Tuesday, May 26, 2020

ಎಂಪಿಎಂ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡಿ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಬ್ಯಾಕ್‌ಲಾಗ್ ಹುದ್ದೆಗಳು ನೇರ ನೇಮಕಾತಿಯಾಗಿದ್ದು, ಕೆಲಸಕ್ಕೆ ಸೇರಿದ ದಿನದಿಂದ ಪೂರ್ಣ ಪ್ರಮಾಣದ ಮೂಲವೇತನ ಮತ್ತು ಇತರೆ ಭತ್ಯೆಗಳನ್ನು ಪಡೆಯಲು ಉದ್ಯೋಗಿಗಳು ಅರ್ಹರಾಗಿರುತ್ತಾರೆ. ಆದರೆ ಬ್ಯಾಕ್‌ಲಾಗ್ ನಿಯಮಗಳನ್ನು ಉಲ್ಲಂಘಸಿ ಕಾರ್ಖಾನೆ ಆಡಳಿತ ಮಂಡಳಿ ೨೦೦೮ರಲ್ಲಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ತರಬೇತಿ ನಿಗದಿಪಡಿಸಿ ಶಿಷ್ಯ ವೇತನ ನೀಡುವ ಮೂಲಕ ಅನ್ಯಾಯವೆಸಗಿದೆ. ಅಲ್ಲದೆ ತರಬೇತಿ ಮುಗಿದ ನಂತರ ಅತ್ಯಂತ ಕನಿಷ್ಠ ಮೂಲ ವೇತನ ನಿಗದಿಪಡಿಸಿದೆ. ಕೆಲಸಕ್ಕೆ ಸೇರಿದ ದಿನದಿಂದ ಇದುವರೆಗೂ ಯಾವುದೇ ರೀತಿಯ ವೇತನ ಹೆಚ್ಚಳವಾಗಿಲ್ಲ. ಯಾವುದೇ ಭಡ್ತಿ ಸಹ ದೊರೆತ್ತಿಲ್ಲ. ೨೦೧೨ ಮತ್ತು ೨೦೧೭ರ ವೇತನ ಒಪ್ಪಂದಗಳು ಸಹ ಆಗಿರುವುದಿಲ್ಲ ಎಂದು ಉದ್ಯೋಗಿಗಳು ಅಳಲು ವ್ಯಕ್ತಪಡಿಸಿದರು. 
ಈ ನಡುವೆ ಕಾರ್ಖಾನೆಯನ್ನು ನಷ್ಟದ ನೆಪ್ಪವೊಡ್ಡಿ ರಾಜ್ಯ ಸರ್ಕಾರ ಖಾಸಗಿಕರಣಗೊಳಿಸಲು ಮುಂದಾಗಿ ಉದ್ಯೋಗಿಗಳಿಗೆ ವಿಆರ್‌ಎಸ್ ಮತ್ತು ವಿಎಸ್‌ಎಸ್ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಸುಮಾರು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಆದರೆ ೧೧೨ ಬ್ಯಾಕ್‌ಲಾಗ್ ಉದ್ಯೋಗಿಗಳು ಕನಿಷ್ಠ ೧೦ ವರ್ಷ ಸೇವಾವಧಿ ಪೂರ್ಣಗೊಳಿಸಿರುವುದಿಲ್ಲ. ಸುಮಾರು ೧೦ ರಿಂದ ೨೦ ವರ್ಷ ಸೇವಾವಧಿ ಇದ್ದು ಈ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಪಡೆದಿರುವುದಿಲ್ಲ. ತಕ್ಷಣ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಬೇಕೆಂದು ಒತ್ತಾಯಿಸಿದರು. 
ಎಂಪಿಎಂ ಬ್ಯಾಲ್‌ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ವಿ.ಎನ್ ದೊಡ್ಡಯ್ಯ, ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಅರ್ನುನ್ ರಾತೋಡ್, ಸಹಕಾರ್ಯದರ್ಶಿ ಆರ್. ನಾಗರಾಜ್, ಖಜಾಂಚಿ ಶಿವರಾಜ್, ಪಾರ್ವತಮ್ಮ, ಲತಾ, ಮಂಜುಳ, ಎಸ್. ರಾಜಪ್ಪ, ನರಸಿಂಹಪ್ಪ, ಓಂಕಾರಪ್ಪ, ವೆಂಕಟೇಶ್ ನಾಯ್ಕ, ಶೆಲ್ವಕುಮಾರ್, ಕೈಲಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, May 24, 2020

