಲ : ಸನ್ಮಾನ, ಪುಷ್ಪವೃಷ್ಠಿ

ಸಿದ್ದರೂಢ ಮಠದಲ್ಲಿ ಸಿಹಿ ಭೋಜನದೊಂದಿಗೆ ವಿಶಿಷ್ಟ ಕಾರ್ಯಕ್ರಮ 

ಭದ್ರಾವತಿ ಸಿದ್ದರೂಢ ಮಠದ ವತಿಯಿಂದ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪತ್ರಕರ್ತರನ್ನು ವಿಶೇಷವಾಗಿ ಸನ್ಮಾನಿಸಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಲಾಯಿತು.
ಭದ್ರಾವತಿ, ಮೇ. ೨: ಕೊರೋನಾ ವೈರಸ್ ಒಂದೆಡೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ವೈರಸ್ ವಿರುದ್ಧ ವೈದ್ಯರು, ಪೊಲೀಸರು ಮತ್ತು ಪೌರಕಾರ್ಮಿಕರು, ಪತ್ರಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ನೈತಿಕವಾಗಿ ಮತ್ತಷ್ಟು ಬಲ ತುಂಬುವ ಕಾರ್ಯ ಸಮಾಜದಲ್ಲಿ ನಡೆಯುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಶನಿವಾರ ನಗರದ ಸಿದ್ದರೂಢ ಮಠದಲ್ಲಿ ವಿಶಿಷ್ಟ ರೀತಿಯ ಕಾರ್ಯಕ್ರಮ ಜರುಗಿತು.
ಸಿದ್ದರೂಢ ಆಶ್ರಮದ ವತಿಯಿಂದ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಪತ್ರಕರ್ತರನ್ನು ವಿಶೇಷವಾಗಿ ಸನ್ಮಾನಿಸಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಲಾಯಿತು. ಸಿಹಿ ಭೋಜನ ವ್ಯವಸ್ಥೆ ಕೈಗೊಳ್ಳುವ ಮೂಲಕ ಹಬ್ಬದ ಸಂಭ್ರಮಕ್ಕೆ ಮಠದ ಆಡಳಿತಾಧಿಕಾರಿಗಳು, ಟ್ರಸ್ಟಿಗಳು ಕಾರಣಕರ್ತರಾದರು.
ನಗರಸಭೆ ಪೌರಾಯುಕ್ತ ಮನೋಹರ್, ಅಧಿಕಾರಿಗಳಾದ ರಾಜ್‌ಕುಮಾರ್, ರುದ್ರೇಗೌಡ, ರಂಗರಾಜಪುರೆ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಹಿರಿಯ ಪತ್ರಕರ್ತ ಟಿ.ಎಸ್ ಆನಂದಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
  ಚಿತ್ರದುರ್ಗ ಶ್ರೀ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಶ್ರಮದ ಪ್ರಮುಖರಾದ ಉಪಾಧ್ಯಕ್ಷರಾದ ಬೆನಕಪ್ಪ, ಕಾರ್ಯದರ್ಶಿ ರಾಮಮೂರ್ತಿ ಟ್ರಸ್ಟಿಗಳಾದ ಗೋವಿಂದಪ್ಪ, ವಾಗೀಶ್, ಬಾಬು, ಬಿ ದಿವಾಕರ ಶೆಟ್ಟಿ, ಮಂಜುನಾಥರಾವ್, ಮಾರುತಿ, ವಿಜಯ್‌ಕುಮಾರ್, ಮಂಜುನಾಥ್, ಮುರುಡಪ್ಪ, ನಗರಸಭೆ ಸದಸ್ಯ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸಲು ಮನವಿ

