Tuesday, June 9, 2020

ಓ.ಸಿ, ಮಟ್ಕಾ ಜೂಜಾಟ : ಓರ್ವನ ಸೆರೆ

ಭದ್ರಾವತಿ, ಜೂ. ೯: ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತನ್ನು ಅಲಿಯಾಸ್ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯ ಸಮೀವುಲ್ಲಾ ಪಂಕ್ಚರ್ ಶಾಪ್ ಹತ್ತಿರ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.


ಸುರಗಿತೋಪು ನಿವಾಸಿಗಳಿಗೆ ತಕ್ಷಣ ಖಾತೆ ಮಾಡಿ ಕೊಡಿ

ಮಾಜಿ ಶಾಸಕರ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ ಮಾಡಿದ ನಿವಾಸಿಗಳು 

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ನಿವಾಸಿಗಳು ಹಕ್ಕುಪತ್ರಗಳಿಗೆ ತಕ್ಷಣ ಖಾತೆ ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತ ಮನೋಹರ್ ಅವರಿಗೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಮನವಿ ಮಾಡಿದರು.  
ಭದ್ರಾವತಿ, ಜೂ. ೯: ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ನಿವಾಸಿಗಳ ಹಕ್ಕುಪತ್ರಗಳಿಗೆ ಖಾತೆ ಮಾಡಿಕೊಡುವಂತೆ ಮಂಗಳವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದರು. 
ಈಗಾಗಲೇ ಹಕ್ಕು ಪತ್ರಗಳನ್ನು ನೀಡಲಾಗಿದ್ದರೂ ಸಹ ಇದುವರೆಗೂ ಖಾತೆ ಮಾಡಿಕೊಡದಿರುವುದು ಸರಿಯಲ್ಲ. ಹಲವಾರು ವರ್ಷಗಳಿಂದ ಸುರಗಿತೋಪು ಪ್ರದೇಶದಲ್ಲಿ ಬಡ ವರ್ಗದವರು ವಾಸಿಸುತ್ತಿದ್ದು, ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ನಿವೇಶನಗಳ ಸಂಪೂರ್ಣ ಹಕ್ಕು ಹೊಂದುವ ಮೂಲಕ  ಹಣಕಾಸು ಸಂಸ್ಥೆಗಳಿಂದ ಸಾಲಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಲಾಯಿತು. 
ಪೌರಾಯುಕ್ತ ಮನೋಹರ್ ಖಾತೆ ಮಾಡಿಕೊಡಲು ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು. 
ನಗರಸಭೆ ಹಿರಿಯ ಸದಸ್ಯರಾದ ಆರ್. ಕರುಣಾಮೂರ್ತಿ, ಆನಂದ್, ಸುರಗಿತೋಪು ಸಮಗ್ರ ಅಭಿವೃದ್ಧಿ ವೇದಿಕೆಯ ರವಿಕುಮಾರ್, ಧನಲಕ್ಷ್ಮಿ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಪ್ರಮುಖರಾದ ಶಿವರಾಜ್, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

