Saturday, February 6, 2021

ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೆದ್ದಾರಿ ತಡೆ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಚಳುವಳಿಯನ್ನು ಬೆಂಬಲಿಸಿ ಭದ್ರಾವತಿಯಲ್ಲಿ ಶನಿವಾರ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹೆದ್ದಾರಿ ತಡೆ ನಡೆಸಿದವು.
   ಭದ್ರಾವತಿ, ಫೆ. ೬: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಚಳುವಳಿಯನ್ನು ಬೆಂಬಲಿಸಿ ನಗರದಲ್ಲಿ ಶನಿವಾರ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹೆದ್ದಾರಿ ತಡೆ ನಡೆಸಿದವು.
ನಗರದ ಬೈಪಾಸ್ ರಸ್ತೆ ಬಾರಂದೂರು ಬಳಿ ರಸ್ತೆ ತಡೆ ನಡೆಸಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರ ತಕ್ಷಣ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ರೈತರ ಹಿತ ಕಾಪಾಡುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.
     ಪ್ರಮುಖರಾದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ, ಸುರೇಶ್, ಜಿ. ರಾಜು, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಮುಸ್ವೀರ್ ಬಾಷಾ, ರೈತ ಮುಖಂಡರಾದ ರಾಮಚಂದ್ರಪ್ಪ, ಬೆನಕಪ್ಪ, ಪಂಚಾಕ್ಷರಪ್ಪ, ಕನ್ನಡಪರ ಸಂಘಟನೆಗಳ ಪ್ರಮುಖರಾದ ಜ್ಯೋತಿ ಸೋಮಶೇಖರ್, ಶಾರದ, ಪರಮೇಶ್, ಮುರುಳಿ, ರೂಪನಾರಾಯಣ, ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಪರಮೇಶ್ವರಚಾರ್, ಎಚ್ ರವಿಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, February 5, 2021

ನಗರಸಭೆ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿಗೂ ಶಾಸಕರ ಆಕ್ಷೇಪಣೆ ಅರ್ಜಿ ಸಲ್ಲಿಕೆ