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. 
ಭದ್ರಾವತಿ: ನೀರಿಲ್ಲದೆ ಬೆಳೆಗಳು ನಾಶವಾಗುವ ಭೀತಿ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಜ.೮ರಂದು ನಡೆದ ಸಭೆಯಲ್ಲಿ ಮೇ.೬ರ ವರೆಗೂ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಪ್ರಸ್ತುತ ಜಲಾಶಯದಲ್ಲಿ ೨೯ ಟಿಎಂಸಿ ನೀರು ಸಂಗ್ರಹವಿದ್ದು, ಉಪಯೋಗಕ್ಕೆ ಬಾರದ ೧೩ ಟಿಎಂಸಿ ನೀರು ಹೊರತುಪಡಿಸಿ ಉಳಿದ ೧೬ ಟಿಎಂಸಿ ನೀರಿನಲ್ಲಿ ಕುಡಿಯಲು ೪ ಟಿಎಂಸಿ ಬಳಸಿದರೂ ೧೨ ಟಿಎಂಸಿ ನೀರು ಕೃಷಿ ಬಳಕೆಗೆ ಲಭ್ಯವಿದೆ. ಈ ನೀರನ್ನು ಬಲ ಮತ್ತು ಎಡ ದಂಡೆ ನಾಲೆಗಳಲ್ಲಿ ಸುಮಾರು ೪೦ ದಿನ ಹರಿಸಬಹುದಾಗಿದೆ.
ನಾಲೆಯ ಕೊನೆಯ ಭಾಗದ ರೈತರಿಗೆ ಈಗಾಗಲೇ ಜಲಾಶಯದಿಂದ ಹರಿಸಲಾಗಿರುವ ನೀರು ತಡವಾಗಿ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಮಾ.೧೦ರ ವರೆಗೆ ಭತ್ತದ ನಾಟಿ ಮಾಡಿದ್ದಾರೆ. ಭತ್ತದ ಬೆಳೆ ಇನ್ನೂ ತೆನೆ ಬಂದಿಲ್ಲ.  ಅಲ್ಲದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಬ್ಬು, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿದ್ದು, ನೀರಿಕ್ಷೆಯಂತೆ ಇನ್ನೂ ಮಳೆಯಾಗಿಲ್ಲ. ಇದೀಗ ಈ ಹಿಂದೆ  ಸಭೆಯಲ್ಲಿ ತೀರ್ಮಾನಿಸಿರುವಂತೆ ಮೇ.೬ರಂದು ಜಲಾಶಯದಿಂದ ನೀರು ನಿಲ್ಲಿಸಿದ್ದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳ ಲಕ್ಷಾಂತರ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಮೇ.೨೫ರ ವರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ಅಧ್ಯಕ್ಷ ಬಿ. ಪಂಚಾಕ್ಷರಿ, ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಚ್ ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ತಾಲೂಕು ಕಾರ್ಯದರ್ಶಿ ಎಚ್.ಜಿ ವೀರೇಶ್, ಜಿಲ್ಲಾ ಗೌರವಾಧ್ಯಕ್ಷ ಸಿ.ಬಿ ಮಂಜುನಾಥೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸರ್ಕಾರದ ಯೋಜನೆಗಳಿಂದ ವಂಚಿತರಾದ ಬಡವರು : ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯ

ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ 

ಭದ್ರಾವತಿಯಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಲೆಮನೆ ಮಾಲೀಕರ ಸಹಕಾರದೊಂದಿಗೆ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿದರು. 
ಭದ್ರಾವತಿ: ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳು ಬಡವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ಅವರು ಶನಿವಾರ ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗದ ಕಡು ಬಡವರಿಗೆ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
ಉಚಿತ ಹಾಲು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥ ವಿತರಣೆ ಸೇರಿದಂತೆ ಬಡವರಿಗಾಗಿ ಸರ್ಕಾರ ರೂಪಿಸಿರುವ ಯಾವುದೇ ಯೋಜನೆ ಬಡವರಿಗೆ ತಲುಪಿಲ್ಲ. ೭೦ ರಿಂದ ೮೦ ಸಾವಿರ ಕುಟುಂಬಗಳಿರುವ ಕಡೆ ಕೇವಲ ೫ ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗಿದೆ. ನಿಗದಿತ ಪ್ರಮಾಣದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಹ ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳು ಬಡವರಿಗೆ ನೇರವಾಗಿ ತಲುಪುತ್ತಿದ್ದವು. ಆದರೆ ಇಂದಿನ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ವಿಫಲವಾಗಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಸುಮಾರು ೭೦ ರಿಂದ ೮೨ ಸಾವಿರ ಕುಟುಂಬಗಳಿಗೆ ರೈತರಿಂದ ತರಕಾರಿ ಖರೀದಿಸಿ ಮನೆ ಮನೆಗೆ ತೆರಳಿ ವಿತರಿಸಲಾಗಿದೆ. ಇದೀಗ ಆಲೆಮನೆ ಮಾಲೀಕರು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಹಕಾರದಿಂದ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾಧ್ಯವಾದಷ್ಟು ನೆರವು ನೀಡಲು ಬದ್ಧವಾಗಿರುವುದಾಗಿ ತಿಳಿಸಿದರು.
ಕಬ್ಬಿನಗಾಣ ಹೊಂದಿರುವ ರೈತರ ಸಹಕಾರ ಸಂಘದ ಪ್ರಮುಖರಾದ  ರಾಮಮೂರ್ತಿ, ಚಲುವ, ಪ್ರಕಾಶ್, ಮುರುಳಿ, ಸೀನ, ಪರಮೇಶ್, ಲಕ್ಷ್ಮಿ ಪ್ರಕಾಶ್, ಮಲ್ಲಿಕ, ಕೃಷ್ಣ, ಹಿರಿಯ ಪತ್ರಕರ್ತ ಕಣ್ಣಪ್ಪ, ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ಡಿ. ನರಸಿಂಹಮೂರ್ತಿ, ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಕೆ ಶಿವಣ್ಣ, ಬಿ.ಎಸ್ ಗಣೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು. 