Monday, June 8, 2020

ಕೊರೋನಾ ಆರ್ಥಿಕ ಸಮಸ್ಯೆಗೆ ಹಲವು ಪರಿಹಾರ ‘ವೆಬಿನಾರ್’ನಲ್ಲಿ ಆರ್ಥಿಕ ತಜ್ಞರ ಅಭಿಪ್ರಾಯ

ಯಶಸ್ವಿಯಾಗಿ ಜರುಗಿದ ೨ ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ 

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಆಯೋಜಿಸಲಾಗಿತ್ತು.
ಭದ್ರಾವತಿ, ಜೂ. ೨: ಪ್ರಪಂಚದಾದ್ಯಂತ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವೈರಸ್ ನಿರ್ಮೂಲನೆಗಾಗಿ ಒಂದೆಡೆ ಹಗಲಿರುಳು ಸಂಶೋಧನೆಗಳು ನಡೆಯುತ್ತಿವೆ.  ಮತ್ತೊಂದೆಡೆ ಮಾನವ ಸಮಾಜದ ಇಡೀ ಆರ್ಥಿಕ ವ್ಯವಸ್ಥೆ ಕುಸಿತು ಬಿದ್ದು ಇತಿಹಾಸದ ಕರಾಳ ದಿನಗಳು ಮರುಕಳುಹಿಸುತ್ತಿವೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟಗಳಿಂದ ಹೊರಬರುವಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಸೋಮವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹಲವು ಮಹತ್ವದ ವಿಚಾರಗಳು ಸಮಾಜದ ಮುಖ್ಯವಾಹಿನಿಗೆ ತಲುಪಿವೆ. 
ಜೂ.೪ ಮತ್ತು ೮ ಎರಡು ದಿನಗಳ ಕಾಲ  ‘ಕೋವಿಡ್-೧೯’ ಫಿಸ್ಕಲ್ ಮ್ಯಾನೇಜ್ಮೆಂಟ್, ವೇಸ್ ಅಂಡ್ ಚಾಲೆಂಚೆಸ್ ಅಹೆಡ್ (Covid-19 Fiscal Management Ways & Challenges ahead)  ವಿಷಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ದೇಶ-ವಿದೇಶಗಳ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು, ಸಂಶೋಧಕರು, ವಿವಿಧ ವಿಶ್ವ ವಿದ್ಯಾಲಯಗಳ ಕುಲಪತಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ನೂರಾರು ಪ್ರಬಂಧಗಳು ಆನ್ಲೈನ್ ಮೂಲಕ ಮಂಡನೆಯಾದವು. 
ಅರ್ಥಶಾಸ್ತ್ರಜ್ಞರಾದ ಬಾಂಗ್ಲಾದೇಶದ ಪ್ರೊ. ನಜುರುಲ್ ಇಸ್ಲಾಂ, ಜಮ್ಮು ಮತ್ತು ಕಾಶ್ಮೀರದ ಪ್ರೊ. ಸುಪ್ರಾನ್ ಶರ್ಮ, ಚೈನ್ನೈನ ಪ್ರೊ. ಚಂದ್ರಮೋಹನ್, ಡಾ. ಅನಿಲ್ಕುಮಾರ್ ಠಾಕೂರ್, ಪ್ರೊ. ತಪಾನ್ಕುಮಾರ್ ಶಾಂಡಿಲ್ಯ, ಒಡಿಸ್ಸಾ ಡಾ. ಸಂಧ್ಯಾ ರಾಣಿ ದಾಸ್, ಧಾರವಾಡದ ಪ್ರೊ. ಆರ್.ಆರ್ ಬಿರಾದಾರ್, ಕುವೆಂಪು ವಿ.ವಿ ಪ್ರೊ. ಎಸ್.ಎನ್ ಯೋಗೇಶ್ ಸೇರಿದಂತೆ ಇನ್ನಿತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. 
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್ಖಾನ್, ಪ್ರೊ. ಮೊಹಮ್ಮದ್ ನಜೀಬ್, ಡಾ. ಧನಂಜಯ, ಡಾ. ಆರ್. ಸೀಮಾ, ಡಾ. ದಾಕ್ಷಾಯಣಿ ಎಂ. ಡೋಂಗ್ರೆ, ಪ್ರೊ. ಎಸ್. ವರದರಾಜ, ಡಾ. ಮಂಜುನಾಥ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. 
ಗೂಗಲ್ ವೆಬ್ ಜೂಮ್ ತಂತ್ರಜ್ಞಾನ ಬಳಸಿ ಹಮ್ಮಿಕೊಳ್ಳಲಾಗಿದ್ದ ವೆಬಿನಾರ್ ಯಾವುದೇ ತಾಂತ್ರಿಕ ದೋಷವಿಲ್ಲದೆ ಎಲ್ಲರೂ ನೇರವಾಗಿ ಸಂವಾದದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಯಿತು. 