ಒಟ್ಟು ೧೧ ಮಂದಿಯಿಂದ ಆಕ್ಷೇಪಣೆ : ಜಿಲ್ಲಾಧಿಕಾರಿಗಳಿಂದ ವಿಲೇವಾರಿ

      ಭದ್ರಾವತಿ, ಫೆ. ೫: ಸರ್ಕಾರ ಇಲ್ಲಿನ ನಗರಸಭೆಗೆ ಜ.೨೧ರಂದು ಪ್ರಕಟಿಸಿರುವ ವಾರ್ಡ್ ವಾರು ಕರಡು ಮೀಸಲಾತಿ ಪಟ್ಟಿಗೆ ಶಾಸಕರು ಸಹ ಆಕ್ಷೇಪಣೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಒಟ್ಟು ೧೫ ಆಕ್ಷೇಪಣೆ ಅರ್ಜಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಮುಂದಿನ ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಈ ಪೈಕಿ ೨ ಬಾರಿ ಸಲ್ಲಿಸಿರುವ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
     ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡ್‌ಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ನಿಗಡಿಪಡಿರುವ ಹಾಗು ವಾರ್ಡ್ ನಂ.೫ ಮತ್ತು ೩೫ರ ಮೀಸಲಾತಿ ನಿಗದಿಯಲ್ಲಿ ನ್ಯಾಯಾಲಯದ ಆದೇಶ ಪರಿಗಣಿಸದಿರುವ ಸಂಬಂಧ ೨ ಅರ್ಜಿಗಳನ್ನು, ಕೆ.ಬಿ ಗಂಗಾದರ್ ಎಂಬುವರು ವಾರ್ಡ್ ನಂ.೩೫ಕ್ಕೆ ಬಿ.ಸಿ.ಎಂ 'ಬಿ' ವರ್ಗ ಮೀಸಲಾತಿ ನಿಗದಿಪಡಿಸುವ ಸಂಬಂಧ ೨ ಅರ್ಜಿಗಳನ್ನು, ಹೊಸಮನೆಯ ಬಿ.ಜಿ ಸೋಮಶೇಖರಪ್ಪ ಎಂಬುವರು ವಾರ್ಡ್ ನಂ.೧೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಪಡಿಸುವ ಸಂಬಂಧ ಒಂದು ಅರ್ಜಿಯನ್ನು, ಇನ್ನೊಂದು ಅರ್ಜಿಯಲ್ಲಿ ವಾರ್ಡ್ ನಂ.೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ, ಸುಣ್ಣದಹಳ್ಳಿಯ ಎಸ್.ಪಿ ಕಿರಣ್‌ಕುಮಾರ್ ಎಂಬುವರು ವಾರ್ಡ್ ನಂ.೧೮ಕ್ಕೆ ಮೀಸಲಾತಿ ಬದಲಾವಣೆ ಮಾಡುವ ಸಂಬಂಧ ಒಂದು ಅರ್ಜಿಯನ್ನು, ಭದ್ರಾ ಕಾಲೋನಿಯ ಬಿ.ಎಂ ಸುರೇಶ್ ಎಂಬುವರು ವಾರ್ಡ್ ನಂ.೯ಕ್ಕೆ ಮೀಸಲಾತಿ ಬದಲಾವಣೆ ಸಂಬಂಧ ೧ ಅರ್ಜಿಯನ್ನು, ಮೊಹಮ್ಮದ್ ಆಲಿ ಬೇಗ್ ಎಂಬುವರು ವಾರ್ಡ್ ನಂ.೦೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ ೨ ಅರ್ಜಿಯನ್ನು ಹಾಗು ಜೇಡಿಕಟ್ಟೆ ಎಸ್. ವಾಗೀಶ್ ಎಂಬುವರು ವಾರ್ಡ್ ನಂ.೧ಕ್ಕೆ ನಿಗದಿಪಡಿಸಿರುವ ಮಹಿಳಾ ಮೀಸಲಾತಿಯನ್ನು ಬದಲಾಯಿಸಿ ಬಿಸಿಎಂ(ಬಿ) ಮೀಸಲಾತಿ ನಗದಿಪಡಿಸುವ ಸಂಬಂಧ, ಉಜ್ಜನಿಪುರ ನಿವಾಸಿ ನಗರಸಭಾ ಸದಸ್ಯ ಬದರಿನಾರಾಯಣ ವಾರ್ಡ್ ನಂ.೯ರ ಭದ್ರಾ ಕಾಲೋನಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ವಾರ್ಡ್ ನಂ.೨೩ರ ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿಗೆ ಬದಲಾಯಿಸಿಕೊಡುವ ಸಂಬಂಧ ಹೀಗೆ ಮತ್ತಿಬ್ಬರು ಒಟ್ಟು ೧೧ ಮಂದಿ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.  ಒಟ್ಟು ೧೫ ಆಕ್ಷೇಪಣೆ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳಲಿವೆ ಎನ್ನಲಾಗಿದೆ.  

ಚಿಂತಕ ಪ್ರೊ. ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆಯನ್ನು ಗಡಿಪಾರು ಮಾಡಿ :