ಶಾಲಾ ಮಕ್ಕಳ ಮನೆಗಳಿಗೆ ಆಹಾರ ಪದಾರ್ಥ ತಲುಪಿಸುವ ವ್ಯವಸ್ಥೆ ಕೈಗೊಳ್ಳಿ

ಶಾಲಾ ಮಕ್ಕಳಿಗೆ ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವ ತನಕ ಆಹಾರ ಪದಾರ್ಥಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಭದ್ರಾವತಿಯಲ್ಲಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 
ಭದ್ರಾವತಿ, ಮೇ. ೨೪: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಹಾಲಿನ ಪೌಡರ್ ಮತ್ತು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಸೌಲಭ್ಯಗಳು ಸ್ಥಗಿತಗೊಂಡಿರುವ ಕಾರಣ ಕಳೆದ ೨-೩ ತಿಂಗಳಿನಿಂದ ಆಹಾರ ಪದಾರ್ಥಗಳು ಹಾಳಾಗುತ್ತಿವೆ. ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವ ತನಕ ಆಹಾರ ಪದಾರ್ಥಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 
ಸರ್ಕಾರ ಕೈಗೊಂಡಿರುವ ಯೋಜನೆ ಶಾಲಾ ಮಕ್ಕಳಿಗೆ ಸದ್ಬಳಕೆಯಾಗಬೇಕು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಪ್ರಸ್ತುತ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಲಾಕ್‌ಡೌನ್ ಜಾರಿ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ಶ್ರೀ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನ ಸಾಗಿಸುವುವೇ ಕಷ್ಟಕರವಾಗಿದೆ.
ಈ ನಡುವೆ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ.  ಶಾಲೆಗಳಲ್ಲಿ ದಾಖಲಾತಿ ಪ್ರಾರಂಭಿಸುವ ಮೊದಲೇ ಮಕ್ಕಳ ಪೋಷಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದು, ಮುಂಗಡ ಶುಲ್ಕ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕೈಗೊಳ್ಳಬೇಕು. ಪೋಷಕರ ಆತಂಕ ದೂರ ಮಾಡಿ ಮುಖಂಡ ಹಣ ಪಾವತಿಸಲು ಕಾಲಾವಕಾಶ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಟಿ.ಎಚ್.ಓ ತಂಡದಿಂದ ಕ್ವಾರಂಟೈನ್ ಪರಿಶೀಲನೆ

ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿ ನೇತೃತ್ವದ ತಂಡ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಕ್ವಾರಂಟೈನ್ ಪರಿಶೀಲನೆ ನಡೆಸಿತು. 
ಭದ್ರಾವತಿ, ಮೇ. ೨೪: ತಾಲೂಕು ಆರೋಗ್ಯಾಧಿಕಾರಿ ನೇತೃತ್ವದ ತಂಡ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಕ್ವಾರಂಟೈನ್ ಪರಿಶೀಲನೆ ನಡೆಸಿತು.
ಮಹಾರಾಷ್ಟ್ರದಿಂದ ಬಂದಿರುವ ೧೮ಜನರನ್ನು ಕ್ವಾರಂಟೈನ್ ಮಾಡಿರುವ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಕೊನೆಯ ಹಂತದಲ್ಲಿ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕ್ವಾರಂಟೈನ್ ಸಿಬ್ಬಂದಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮೀನಾಕ್ಷಮ್ಮ ನಿಧನ

ಮೀನಾಕ್ಷಮ್ಮ 
ಭದ್ರಾವತಿ, ಮೇ. ೨೪: ನಗರದ ಕಡದಕಟ್ಟೆ ನಿವಾಸಿ ದಿವಂಗತ ಕಲ್ಯಾಣಪ್ಪರವರ ಪತ್ನಿ ಮೀನಾಕ್ಷಮ್ಮ(೯೦)ರವರು ಭಾನುವಾರ ಸಂಜೆ ನಿಧನರಾದರು.
ಮೃತರು ೫ ಗಂಡು ಹಾಗೂ ೪ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

Saturday, May 23, 2020

ರಂಜಾನ್ : ಶಾಂತಿ ಸಭೆ

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಶನಿವಾರ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. 
ಭದ್ರಾವತಿ, ಮೇ. ೨೩: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಶನಿವಾರ ಹಳೇನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.
ಈ ಬಾರಿ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ  ಮುಸ್ಲಿಂ ಸಮುದಾಯದ ಪ್ರತಿಯೊಬ್ಬರು ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಇದ್ದು ಸರಳವಾಗಿ ಆಚರಿಸುವ ಮೂಲಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಲಾಯಿತು.
ಹಳೇನಗರ ಪೊಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಿತು. ಮುಸ್ಲಿಂ ಸಮುದಾಯದ ಪ್ರಮುಖರಾದ ಸಿ.ಎಂ ಖಾದರ್, ಜಹೀರ್‌ಜಾನ್, ಜೆಬಿಟಿ ಬಾಬು, ಹಫೀಜ್ ಉರ್ ರಹಮಾನ್, ಮುರ್ತುಜಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಪಿಎಂಸಿ : ಮೇ.೨೪ರಂದು ವ್ಯಾಪಾರ, ವಹಿವಾಟು ಸ್ಥಗಿತ

ಭದ್ರಾವತಿ, ಮೇ. ೨೩: ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮೇ.೩೧ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ವ್ಯಾಪಾರ, ವಹಿವಾಟು ಇರುವುದಿಲ್ಲ.
ಕೋವಿಡ್-೧೯ ಸೋಂಕು ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರು ಸಹಕರಿಸುವಂತೆ ಸಮಿತಿ ಕಾರ್ಯದರ್ಶಿ ಕೋರಿದ್ದಾರೆ.

ಏಕಾಏಕಿ ಕ್ವಾರಂಟೈನ್ ನಿರ್ಮಾಣ ಸ್ಥಳೀಯರ ವಿರೋಧ : ಪ್ರತಿಭಟನೆ

ಮಹಾರಾಷ್ಟ್ರದಿಂದ ಬಂದ ೧೮ ಜನ : ಕೊರೋನಾ ವೈರಸ್ ಭೀತಿ 

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮೇ. ೨೩: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಸ್ಥಳೀಯರ ಗಮನಕ್ಕೆ ಬಾರದಂತೆ ಕ್ವಾರಂಟೈನ್ ನಿರ್ಮಾಣ ಮಾಡುವ ಮೂಲಕ ಮಹಾರಾಷ್ಟ್ರದಿಂದ ಬಂದಿರುವ ೧೮ ಜನರನ್ನು ನಿಗಾದಲ್ಲಿರಿಸಲು ಕರೆ ತರಲಾಯಿತು. ಈ ವಿಚಾರ ತಿಳಿದ ಗ್ರಾಮಸ್ಥರು ಕ್ಯಾರಂಟೈನ್ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ನಗರಸಭೆ ಪೌರಾಯುಕ್ತ ಮನೋಹರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.