ವಿಚಾರ ಸಂಕಿರಣದಲ್ಲಿ ಹೊರಬಿದ್ದ ಪ್ರಮುಖರ ಅಭಿಪ್ರಾಯಗಳು: 
ಅರ್ಥವ್ಯವಸ್ಥೆಯಲ್ಲಿ ವಿತ್ತಿಯಾ ಸುಧಾರಣೆಗಳು: 
ಕೋವಿಡ್-೧೯ ಕೇವಲ ಭಾರತದಲ್ಲಿ ಅಷ್ಟೆ ಅಲ್ಲ, ಪ್ರಪಂಚದಾದ್ಯಂತ ತನ್ನ ವಿಕೋಪವನ್ನು ತೋರಿಸುತ್ತಿದ್ದು, ಇಡೀ ಅರ್ಥ ವ್ಯವಸ್ಥೆಯನ್ನು ಆರ್ಥಿಕ ಮುಗ್ಗಟ್ಟಿನತ್ತ ಕೊಂಡೊಯ್ಯುತ್ತಿದೆ. ಈ ರೀತಿಯ ಆರ್ಥಿಕ ಹಿಂಜರಿತ ೧೯೨೯-೩೦ರ ಮುಗ್ಗಟ್ಟಿನ ಸಮಯದಲ್ಲೂ ಕಾಣಿಸಿಕೊಂಡಿರಲಿಲ್ಲ. ಏಕೆಂದರೆ ಕೋವಿಡ್-೧೯ರ ಪ್ರಭಾವ ಕೇವಲ ಆರ್ಥಿಕ ವ್ಯವಸ್ಥೆಗಳ ಮೇಲೆ ಅಲ್ಲದೆ ಇತಿಹಾಸದ ಅತ್ಯಂತ ಕರಾಳ ಮಾನವೀಯ ಸಮಸ್ಯೆಗೂ ದಾರಿ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಅರ್ಥವ್ಯವಸ್ಥೆಯಲ್ಲಿ ವಿತ್ತಿಯಾ ಸುಧಾರಣೆಗಳ ಅವಶ್ಯಕತೆ ಇದೆ. 
                                - ಡಾ. ಎನ್.ಆರ್ ಭಾನುಮೂರ್ತಿ, ನಿಯೋಜಿತ ಕುಲಪತಿ, 
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್, ಬೆಂಗಳೂರು.

ವಿಶೇಷ ಆರ್ಥಿಕ ಪ್ಯಾಕೇಜ್ ಸಹಕಾರಿ: 
ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾಕೇಜ್ ಜನರ ಕೈಗೆ ನೇರ ವರ್ಗಾವಣೆ ಮಾಡುವ ಮೂಲಕ ಸರಕು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸಿ ಉತ್ಪಾದನಾ ಚಟುವಟಿಕೆಗೆ ಹುರಿದುಂಬಿಸುವ ಕೆಲಸ ಮಾಡುತ್ತದೆ. 
                                                   - ಪ್ರೊ. ಬಿ.ಪಿ ವೀರಭದ್ರಪ್ಪ, ಉಪಕುಲಪತಿ, 
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಭದ್ರಾವತಿ. 