ಪ್ರಗತಿಪರ ಸಂಘಟನೆಗಳಿಂದ ಮುಖ್ಯಮಂತ್ರಿಗಳಿಗೆ ಮನವಿ

ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ವಕೀಲರ ಸಂಘದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೫: ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೇಶದ್ರೋಹ ಕಾಯ್ದೆ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ವಿಚಾರಣೆಗಾಗಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ನಾಡಿನ ಪ್ರಗತಿಪರ ಚಿಂತಕರು, ವಿಚಾರವಾದಿಗಳಾದ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನಲೆಯಲ್ಲಿ ಕೋಪಗೊಂಡ ವಕೀಲೆ ಮೀರಾ ರಾಘವೇಂದ್ರ ನ್ಯಾಯಾಲಯದಿಂದ ಹೊರಬರುತ್ತಿದ್ದ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಹೇಯ ಕೃತ್ಯ ನಡೆಸಿದ್ದಾರೆ. ಈ ಕೃತ್ಯವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಎಂದರು.
   ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಅದರಲ್ಲೂ ಸಮವಸ್ತ್ರದಲ್ಲಿ ನ್ಯಾಯಾಲಯದ ಆವರಣದಲ್ಲಿ ಈ ಕೃತ್ಯ ನಡೆಸಿರುವುದು ವಕೀಲ ವೃತ್ತಿ ಘನತೆಗೆ ಮಸಿ ಬಳಿದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಮೀರಾ ರಾಘವೇಂದ್ರ ಮೂಲಭೂತವಾದಿಗಳ ಹಿನ್ನಲೆ ಹೊಂದಿರುವುದು ಕಂಡು ಬರುತ್ತಿದೆ. ಈ ಹಿಂದೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚಿಂತಕರು ಮತ್ತು ವಿಚಾರವಾದಿಗಳ ವಿರುದ್ಧ ಅಸಹ್ಯಕರ ರೀತಿಯ ಪೋಸ್ಟರ್‌ಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕನಿಂದ ವ್ಯಾಪಕ ಖಂಡನೆಗೆ ಒಳಗಾಗಿದ್ದರು. ಇದೀಗ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಸಂವಿಧಾನಕ್ಕೆ ಅಪಚಾರವೆಸಗುವ ಮೂಲಕ ಅಗೌರವದಿಂದ ವರ್ತಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಹಾಗು ವಿಚಾರವಾದಿಗಳು ಮತ್ತು ಪ್ರಗತಿಪರರ ವಾಕ್ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
  ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು. ಕೊನೆಯಲ್ಲಿ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಚನ್ನಪ್ಪ, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಪರಮೇಶ್ವರಚಾರ್, ಚಿನ್ನಯ್ಯ, ಅಬ್ದುಲ್ ಖದೀರ್, ಇಬ್ರಾಹಿಂ ಖಾನ್, ಮುರ್ತುಜಾ ಖಾನ್, ಖಾದರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಮತ್ತು ಪದಾಧಿಕಾರಿಗಳು, ನ್ಯಾಯವಾದಿ ನಾರಾಯಣ್, ರಾಘವೇಂದ್ರ ಹಾಗು ಎಸ್‌ಡಿಪಿಐ ಅಧ್ಯಕ್ಷ ಮಹಮದ್ ತಾಹೀರ್, ಮಹಮದ್ ಗೌಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಹಿಂದೂಪರ ಸಂಘಟನೆಯಿಂದ ಕೃತ್ಯಕ್ಕೆ ಬೆಂಬಲ:
   ವಕೀಲೆ ಮೀರಾ ರಾಘವೇಂದ್ರ ಕೃತ್ಯವನ್ನು ಪ್ರಗತಿಪರ ಸಂಘಟನೆಗಳು ಖಂಡಿಸಿ ಒಂದೆಡೆ ಪ್ರತಿಭಟನೆ ನಡೆಸಿದರೇ, ಮತ್ತೊಂದೆಡೆ ಈ ಕೃತ್ಯವನ್ನು ಬೆಂಬಲಿಸಿ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಭದ್ರಾವತಿಯಲ್ಲಿ ಪ್ರೊ. ಕೆ.ಎಸ್  ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರರವರ ಕೃತ್ಯವನ್ನು ಸಂಭ್ರಮಿಸುವ ಜೊತೆಗೆ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರಗಳನ್ನು ಕೂಗಿದರು.
    ಹಿಂದೂ ವಿರೋಧಿ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಮಸಿ ಬಳಿಯುವ ಮೂಲಕ ಮೀರಾ ರಾಘವೇಂದ್ರ ದಿಟ್ಟತನ ಪ್ರದರ್ಶಿಸಿದ್ದಾರೆಂದು ರಂಗಪ್ಪ ವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಸಂಭ್ರಮಿಸುವ ಜೊತೆಗೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಈ ನಡುವೆ ಸಂಚಾರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳ ಕಾರ್ಯಕರ್ತರನ್ನು ತೆರವುಗೊಳಿಸಿದರು.
   ಬಜರಂಗದಳ ಜಿಲ್ಲಾ ಸಹ ಸಂಚಾಲಕ ವಡಿವೇಲು, ಕಿರಣ್ , ಶ್ರೀಕಾಂತ್, ಗುಂಡ, ಪ್ರದೀಪ್ ಕುಟ್ಟಿ, ಧನುಷ್ ಬೋಸ್ಲೆ, ಜಿ. ಧರ್ಮಪ್ರಸಾದ್, ಕೇಸರಿ ಪಡೆ ಗಿರೀಶ್, ದಿವ್ಯರಾಜ್ ಸೇರಿದಂತೆ ಇನ್ನಿತರರಿದ್ದರು.