Friday, May 1, 2020

ಭದ್ರಾವತಿ ನಗರಕ್ಕೆ ವಿವಿಧೆಡೆಗಳಿಂದ ಆಗಮಿಸಿದ ೧೩ ಜನರ ಪತ್ತೆ

ಭದ್ರಾವತಿ ನಗರಕ್ಕೆ ವಿವಿಧೆಡೆಗಳಿಂದ ಆಗಮಿಸಿದ ಸುಮಾರು ೧೩ ಜನರನ್ನು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ಪತ್ತೆ ಮಾಡಿ ಆರೋಗ್ಯ ತಪಾಸಣೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವ 
ಘಟನೆ ಶುಕ್ರವಾರ ರಾತ್ರಿ ನಡೆದಿದೆ. 
ಭದ್ರಾವತಿ : ನಗರಕ್ಕೆ ವಿವಿಧೆಡೆಗಳಿಂದ ಆಗಮಿಸಿದ ಸುಮಾರು ೧೩ ಜನರನ್ನು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ಪತ್ತೆ ಮಾಡಿ ಆರೋಗ್ಯ ತಪಾಸಣೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಇಬ್ಬರು ಮುಂಬಯಿ ನಗರದಿಂದ ಬೆಂಗಳೂರಿಗೆ ಬಂದು ನಂತರ ಲಾರಿ ಮೂಲಕ ನಗರಕ್ಕೆ ಆಗಮಿಸಿದ್ದಾರೆ. ಪಕ್ಕದ ಜಿಲ್ಲೆ ದಾವಣಗೆರೆಯಿಂದ ೬ ಜನರು ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಗ್ಯಾಸ್ ಹಾಗೂ ಗೂಡ್ಸ್ ಗಾಡಿಗಳ ಮೂಲಕ ೫ ಜನ ಬೆಂಗಳೂರಿನಿಂದ ಬಂದಿದ್ದಾರೆ. ಇವರೆಲ್ಲರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕಾರ್ಯಾಚರಣೆ ತಂಡದಲ್ಲಿ  ಹಿರಿಯ ಆರೋಗ್ಯ ಸಹಾಯಕ  ನಿೀಲೇಶ್ ರಾಜ್,  ಡಿ ದರ್ಜೆ ನೌಕರ ಮಂಜುನಾಥ್, ಚಾಲಕರಾದ ರಫೀಕ್ ಮತ್ತು ಕಾಂತರಾಜ್ ಪಾಲ್ಗೊಂಡಿದ್ದರು ಎಂದು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ತಿಳಿಸಿದೆ.  

ಕಡುಬಡವರಿಗೆ ಸ್ವಂತ ಖರ್ಚಿನಲ್ಲಿ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ ಜನ್ನಾಪುರದ ನಿವಾಸಿ, ಸ್ಥಳೀಯ ಮುಖಂಡರಾದ ಎ.ಜಿ ರಾಧಮ್ಮರವರು ತಾವು ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಡು ಬಡವರನ್ನು ಗುರುತಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ೨೦ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. 
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿರುವ ಪರಿಣಾಮ ಶ್ರೀಸಾಮಾನ್ಯರು ಅದರಲೂ ಕಡು ಬಡವರ ಸ್ಥಿತಿ ದಿನ ದಿಂದ ದಿನಕ್ಕೆ ಹದಗೆಡುತ್ತಿದ್ದು, ಕಡು ಬಡವರ ಸಂಕಷ್ಟಕ್ಕೆ ಸ್ಪಂದಿಸಿ ನಗರದಲ್ಲಿ ಕೆಲವು ದಾನಿಗಳು ಸ್ವಯಂ ಪ್ರೇರಣೆಯಿಂದ ನೆರವಿಗೆ ಮುಂದೆ ಬರುತ್ತಿದ್ದಾರೆ.
ನಗರದ ಜನ್ನಾಪುರದ ನಿವಾಸಿ, ಸ್ಥಳೀಯ ಮುಖಂಡರಾದ ಎ.ಜಿ ರಾಧಮ್ಮರವರು ತಾವು ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಡು ಬಡವರನ್ನು ಗುರುತಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ೨೦ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಮ್ಮ ಕೈಲಾದಷ್ಟು ಮಟ್ಟಿಗೆ ಬಡವರಿಗೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಎ.ಜಿ ರಾಧಮ್ಮರವರ ಕಾರ್ಯಕ್ಕೆ ಪತಿ ಪ್ರಭಾಕರ್ ಕೈ ಜೋಡಿಸಿದ್ದಾರೆ.  