ರೈತರು ಜೂ.೩೦ರೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ

ಭದ್ರಾವತಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು. 
 ಭದ್ರಾವತಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ರೈತರು ಪಡೆದ ಸಾಲದ ಅಸಲು ಜೂ.೩೦ರೊಳಗೆ ಪಾವತಿಸಿದರೆ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಸುಸ್ತಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ಅಧ್ಯಕ್ಷ  ಎಸ್. ಕೃಷ್ಣಪ್ಪ ತಿಳಿಸಿದರು. 
ಅವರು ಸೋಮವಾರ ಬ್ಯಾಂಕಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಈ ಸಂಬಂಧ ಸಚಿವರು ಆದೇಶ ಹೊರಡಿಸಿದ್ದು, ಮಾರ್ಚ್ ೩೧ರ ವರೆಗೆ ನಿಗದಿಪಡಿಸಲಾಗಿದ್ದ ಯೋಜನೆಯನ್ನು ಕೊರೋನಾ ವೈರಸ್ ಹಿನ್ನಲೆಯಲ್ಲಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದರು. 
ಬ್ಯಾಂಕಿನ ವತಿಯಿಂದ ಕೃಷಿ ಯೋಜನೆಯಲ್ಲಿ ದೀರ್ಘಾವಧಿ ಸಾಲ ನೀಡಲಾಗಿದ್ದು, ಮಾ.೩೧ರವರೆಗೆ ೧೧೯೧.೮೬ ಲಕ್ಷ ರು. ಸಾಲ ನೀಡಲಾಗಿದೆ. ಈ ಪೈಕಿ ೧೫೮.೧೧ ಲಕ್ಷ ರು. ವಸೂಲಾಗಿದ್ದು, ೧೦೩೩.೭೫ ಲಕ್ಷ ರು. ಬಾಕಿ ಉಳಿದಿದೆ. ಈ ಅವಧಿಯಲ್ಲಿ ಅಸಲು ಪೂರ್ಣ ಪಾವತಿಸಿರುವ ರೈತರು ಒಟ್ಟು ೯೯.೨೪ ಲಕ್ಷ ರು. ಬಡ್ಡಿ ರಿಯಾಯಿತಿ ಪಡೆದುಕೊಂಡಿದ್ದಾರೆ. ಜ.೩೧ರ ವರೆಗೆ ಸುಸ್ತಿಯಾಗಿರುವ ಎಲ್ಲಾ ರೈತರು ಅಸಲು ಪಾವತಿಸಿ ಬಡ್ಡಿ ರಿಯಾಯಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.  
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎ.ಬಿ ಆಶಾ, ನಿರ್ದೇಶಕರಾದ ಎಚ್.ಎನ್ ಲೋಹಿತೇಶ್ವರಪ್ಪ, ವಿರುಪಾಕ್ಷಪ್ಪ, ಕೆ. ಗೋಪಾಲಪ್ಪ, ಕೆ. ಮಂಜಪ್ಪ, ಕೆ.ಎಂ ಕಾವೇರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವೀರಾಪುರ ಗ್ರಾ.ಪಂ. ಅಧ್ಯಕ್ಷೆಯಾಗಿ ರೇಣುಕಮ್ಮ

ಭದ್ರಾವತಿ, ಜೂ. ೮: ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ರೇಣುಕಮ್ಮ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷೆ ಮಂಗಳಮ್ಮ ಮೇ.೧೨ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಗಳು ನಿಯಮಾನುಸಾರ ಚುನಾವಣೆ ನಡೆಸಿದ್ದು, ಮಹಿಳಾ ಮೀಸಲಾತಿ ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ರೇಣುಕಮ್ಮ ಮಾತ್ರ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

Sunday, June 7, 2020

ಅರ್ಚಕರಿಗೆ ದಿನಸಿ ಸಾಮಗ್ರಿ ವಿತರಣೆ


ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಮುಜರಾಯಿ ಇಲಾಖೆ ಆದೇಶದಂತೆ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜೂ. ೭: ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಮುಜರಾಯಿ ಇಲಾಖೆ ಆದೇಶದಂತೆ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಸುಮಾರು ೭೮ ಅರ್ಚಕರ ಪೈಕಿ ಶನಿವಾರ ಸುಮಾರು ೩೦ ಅರ್ಚಕರಿಗೆ ಹಳೇನಗರ ವೀರಶೈವ ಸಭಾಭವನದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ತಾಲೂಕು ಕಛೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸದ್ಯಕ್ಕಿಲ್ಲ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದರ್ಶನ