Thursday, February 4, 2021

ಅಯೋಧ್ಯೆ ರಾಮಮಂದಿರ ನಿರ್ಮಾಣ : ದೇಶದ ಬಹುಸಂಖ್ಯಾತರ ಸ್ವಾಭಿಮಾನದ ಪ್ರತೀಕ

ಭದ್ರಾವತಿ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
     ಭದ್ರಾವತಿ, ಫೆ.೪:  ಆಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಅತ್ಯಂತ ಪವಿತ್ರವಾದ ಧಾರ್ಮಿಕ ಕಾರ್ಯವಾಗಿದ್ದು, ಜೊತೆಗೆ ಈ ದೇಶದ ಬಹುಸಂಖ್ಯಾತ ಜನರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  
       ಅವರು ಗುರುವಾರ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯದಲ್ಲಿ ವಹಿಸಿ ಮಾತನಾಡಿದರು.
   ಶ್ರೀರಾಮ ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯವನ್ನು ದೇಶದ ಯಾವುದಾದರೂ ದೊಡ್ಡ ಕಂಪನಿಗಳು, ಉದ್ದಿಮೆದಾರರು, ಶ್ರೀಮಂತರು ವಹಿಸಿಕೊಳ್ಳಬಹುದಾಗಿತ್ತು.  ಆದರೆ ಆ ರೀತಿ ಮಾಡದೆ ದೇಶದ ಪ್ರತಿಯೊಬ್ಬ ರಾಮಭಕ್ತರ ಭಾವನೆ, ಆಸೆ, ಸಂಕಲ್ಪ ಹಾಗು ಕಾಣಿಕೆ ಸಲ್ಲಬೇಕು ಹಾಗು ಈ ಪುಣ್ಯದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಉದಾತ್ತ ಮನೋಭಾವನೆಯೊಂದಿಗೆ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಈ ದೇಶದ ಹೆಮ್ಮೆಯ ವಿಚಾರವಾಗಿದೆ ಎಂದರು.
    ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಲವು ಹೋರಾಟಗಳು ನಡೆದಿವೆ. ಲಕ್ಷಾಂತರ ಜನರು ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಇವೆಲ್ಲದರ ಫಲವಾಗಿ ಇಂದು ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
    ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಮಾತನಾಡಿ, ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹದ ಸಲುವಾಗಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕಾಣಿಕೆ ಸ್ವೀಕರಿಸುತ್ತಿದ್ದು, ಹೊಸತನದ ಅನುಭವವನ್ನುಂಟು ಮಾಡುತ್ತಿದೆ. ಬಹುಮುಖ್ಯವಾಗಿ ಬಹಳಷ್ಟು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಮುದಾಯದವರು ಸಹ ಅಭಿಮಾನ ಪೂರ್ವಕವಾಗಿ ನಿಧಿಯನ್ನು ಸಮರ್ಪಿಸುತ್ತಿರುವುದು ವಿಶೇಷವಾದ ಸಂಗತಿಯಾಗಿದೆ ಎಂದರು.  
    ವೇದಿಕೆಯಲ್ಲಿ ಡಾ. ದತ್ತಾತ್ರಿ, ರಮೇಶ್ ಬಾಬು, ಶಿವಮೂರ್ತಿ, ಶಿವಕುಮಾರ್, ಪಿ. ವೆಂಕಟರಮಣ ಶೇಟ್, ಕೆ. ಮುತ್ತು ರಾಮಲಿಂಗಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
     ಕಾರ್ಯಕ್ರಮದಲ್ಲಿ ಭಕ್ತರಿಂದ ಸಂಗ್ರಹಿಸಲಾದ ೨.೧೫ ಲಕ್ಷ ರು. ದೇಣಿಗೆಯನ್ನು ಶ್ರೀ ರಾಮಜನ್ಮ ಭೂಮಿ ನಿರ್ಮಾಣದ ನಿಧಿ ಸಮರ್ಪಣ ಟ್ರಸ್ಟ್‌ಗೆ ಸಮರ್ಪಿಸಲಾಯಿತು. ಹಾ. ರಾಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚರತ್ನಮ್ಮ ಪ್ರಾರ್ಥಿಸಿದರು. ರಾಮಮೂರ್ತಿ ಸ್ವಾಗತಿಸಿದರು.  