೨ನೇ ವಾರ್ಡ್ ವ್ಯಾಪ್ತಿಯಲ್ಲಿ ಎಂ.ಜೆ ಅಪ್ಪಾಜಿ ಬಳಗದಿಂದ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ವ್ಯಾಪ್ತಿ ವಾರ್ಡ್ ೨ರಲ್ಲಿ ವಾಸಿಸುತ್ತಿರುವ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು, ರಸ್ತೆ ಬದಿ ವಾಸಿಗಳಿಗೆ  ಮಾಜಿ ಶಾಸಕ ಎಂ.ಜೆ ಅಪ್ಪಾಜಿ ದಿನಸಿ ಸಾಮಗ್ರಿಗಳನ್ನು ವಿತರಿಸಿ ಕೊರೋನಾ ಕುರಿತು ಜಾಗೃತಿ ವಹಿಸುವಂತೆ ಮನವಿ ಮಾಡಿದರು. 
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷನೆಯಾದ ನಂತರ ನಗರದಲ್ಲಿ ಕಡು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಇವರ ಸಂಕಷ್ಟಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ ನೆರವಿಗೆ ಮುಂದಾಗಿದೆ.
ನಗರಸಭೆ ವ್ಯಾಪ್ತಿ ವಾರ್ಡ್ ೨ರಲ್ಲಿ ವಾಸಿಸುತ್ತಿರುವ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು, ರಸ್ತೆ ಬದಿ ವಾಸಿಗಳಿಗೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ದಿನಸಿ ಸಾಮಗ್ರಿಗಳನ್ನು ವಿತರಿಸಿ ಕೊರೋನಾ ಕುರಿತು ಜಾಗೃತಿ ವಹಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ-ಭದ್ರಾವತಿ ನಡುವೆ ಸಂಚಾರಿಸುವ ಮಾಕ್ಸಿ ಕ್ಯಾಬ್‌ಗಳ ಸುಮಾರು ೪೫ ಮಂದಿ ಚಾಲಕರ ಕುಟುಂಬಗಳಿಗೆ, ವಾರ್ಡ್ ೨ರ ವ್ಯಾಪ್ತಿಯ ಮೀನುಗಾರರ ಬೀದಿ, ಕೃಷ್ಣಸಿಂಗ್ ಕಾಂಪೌಂಡ್, ಕವಲಗುಂದಿ, ಲೋಯರ್‌ಹುತ್ತಾ, ಐಟಿಐ ಹಿಂಬಾಗದ ಎ.ಕೆ ಕಾಲೋನಿ, ಮತ್ತು ಕಡದಕಟ್ಟೆ ಬಲಭಾಗ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಒಟ್ಟು ಸುಮಾರು ೮೦೦ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್ ರಾವ್, ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನಿರ್ದೇಶಕರು, ಸ್ಥಳೀಯ ಮುಖಂಡರು, ಎಂ.ಜೆ ಅಪ್ಪಾಜಿ ಅಭಿಮಾನಿಗಳು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಪತ್ರಕರ್ತರಿಗೆ ಬಿಳಿಕಿ ಶ್ರೀಗಳಿಂದ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿಯಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ದಿನಸಿ ಸಾಮಗ್ರಿ ವಿತರಿಸಿ ಆಶೀರ್ವದಿಸಿದ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಗೆ ಕನ್ನಡ ಪ್ರಭ ಪತ್ರಿಕೆಯ ನಮ್ಮ ಊರು ನಮ್ಮ ಜಿಲ್ಲೆ ವಿಶೇಷ ಸಂಚಿಕೆಯನ್ನು ನೀಡಲಾಯಿತು. 
ಭದ್ರಾವತಿ, ಮೇ. ೧: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಯಾವುದನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ನಗರದ ಪತ್ರಕರ್ತರ ಯೋಗ ಕ್ಷೇಮಾ ವಿಚಾರಿಸುವ ಮೂಲಕ ಅವರ ನೆರವಿಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠ, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮುಂದಾಗಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ನಂತರ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು,  ಶ್ರೀಗಳು ಪತ್ರಕರ್ತರು ಸಹ ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡು ಶ್ರೀಮಠದಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಿ ಆಶೀರ್ವದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ ಹಾಗೂ ಮಠದ ಪ್ರಮುಖರು ಉಪಸ್ಥಿತರಿದ್ದರು.
ಇದೆ ರೀತಿ ಸಂಕಷ್ಟಕ್ಕೆ ಒಳಗಾಗಿರುವ ಪತ್ರಕರ್ತರಿಗೆ ತಮಿಳು ಸಮಾಜ ಸಹ ನೆರವಾಗಿದ್ದು, ದಿನಸಿ ಸಾಮಗ್ರಿಗಳನ್ನು ವಿತರಿಸಿ ಬೆಂಬಲ ನೀಡಿದೆ.