ಭದ್ರಾವತಿ ಹೃದಯ ಭಾಗದಲ್ಲಿರುವ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ. 
ಭದ್ರಾವತಿ, ಜೂ. ೭: ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ, ನಗರದ ಹೃದಯ ಭಾಗದಲ್ಲಿರುವ ಹಳೇನಗರದ ೧೨ನೇ ಶತಮಾನದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋಮವಾರದಿಂದ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದುವರೆಗೂ ದೇವಸ್ಥಾನ ಆರಂಭಿಸುವ ಸಂಬಂಧ ಯಾವುದೇ ಆದೇಶ ಮುಜರಾಯಿ ಇಲಾಖೆಯಿಂದ ಬಂದಿಲ್ಲ. 
ತಾಲೂಕಿನಲ್ಲಿ ಒಟ್ಟು ೭೧ ದೇವಸ್ಥಾನಗಳು ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಎಲ್ಲಾ ದೇವಸ್ಥಾನಗಳು ‘ಸಿ’ ಗ್ರೂಪ್ ಶ್ರೇಣಿಯಲ್ಲಿವೆ. ಇವುಗಳಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನ ಪ್ರಮುಖವಾಗಿದ್ದು, ವಾರ್ಷಿಕ ಸುಮಾರು ೧೦ ಲಕ್ಷದ ವರೆಗೆ ಆದಾಯ ಬರುತ್ತದೆ. ತಾಲೂಕಿನ ಇತಿಹಾಸವನ್ನು ಈ ದೇವಸ್ಥಾನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ವಿಶೇಷ ಎಂದರೆ ನಗರಕ್ಕೆ ಆಗಮಿಸುವ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ನಟರು, ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಮಹಾರಥೋತ್ಸವ, ವೈಕುಂಠ ಏಕಾದಶಿಗಳಂದು ಸಾವಿರಾರು ಭಕ್ತಧಿಗಳು ಪಾಲ್ಗೊಳ್ಳುತ್ತಾರೆ. 
ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ಸುಮಾರು ೨ ತಿಂಗಳಿನಿಂದ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ದೇವಸ್ಥಾನ ಅರ್ಚಕರು, ಕುಟುಂಬದವರು ಮಾತ್ರ ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಸಮಯ ದೇವಸ್ಥಾನ ಬಾಗಿಲು ತೆರೆದು ನಿತ್ಯದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ರಾಜ್ಯದ ಇತರೆಡೆ ಪ್ರಮುಖ ಧಾರ್ಮಿಕ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಗಳನ್ವಯ ಸೋಮವಾರದಿಂದ ಆರಂಭಗೊಳ್ಳುತ್ತಿವೆ. ಆದರೆ ಈ ದೇವಸ್ಥಾನದಲ್ಲಿ ಇದುವರೆಗೂ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಅಷ್ಟಕ್ಕೂ ಈ ದೇವಸ್ಥಾನದಲ್ಲಿ ಇನ್ನೂ ಉಸ್ತುವಾರಿ ಸಮಿತಿ ರಚನೆಯಾಗಿಲ್ಲ. ಎಲ್ಲಾ ಸಿದ್ದತೆಗಳನ್ನು ಮುಜರಾಯಿ ಇಲಾಖೆಯೇ ಕೈಗೊಳ್ಳಬೇಕಾಗಿದೆ. 
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್, ಮುಜರಾಯಿ ಇಲಾಖೆಯಿಂದ ಈ ಹಿಂದೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇವಸ್ಥಾನ ಮುಚ್ಚಲು ಆದೇಶ ಬಂದಿತ್ತು.  ಆದರೆ ಆರಂಭಕ್ಕೆ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಯಾವುದೇ ಸಿದ್ದತೆ ಮಾಡಬೇಕಾದರೂ ಮುಜರಾಯಿ ಇಲಾಖೆಯೇ ಮಾಡಬೇಕಾಗಿದೆ ಎಂದರು. 
ಸರ್ಕಾರದಿಂದ ಇದುವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಮಾರ್ಗಸೂಚಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಅಧಿಕಾರಿಯಾಗಿರುವ ತಾಲೂಕು ದಂಡಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.