ಫೆ.೬ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಫೆ. ೪: ನಗರದ ಸೀಗೆಬಾಗಿ ಮೆಸ್ಕಾಂ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಫೆ.೬ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
   ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ ಏರಿಯಾ, ಕಂಚಿಬಾಗಿಲು, ಶ್ರೀ ಹಳದಮ್ಮ ದೇವಸ್ಥಾನ ಬೀದಿ, ಖಾಜಿ ಮೊಹಲ್ಲಾ, ಭೂತನಗುಡಿ, ಹೊಸಮನೆ, ಸೀಗೇಬಾಗಿ, ಹಳೇಸೀಗೇಬಾಗಿ, ಅಶ್ವಸ್ಥ ನಗರ, ಕಬಳಿಕಟ್ಟೆ, ಭದ್ರಾಕಾಲೋನಿ, ಸಿ.ಎನ್ ರಸ್ತೆ, ಎಪಿಎಂಸಿ, ತರೀಕೆರೆ ರಸ್ತೆ, ಗಾಂಧಿವೃತ್ತ, ಕೋಡಿಹಳ್ಳಿ, ಮಾರುತಿ ನಗರ, ಸುಣ್ಣದಹಳ್ಳಿ, ಚನ್ನಗಿರಿ ರಸ್ತೆ, ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ ಘಟಕ, ಹೊಳೆಹೊನ್ನೂರು ರಸ್ತೆ, ಖಲಂದರ ನಗರ, ಜಟ್‌ಪಟ್ ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್‌ಜಾನ್ ಕಾಲೋನಿ, ಕೂಡ್ಲಿಗೆರೆ, ಅತ್ತಿಗುಂದ, ಕಲ್ಪನಹಳ್ಳಿ, ಕುಮರಿ ನಾರಾಯಣಪುರ, ಸೀತಾರಾಮಪುರ, ಅರಳಿಹಳ್ಳಿ, ಬೆಳ್ಳಿಗೆರೆ, ಬಂಡಿಗುಡ್ಡ, ಕೊಮಾರನಹಳ್ಳಿ, ಮಜ್ಜಿಗೇನಹಳ್ಳಿ, ಗುಡ್ಡದನೇರಳೆಕೆರೆ, ಗೌಡ್ರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
   ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಮಾದಿಗ ಚೈತನ್ಯ ರಥ ಯಾತ್ರೆಗೆ ಅದ್ದೂರಿ ಸ್ವಾಗತ : ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಆಗ್ರಹ

ಬುಧವಾರ ರಾತ್ರಿ ಭದ್ರಾವತಿ ನಗರಕ್ಕೆ ಆಗಮಿಸಿದ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ'ಗೆ ಅದ್ದೂರಿ ಸ್ವಾಗತ ಕೋರಲಾಯಿತು.  ಈ ಸಂದರ್ಭದಲ್ಲಿ ಮಾದಿಗ ಒಕ್ಕೂಟದ ರಾಜ್ಯ ಮುಖಂಡರು ಮಾತನಾಡಿದರು.
    ಭದ್ರಾವತಿ, ಫೆ. ೪: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ  ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ' ಬುಧವಾರ ರಾತ್ರಿ ನಗರಕ್ಕೆ ಆಗಮಿಸಿತು.
    ತಾಲೂಕು ಮಾದಿಗ ಒಕ್ಕೂಟದಿಂದ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ರಥ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಒಕ್ಕೂಟದ ರಾಜ್ಯ ಸಮಿತಿ ಮುಖಂಡರಾದ ಹೆಣ್ಣೂರು ಲಕ್ಷ್ಮಿನಾರಾಯಣ, ರಾಮಚಂದ್ರ ಕಬಲಿಕ್ಕರ್, ಅಮ್ಮಣಾ ಲಿಂಬೋಲಿಕರ್ ಮತ್ತು ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ಎ.ಜೆ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿದರು.



ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ  ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ' ಬುಧವಾರ ರಾತ್ರಿ ಭದ್ರಾವತಿ ನಗರಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಮಾದಿಗ ಒಕ್ಕೂಟದ ರಾಜ್ಯ ಮುಖಂಡರು ಮಾತನಾಡಿದರು.
     ಒಕ್ಕೂಟದ ತಾಲೂಕು ಅಧ್ಯಕ್ಷ ಎಂ. ಶಿವಕುಮಾರ್, ಗೌರವಾಧ್ಯಕ್ಷ ಶಿವಬಸಪ್ಪ, ಪ್ರಮುಖರಾದ ಹರೀಶ್, ಕೃಷ್ಣ, ಮೈಲಾರಪ್ಪ, ವೆಂಕಟೇಶ್, ಮಂಜು(ಹಜಾರೆ), ನಾಗರಾಜ್, ಭರತ್, ಸಿರಿಯೂರು ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಫೆ.೮ರಿಂದ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಭದ್ರಾವತಿ, ಫೆ. ೪: ನಗರಸಭೆ ವ್ಯಾಪ್ತಿಯ ಎಂಪಿಎಂ ಕಾರ್ಖಾನೆ ರಸ್ತೆಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಫೆ. ೮ ಮತ್ತು ೯ರಂದು ಶ್ರೀ ಚೌಡೇಶ್ವರಿ ಅಮ್ಮನವರ ೫೧ನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
  ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅಮ್ಮನವರ ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.